ನವದೆಹಲಿ (ಪಿಟಿಐ): ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿರುವ ಬಿಜೆಪಿ, ‘ಪ್ರಧಾನಿಯಾಗಿ ಮೋದಿ’ ಘೋಷ ವಾಕ್ಯದೊಂದಿಗೆ ಲೋಕಸಭಾ ಚುನಾವಣೆಯನ್ನು ಎದುರಿಸಲು ನಿರ್ಧರಿಸಿದೆ.ಮಂಗಳವಾರ ನಡೆದ ಬಿಜೆಪಿ ಆಡಳಿತದಲ್ಲಿರುವ ಐದು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಮತ್ತು ಪಕ್ಷದ ಸಂಸದೀಯ ಮಂಡಳಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಒಂದು ಓಟು, ಒಂದು ನೋಟು: ಚುನಾವಣಾ ಪ್ರಚಾರಕಾರ್ಯಕ್ಕೆ ‘ಒಂದು ಓಟು, ಒಂದು ನೋಟು’ ಎಂಬ ಮತ್ತೊಂದು ಘೋಷ ವಾಕ್ಯವನ್ನೂ ಬಿಜೆಪಿ ಸಿದ್ಧಪಡಿಸಿದೆ. ಪಕ್ಷದ ಬೂತ್ ಮಟ್ಟದ ಕಾರ್ಯಕರ್ತರು ಕನಿಷ್ಠ ₨10ರಿಂದ ಗರಿಷ್ಠ ₨1,000 ವರೆಗೆ ದೇಣಿಗೆಯನ್ನು ಶ್ರೀಸಾಮಾನ್ಯರಿಂದ ಸಂಗ್ರಹಿಸಲಿದ್ದಾರೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಂತ ಕುಮಾರ್ ಹೇಳಿದರು.
ಮತದಾರರನ್ನು ಚುನಾವಣಾ ಪ್ರಚಾರ ವೆಚ್ಚದಲ್ಲಿ ಪಾಲುದಾರನ್ನಾಗಿ ಮಾಡಿಕೊಳ್ಳಲು ಬಿಜೆಪಿ ಈ ಕಾರ್ಯತಂತ್ರ ರೂಪಿಸಿದೆ. ಇಂತಹದ್ದೇ ಕಾರ್ಯತಂತ್ರವನ್ನು ದೆಹಲಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು ಮಾಡಿತ್ತು.