ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Union Budget 2021 | ಮಹಾರಾಷ್ಟ್ರ ಮರೆತ ಬಜೆಟ್‌: ಶಿವಸೇನಾ ಟೀಕೆ

ಖಾಸಗೀಕರಣಕ್ಕೆ ಹೆಚ್ಚು ಆದ್ಯತೆ: ಎನ್‌ಸಿಪಿ ಆರೋಪ
Last Updated 1 ಫೆಬ್ರುವರಿ 2021, 12:39 IST
ಅಕ್ಷರ ಗಾತ್ರ

ನಾಗಪುರ/ಮುಂಬೈ: ಪ್ರಸಕ್ತ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಮಹಾರಾಷ್ಟ್ರವನ್ನು ಕಡೆಗಣಿಸಲಾಗಿದೆ ಎಂದು ಆಡಳಿತಾರೂಢ ಪಕ್ಷ ಶಿವಸೇನಾ ಆರೋಪಿಸಿದರೆ, ಸರ್ಕಾರದ ಭಾಗವಾಗಿರುವ ಮತ್ತೊಂದು ಪಕ್ಷ ಎನ್‌ಸಿಪಿ, ‘ಇದೊಂದು ನಿರಾಶಾದಾಯಕ ಬಜೆಟ್‌ ಆಗಿದ್ದು, ಖಾಸಗೀಕರಣಕ್ಕೆ ಹೆಚ್ಚು ಒತ್ತು ನೀಡಲಾಗಿದೆ‘ ಎಂದು ಟೀಕಿಸಿದೆ.

ಮತ್ತೊಂದೆಡೆ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಬಿಜೆಪಿ ನಾಯಕ ದೇವೇಂದ್ರ ಫಡಣವೀಸ್ ಅವರು, ‘ಬಜೆಟ್‌ನಲ್ಲಿ ನಾಸಿಕ್ ಮತ್ತು ನಾಗಪುರ ನಗರಗಳಲ್ಲಿ ಮೆಟ್ರೊ ರೈಲು ಯೋಜನೆಗೆ ಅವಕಾಶ ನೀಡಿರುವುದನ್ನು ಸ್ವಾಗತಿಸಿದ್ದಾರೆ.

'ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್‌ನಲ್ಲಿ ಶ್ರೀಸಾಮಾನ್ಯರನ್ನು ನಿರ್ಲಕ್ಷಿಸಲಾಗಿದೆ. ರೈತರ ಪರವಾಗಿ ಯಾವುದೇ ಸೂಕ್ತ ನಿರ್ಧಾರವನ್ನು ಉಲ್ಲೇಖಿಸಿಲ್ಲ‘ ಎಂದು ಗೃಹ ಸಚಿವ ಮತ್ತು ಎನ್‌ಸಿಪಿ ಹಿರಿಯ ನಾಯಕ ಅನಿಲ್ ದೇಶಮುಖ್ ನಾಗಪುರದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

‘ಕೊರೊನಾ ಸಾಂಕ್ರಾಮಿಕದ ನಡುವೆ ಬಜೆಟ್‌ ಮೇಲೆ ಜನರು ಬಹಳ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಅವುಗಳನ್ನು ಪೂರೈಸುವಲ್ಲಿ ಬಜೆಟ್‌ ವಿಫಲವಾಗಿದೆ‘ ಎಂದು ಅವರು ಅಭಿಪ್ರಾಯಪಟ್ಟರು.

ಮತ್ತೊಬ್ಬ ಎನ್‌ಸಿಪಿ ನಾಯಕ ಮತ್ತು ವಸತಿ ಸಚಿವ ಜಿತೇಂದ್ರ ಅವಾದ್ ‘ಸರಳವಾಗಿ ಹೇಳುವುದಾದರೆ, ಈ ಬಜೆಟ್‌ ಭಾರತವನ್ನು ಮಾರಾಟಕ್ಕಿಟ್ಟಂತೆ ಕಾಣುತ್ತದೆ‘ ಎಂದು # ಇಂಡಿಯಾ_ಫಾರ್_ಸೇಲ್ ಹ್ಯಾಷ್‌ಟ್ಯಾಗ್‌ನಲ್ಲಿ ಟ್ವೀಟ್‌ ಮಾಡಿದ್ದಾರೆ.

ಎನ್‌ಸಿಪಿಯ ಮುಖ್ಯ ವಕ್ತಾರ ಮಹೇಶ್ ತಪಾಸೆ, ‘ಖಾಸಗೀಕರಣದ ನಿಜವಾದ ಉದ್ದೇಶ‌ವನ್ನು ಮರೆಮಾಚಲು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಅಲಂಕಾರಿಕ ಪದಗಳನ್ನು ಬಳಸಿದ್ದಾರೆ‘ ಎಂದು ಅವರು ದೂರಿದರು. ನಿರುದ್ಯೋಗ ಸಮಸ್ಯೆ ನಿವಾರಣೆಗೆ ಬಜೆಟ್‌ನಲ್ಲಿ ಯಾವುದೇ ನಿರ್ದಿಷ್ಟ ಮಾರ್ಗಸೂಚಿ ಒದಗಿಸಿಲ್ಲ ಎಂದು ಅವರು ಟೀಕಿಸಿದರು.

ಇವುಗಳನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT