ನವದೆಹಲಿ: ಮಾರಾಟಗಾರರು ಮತ್ತು ಗುತ್ತಿಗೆದಾರರಿಗೆ ಬಾಕಿ ಉಳಿಸಿಕೊಂಡಿರುವ ಮೊತ್ತವನ್ನು ಪಾವತಿಸಲು ಕೇಂದ್ರೋದ್ಯಮಗಳಿಗೆ (ಸಿಪಿಎಸ್ಇ) ಅಕ್ಟೋಬರ್ 15 ಗಡುವು ನೀಡಲಾಗಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ವಿವಿಧ ಸಿಪಿಎಸ್ಇಗಳ ಬಂಡವಾಳ ವೆಚ್ಚದ ಪರಿಶೀಲನೆ ನಡೆಸಿದರು. ಬಳಿಕ ನಗದು ಬಿಕ್ಕಟ್ಟು ಬಗೆಹರಿಸಲು ಬಾಕಿ ಪಾವತಿಸುವಂತೆ ವಿವಿಧ ವಲಯಗಳ ಮುಖ್ಯಸ್ಥರಿಗೆ ಸೂಚನೆ ನೀಡಿದ್ದಾರೆ.
ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ದರವು ಆರು ವರ್ಷಗಳ ಕನಿಷ್ಠ ಮಟ್ಟವಾದ ಶೇ 5ಕ್ಕೆ ಕುಸಿದಿದೆ. ಹೀಗಾಗಿದೇಶದ ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡಲು ಪೂರಕವಾದ ಕ್ರಮಗಳನ್ನು ತೆಗೆದುಕೊಳ್ಳುವ ನಿಟ್ಟಿನಲ್ಲಿ ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರದಿಂದ ಹಲವು ವಲಯಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸುತ್ತಿದ್ದಾರೆ.
‘ಪ್ರಸಕ್ತ ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ಹೂಡಿಕೆ ಹೆಚ್ಚಿಸುವಂತೆಯೂ ಕಂಪನಿಗಳಿಗೆ ಸೂಚನೆ ನೀಡಲಾಗುವುದು. ಮುಂದಿನ ನಾಲ್ಕು ತ್ರೈಮಾಸಿಕಗಳಿಗೆ ಮಾಡಲಿರುವ ವೆಚ್ಚದ ವಿವರ ನೀಡುವಂತೆಯೂ ಕೇಳಲಾಗಿದೆ.
‘ಹೂಡಿಕೆ ಚಟುವಟಿಕೆ ಸಕ್ರಿಯವಾಗಿರುವಂತೆ ಮಾಡಲು ಎಂಎಸ್ಎಂಇ, ಮಾರಾಟಗಾರರು, ಗುತ್ತಿಗೆದಾರರಿಗೆ ನೀಡಬೇಕಿರುವ ಮೊತ್ತ ವನ್ನುಕಾಲಕಾಲಕ್ಕೆ ಪಾವತಿಸುವಂತೆ ತಿಳಿಸಲಾಗಿದೆ.ಪಾವತಿ ಬಗ್ಗೆ ವಿವರ ಪಡೆಯಲು ಅನುಕೂಲ ಆಗುವಂತೆ ಆನ್ಲೈನ್ ಬಿಲ್ಲಿಂಗ್ ಜಾಲತಾಣ ರೂಪಿಸಲಾಗುವುದು’ ಎಂದು ಮಾಹಿತಿ ನೀಡಿದ್ದಾರೆ.