ನವದೆಹಲಿ: ಅನಿಶ್ಚಿತ ಹವಾಮಾನ ಪರಿಸ್ಥಿತಿಯು ದೇಶದ ಆರ್ಥಿಕ ಬೆಳವಣಿಗೆ ಹಾಗೂ ಹಣದುಬ್ಬರ ನಿಯಂತ್ರಣದ ಮೇಲೆ ಕೆಟ್ಟ ಪರಿಣಾಮ ಉಂಟುಮಾಡಬಹುದು ಎಂಬ ಆತಂಕವನ್ನು ಕೇಂದ್ರ ಹಣಕಾಸು ಸಚಿವಾಲಯದ ವರದಿಯೊಂದು ವ್ಯಕ್ತಪಡಿಸಿದೆ.
ಬೇಡಿಕೆಯಲ್ಲಿ ಸ್ಥಿರವಾದ ಮತ್ತು ವಿಸ್ತೃತ ನೆಲೆಯ ಬೆಳವಣಿಗೆ ಕಂಡುಬಂದಿದೆ. ಸಾಮರ್ಥ್ಯ ವೃದ್ಧಿಯಲ್ಲಿ ಹೂಡಿಕೆ, ರಿಯಲ್ ವಲಯದಲ್ಲಿ ಹೂಡಿಕೆ ಉತ್ತಮವಾಗುತ್ತಿದೆ ಎಂದು ಏಪ್ರಿಲ್ ತಿಂಗಳ ಮಾಸಿಕ ಆರ್ಥಿಕ ಪರಿಶೀಲನಾ ವರದಿ ಹೇಳಿದೆ.
‘ಇಡೀ ವರ್ಷದಲ್ಲಿ ಆರ್ಥಿಕತೆಯಲ್ಲಿ ಏನಾಗುತ್ತದೆ ಎಂಬುದನ್ನು ಏಪ್ರಿಲ್ನಲ್ಲಿಯೇ ಹೇಳುವುದು ಕಷ್ಟ. ಆದರೆ ಆರ್ಥಿಕ ವರ್ಷದ ಆರಂಭವು ಚೆನ್ನಾಗಿದ್ದರೆ, ಮುಂದೆ ಒಳ್ಳೆಯದಾಗುತ್ತದೆ ಎಂಬ ಸೂಚನೆ ಸಿಕ್ಕಂತಾಗುತ್ತದೆ’ ಎಂದು ಅದು ಹೇಳಿದೆ.
ಸೇವಾ ವಲಯ ಹಾಗೂ ತಯಾರಿಕಾ ವಲಯಗಳ ರೀತಿಯಲ್ಲಿಯೇ ಕೃಷಿ ವಲಯದ ಮುನ್ನೋಟ ಕೂಡ ಉತ್ತಮವಾಗಿದೆ ಎಂದು ವರದಿಯು ತಿಳಿಸಿದೆ.