ಹೂವಿನಹಡಗಲಿ: ಶಿಕ್ಷಕರಿಗೆ ಸರ್ಕಾರ ನೀಡುವ ಪ್ರಶಸ್ತಿಗಿಂತ ಜನ ಸಮುದಾಯ, ವಿದ್ಯಾರ್ಥಿಗಳು ಗುರುತಿಸಿ ನೀಡುವ ಪುರಸ್ಕಾರಗಳು ಗೌರವ ತಂದು ಕೊಡುತ್ತವೆ ಎಂದು ಧಾರವಾಡ ಜೆಎಸ್ಎಸ್ ಕಾಲೇಜಿನ ಪ್ರಾಧ್ಯಾಪಕ ಪ್ರೊ. ಜಿನದತ್ತ ಹಡಗಲಿ ಹೇಳಿದರು.
ಪಟ್ಟಣದ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಭಾನುವಾರ ಬೀಚಿ ಗ್ರಂಥಾಲಯ ಬೆಂಬಲಿಗರ ಬಳಗ ಮತ್ತು ಶಾಖಾ ಗ್ರಂಥಾಲಯ ಸಹಯೋಗದಲ್ಲಿ ಆಯೋಜಿಸಿದ್ದ ‘ಉತ್ತಮ ಶಿಕ್ಷಕ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಸಾರ್ವತ್ರಿಕ ಶಿಕ್ಷಣ ವ್ಯವಸ್ಥೆಯಲ್ಲಿ ಸರ್ಕಾರ ಮತ್ತು ಜನಸಮುದಾಯದ ಮನಃಸ್ಥಿತಿ ಬದಲಾಗಿರುವುದರಿಂದ ಶಿಕ್ಷಕರು ಬೋಧನೆ ಬದಿಗಿಟ್ಟು ಅಡುಗೆ ಭಟ್ಟರಾಗಿ ಕೆಲಸ ಮಾಡಬೇಕಾದ ದುಃಸ್ಥಿತಿ ಬಂದಿದೆ. ಶಿಕ್ಷಕರನ್ನು ಅಕ್ಷರದಾಸೋಹ ಜವಾಬ್ದಾರಿಯಿಂದ ಮುಕ್ತಗೊಳಿಸದ ಹೊರತು ಗುಣಮಟ್ಟದ ಶಿಕ್ಷಣ ನಿರೀಕ್ಷೆ ಸಾಧ್ಯವಿಲ್ಲ ಎಂದರು.
ಹೊನ್ನಾಳಿ ಹಿರೇಕಲ್ಮಠದ ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಸಂಸ್ಕಾರವಂತ ಆದರ್ಶ ಮಕ್ಕಳನ್ನು ರೂಪಿಸುವ ಹೊಣೆಗಾರಿಕೆ ಶಿಕ್ಷಕರ ಮೇಲಿದೆ. ಒಬ್ಬ ಪರಿಪೂರ್ಣ ಓದುಗ ಮಾತ್ರ ಉತ್ತಮ ಶಿಕ್ಷಕನಾಗಿ ರೂಪುಗೊಳ್ಳಲು ಸಾಧ್ಯ ಎಂದರು.
ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಕೊಟ್ರಗೌಡ, ಬೀಚಿ ಬಳಗದ ಗೌರವಾಧ್ಯಕ್ಷ ಎಚ್.ಎಂ.ಬೆಟ್ಟಯ್ಯ ಮಾತನಾಡಿದರು. ಎಂ.ಪಿ. ಪ್ರಕಾಶ ಪ್ರತಿಷ್ಠಾನದ ಅಧ್ಯಕ್ಷ ಸೊಪ್ಪಿನ ಬಾಳಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಶಿಕ್ಷಕರು ಮಕ್ಕಳ ಬೌದ್ಧಿಕ ಸಾಮರ್ಥ್ಯ ಅರಿತು, ಅವರ ಸಮಸ್ಯೆಗೆ ಸ್ಪಂದಿಸಿ ಶಿಕ್ಷಣ ನೀಡಬೇಕು ಎಂದರು. ಬೀಚಿ ಬಳಗದ ಅಧ್ಯಕ್ಷ ಎಂ.ತವನಪ್ಪ ಅಧ್ಯಕ್ಷತೆ ವಹಿಸಿದ್ದರು. ಶಾಖಾ ಗ್ರಂಥಾಲಯ ಅಧಿಕಾರಿ ಬಸವರಾಜ ಕೊಳ್ಳಿ ಉಪಸ್ಥಿತರಿದ್ದರು.
ಎಸ್ ಪಿವಿ ಶಾಲೆಯ ಶಿಕ್ಷಕಿ ಆರ್.ಪಿ. ಪ್ರಫುಲ್ಲಾ, ಮಾನ್ಯರಮಸವಾಡ ಪ್ರೌಢಶಾಲೆ ಶಿಕ್ಷಕ ಸಿ.ನಿಂಗಪ್ಪ, ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಚಾರ್ಯ ಯು.ಅಬ್ದುಲ್ ಮುತಾಲಿಬ್ ಅವರಿಗೆ ಪ್ರಸಕ್ತ ಸಾಲಿನ ‘ಉತ್ತಮ ಶಿಕ್ಷಕ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಎನ್.ಡಿ.ರೇಖಾ ಅವರನ್ನು ಸನ್ಮಾನಿಸಲಾಯಿತು.
ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಸುರೇಶ ಅಂಗಡಿ ಸ್ವಾಗತಿಸಿದರು. ಸಾಹಿತಿ ಎಚ್. ಶೇಷಗಿರಿರಾವ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಬೆಟಗೇರಿ, ಎಂ.ಪಿ.ಎಂ. ಫಕ್ಕೀರಗೌಡ, ಎಲ್.ಖಾದರ ಬಾಷಾ, ಶಾಂತರಾಜ ಪರಿಚಯಿಸಿದರು. ಎಸ್.ದ್ವಾರಕೇಶ ರೆಡ್ಡಿ ನಿರೂಪಿಸಿದರು. ನಾಗರಾಜ ಮಲ್ಕಿಒಡೆಯರ್ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.