ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಡಿತರ ಬೆಲೆ ಹೆಚ್ಚಿಸಲು ಸಲಹೆ: ಆರ್ಥಿಕ ಸಮೀಕ್ಷೆ

Last Updated 29 ಜನವರಿ 2021, 20:35 IST
ಅಕ್ಷರ ಗಾತ್ರ

ನವದೆಹಲಿ: ಆಹಾರ ಧಾನ್ಯ ಗಳ ಸಬ್ಸಿಡಿಗೆ ವಿನಿಯೋಗ ಆಗುತ್ತಿರುವ ಹಣದ ಮೊತ್ತವು ‘ನಿಭಾಯಿಸಲು ಸಾಧ್ಯ ವಾಗದಷ್ಟು’ ಹೆಚ್ಚಾಗುತ್ತಿದೆ ಎಂದು 2020–21ನೇ ಸಾಲಿನ ಆರ್ಥಿಕ ಸಮೀಕ್ಷೆ ಕಳವಳ ವ್ಯಕ್ತಪಡಿಸಿದೆ. ಪಡಿತರ ಅಂಗಡಿಗಳ ಮೂಲಕ ಮಾರಾಟ ಮಾಡುವ ಆಹಾರ ಧಾನ್ಯಗಳ ಬೆಲೆಯನ್ನು ಹೆಚ್ಚಿಸಬೇಕು ಎಂದು ಅದು ಸರ್ಕಾರಕ್ಕೆ ಸಲಹೆ ನೀಡಿದೆ.

ಸಾರ್ವಜನಿಕ ಪಡಿತರ ವ್ಯವಸ್ಥೆಯ (ಪಿಡಿಎಸ್) ಅಡಿಯಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ (ಎನ್‌ಎಫ್‌ ಎಸ್‌ಎ) ಆಶಯದಂತೆ ಆಹಾರ ಧಾನ್ಯ ಗಳನ್ನು ಪಡಿತರ ಅಂಗಡಿಗಳ ಮೂಲಕ ಸಬ್ಸಿಡಿ ಬೆಲೆಗೆ ಮಾರಾಟ ಮಾಡಲಾಗು ತ್ತಿದೆ. ಕೆ.ಜಿ. ಅಕ್ಕಿಯನ್ನು ₹ 3ಕ್ಕೆ, ಕೆ.ಜಿ. ಗೋಧಿಯನ್ನು ₹ 2ಕ್ಕೆ ನೀಡಲಾಗುತ್ತಿದೆ. 80 ಕೋಟಿಗಿಂತ ಹೆಚ್ಚು ಜನರಿಗೆ ಇದರ ಪ್ರಯೋಜನ ಸಿಗುತ್ತಿದೆ.

‘ಆಹಾರ ಭದ್ರತೆಗೆ ಸಂಬಂಧಿಸಿದ ಬದ್ಧತೆಯ ಕಾರಣದಿಂದಾಗಿ ಆಹಾರ ಧಾನ್ಯಗಳ ನಿರ್ವಹಣೆಯ ಆರ್ಥಿಕ ಹೊರೆ ಯನ್ನು ತಗ್ಗಿಸುವುದು ಕಷ್ಟ. ಆದರೆ, ಪಡಿತರ ಅಂಗಡಿಗಳ ಮೂಲಕ ಮಾರಾಟವಾಗುವ ಧಾನ್ಯಗಳ ಬೆಲೆ ಪರಿಷ್ಕರಿಸುವುದನ್ನು ಪರಿಗಣಿಸುವ ಅಗತ್ಯವಿದೆ’ ಎಂದು ಶುಕ್ರವಾರ ಸಂಸತ್ತಿ ನಲ್ಲಿ ಮಂಡಿಸಲಾದ ಸಮೀಕ್ಷಾ ವರದಿ ಹೇಳಿದೆ.

2013ರಲ್ಲಿ ಎನ್‌ಎಫ್‌ಎಸ್‌ಎ ಜಾರಿಗೆ ಬಂದಾಗಿನಿಂದಲೂ ಭತ್ತ ಮತ್ತು ಗೋಧಿಯ ಬೆಲೆ ಪರಿಷ್ಕರಣೆ ಆಗಿಲ್ಲ. 2020ರ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು ಪಿಡಿಎಸ್‌ ಹಾಗೂ ಕೆಲವು ಅಭಿವೃದ್ಧಿ ಯೋಜನೆಗಳ ಅಡಿಯಲ್ಲಿ ನೀಡುವ ಆಹಾರ ಧಾನ್ಯಗಳ ಮೇಲಿನ ಸಬ್ಸಿಡಿಗಾಗಿ ಒಟ್ಟು ₹ 1.15 ಲಕ್ಷ ಕೋಟಿ ಮೀಸಲು ಇರಿಸಿತ್ತು.

ಕೃಷಿ ಉದ್ಯಮ: ಕೃಷಿ ವಲಯವನ್ನು ಸರ್ಕಾರವು ‘ಆಧುನಿಕ ವಾಣಿಜ್ಯೋ ದ್ಯಮ’ವೆಂದು ಪರಿಗಣಿಸಬೇಕು. ಈ ವಲಯದಲ್ಲಿ ‘ತುರ್ತು ಸುಧಾರಣಾ ಕ್ರಮ’ ಗಳನ್ನು ಜಾರಿಗೆ ತರಬೇಕು ಎಂದು ಸಲಹೆ ಮಾಡಿದೆ. ಕೃಷಿ ವಲಯದಲ್ಲಿ ಸುಸ್ಥಿರತೆ ಇರಬೇಕು, ನಿರಂತರ ಬೆಳವಣಿಗೆ ಸಾಧ್ಯ ವಾಗಬೇಕು ಎಂದಾದರೆ ಈ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಮೀಕ್ಷೆ ಹೇಳಿದೆ.

ಎಲ್ಲ ಉದ್ಯಮಗಳೂ ತಾವು ಬಳ ಸುವ ಸಾಮಗ್ರಿಗಳನ್ನು, ತಮ್ಮಲ್ಲಿನ ಜ್ಞಾನ ವನ್ನು ಅತ್ಯುತ್ತಮ ರೀತಿಯಲ್ಲಿ ಬಳಸಿಕೊಳ್ಳಬೇಕು. ಹಾಗೆಯೇ, ‘ಉತ್ಪಾದಕ’ನ ಸ್ಥಾನದಲ್ಲಿರುವ ರೈತರನ್ನು ‘ಉದ್ಯಮಿ’ಗಳ ನ್ನಾಗಿ ಪರಿವರ್ತಿಸಲು ಅವರಿಗೆ ಅಗತ್ಯ ಶಿಕ್ಷಣ ಮತ್ತು ತರಬೇತಿ ಬೇಕು ಎಂದು ಸಮೀಕ್ಷೆಯು ಅಭಿಪ್ರಾಯ ವ್ಯಕ್ತಪಡಿಸಿದೆ.

‘ಈ ನಿಟ್ಟಿನಲ್ಲಿ ಗ್ರಾಮೀಣ ಕೃಷಿ ಶಾಲೆಗಳನ್ನು ಆರಂಭಿಸುವ ಬಗ್ಗೆ ಪರಿಶೀಲಿಸಬಹುದು’ ಎಂದು ಹೇಳಿದೆ. ಕೃಷಿಯ ಜೊತೆ ಬೆಸೆದುಕೊಂಡಿರುವ ಪಶು ಸಂಗೋಪನೆ, ಮೀನುಗಾರಿಕೆಯಂತಹ ಚಟುವಟಿಕೆಗಳ ಉತ್ಪಾದಕತೆಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಲಾಗಿದೆ. ಕೃಷಿ ಮತ್ತು ಕೃಷಿ ಸಂಬಂಧಿ ಚಟುವಟಿಕೆಗಳಲ್ಲಿ ದೇಶದ ಶೇ 50ರಷ್ಟು ದುಡಿಯುವ ವರ್ಗ ತನ್ನನ್ನು ತೊಡಗಿಸಿಕೊಂಡಿದೆ.

ಆರೋಗ್ಯ ಕ್ಷೇತ್ರಕ್ಕೆ ‘ಔಷಧ’

ಸರ್ಕಾರವು ಜಿಡಿಪಿಯ ಶೇ 1ರಷ್ಟು ಮೊತ್ತವನ್ನು ಆರೋಗ್ಯ ಕ್ಷೇತ್ರಕ್ಕಾಗಿ ಈಗ ವೆಚ್ಚ ಮಾಡುತ್ತಿದ್ದು, ಅದನ್ನು ಶೇ 2.5ರಿಂದ ಶೇ 3ರಷ್ಟಕ್ಕೆ ಹೆಚ್ಚಿಸಿದರೆ ಜನ ಆರೋಗ್ಯಕ್ಕಾಗಿ ತಮ್ಮ ಜೇಬಿನಿಂದ ಮಾಡಬೇಕಾದ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡಬಹುದು ಎಂದು ಸಮೀಕ್ಷೆ ಹೇಳಿದೆ. ಈ ಕ್ಷೇತ್ರದಲ್ಲಿ ಸರ್ಕಾರವು ಮಾಡುವ ವೆಚ್ಚವನ್ನು ಹೆಚ್ಚಿಸಿದರೆ ಆರೋಗ್ಯ ರಕ್ಷಣೆಗಾಗಿ ಜನರು ಮಾಡುವ ಒಟ್ಟಾರೆ ವೆಚ್ಚವು ಶೇ 30ಕ್ಕೆ ಇಳಿಯಲಿದೆ. ಗ್ರಾಮೀಣ ಭಾಗಗಳಲ್ಲೂ ಗುಣಮಟ್ಟದ ಆರೋಗ್ಯ ಸೇವೆಗಳನ್ನು ನೀಡಲು ಟೆಲಿಮೆಡಿಸಿನ್‌ ವ್ಯವಸ್ಥೆಯನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. ವಿಶೇಷವಾಗಿ ಇಂಟರ್‌ನೆಟ್‌ ಸಂಪರ್ಕ ಹಾಗೂ ಇತರ ಮೂಲಸೌಲಭ್ಯಗಳನ್ನು ಬಲಪಡಿಸಬೇಕು ಎಂದು ಅದು ಸಲಹೆ ಮಾಡಿದೆ.

ಆಯುಷ್ಮಾನ್‌ ಭಾರತದ ಜತೆಯಲ್ಲೇ ರಾಷ್ಟ್ರೀಯ ಆರೋಗ್ಯ ಮಿಷನ್‌ಗೂ (ಎನ್‌ಎಚ್‌ಎಂ) ಆದ್ಯತೆ ನೀಡಬೇಕು ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT