ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ವತ್‌ಗೆ ಗುದ್ದಿದ್ದು ಕಬ್ಬಿಣ ರಿಂಗ್‌ನಿಂದ !

Last Updated 25 ಫೆಬ್ರುವರಿ 2018, 19:47 IST
ಅಕ್ಷರ ಗಾತ್ರ

ಬೆಂಗಳೂರು:‌ ‘ಮೊಹಮದ್ ನಲಪಾಡ್ ಹಾಗೂ ಸಹಚರರು ವಿದ್ವತ್‌ ಮೂಗಿಗೆ ರಿಂಗ್‌ನಿಂದ ಗುದ್ದಿದ್ದಾರೆ’ ಎಂದು ಫಿರ್ಯಾದಿಯು ದೂರಿನ ಪ್ರತಿಯಲ್ಲಿ ಸ್ಪಷ್ಟವಾಗಿ ಹೇಳಿದ್ದರೂ, ಕಬ್ಬನ್‌ಪಾರ್ಕ್ ಪೊಲೀಸರು ಎಫ್‌ಐಆರ್‌ ದಾಖಲಿಸುವಾಗ ಆ ಅಂಶವನ್ನು ಕೈಬಿಟ್ಟಿದ್ದಾರೆ.

ಫೆ.17ರ ರಾತ್ರಿ ‘ಫರ್ಜಿ ಕೆಫೆ’ಯಲ್ಲಿ ನಡೆದ ಗಲಾಟೆ ಸಂಬಂಧ ವಿದ್ವತ್ ಸ್ನೇಹಿತ ಪ್ರವೀಣ್ ವೆಂಕಟಾಚಲಯ್ಯ ರಾತ್ರಿ 11.45ಕ್ಕೆ ದೂರು ಕೊಟ್ಟಿದ್ದರು. ಆದರೆ, ಪೊಲೀಸರು ಪ್ರಕರಣ ದಾಖಲು ಮಾಡಿದ್ದು 3.30ಕ್ಕೆ. ಅಷ್ಟು ತಡವಾಗಿ ಎಫ್‌ಐಆರ್ ದಾಖಲಿಸಿದ್ದರೂ, ‘ರಿಂಗ್‌ನಿಂದ ಗುದ್ದಿದ್ದರು’ ಎಂಬ ಅಂಶವನ್ನೇ ಸೇರಿಸಿಲ್ಲ.

ಪ್ರವೀಣ್ ಸಲ್ಲಿಸಿದ್ದ ದೂರಿನ ಹಾಗೂ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನ ಪ್ರತಿಗಳು ‘ಪ್ರಜಾವಾಣಿ’ಗೆ ಲಭ್ಯವಾಗಿವೆ. ಅವುಗಳನ್ನು ಪರಿಶೀಲಿಸಿದಾಗ ಪೊಲೀಸರ ಕರ್ತವ್ಯ ಲೋಪ ಸ್ಪಷ್ಟವಾಗುತ್ತದೆ.

ಪ್ರಕರಣದಲ್ಲಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ (ಎಸ್‌ಪಿಪಿ) ಆಗಿ ನೇಮಕವಾಗಿರುವ ಎಂ.ಎಸ್.ಶ್ಯಾಮಸುಂದರ್, ‘ಆರೋಪಿಗಳು ಕೋಪದ ಭರದಲ್ಲಿ ಹಲ್ಲೆ ನಡೆಸಿದ್ದರೆ, ಹೊಡೆಯಲು ಕಬ್ಬಿಣದ ರಿಂಗ್ (ನಕಲ್ ರಿಂಗ್) ಬಳಸುತ್ತಿರಲಿಲ್ಲ. ಕೈಗೆ ಸಿಕ್ಕ ವಸ್ತುಗಳಿಂದಷ್ಟೇ ಹಲ್ಲೆ ಮಾಡುತ್ತಿದ್ದರು. ಕೊಲ್ಲುವ ಉದ್ದೇಶ ಇದ್ದುದರಿಂದಲೇ ಬೆರಳುಗಳಿಗೆ ಆ ರಿಂಗ್ ಹಾಕಿಕೊಂಡು ಗುದ್ದಿದ್ದಾರೆ. ಆ ಕಾರಣಕ್ಕಾಗಿಯೇ ಮೂಗು ಹಾಗೂ ಎದೆಗೂಡಿ 9 ಮೂಳೆಗಳು ಮುರಿದು ಹೋಗಿವೆ’ ಎಂದು ಹೇಳಿದರು.

‘ನ್ಯಾಯಾಲಯ ಎಲ್ಲ ಪ್ರಕರಣಗಳಲ್ಲೂ ಎಫ್‌ಐಆರ್ ಅಂಶಗಳನ್ನಷ್ಟೇ ನೋಡುವುದಿಲ್ಲ. ದೂರಿನಲ್ಲಿ ಏನಿತ್ತು ಎಂಬುದನ್ನೂ ಪರಿಗಣಿಸುತ್ತದೆ’ ಎಂದರು.

ಪತ್ನಿ ಕಂಡು ಕಣ್ಣೀರಿಟ್ಟ ನಲಪಾಡ್

ವಿದ್ವತ್ ಮೇಲೆ ಹಲ್ಲೆ ನಡೆಸಿ ನ್ಯಾಯಾಂಗ ಬಂಧನದಲ್ಲಿರುವ ನಲಪಾಡ್‌, ಶನಿವಾರ ತನಗೆ ಊಟ ತೆಗೆದುಕೊಂಡು ಜೈಲಿಗೆ ಬಂದಿದ್ದ ಪತ್ನಿ ಸಮ್ರೀನಾ ಅವರನ್ನು ಕಂಡು ಕಣ್ಣೀರಿಟ್ಟಿದ್ದಾನೆ.

ಇದನ್ನು ‘ಪ್ರಜಾವಾಣಿ’ಗೆ ಖಚಿತಪಡಿಸಿದ ಜೈಲರ್ ಸೋಮಶೇಖರ್, ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದರು.

ಸಮ್ರೀನಾ ಬೆಳಿಗ್ಗೆ 11.30ರ ಸುಮಾರಿಗೆ ಬಿರಿಯಾನಿ ತೆಗೆದುಕೊಂಡು ಬಂದಿದ್ದರು. ಪತ್ನಿಯನ್ನು ನೋಡುತ್ತಿದ್ದಂತೆಯೇ ಭಾವುಕನಾದ ನಲಪಾಡ್, ‘ಇನ್ನು ಮುಂದೆ ಹೀಗೆ ಮಾಡುವುದಿಲ್ಲ’ ಎನ್ನುತ್ತಾ ಕ್ಷಮೆಯಾಚಿಸಿದ್ದಾನೆ. ಸ್ನೇಹಿತ ಅರುಣ್‌ ಬಾಬು ಜತೆ ಆ ಬಿರಿಯಾನಿ ತಿಂದ ಆತ, ಬಳಿಕ 30 ನಿಮಿಷ ಪತ್ನಿಯೊಂದಿಗೆ ಪ್ರತ್ಯೇಕವಾಗಿ ಮಾತನಾಡಿದ್ದಾನೆ. ಪತಿಗೆ ಸಾಂತ್ವನ ಹೇಳಿ, 12.10ಕ್ಕೆ ಸಮ್ರೀನಾ ಕಾರಾಗೃಹದಿಂದ ಹೊರಹೋಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಾರ್ಥನೆ, ವಾಯುವಿಹಾರ: ‘ನಲಪಾಡ್ ಹಾಗೂ ಅರುಣ್‌ ಬಾಬು ಬಿಗಿ ಭದ್ರತೆಯ ವಿಐಪಿ ಸೆಲ್‌ನಲ್ಲಿದ್ದಾರೆ. ಉಳಿದವರು ‘ಬಿ’ ಬ್ಲಾಕ್‌ ಕಟ್ಟಡದಲ್ಲಿದ್ದಾರೆ. ಸೆಲ್ ಮುಂಭಾಗದ ಗಾರ್ಡನ್‌ನಲ್ಲಿ ಬೆಳಿಗ್ಗೆ ಹಾಗೂ ಸಂಜೆ ಇಬ್ಬರೂ ವಾಯುವಿಹಾರ ಮಾಡುತ್ತಾರೆ. ನಲಪಾಡ್ ಪ್ರತಿದಿನ ಮಧ್ಯಾಹ್ನ ಪ್ರಾರ್ಥನೆ (ನಮಾಜ್) ಮಾಡುತ್ತಾನೆ. ಎಲ್ಲ ಕೈದಿಗಳಿಗೆ ನೀಡುವ ಆಹಾರವನ್ನೇ ನೀಡಲಾಗುತ್ತಿದೆ’ ಎಂದು ಜೈಲು ಸಿಬ್ಬಂದಿ ಹೇಳಿದರು.

ವಿದ್ವತ್‌ ವಾರ್ಡ್‌ಗೆ ಸ್ಥಳಾಂತರ

ಮಲ್ಯ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿದ್ದ ವಿದ್ವತ್‌ ಅವರನ್ನು ಭಾನುವಾರ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ.

ವಿದ್ವತ್‌ ಅವರಿಗೆ ಐಸಿಯುನಲ್ಲೇ ಏಳು ದಿನ ಚಿಕಿತ್ಸೆ ನೀಡಲಾಗಿತ್ತು. ಮುಖ ಹಾಗೂ ದೇಹದ ಹಲವು ಭಾಗಗಳಿಗೆ ಪೆಟ್ಟು ಬಿದ್ದಿದ್ದರಿಂದ ನೋವು ಅನುಭವಿಸುತ್ತಿದ್ದರು. ಮಾತನಾಡಲೂ ಸಾಧ್ಯವಾಗುತ್ತಿರಲಿಲ್ಲ. ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ.

‘ವಿದ್ವತ್‌ ಚಿಕಿತ್ಸೆಗೆ ತ್ವರಿತವಾಗಿ ಸ್ಪಂದಿಸಿದ್ದಾರೆ. ಅವರ ಮುಖದ ಬಾವು ಶೇ 90ರಷ್ಟು ಕಡಿಮೆಯಾಗಿದೆ. ಘನ ಆಹಾರ ಸೇವಿಸುತ್ತಿದ್ದಾರೆ’ ಎಂದು ವೈದ್ಯ ಕೆ.ಆನಂದ್‌ ತಿಳಿಸಿದರು.

ಜಾಮೀನು ಅರ್ಜಿ ವಿಚಾರಣೆ ಇಂದು

ನಲಪಾಡ್ ಹಾಗೂ ಆತನ ಸಹಚರರ ಜಾಮೀನು ಅರ್ಜಿಗಳ ವಿಚಾರಣೆಯನ್ನು 63ನೇ ಸೆಷನ್ಸ್‌ ನ್ಯಾಯಾಲಯ ಸೋಮವಾರ (ಫೆ. 26) ಕೈಗೆತ್ತಿಕೊಳ್ಳಲಿದೆ.

ನಲಪಾಡ್‌ಗೆ ಜಾಮೀನು ಮಂಜೂರು ಮಾಡುವಂತೆ ಅವರ ಪರ ವಕೀಲ ಟಾಮಿ ಸೆಬಾಸ್ಟಿಯನ್‌ ಅರ್ಜಿ ಸಲ್ಲಿಸಿದ್ದಾರೆ. ಅದಕ್ಕೆ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್ ಎಂ.ಎಸ್.ಶ್ಯಾಮಸುಂದರ್ ಅವರು ಇಂದು ಆಕ್ಷೇಪಣಾ ಅರ್ಜಿಯನ್ನು ಸಲ್ಲಿಸುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT