ಬೆಂಗಳೂರು: ಕರ್ನಾಟಕಕ್ಕೆ ಕೇಂದ್ರದಿಂದ ₹ 45,322 ಕೋಟಿ ತೆರಿಗೆ ಅನ್ಯಾಯವಾಗಿದೆ. ಬಿಜೆಪಿ ಆಡಳಿತವಿರುವ ರಾಜ್ಯಗಳು ತೆರಿಗೆ ಬಾಕಿ ನೀಡದಿದ್ದರೂ ಕೇಳದೆ ಸುಮ್ಮನಿವೆ. ರಾಜ್ಯದಲ್ಲಿದ್ದ ಹಿಂದಿನ ಬಿಜೆಪಿ ಸರ್ಕಾರವು ಕೇಂದ್ರದಿಂದ ತೆರಿಗೆ ಬಾಕಿ ಹಣ ತರುವಲ್ಲಿ ವಿಫಲವಾಗಿತ್ತು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದು, ಸದನದಲ್ಲಿ ಗದ್ದಲಕ್ಕೆ ಕಾರಣವಾಗಿದೆ.
ಇದರಿಂದ ಕೋಪಗೊಂಡ ವಿಪಕ್ಷ ನಾಯಕ ಆರ್. ಅಶೋಕ, ನೀವಿಲ್ಲಿ ಬಜೆಟ್ ಮಂಡಿಸುವುದಕ್ಕೆ ಬಂದಿದ್ದೀರೋ ಅಥವಾ ಕೇಂದ್ರ ಸರ್ಕಾರವನ್ನು ಬೈಯಲು ಬಂದಿದ್ದೀರೋ. ನಿಮ್ಮದು ಲೂಟಿ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ದನಿಗೂಡಿಸಿದ ಬಿಜೆಪಿಯ ಇತರೆ ಸದಸ್ಯರು ಸಹ ಸರ್ಕಾರದ ವಿರುದ್ಧ ಕಿಡಿಕಾರಿದರು. ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಇದಕ್ಕೂ ಮುನ್ನ, ಬಜೆಟ್ ಭಾಷಣ ಆರಂಭವಾಗುತ್ತಿದ್ದಂತೆ ಗುರುವಾರ ವಿಧಾನ ಪರಿಷತ್ನಲ್ಲಿ ಆಕ್ಷೇಪಾರ್ಹ ಪದ ಬಳಕೆ ಕುರಿತಂತೆ ಧ್ವನಿ ಎತ್ತಿದ ವಿಪಕ್ಷಗಳ ಸದಸ್ಯರು ಕ್ಷಮೆಯಾಚನೆಗೆ ಒತ್ತಾಯಿಸಿದರು. ವಿಪಕ್ಷಗಳ ಬೇಡಿಕೆಗೆ ಸೊಪ್ಪುಹಾಕದ ಸಿದ್ದರಾಮಯ್ಯ ಬಜೆಟ್ ಭಾಷಣ ಮುಂದುವರಿಸಿದ್ದಾರೆ.