ಹಳೇಬೀಡು: ಇತಿಹಾಸ ಪ್ರಸಿದ್ಧ ಹೊಯ್ಸಳೇಶ್ವರ ದೇಗುಲಕ್ಕೆ ಸಿ.ಸಿ. ಟಿವಿ ಅಳವಡಿಸಲು ಸಿದ್ಧತೆ ನಡೆಯುತ್ತಿದ್ದು, ಅದ್ಬುತ ಶಿಲ್ಪಕಲೆ ಹೊಂದಿರುವ ಅಪರೂಪದ ದೇಗುಲಕ್ಕೆ ರಕ್ಷಣೆಯ ಭಾಗ್ಯ ದೊರಕಿದಂತಾಗಿದೆ.
ಟಿವಿ ಅಳವಡಿಕೆಗೆ ಈಗಾಗಲೇ ಸರ್ವೆ ಕಾರ್ಯ ಮುಗಿದಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಆರಂಭವಾಗಲಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ಹಿಂದೆ ಬೇಲೂರಿನ ಚನ್ನಕೇಶವ ದೇಗುಲಕ್ಕೆ ಹುಸಿ ಬಾಂಬ್ ಬೆದರಕೆ ಬಂದಿದ್ದ ಸಂದರ್ಭದಲ್ಲಿಯೇ ಹಳೇಬೀಡು ಹೊಯ್ಸಳ ದೇಗುಲದಲ್ಲಿಯೂ ಬಿಗಿ ಬಂದೋಬಸ್ತ್ ಕ್ರಮ ಕೈಗೊಳ್ಳುವ ಬಗ್ಗೆ ಚಿಂತನೆ ನಡೆದಿತ್ತು. ಟಿವಿ ಅಳವಡಿಕೆ ಬಗ್ಗೆ ಸಾಕಷ್ಟು ಚರ್ಚೆ ನಡೆದು ವರ್ಷಗಳು ಉರುಳಿದರೂ ಕೆಲಸ ಮಾತ್ರ ಆರಂಭವಾಗಿರಲಿಲ್ಲ.
ಕೆಲಸ ನಿರ್ವಹಿಸುವ ಬೆರಳೆಣಿಕೆಯ ಸಿಬ್ಬಂದಿ ಒಂದು ಕಡೆ ಹೋದಾಗ ಮತ್ತೊಂದು ಕಡೆ ಕಿಡಿಗೆಡಿಗಳು ಕುಸುರಿ ಕೆಲಸ ಹೊಂದಿದ್ದ ಶಿಲ್ಪಗಳನ್ನು ವಿರೂಪಗೊಳಿಸುತ್ತಿದ್ದರು.
‘ಇಲಾಖೆ ಟಿವಿ ಅಳವಡಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಇದರಿಂದ ವಿಗ್ರಹಗಳಿಗೆ ಹಾನಿಯಾಗುವುದು ತಪ್ಪುತ್ತದೆ. ಕಳ್ಳಕಾಕರ ಭಯ ಇರುವುದಿಲ್ಲ.
ಇಲಾಖೆ ಸಿ.ಸಿ ಟಿವಿ ಅಳವಡಿಸಿಯೂ ಸುಮ್ಮನೆ ಕುಳಿತರೆ ಪ್ರಯೋಜನವಾಗುವುದಿಲ್ಲ. ಪ್ರತಿಕ್ಷಣವೂ ಅದನ್ನು ಗಮನಿಸುತ್ತಿದ್ದು ಪೂರ್ಣ ಪ್ರಮಾಣದ ರಕ್ಷಣಾ ಕ್ರಮ ಕೈಗೊಳ್ಳಬೇಕು’ ಎಂದು ಸ್ಥಳೀಯರು ನುಡಿದಿದ್ದಾರೆ.