ನವದೆಹಲಿ (ಪಿಟಿಐ): ಷೇರುಪೇಟೆಯಲ್ಲಿ ಸಾಮಾನ್ಯ ಹೂಡಿಕೆದಾರರ ಪಾಲ್ಗೊಳ್ಳುವಿಕೆ ಹೆಚ್ಚಿಸುವ ಉದ್ದೇಶಿತ `ರಾಜೀವ್ ಗಾಂಧಿ ಷೇರು ಉಳಿತಾಯ ಯೋಜನೆ~ಯ ವಿವರಗಳನ್ನು ಒಂದು ತಿಂಗಳಲ್ಲಿ ಅಂತಿಮಗೊಳಿಸಲಾಗುತ್ತಿದೆ.
ಈ ಯೋಜನೆಯಡಿ, ವಾರ್ಷಿಕ ರೂ 10 ಲಕ್ಷಕ್ಕಿಂತ ಕಡಿಮೆ ಆದಾಯ ಇರುವವರು ಷೇರುಗಳಲ್ಲಿ ಗರಿಷ್ಠ ರೂ50 ಸಾವಿರದವರೆಗೆ ಹೂಡಿಕೆ ಮಾಡಿದ್ದರೆ ಶೇ 50ರಷ್ಟು ತೆರಿಗೆ ಕಡಿತಕ್ಕೆ ಒಳಪಡುವ ಸೌಲಭ್ಯ ಕಲ್ಪಿಸಲಾಗುತ್ತಿದೆ.
ಯೋಜನೆಯ ವಿವರಗಳನ್ನೆಲ್ಲ ಒಂದು ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ಹಣಕಾಸು ಕಾರ್ಯದರ್ಶಿ ಆರ್. ಎಸ್. ಗುರ್ಜಾಲ್ ಹೇಳಿದ್ದಾರೆ.
ಷೇರುಗಳಲ್ಲಿ ನೇರವಾಗಿ ಹಣ ಹೂಡಿಕೆ ಮಾಡುವುದಕ್ಕೆ ಆದಾಯ ತೆರಿಗೆ ಲಾಭ ಒದಗಿಸುವ ಮೊದಲ ಯೋಜನೆ ಇದಾಗಿದೆ. ಜನರ ಉಳಿತಾಯದ ಹಣ ಷೇರುಪೇಟೆಯತ್ತ ಹರಿದು ಬರುವುದನ್ನು ಉತ್ತೇಜಿಸಲು ಈ ಯೋಜನೆ ರೂಪಿಸಲಾಗಿದೆ.
ಆದರೆ, ಈ ತೆರಿಗೆ ಕಡಿತದ ಲಾಭವನ್ನು ಒಂದು ಬಾರಿ ಮಾತ್ರ ಪಡೆಯಬಹುದಾಗಿದೆ ಎನ್ನುವ ನಿಬಂಧನೆ ಇದೆ.