ನವದೆಹಲಿ: ಡೇಟಾ ಮತ್ತು ಸಾಧನಗಳ ದರ ಹೆಚ್ಚಳವು ಡಿಜಿಟಲೀಕರಣದ ತ್ವರಿತಗತಿಯ ಬೆಳವಣಿಗೆಗೆ ಅಡ್ಡಿಯಾಗುವ ಆತಂಕ ಎದುರಾಗಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಐ.ಟಿ. ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಬುಧವಾರ ಹೇಳಿದ್ದಾರೆ.
ಕಾರ್ಯಕ್ರಮವೊಂದರ ಸಂದರ್ಭ ದಲ್ಲಿ ಮಾತನಾಡಿದ ಅವರು, ‘2025ರ ವೇಳೆಗೆ 120 ಕೋಟಿ ಭಾರತೀಯರನ್ನು ಆನ್ಲೈನ್ ವ್ಯಾಪ್ತಿಗೆ ತರುವ ಗುರಿಯನ್ನು ಹೊಂದಿದ್ದೇವೆ. ಡೇಟಾ ಶುಲ್ಕ ಹೆಚ್ಚಾಗುತ್ತಿರುವುದು, ಸಾಧನಗಳ ದರದಲ್ಲಿ ಆಗುವ ಏರಿಕೆಯು ಇದಕ್ಕೆ ಅಡ್ಡಿ’ ಎಂದು ತಿಳಿಸಿದ್ದಾರೆ.
ದರ ಹೆಚ್ಚಳದ ಕುರಿತು ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರದ ಜೊತೆ ಮಾತುಕತೆ ನಡೆಸುವುದಾಗಿಯೂ ಅವರು ಹೇಳಿದ್ದಾರೆ.
ಭಾರ್ತಿ ಏರ್ಟೆಲ್ ಕಂಪನಿಯು 28 ದಿನಗಳ ಅವಧಿಯ ರಿಚಾರ್ಜ್ ಯೋಜನೆಯ ಶುಲ್ಕವನ್ನು ಕರ್ನಾಟಕ ಸೇರಿದಂತೆ ಒಟ್ಟು ಎಂಟು ದೂರಸಂಪರ್ಕ ವೃತ್ತಗಳಲ್ಲಿ ಹೆಚ್ಚಿಸಿದೆ. ಹೊಸ ಶುಲ್ಕ₹ 155 ಆಗಿದೆ. ಇದು ಈ ಹಿಂದಿನ ಶುಲ್ಕಕ್ಕೆ ಹೋಲಿಸಿದರೆ ಶೇಕಡ 57ರಷ್ಟು ಹೆಚ್ಚು.