ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿಶಿಷ್ಟ ವ್ಯಕ್ತಿತ್ವದ ರಾಜಕಾರಣಿ’

ಜೆ.ಎಚ್‌. ಪಟೇಲ್‌ 84ನೇ ಜನ್ಮದಿನ ಅ. 1ರಂದು
Last Updated 26 ಸೆಪ್ಟೆಂಬರ್ 2013, 8:42 IST
ಅಕ್ಷರ ಗಾತ್ರ

ಹಾವೇರಿ: ‘ಕರ್ನಾಟಕ ಕಂಡ ಧೀಮಂತ ರಾಜಕಾರಣಿ, ರಾಜಕೀಯ ಮುತ್ಸದ್ದಿ ಹಾಗೂ ಮಾಜಿ ಮುಖ್ಯಮಂತ್ರಿ ದಿವಂ­ಗತ ­ಜೆ.ಎಚ್‌.ಪಟೇಲ್‌ ಅವರ 84ನೇ ಜನ್ಮದಿನದ ಆಚರಣೆಯ ಆತಿಥ್ಯವನ್ನು ಹಾವೇರಿ ಜಿಲ್ಲೆ ವಹಿಸಿಕೊಂಡಿದೆ’ ಎಂದು ಮಾಜಿ ಸಚಿವ ಸಿ.ಎಂ.ಉದಾಸಿ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ದಿ.ಜೆ.ಎಚ್‌.ಪಟೇಲ್‌ ಪ್ರತಿಷ್ಠಾನ ಹಾಗೂ ಅಭಿಮಾನಿ ಬಳಗದಿಂದ ಆಚ­ರಿಸಲಾಗುವ ಜನ್ಮದಿನ ಸಮಾರಂ­ಭವನ್ನು ಅಕ್ಟೋಬರ್‌ 1 ರಂದು ಮಧ್ಯಾಹ್ನ 3 ಗಂಟೆಗೆ ನಗರದ ಶಿವಶಕ್ತಿ ಪ್ಯಾಲೇಸ್‌ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.

ರಾಜ್ಯ ರಾಜಕಾರಣದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿರುವ ಜೆ.­ಎಚ್‌.ಪಟೇಲ್‌ ಅವರು ಮೂಲತಃ ಶ್ರೀಮಂತ ಮನೆತನದಲ್ಲಿ ಹುಟ್ಟಿದವರು. ಆದರೂ, ತಮ್ಮ 17ನೇ ವಯಸ್ಸಿನ­ಲ್ಲಿಯೇ ಸಮಾಜವಾದ ವಿಚಾರಗಳಿಗೆ ಮಾರು ಹೋಗಿ ಜೈಲಿಗೆ ಹೋಗಿದ್ದರು ಎಂದು ಹೇಳಿದರು.

ಆಗಿನಿಂದ ಆರಂಭವಾದ ಅವರ ಹೋರಾಟ ಜೀವನ ನಿರಂತರವಾಗಿ ಐದು ದಶಕಗಳ ಕಾಲ ಜನಮುಖಿ­ಯಾಗಿ ಜನ ಸೇವೆ ಮಾಡಿದ್ದಾರೆ. ರಾಜಕೀಯದಲ್ಲಿ  ವಿರೋಧ ಪಕ್ಷದ ನಾಯಕರಾಗಿ, ಮುಖ್ಯಮಂತ್ರಿಗಳಾಗಿ ಜನಮುಖಿಯಾಗಿ ಕೆಲಸ ಮಾಡಿ­ದ್ದಾರೆ. ರಾಜ್ಯದಲ್ಲಿ ಆಗಿ ಹೋದ ಮುಖ್ಯಮಂತ್ರಿಗಳಲ್ಲಿ ಪಟೇಲ್‌ರಂತಹ ಮುಖ್ಯಮಂತ್ರಿಗಳನ್ನು ನೋಡಲಾ­ಗ­ಲಿಲ್ಲ. ಅವರಿಗೆ ಅವರೇ ಸಾಟಿಯಾ­ಗಿದ್ದರು. ಹಾವೇರಿ ಸೇರಿದಂತೆ ರಾಜ್ಯ­ದಲ್ಲಿ ಏಳು ಹೊಸ ಜಿಲ್ಲೆಗಳನ್ನು ಮಾಡಿ ರಾಜ್ಯದ ಜನರಲ್ಲಿ ಅಜರಾಮರವಾಗಿ ಉಳಿದಿದ್ದಾರೆ ಎಂದು ಸ್ಮರಿಸಿಕೊಂಡರು.

ಎಂತಹ ಗಂಭೀರ ಸನ್ನಿವೇಶದ­ಲ್ಲಿಯೂ ಯಾರಿಗೂ ನೋವಾಗದಂತೆ ಹಾಸ್ಯದ ದಾಟಿಯಲ್ಲಿಯೇ ಮಾತುಗಳ­ನ್ನಾಡುವ ವಿಶಿಷ್ಟ ವ್ಯಕ್ತಿತ್ವದ ರಾಜ­ಕಾರಣಿಯಾದ ಜೆ.ಎಚ್‌.ಪಟೇ­ಲರನ್ನು ಮುಂದಿನ ಪೀಳಿಗೆಗೆ ಪರಿಚ­ಯಿಸುವ ಉದ್ದೇಶದಿಂದ ಜೆ.ಎಚ್‌.­ಪಟೇಲ್‌ ಪ್ರತಿ­ಷ್ಠಾನ ಅವರ ಜನ್ಮದಿನ ಕಾರ್ಯ­ಕ್ರಮ­ವನ್ನು ಪ್ರತಿ ವರ್ಷ ಒಂದೊಂದು ಜಿಲ್ಲೆ­ಯಲ್ಲಿ ಹಮ್ಮಿ­ಕೊಳ್ಳುತ್ತದೆ ಎಂದು ತಿಳಿಸಿದರು.

ಅ.1ರಂದು ಉದ್ಘಾಟನೆ:  ದಿವಂಗತ ಜೆ.ಎಚ್‌.ಪಟೇಲ್‌ರ 84ನೇ ಜನ್ಮದಿನ ಉದ್ಘಾಟನಾ ಸಮಾರಂ­ಭವನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಕಾಶ ಹುಕ್ಕೇರಿ ಉದ್ಘಾಟಿಸಲಿದ್ದಾರೆ. ಮಾಜಿ ಸಚಿವ ಸಿ.ಎಂ.ಉದಾಸಿ ಅಧ್ಯಕ್ಷತೆ ವಹಿಸಲಿ­ದ್ದಾರೆ ಎಂದು ಹೇಳಿದರು.

ಸಹಕಾರ ಸಚಿವ ಎಚ್‌.ಎಸ್‌.­ಮಹಾದೇವ ಪ್ರಸಾದ, ಶಾಸಕ ರಮೇ­ಶಕುಮಾರ, ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ, ಶಾಸಕ ಬಸ­ವರಾಜ ಬೊಮ್ಮಾಯಿ, ಜೆ.ಎಚ್‌.­ಪಟೇಲ್‌ ಪ್ರತಿಷ್ಠಾನದ ಧರ್ಮದರ್ಶಿ ಹರಿ ಖೋಡೆ, ಸಂಸದ ಶಿವಕುಮಾರ ಉದಾಸಿ, ಜಿ.ಪಂ.ಅಧ್ಯಕ್ಷ ರಾಜೇಂದ್ರ ಹಾವೇರಣ್ಣನವರ, ಶಾಸಕರಾದ ರುದ್ರಪ್ಪ ಲಮಾಣಿ, ಬಸವರಾಜ ಶಿವ­ಣ್ಣನವರ, ಯು.ಬಿ.ಬಣಕಾರ, ಸೋಮಣ್ಣ ಬೇವಿನಮರದ, ಮಾಜಿ ಶಾಸಕರಾದ ಜಿ.ಶಿವಣ್ಣ, ನೆಹರೂ ಓಲೇಕಾರ, ಶಿವರಾಜ ಸಜ್ಜನರ, ಮೋಹನ ಲಿಂಬಿಕಾಯಿ, ಸುರೇಶಗೌಡ ಪಾಟೀಲ ಅತಿಥಿಗಳಾಗಿ ಆಗಮಿಸಲಿ­ದ್ದಾರೆ ಎಂದು ಹೇಳಿದರು. ಮಾಜಿ ಶಾಸಕ ಸದಸ್ಯ ಶಿವರಾಜ ಸಜ್ಜನರ, ಮುಖಂಡ ಸುರೇಶ ಹೊಸ­ಮನಿ ಹಾಜರಿದ್ದರು.

‘ಆರೋಪ ಸಾಬೀತಾದರೆ, ರಾಜಕೀಯ ನಿವೃತ್ತಿ’
ಹಾವೇರಿ:
‘ಗುತ್ತಿಗೆದಾರರೊಬ್ಬರು ನನ್ನ ಹಾಗೂ ನನ್ನ ಮಕ್ಕಳ ವಿರುದ್ಧ ನ್ಯಾಯಾ­ಲಯದಲ್ಲಿ ಮಾಡಿರುವ ಆರೋ­ಪಗಳು ಸಾಬೀತಾದರೆ, ನಾನು ರಾಜಕೀಯ ನಿವೃತ್ತಿ ಘೋಷಿಸು­ತ್ತೇನೆ’ಎಂದು ಮಾಜಿ ಶಾಸಕ ನೆಹರೂ ಓಲೇಕಾರ ತಿಳಿಸಿದರು.

‘ನನ್ನ ಅಧಿಕಾರಾವಧಿಯಲ್ಲಿ ಸ್ವಜನ ಪಕ್ಷ­ಪಾತ, ಅಧಿಕಾರ ದುರುಪಯೋಗ­ವಾಗು­ವಂತಹ ಯಾವುದೇ ಕೆಲಸ­ಗಳನ್ನು ಮಾಡಿಲ್ಲ’ ಎಂದು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸ್ಪಷ್ಟಪಡಿಸಿದರು.

‘ನನ್ನ ತೇಜೋವಧೆ ಮಾಡುವ ಉದ್ದೇ­ಶದಿಂದ ಹಾಗೂ ನನ್ನ ರಾಜಕೀಯ ಏಳಿಗೆಯನ್ನು ಸಹಿಸದ ಕೆಲವರು ಮಾಡಿ­ರುವ ಕುತಂತ್ರ ಈ ಆರೋಪ­ಗಳಲ್ಲಿ ಅಡಗಿದೆ. ನ್ಯಾಯಾಂಗ ವ್ಯವಸ್ಥೆ ಮೇಲೆ ನನಗೆ ನಂಬಿಕೆ ಹಾಗೂ ಗೌರವ ಇರುವು­ದ­ರಿಂದ ನನಗೆ ಜಯ ಸಿಗುವ ವಿಶ್ವಾಸವಿದೆ’ ಎಂದರು.

‘ಈ ಹಿಂದೆ ಈರಪ್ಪ ಲಮಾಣಿ ಎಂಬು­ವರು ನನ್ನ ಹಾಗೂ ನನ್ನ ಕುಟುಂಬ­ದವರ ಮೇಲೆ ಮಾಡಿರುವ ಆರೋಪ­ಗಳು ನ್ಯಾಯಾಲಯದಲ್ಲಿ ಬಿದ್ದು ಹೋಗುವ ಮೂಲಕ ಮುಖ­ಭಂಗ ಅನುಭವಿಸಿದ್ದಾರೆ. ಅದೇ ರೀತಿಯಾಗಿ ಗುತ್ತಿಗೆದಾರರು ನಮ್ಮ ವಿರುದ್ಧ ಹೂಡಿರುವ ಪ್ರಕರಣವೂ ಬಿದ್ದು ಹೋಗುವ ಭರವಸೆಯಿದೆ’ ಎಂದರು.

‘ನನ್ನ ಹಾಗೂ ನನ್ನ ವಿರುದ್ಧ ಅನಗತ್ಯ ಆರೋಪ ಮಾಡಿ, ನನ್ನವ್ಯಕ್ತಿತ್ವಕ್ಕೆ ಕುಂದು ತರಲು ಯತ್ನಿಸಿರುವವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವ ಬಗ್ಗೆಯೂ ಚಿಂತನೆ ನಡೆಸುತ್ತಿರುವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT