ನವದೆಹಲಿ: ಮಾರ್ಚ್ 31ಕ್ಕೆ ಕೊನೆಗೊಳ್ಳಲಿರುವ ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಅರ್ಥ ವ್ಯವಸ್ಥೆಯು ಶೇಕಡ (–)7.7ರಷ್ಟು ಕುಸಿತ ಕಾಣಲಿದೆ ಎಂದು ಕೇಂದ್ರ ಸರ್ಕಾರವು ಆರ್ಥಿಕತೆ ಕುರಿತ ಮುನ್ನೋಟದಲ್ಲಿ ಹೇಳಿದೆ. ಕೃಷಿ ವಲಯವು ಶೇ 3.4ರಷ್ಟು ಬೆಳವಣಿಗೆ ಸಾಧಿಸಲಿದೆ ಎಂದು ಕೇಂದ್ರ ಅಂದಾಜಿಸಿದೆ.
ಆದರೆ, ದೇಶದ ಅರ್ಥ ವ್ಯವಸ್ಥೆಯ ಬಹುಮುಖ್ಯ ಅಂಗವಾಗಿರುವ ಸೇವಾ ವಲಯವು ಶೇ (–)21ರಷ್ಟು ಕುಸಿತ ದಾಖಲಿಸಲಿದೆ ಎಂದು ಅಂದಾಜಿಸಲಾಗಿದೆ. 2020–21ರಲ್ಲಿ ಅರ್ಥ ವ್ಯವಸ್ಥೆಯು ಶೇ (–)7.5ರಷ್ಟು ಕುಸಿಯಲಿದೆ ಎಂದು ಆರ್ಬಿಐ ಅಂದಾಜಿಸಿದೆ. ಕೇಂದ್ರ ಸರ್ಕಾರದ ಅಂದಾಜು ಆರ್ಬಿಐ ಮಾಡಿರುವ ಅಂದಾಜಿಗೆ ಹತ್ತಿರವಾಗಿದೆ.
ಏಪ್ರಿಲ್–ಜೂನ್ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಶೇ (–)23.9ರಷ್ಟು ಕುಸಿತ ಕಂಡಿದೆ. ಜುಲೈ–ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಕುಸಿತದ ಪ್ರಮಾಣ ತಗ್ಗಿದ್ದು, ಶೇ (–)7.5ಕ್ಕೆ ತಲುಪಿದೆ. ಕೇಂದ್ರ ಸರ್ಕಾರ ಸಿದ್ಧಪಡಿಸಿರುವ ಮುನ್ನೋಟವು ಮುಂದಿನ ವರ್ಷದ ಬಜೆಟ್ ಸಿದ್ಧಪಡಿಸಲು ಹಣಕಾಸು ಸಚಿವರಿಗೆ ನೆರವಾಗುತ್ತದೆ.