ನವದೆಹಲಿ : ಕೋವಿಡ್–19 ಸಾಂಕ್ರಾಮಿಕದಿಂದ ಸಂಕಷ್ಟಕ್ಕೆ ಒಳಗಾಗಿರುವ ಸೇವಾ ವಲಯಕ್ಕೂ ತುರ್ತು ಸಾಲ ಖಾತರಿ ಯೋಜನೆ ನೀಡುವಂತೆ ಭಾರತೀಯ ಕೈಗಾರಿಕಾ ಒಕ್ಕೂಟವು (ಸಿಐಐ) ಕೇಂದ್ರ ಹಣಕಾಸು ಸಚಿವಾಲಯಕ್ಕೆ ಮನವಿ ಮಾಡಿದೆ.
ಮುಖ್ಯವಾಗಿ ಆತಿಥ್ಯ, ಪ್ರವಾಸ, ವಿಮಾನಯಾನ ಮತ್ತು ರಿಟೇಲ್ ವಲಯಗಳು ಲಾಕ್ಡೌನ್ನಿಂದ ಸಂಕಷ್ಟಕ್ಕೆ ಒಳಗಾಗಿವೆ. ಇವುಗಳಿಂದ ಈ ವರ್ಷ ವಿತ್ತೀಯ ಕೊರತೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ, ಭಾರಿ ಸಂಖ್ಯೆಯಲ್ಲಿ ಉದ್ಯೋಗ ನೀಡುತ್ತಿರುವುದರಿಂದ ಹಣಕಾಸಿನ ನೆರವು ಅಗತ್ಯವಾಗಿದೆ ಎಂದು ಹೇಳಿದೆ.
ಸೇವಾ ವಲಯಗಳು ಬೇಡಿಕೆ ಕುಸಿತದಿಂದಾಗಿ ಅತಿ ಹೆಚ್ಚಿನ ನಗದು ಕೊರತೆ ಎದುರಿಸುತ್ತಿವೆ. ಸಾಲ ಖಾತರಿ ಯೋಜನೆಯಿಂದಾಗಿ ಬೇಡಿಕೆ ಚೇತರಿಕೆ ಕಂಡುಕೊಳ್ಳುವವರೆಗೂ ಅವುಗಳಿಗೆ ಮಧ್ಯಂತರ ನಗದು ಬೆಂಬಲ ಸಿಗಲಿದೆ ಎನ್ನುವುದು ಸಿಐಐ ಆಲೋಚನೆಯಾಗಿದೆ.
ದೇಶದ ಜಿಡಿಪಿ ಬೆಳವಣಿಗೆಗೆ ಶೇ 63ರಷ್ಟು ಕೊಡುಗೆ ನೀಡುತ್ತಿರುವ ಸೇವಾ ವಲಯವು ಲಾಕ್ಡೌನ್ನಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿದೆ. ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇ 24.3ರಷ್ಟು ಕುಸಿತ ಕಂಡಿದೆ ಎಂದು ಅದು ತಿಳಿಸಿದೆ.