ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕತೆ ವೇಗವಾಗಿ ಸುಧಾರಿಸಿಕೊಳ್ಳುತ್ತಿದೆ: ಆರ್ಥಿಕ ತಜ್ಞೆ ಆಶಿಮಾ ಗೋಯಲ್

Last Updated 22 ನವೆಂಬರ್ 2020, 11:25 IST
ಅಕ್ಷರ ಗಾತ್ರ

ನವದೆಹಲಿ: ‘ಭಾರತದ ಆರ್ಥಿಕತೆಯು ವೇಗವಾಗಿ ಸುಧಾರಿಸಿಕೊಳ್ಳುತ್ತಿದೆ. ಪ್ರಸಕ್ತ ಹಣಕಾಸು ವರ್ಷದ ಮೂರು ಮತ್ತು ನಾಲ್ಕನೇ ತ್ರೈಮಾಸಿಕದಲ್ಲಿ ಸಕಾರಾತ್ಮಕ ಹಾದಿಗೆ ಮರಳಲಿದೆ’ ಎಂದು ಆರ್ಥಿಕತಜ್ಞೆ ಆಶಿಮಾ ಗೋಯಲ್‌ ಹೇಳಿದ್ದಾರೆ.

ಕೋವಿಡ್‌–19 ಸಾಂಕ್ರಾಮಿಕದ ನಿರ್ವಹಣೆ ಹಾಗೂ ಹಂತ ಹಂತವಾಗಿ ಆರ್ಥಿಕ ಚಟುವಟಿಕೆಗಳನ್ನು ಅನ್‌ಲಾಕ್‌ ಮಾಡುತ್ತಿರುವುದರಿಂದಾಗಿ ಕೋವಿಡ್‌–19 ಪ್ರಕರಣಗಳು ತೀವ್ರ ಮಟ್ಟಕ್ಕೆ ಏರಿಕೆಯಾಗದಂತೆ ತಡೆಯಲು ನೆರವಾಗುತ್ತಿವೆ ಎಂದು ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ. ಆರ್‌ಬಿಐನ ಹಣಕಾಸು ನೀತಿ ಸಮಿತಿಯ (ಎಂಪಿಸಿ) ಸದಸ್ಯರಲ್ಲಿ ಆಶಿಮಾ ಅವರು ಸಹ ಒಬ್ಬರಾಗಿದ್ದಾರೆ.

‘ಆರ್ಥಿಕ ಬೆಳವಣಿಗೆಯ ಕುರಿತು ವಿವಿಧ ಸಂಸ್ಥೆಗಳು ತಾವು ಮಾಡಿದ್ದ ಅಂದಾಜನ್ನು ಪರಿಷ್ಕರಿಸುತ್ತಿವೆ. ಅನ್‌ಲಾಕ್‌ 4 ಆರಂಭವಾದಾಗಿನಿಂದ ಸರಕು ಮತ್ತು ಸೇವೆಗಳ ಪೂರೈಕೆ ವ್ಯವಸ್ಥೆಯಲ್ಲಿ ಆಗಿದ್ದ ಅಡೆತಡೆಗಳು ನಿವಾರಣೆ ಆಗುತ್ತಿದ್ದು, ಚಟುವಟಿಕೆಗಳು ವೇಗ ಪಡೆದುಕೊಳ್ಳುತ್ತಿವೆ. ಮೂರು ಮತ್ತು ನಾಲ್ಕನೇ ತ್ರೈಮಾಸಿಕದಲ್ಲಿ ಆರ್ಥಿಕ ಬೆಳವಣಿಗೆಯು ಸಕಾರಾತ್ಮಕ ಹಾದಿಗೆ ಮರಳಲಿದೆ. ಆರ್ಥಿಕತೆಯ ಸುಧಾರಣೆಗೆ ಘೋಷಿಸಿರುವ ಕ್ರಮಗಳು ಪ್ರಗತಿಯಲ್ಲಿದ್ದು, ದೀರ್ಘಾವಧಿಯಲ್ಲಿ ಸುಸ್ಥಿರ ಪ್ರಗತಿಗೆ ಕಾರಣವಾಗಲಿವೆ’ ಎನ್ನುವುದು ಅವರ ಅಭಿಪ್ರಾಯವಾಗಿದೆ.

‘ಚಿಲ್ಲರೆ ಹಣದುಬ್ಬರ ಗರಿಷ್ಠ ಮಟ್ಟದಲ್ಲಿ ಇದೆಯಲ್ಲಾ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಅಕಾಲಿಕ ಮಳೆ ಮತ್ತು ಲಾಕ್‌ಡೌನ್‌ನಿಂದ ಪೂರೈಕೆ ವ್ಯವಸ್ಥೆಯಲ್ಲಿ ತೊಡಕುಂಟಾಗಿದೆ. ಇದರಿಂದಾಗಿ ಚಿಲ್ಲರೆ ಹಣದುಬ್ಬರ ಗರಿಷ್ಠ ಮಟ್ಟದಲ್ಲಿದೆ. ಕೆಲವು ದೀರ್ಘಾವಧಿಯ ಬದಲಾವಣೆಗಳು ಹಣದುಬ್ಬರವನ್ನು ತಗ್ಗಿಸಲಿವೆ. ವರಮಾನ ಇಳಿಮುಖವಾಗಿದ್ದರೂ ಬೇಡಿಕೆಯನ್ನು ಹೆಚ್ಚಿಸುವ ಉದ್ದೇಶದಿಂದ ಸರ್ಕಾರವು ಹೆಚ್ಚು ವೆಚ್ಚ ಮಾಡುತ್ತಿದೆ. ವಿತ್ತೀಯ ಕೊರತೆಯು ಈಗಾಗಲೇ ಬಜೆಟ್ ಅಂದಾಜನ್ನೂ ಮೀರಿದೆ. ಕೇಂದ್ರ ಮತ್ತು ರಾಜ್ಯಗಳ ವಿತ್ತೀಯ ಕೊರತೆಯು ಒಟ್ಟಾರೆ ಶೇ 12ನ್ನೂ ಮೀರುವ ನಿರೀಕ್ಷೆ ಇದೆ’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT