ನವದೆಹಲಿ: ಈ ಬಾರಿಯ ಹಬ್ಬದ ಋತುವಿನಲ್ಲಿ ವಾಹನಗಳ ಮಾರಾಟವು ಕಳೆದ ವರ್ಷಕ್ಕಿಂತಲೂ ಉತ್ತಮವಾಗಿರಲಿದೆ ಎಂಬ ನಿರೀಕ್ಷೆಯನ್ನು ಮಾರುತಿ ಸುಜುಕಿ, ಟೊಯೋಟ ಮತ್ತು ಮಹೀಂದ್ರ ಆ್ಯಂಡ್ ಮಹೀಂದ್ರ ಕಂಪನಿಗಳು ಹೊಂದಿವೆ.
ಸೆಮಿಕಂಡಕ್ಟರ್ ಚಿಪ್ ಕೊರತೆಯು ಮುಂದುವರಿದಿದ್ದು, ಕಂಪನಿಗಳಿಗೆ ನಿಗದಿಯಂತೆ ತಯಾರಿಕೆ ಮುಂದುವರಿಸುವುದು ದೊಡ್ಡ ಸವಾಲಾಗಿದೆ. ಹೀಗಿದ್ದರೂ ಮಾರಾಟ ಉತ್ತಮವಾಗಿರುವ ನಿರೀಕ್ಷೆಯನ್ನು ಇವು ವ್ಯಕ್ತಪಡಿಸಿವೆ.
‘ಸದ್ಯ ಬೇಡಿಕೆಯು ತಕ್ಕಮಟ್ಟಿಗೆ ಇದೆ. ಕಳೆದ ವರ್ಷಕ್ಕಿಂತ ತುಸು ಉತ್ತಮವಾಗಿದೆ. ಬುಕಿಂಗ್, ಹೊಸ ವಾಹನ ಖರೀದಿಗಾಗಿ ಗ್ರಾಹಕರು ವಿಚಾರಣೆ ನಡೆಸುವುದು ಹೆಚ್ಚುತ್ತಿದೆ. ಪೂರೈಕೆ ದೃಷ್ಟಿಯಿಂದ ಕೆಲವೊಂದಿಷ್ಟು ಸಮಸ್ಯೆಗಳಿವೆ’ ಎಂದು ಮಾರುತಿ ಸುಜುಕಿ ಇಂಡಿಯಾದ ಹಿರಿಯ ಕಾರ್ಯನಿರ್ವಾಹಕ ನಿರ್ದೇಶಕ ಶಶಾಂಕ್ ಶ್ರೀವಾಸ್ತವ ಹೇಳಿದ್ದಾರೆ.
ನವರಾತ್ರಿ ವೇಳೆಗೆ ಬೇಡಿಕೆಯಲ್ಲಿ ಭಾರಿ ಏರಿಕೆ ಕಂಡುಬರಲಿದ್ದು, ಅದಕ್ಕೂ ಮುನ್ನವೇ ವಾಹನಗಳ ದಾಸ್ತಾನು ಹೆಚ್ಚಿಸಲು ಕಂಪನಿ ಉದ್ದೇಶಿಸಿದೆ. ಆದರೆ, ಸೆಮಿಕಂಡಕ್ಟರ್ ಪೂರೈಕೆ ಪರಿಸ್ಥಿತಿಯ ಮೇಲೆ ಅದು ನಿರ್ಧಾರವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಮಾರಾಟವು ಕಳೆದ ವರ್ಷಕ್ಕಿಂತ ಹೆಚ್ಚಾಗುವ ನಿರೀಕ್ಷೆ ಇದೆಯಾದರೂ ಅದು 2017–19ರಲ್ಲಿ ಆಗಿದ್ದಂತ ಹೆಚ್ಚಿನ ಮಟ್ಟವನ್ನು ತಲುಪಲು ಸಾಧ್ಯವಾಗಲಾರದು ಎಂದು ಅವರು ಹೇಳಿದ್ದಾರೆ.
‘ಒಟ್ಟಾರೆ ಹಬ್ಬದ ಬೇಡಿಕೆಯಲ್ಲಿ ಯುಟಿಲಿಟಿ ವಾಹನಗಳ ಸಂಖ್ಯೆ ಹೆಚ್ಚಿಗೆ ಇರಲಿದೆ. ಪ್ರಯಾಣಿಕ ವಾಹನಗಳ ವಿಭಾಗದಲ್ಲಿ ಇದರ ಕೊಡುಗೆಯು ಬಹುತೇಕ ಅರ್ಧದಷ್ಟಾಗಲಿದೆ’ ಎಂದು ಮಹೀಂದ್ರ ಆ್ಯಂಡ್ ಮಹೀಂದ್ರ ಕಂಪನಿಯ ಸಿಇಒ ವಿಜಯ್ ನಕ್ರಾ ಹೇಳಿದ್ದಾರೆ.
ಬೇಡಿಕೆ ಕ್ರಮೇಣ ಹೆಚ್ಚಾಗುತ್ತಿದ್ದು, ಕಂಪನಿಯು ತನ್ನ ಗ್ರಾಹಕರ ಅಗತ್ಯಗಳನ್ನು ಪೂರೈಸಲು ಉದ್ದೇಶಿಸಿದೆ ಎಂದು ಟೊಯೋಟ ಕಿರ್ಲೋಸ್ಕರ್ ಮೋಟರ್ನ ಸಹಾಯಕ ವ್ಯವಸ್ಥಾಪಕ ನಿರ್ದೇಶಕ ವಿಸ್ಲೈನ್ ಸಿಗಮಣಿ ಹೇಳಿದ್ದಾರೆ.