ನವದೆಹಲಿ: ಇ–ಕಾಮರ್ಸ್ ವ್ಯವಸ್ಥೆಯ ಮೂಲಕ ತಯಾರಿಕೆ ಮತ್ತು ರಫ್ತು ಹೆಚ್ಚಿಸುವ ಕುರಿತು ಕೇಂದ್ರ ಸರ್ಕಾರವು ಹರಳು ಮತ್ತು ಚಿನ್ನಾಭರಣ ಉದ್ಯಮದ ಸಲಹೆ ಬಯಸಿದೆ ಎಂದು ಮೂಲಗಳು ತಿಳಿಸಿವೆ.
ಇದೇ ವೇಳೆ, ಹರಳು ಮತ್ತು ಚಿನ್ನಾಭರಣ ಉದ್ಯಮಕ್ಕೆ ಕಡಿಮೆ ಬಡ್ಡಿದರದ ಸಾಲ ಯೋಜನೆ ಮುಂದುವರಿಸುವಂತೆ ಹಾಗೂ ವಿದೇಶಿ ಗಣಿ ಕಂಪನಿಗಳಿಗೆ ಕಚ್ಚಾ ವಜ್ರ ಮಾರಾಟ ಮಾಡುವ ಅಥವಾ ಹರಾಜು ಹಾಕುವ ಅನುಮತಿ ನೀಡುವಂತೆ ಉದ್ಯಮವು ಸರ್ಕಾರವನ್ನು ಕೋರಿದೆ.
ದೇಶದ ತಯಾರಿಕಾ ವಲಯದ ಸಾಮರ್ಥ್ಯ ವೃದ್ಧಿಸುವಲ್ಲಿ ಚರ್ಮೋದ್ಯಮ, ಹರಳು, ಚಿನ್ನಾಭರಣ, ನವೀಕರಿಸಬಲ್ಲ ಇಂಧನ, ಔಷಧ ಮತ್ತು ಜವಳಿ ವಲಯಗಳು ಪ್ರಮುಖ ಪಾತ್ರ ವಹಿಸುತ್ತಿವೆ.