ಜನವಾಡ: ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಕ್ರೈಸ್ತರ ಕೊಡುಗೆ ಅನನ್ಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನುಡಿದರು. ಬೀದರ್ ತಾಲ್ಲೂಕಿನ ಆಣದೂರು ಗ್ರಾಮದಲ್ಲಿ ಸೋಮವಾರ ನಡೆದ ಸೇಂಟ್ ಪೌಲ್ ಮೆಥೋಡಿಸ್ಟ್ ಚರ್ಚ್ ಸುವರ್ಣ ಮಹೋತ್ಸವ ಹಾಗೂ ನೂತನ ಮಹಾದ್ವಾರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಅನೇಕ ಕ್ರೈಸ್ತ ಧರ್ಮ ಗುರುಗಳು ಗ್ರಾಮೀಣ ಪ್ರದೇಶದ ಜನರಿಗೆ ಆರೋಗ್ಯ ಸೇವೆ ಹಾಗೂ ಶಿಕ್ಷಣ ಒದಗಿಸುವಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ಸಮಾಜಕ್ಕೆ ಪ್ರೀತಿ, ಶಾಂತಿಯ ಸಂದೇಶವನ್ನು ಯೇಸು ನೀಡಿದ್ದಾರೆ. ತಮಗೆ ಕಿರುಕುಳ, ಹಿಂಸೆ ನೀಡಿದವರನ್ನೂ ಕ್ಷಮಿಸುವ ಗುಣ ಬೆಳೆಸಿಕೊಳ್ಳ ಬೇಕು ಎಂದು ಸಾರಿದ್ದಾರೆ ಎಂದು ಹೇಳಿದರು.
ಪ್ರಸ್ತುತ ಸಮಾಜ ಕವಲು ದಾರಿಯಲ್ಲಿದೆ. ಗಾಂಧೀಜಿಯವರ ಅಂಹಿಸಾ ತತ್ವ ಮರೆಯಾಗುತ್ತಿದೆ. ಎಲ್ಲೆಡೆ ಸ್ವಾರ್ಥಕ್ಕಾಗಿ ಹಿಂಸೆ ವಾತಾವರಣವನ್ನು ಕಾಣಲಾಗುತ್ತಿದೆ. ಪರಸ್ಪರ ದ್ವೇಷದ ಸ್ಥಿತಿ ಇದೆ. ಹಿಂದೆ ಕ್ರೈಸ್ತ ಧಾರ್ಮಿಕ ಕ್ಷೇತ್ರಗಳ ಮೇಲೆ ನಡೆದ ದಾಳಿ ಸಮಾಜ ತಲೆ ತಗ್ಗಿಸುವ ಸಂಗತಿಗಳಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಮೇಲು- ಕೀಳು ಎನ್ನುವ ಭಾವನೆ ತೊಲಗಬೇಕು. ಪರಸ್ಪರ ಸಹೋದರತ್ವದ ಭಾವನೆ ಎಲ್ಲರಲ್ಲಿ ಬರಬೇಕು ಎಂದು ಸಲಹೆ ಮಾಡಿದರು.
ಯೇಸು ವಿಶ್ವಕ್ಕೆ ಪ್ರೀತಿ, ಕರುಣೆ, ದಯೆ, ಕ್ಷಮೆ, ಪಶ್ಚಾತಾಪದ ಸಂದೇಶಗಳನ್ನು ನೀಡಿದ್ದರು. ಧಾರ್ಮಿಕ ಜಾಗೃತಿ ಮೂಡಿಸಿದ್ದರು ಎಂದು ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಹೇಳಿದರು. ಬೆಂಗಳೂರಿನ ಬಿಷಪ್ ಡಾ. ತಾರಾನಾಥ ಎಸ್. ಸಾಗರ್ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್, ಮಾಜಿ ಶಾಸಕ ಸೈಯದ್ ಜುಲ್ಫೇಕಾರ್ ಹಾಷ್ಮಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ನಸೀಮುದ್ದೀನ್ ಪಟೇಲ್, ರೆವರೆಂಡ್ ಡೇವಿಡ್ ನಥಾನಿಯಲ್, ಬಸವ ಪ್ರಭು ಸ್ವಾಮೀಜಿ, ರೆವರೆಂಡ್ ಎಂ.ಪಿ. ಜಯಪಾಲ್, ಭಂತೆ ಧಮ್ಮಾನಂದ, ಸೇಂಟ್ ಪೌಲ್ ಮೆಥೋಡಿಸ್ಟ್ ಚರ್ಚ್ ಜಿಲ್ಲಾ ಮೇಲ್ವಿಚಾರಕ ರೆವರೆಂಡ್ ಎ. ಸಿಮಿಯೋನ್, ಪ್ರಮುಖರಾದ ರಮೇಶ್ ಪಾಟೀಲ್ ಸೋಲಪುರ, ರೋಹಿದಾಸ್ ಘೋಡೆ, ರಾಜು ಕಡ್ಯಾಳ್, ಡಾ. ಅಮರ ಏರೋಳಕರ್, ಸುರೇಶ್ ಶಿಂಧೆ, ಜೋಸೆಫ್ ಕೊಡ್ಡಿಕರ್ ಇದ್ದರು.