ಭುವನೇಶ್ವರ:ಸೌಂದರ್ಯ, ಹೊನಪು, ವೈಯಾರದಲ್ಲಿ ನಾವು ಯಾರಿಗೇನು ಕಮ್ಮಿ ಇಲ್ಲ ಎಂದು ಬುಡಕಟ್ಟು ಮಹಿಳೆಯರು ತೋರಿದ್ದಾರೆ. ಇದಕ್ಕೆ ಸಾಕ್ಷಿಯಾಗಿದ್ದು, ‘ಆದಿ ರಾಣಿ’ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದ 25 ರಾಜ್ಯಗಳಿಂದ ಬಂದಿದ್ದ ಸ್ಪರ್ಧಿಗಳು.
ಅಂದಹಾಗೆ, ಇದು ಬುಡಕಟ್ಟು ಮಹಿಳೆಯರಿಗಾಗಿಯೇ ಆಯೋಜಿಸಿದ್ದ ಬಾರತದ ಮೊದಲ ಸೌಂದರ್ಯ ಸ್ಪರ್ಧೆ.
‘ಆದಿ ರಾಣಿ’ ಕಳಿಂಗ ಬುಡಕಟ್ಟು ರಾಣಿ ಸ್ಪರ್ಧೆಯನ್ನು ಬುಡಕಟ್ಟು ಜನಾಂಗದ ಮಹಿಳೆಯರಿಗೆ ಒಡಿಶಾದ ಭುವನೇಶ್ವರದಲ್ಲಿನ ಸಾಂಸ್ಕೃತಿಕ ಕೇಂದ್ರ ‘ಉತ್ಕಲ್ ಮಂದೀಪ್’ನಲ್ಲಿ ಆಯೋಜಿಸಲಾಗಿತ್ತು.
ಮಹಿಳೆಯರು ತಮ್ಮ ಸಾಂಪ್ರದಾಯಿಕ ಉಡುಗೆ, ಆಭರಣಗಳೊಂದಿಗೆ ವೇದಿಕೆಯಲ್ಲಿ ಹೆಜ್ಜೆ ಹಾಕಿದರು. ಜತೆಗೆ, ಸಾಂಪ್ರದಾಯಿಕ ನೃತ್ಯವನ್ನೂ ಮಾಡಿ ಗಮನ ಸೆಳೆದರು. ಈ ಮೂಲಕ ತಮ್ಮ ಚೆಲುವನ್ನು ತೋರಿದರು. ಅನಿಸಿಕೆಗಳನ್ನೂ ಹಂಚಿಕೊಂಡರು.
ಪಲ್ಲವಿ ದುರುವಾ ಅವರು ಬುಡಕಟ್ಟು ರಾಣಿ(ಆದಿ ರಾಣಿ) ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಪಂಚಮ್ ವಝಿ ಅವರು ರನ್ನರ್ ಅಪ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ನಂತರದ ಸ್ಥಾನವನ್ನು ರಶ್ಮಿರೇಖಾ ಪಡೆದಿದ್ದಾರೆ.
ದೇಶದಾದ್ಯಂತ ಬುಡಕಟ್ಟು ಮಹಿಳೆಯರನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಈ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಸ್ಪರ್ಧೆಗೆ 25 ರಾಜ್ಯಗಳಿಂದ 150ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು.