ಬೆಂಗಳೂರು: ಗರಿಷ್ಠ ಮುಖಬೆಲೆಯ ನೋಟುಗಳ ರದ್ದತಿ ಸಂದರ್ಭದಲ್ಲಿ ಬ್ಯಾಂಕ್ ಖಾತೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ನಗದು ಠೇವಣಿ ಇರಿಸಿದ ವಹಿವಾಟುದಾರರಿಗೆ ಆದಾಯ ತೆರಿಗೆ ಇಲಾಖೆಯು ನೋಟಿಸ್ ಜಾರಿ ಮಾಡಿದೆ.
ನಗದು ಠೇವಣಿ ಬಗ್ಗೆ ಸಮರ್ಪಕ ವಿವರಣೆ ನೀಡದವರಿಗೆ ಹೆಚ್ಚುವರಿ ತೆರಿಗೆ ಪಾವತಿಸಲು ನೋಟಿಸ್ ನೀಡಲಾಗಿದೆ. ನೋಟಿಸ್ ಪಡೆದವರಲ್ಲಿ ಹೆಚ್ಚಿನವರು ಚಿನ್ನಾಭರಣ ವಹಿವಾಟಿನಲ್ಲಿ ತೊಡಗಿದವರು ಇದ್ದಾರೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ನಗದು ಠೇವಣಿ ಇರಿಸಿದವರಿಗೆಲ್ಲ ನೋಟಿಸ್ ನೀಡಲಾಗಿತ್ತು. ಈ ಬಗ್ಗೆ ತೃಪ್ತಿದಾಯಕ ವಿವರಣೆ ನೀಡದವರಿಗೆ ಹೆಚ್ಚುವರಿ ತೆರಿಗೆ ಪಾವತಿಸಲು ಸೂಚಿಸಿ ಮಂಗಳವಾರ ನೋಟಿಸ್ ನೀಡಲಾಗಿದೆ.
ನೋಟು ರದ್ದತಿ ಸಂದರ್ಭದಲ್ಲಿನ ನಗದು ವಹಿವಾಟಿಗೆ ಸಂಬಂಧಿಸಿದಂತೆ 1.5 ಲಕ್ಷ ಪ್ರಕರಣಗಳಲ್ಲಿ ಶಂಕಾಸ್ಪದ ವಹಿವಾಟಿನ ಕುರಿತು ತನಿಖೆ ನಡೆಸಲಾಗುತ್ತಿದೆ.
‘ಸಂಘಟಿತ ಸ್ವರೂಪದಲ್ಲಿ ಚಿನ್ನಾಭರಣಗಳ ವಹಿವಾಟು ನಡೆಸುವವರ ಮೇಲೆ ಇದು ಯಾವುದೇ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ’ ಎಂದು ವಿಶ್ವ ಚಿನ್ನದ ಮಂಡಳಿಯ ಭಾರತದ ಘಟಕದ ವ್ಯವಸ್ಥಾಪಕ ನಿರ್ದೇಶಕ ಸೋಮಸುಂದರಂ ಪಿಆರ್ ಅವರು ಪ್ರತಿಕ್ರಿಯಿಸಿದ್ದಾರೆ.