ಹುಬ್ಬಳ್ಳಿ: ‘ಇನ್ವೆಸ್ಟ್ ಕರ್ನಾಟಕ ಹುಬ್ಬಳ್ಳಿ ಸಮಾವೇಶದಲ್ಲಿ ಎಫ್ಎಂಸಿಜಿ, ಸೋಲಾರ್, ವಾಲ್ವ್ಸ್, ಜವಳಿ ಹಾಗೂ ಆಹಾರಧಾನ್ಯಗಳ ಸಂಸ್ಕರಣೆ ಉದ್ಯಮಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ’ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಫೆ.14 ರಂದು ನಗರದ ಡೆನಿಸನ್ಸ್ ಹೋಟೆಲ್ನಲ್ಲಿ ನಡೆಯುವ ಸಮಾ ವೇಶಕ್ಕೆ 6 ಸಾವಿರ ಉದ್ಯಮಿಗಳಿಗೆ ಆಹ್ವಾನ ನೀಡಲಾಗಿದೆ. 650 ಉದ್ಯಮಿಗಳು ಭಾಗವಹಿಸುವುದನ್ನು ಖಚಿತ ಪಡಿಸಿದ್ದಾರೆ. ಭಾಗವಹಿಸುವವರ ಸಂಖ್ಯೆ ಸಾವಿರಕ್ಕೆ ಏರುವ ನಿರೀಕ್ಷೆ ಇದೆ’ ಎಂದರು.
‘ಹುಬ್ಬಳ್ಳಿಯಲ್ಲಿ ಎಫ್ಎಂಸಿಜಿ ಕ್ಲಸ್ಟರ್ ಮಾಡುವ ಯೋಚನೆ ಇದೆ. ಈ ಭಾಗದಲ್ಲಿ ಹತ್ತಿ ಬೆಳೆಯುವುದರಿಂದ ಜವಳಿಗೆ ಆದ್ಯತೆ ನೀಡಲಾಗುತ್ತಿದೆ. ವಾಲ್ವ್ಸ್ ತಯಾರಿಕೆ ಕಾರ್ಖಾನೆಗಳು ಈಗಾಗಲೇ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಇನ್ನಷ್ಟು ಕೈಗಾರಿಕೆಗಳನ್ನು ಆಹ್ವಾನಿಸಲಾಗಿದೆ.
‘ಫುಡ್ ಪಾರ್ಕ್ ಸ್ಥಾಪನೆಗೆ ಪತಂಜಲಿ ಯೋಗ ಸಮಿತಿಯ ಬಾಬಾ ರಾಮದೇವ್ ಅವರೊಂದಿಗೆ ಮಾತುಕತೆ ನಡೆಸಲಾಗಿದೆ. ತಂಡ ವೊಂದನ್ನು ಕಳುಹಿಸುವುದಾಗಿ ಅವರು ತಿಳಿಸಿದ್ದಾರೆ. ಟಾಟಾ, ಹಿಂದೂಜಾ ಕಂಪನಿಗಳ ಅಧಿಕಾರಿ ಗಳ ತಂಡಗಳೂ ಭಾಗವಹಿಸಲಿವೆ’ ಎಂದರು.
‘ಈ ಸಮಾವೇಶ ಹುಬ್ಬಳ್ಳಿಗೆ ಮಾತ್ರ ಸೀಮಿತವಾಗಿಲ್ಲ. ಬೆಳಗಾವಿ, ಯಾದಗಿರಿ ಜಿಲ್ಲೆಯ ಕಡೆಚೂರು ಕೈಗಾರಿಕಾ ಪ್ರದೇಶದಲ್ಲೂ ಹೂಡಿಕೆಯ ಬಗೆಗೆ ಕೆಲವರು ಸ್ಪಂದಿಸಿದ್ದಾರೆ. ಮೆಗಾ ಕೈಗಾರಿಕೆಗಳು ಬಂದರೆ, ವಿನಾಯ್ತಿ ನೀಡುವ ಬಗೆಗೂ ನಿರ್ಧರಿಸಲಾಗುವುದು. 15 ರಿಂದ 20 ಒಪ್ಪಂದಗಳಾಗುವ ನಿರೀಕ್ಷೆ ಇದೆ’ ಎಂದು ಹೇಳಿದರು.