ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಗಾರಿಕೆ: ಕಾಣಿಸಿಕೊಂಡಿಲ್ಲ ಚೇತರಿಕೆ: ಉತ್ಪನ್ನಗಳಿಗೆ ಕುದುರದ ಬೇಡಿಕೆ

ನುರಿತ ಕಾರ್ಮಿಕರ ಕೊರತೆ l ಕಚ್ಚಾವಸ್ತು ಪೂರೈಕೆಯಲ್ಲಿ ವ್ಯತ್ಯಯ
Last Updated 21 ಮೇ 2020, 5:40 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌– 19 ಹರ ಡದಂತೆ ತಡೆಯಲು ಕೆಲವು ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಕೈಗಾರಿಕೋದ್ಯ ಮಗಳು ಕಾರ್ಯನಿರ್ವಹಿಸುವುದಕ್ಕೆ ಸರ್ಕಾರ ಅನುಮತಿ ನೀಡಿದ್ದರೂ ಅವುಗಳ ಚಟುವಟಿಕೆಗಳಲ್ಲಿ ಉತ್ಸಾಹ ಚಿಗುರಿಲ್ಲ.

ಲಾಕ್‌ಡೌನ್‌ ನಿಬಂಧನೆಗಳನ್ನು ಸಡಿಲಿಸಿ, ಸಾರ್ವಜನಿಕ ಸಾರಿಗೆ ಹಾಗೂ ವಾಹನ ಸಂಚಾರಕ್ಕೆ ಅನುಮತಿ ನೀಡಿದ ಬಳಿಕವೂ ಶೇ 65ರಿಂದ ಶೇ 70ರಷ್ಟು ಕೈಗಾರಿಕೆಗಳು ಮಾತ್ರ ಕಾರ್ಯಾರಂಭ ಮಾಡಿವೆ. ಈ ಕೈಗಾರಿಕೆಗಳು ಕೂಡಾ ನುರಿತ ಕಾರ್ಮಿಕರ ಕೊರತೆ, ಕಚ್ಚಾವಸ್ತು ಪೂರೈಕೆ ವ್ಯತ್ಯಯದಿಂದಾಗಿ ಪೂರ್ಣ ಪ್ರಮಾಣದಲ್ಲಿ ಉತ್ಪಾದನಾ ಚಟುವಟಿಕೆ ಆರಂಭಿಸಲು ಸಾಧ್ಯವಾಗಿಲ್ಲ.

ಊರಿಗೆ ತೆರಳಿರುವ ಕಾರ್ಮಿಕರು ಕೊರೊನಾ ಸೋಂಕು ಹರಡುವ ಭಯ ದಿಂದ ಕೆಲಸಕ್ಕೆ ಮರಳಲು ಹಿಂದೇಟು ಹಾಕುತ್ತಿರುವುದು ಉದ್ಯಮಿ ಗಳ ಪಾಲಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಉತ್ಪಾದಿಸಿದ ಸರಕುಗಳಿಗೆ ಮತ್ತೆ ಹಿಂದಿನಂತೆ ಬೇಡಿಕೆ ಕಂಡುಕೊಳ್ಳುವ ಚಿಂತೆ ಕೈಗಾರಿಕೋದ್ಯಮಿಗಳನ್ನು ಬಲ ವಾಗಿ ಕಾಡುತ್ತಿದೆ. ಹೀಗಾಗಿ, ಬಹುತೇಕ ಉದ್ಯಮಿಗಳು ಲಭ್ಯ ಇರುವ ಅಲ್ಪಸ್ವಲ್ಪ ಕಾರ್ಮಿಕರನ್ನೇ ಬಳಸಿಕೊಂಡು ನೆಪ ಮಾತ್ರಕ್ಕೆ ಉತ್ಪಾದನೆ ಆರಂಭಿಸಿದ್ದಾರೆ.

‘ಕೈಗಾರಿಕೆಗಳನ್ನು ನಡೆಸಲು ಒಂದೊಂದು ವಿಷಯದ ಬಗ್ಗೆಯೂ ವಿಶೇಷ ಪರಿಣತಿ ಪಡೆದ ಕಾರ್ಮಿಕರ ಅಗತ್ಯವಿರುತ್ತದೆ. ಯಾವುದಾದರೂ ಒಂದು ಹಂತದಲ್ಲಿ ನುರಿತ ಕಾರ್ಮಿಕರು ಲಭ್ಯ ಇಲ್ಲದಿದ್ದರೆ ಇಡೀ ಪ್ರಕ್ರಿಯೆ ಅಸ್ತವ್ಯಸ್ತವಾಗುತ್ತದೆ. ಲಾಕ್‌ಡೌನ್‌ ಸಡಿಲಿಕೆ ಬಳಿಕ ಕಾರ್ಯಾರಂಭ ಮಾಡಿರುವ ಬಹುತೇಕ ಕೈಗಾರಿಕೆಗಳು ಇಂತಹದ್ದೇ ಪರಿಸ್ಥಿತಿಯನ್ನು ಎದುರಿಸುತ್ತಿವೆ’ ಎನ್ನು ತ್ತಾರೆ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಅಧ್ಯಕ್ಷ ಸಿ.ಆರ್‌.ಜನಾರ್ದನ.

‘ವಾಹನಗಳ ಬಿಡಿಭಾಗ, ಗಾರ್ಮೆಂಟ್ಸ್‌, ಔಷಧ ತಯಾರಿ, ಆಹಾರೋದ್ಯಮಗಳು ಸೇರಿದಂತೆ ನಗರದ ಬಹುತೇಕ ಉದ್ದಿಮೆಗಳ ನುರಿತ ಕಾರ್ಮಿಕ ವರ್ಗದಲ್ಲಿ ಅನ್ಯರಾಜ್ಯದವರೂ ಸಾಕಷ್ಟಿದ್ದರು. ಸದ್ಯ ರಾಜ್ಯದೊಳಗೆ ಮಾತ್ರ ಬಸ್‌ ಸಂಚಾರ ಆರಂಭವಾಗಿದೆ. ಹೊರ ರಾಜ್ಯಗಳ ಕಾರ್ಮಿಕರನ್ನು ಮರಳಿ ಕರೆಸುವುದು ನಿಜಕ್ಕೂ ಸವಾಲಿನ ವಿಷಯ’ ಎಂದರು.

‘ಆಟೊಮೊಬೈಲ್, ಗೃಹೋಪ ಯೋಗಿ ವಸ್ತುಗಳು ಸೇರಿದಂತೆ ಐಷಾ ರಾಮಿ ಉತ್ಪನ್ನಗಳ ಮಾರಾಟಕ್ಕೆ ಅವಕಾಶವಿಲ್ಲ. ಖರೀದಿದಾರರು ಹಾಗೂ ಕಚ್ಚಾವಸ್ತು ಪೂರೈಸುವವರು ಹೊರರಾಜ್ಯದವರು. ಅಲ್ಲಿ ಚಟುವಟಿಕೆ ಆರಂಭವಾಗುವವರೆಗೆ ಸಂಕಷ್ಟ ಮುಂದುವರಿಯಲಿದೆ’ ಎನ್ನುತ್ತಾರೆ ಧಾರವಾಡದ ಗಾಮನಗಟ್ಟಿಯ ಗ್ರೀನ್ ಟೆಕ್ ಇಂಡಸ್ಟ್ರಿಯಲ್ ಪಾರ್ಕ್ ಅಧ್ಯಕ್ಷ ನಾಗರಾಜ ದೀವಟೆ.

ಕರಾವಳಿಯಲ್ಲೂ ಕರಾಳ ಸ್ಥಿತಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೀನು, ಅಡಿಕೆ, ಗೋಡಂಬಿ, ಪ್ಲಾಸ್ಟಿಕ್, ಆಹಾರ ಸಂಸ್ಕರಣೆ, ಬಿಡಿ ಭಾಗಗಳು, ಜವಳಿ ಉದ್ದಿಮೆಗಳೂ ಕರಾಳ ಸ್ಥಿತಿ ಎದುರಿಸುತ್ತಿವೆ. ಮಂಗಳೂರಿನ ಬೈಕಂಪಾಡಿ ಕೈಗಾರಿಕಾ ಪ್ರದೇಶದ ಶೇ 70 ರಷ್ಟು ಹಾಗೂ ಗ್ರಾಮೀಣ ಭಾಗದಲ್ಲಿ ಶೇ 60ರಷ್ಟು ಕೈಗಾರಿಕೆಗಳು ಮಾತ್ರ ಕಾರ್ಯಾರಂಭ ಮಾಡಿವೆ. ಮುಂಬೈಯ ಕೆಲವು ಬೃಹತ್ ಕಾರ್ಖಾನೆಗಳಿಂದ ಕಚ್ಚಾವಸ್ತುಗಳು ಬರುತ್ತಿಲ್ಲ. ಖಾಸಗಿ ಬಸ್ ಸಂಚಾರ ಇನ್ನೂ ಆರಂಭವಾಗದಿರುವುದರಿಂದ ಸಮಸ್ಯೆ ಮುಂದುವರಿದಿದೆ.

ಮುಚ್ಚಿದ ಫಿಶ್‌ಮಿಲ್‌ಗಳು: ಮೀನುಗಾರಿಕಾ ಬಂದರುಗಳಲ್ಲಿ ಕೆಲಸ ಮಾಡುತ್ತಿದ್ದ ವಲಸೆ ಕಾರ್ಮಿಕರು ಊರುಗಳಿಗೆ ಮರಳಿದ್ದು, ಯಾಂತ್ರೀಕೃತ ಮೀನುಗಾರಿಕೆಯೂ ತತ್ತರಿಸಿದೆ. ಇದನ್ನೇ ಅವಲಂಬಿಸಿದ್ದ ಫಿಶ್‌ಮಿಲ್‌ಗಳು ಮುಚ್ಚಿವೆ. ಮಂಜುಗಡ್ಡೆ ತಯಾರಿಸುವ ಘಟಕಗಳು ಸ್ಥಗಿತಗೊಂಡಿವೆ. ಗೋಡಂಬಿ ಕಾರ್ಖಾನೆಗಳ ಕಚ್ಚಾವಸ್ತು ಕೊರತೆಯಿಂದ ಸಮಸ್ಯೆ ಎದುರಿಸುತ್ತಿವೆ.

ಕಾಫಿ ಘಮಘಮವಿಲ್ಲ: ವಲಸೆ ಕಾರ್ಮಿಕರು ಹುಟ್ಟೂರಿಗೆ ತೆರಳಿ ದ್ದರಿಂದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಫಿ ತೋಟದ ಕೆಲಸಗಳಿಗೆ ತೊಂದರೆಯಾಗಿದೆ. ಕಾಫಿ ಉದ್ಯಮಗಳೂ ತತ್ತರಿಸಿವೆ.

ಮೈಸೂರು ಜಿಲ್ಲೆಯಲ್ಲಿರುವ 26,000 ಕೈಗಾರಿಕೆಗಳ ಪೈಕಿ ಶೇ 40 ರಷ್ಟು ಮಾತ್ರ ಕಾರ್ಯಾರಂಭ ಮಾಡಿವೆ.

‘ಮೈಸೂರಿನ ಕಾರ್ಖಾನೆಗಳಿಗೆ ಚಾಮರಾಜನಗರ, ನಂಜನಗೂಡಿನಿಂದ ಕಾರ್ಮಿಕರು ರೈಲಿನಲ್ಲಿ ಬರುತ್ತಿದ್ದರು. ಬಸ್ಸಿಗೆ ದುಡ್ಡು ಕೊಡುವಷ್ಟು ತಾಕತ್ತು ಅವರಿಗಿಲ್ಲ. ರೈಲು ಸಂಚಾರ ಆರಂಭವಾಗುವವರೆಗೆ ಕಾರ್ಮಿಕರ ಸಮಸ್ಯೆ ಕಾಡಲಿದೆ’ ಎಂದು ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಎ.ಎಸ್‌.ಸತೀಶ್‌ ತಿಳಿಸಿದರು.

ಸದ್ದು ಮಾಡದ ಮಗ್ಗ: ಹಾಸನ ಜಿಲ್ಲೆಯ ಗಾರ್ಮೆಂಟ್ಸ್‌ ಕಾರ್ಖಾನೆಗಳು ಆರಂಭವಾಗಿದೆಯಾದರೂ ಶೇ 25ರಷ್ಟು ಮಾತ್ರ ಉತ್ಪಾದನೆ ನಡೆಯುತ್ತಿವೆ. ಹಾಸನದ ಹಿಮ್ಮತ್‌ ಸಿಂಗ್‌ ಬಟ್ಟೆ ಕಾರ್ಖಾನೆಯಲ್ಲಿ 600 ಮಗ್ಗಗಳಲ್ಲಿ 64 ಮಾತ್ರ ಕಾರ್ಯನಿರ್ವಹಿಸುತ್ತಿವೆ.

ಚಿತ್ರದುರ್ಗ ಜಿಲ್ಲೆಯ ಗಾರ್ಮೆಂಟ್ಸ್‌ ಘಟಕಗಳಲ್ಲಿ ಉತ್ಪಾದಿಸಿದ ಬಟ್ಟೆ ವಿದೇಶಗಳಿಗೆ ರಫ್ತಾಗುತ್ತಿತ್ತು. ಈಗ ಬೇಡಿಕೆ ಕುಸಿದ ಕಾರಣ ಉತ್ಪಾದನೆಯೂ ಕುಂಠಿತವಾಗಿದೆ.

ಎಣ್ಣೆ ಮಿಲ್‌ಗಳಿಗಿಲ್ಲ ಸಮಸ್ಯೆ: ಚಳ್ಳಕೆರೆಯ ಎಣ್ಣೆ ಮಿಲ್‌ಗಳಿಗೆ ಕಚ್ಚಾ ಸಾಮಗ್ರಿ ಹಾಗೂ ಕಾರ್ಮಿಕರು ಸ್ಥಳೀಯವಾಗಿ ಲಭ್ಯವಿರುವ ಕಾರಣಕ್ಕೆ ತೊಂದರೆ ಉಂಟಾಗಿಲ್ಲ. ಎಣ್ಣೆ ಹಾಗೂ ಶೇಂಗಾ ಬೀಜ ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶಕ್ಕೆ ಪೂರೈಕೆ ಆಗುತ್ತಿವೆ.

ಶಿವಮೊಗ್ಗ ಜಿಲ್ಲೆಯ ಅಕ್ಕಿ ಗಿರಣಿಗಳು, ಪಶು ಸಂಗೋಪನೆ, ಪಶು ಆಹಾರ ತಯಾರಿಕೆ, ಕುಕ್ಕುಟೋದ್ಯಮಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವವಹಿಸುತ್ತಿವೆ. ವಾಹನಗಳ ಬಿಡಿಭಾಗ, ಟ್ರ್ಯಾಕ್ಟರ್, ಟಿಲ್ಲರ್ ಸೇರಿ ಕೃಷಿ ಉಪಕರಣಗಳನ್ನು ತಯಾರಿಸುವ 1ಸಾವಿರ ಘಟಕಗಳು ಜಿಲ್ಲೆಯಲ್ಲಿವೆ. ‘ಸಾಗಣೆಗೆ ಇನ್ನೂ ಅನುಮತಿ ದೊರೆಯದ ಕಾರಣ ಪೂರ್ಣ ಪ್ರಮಾಣದ ಉತ್ಪಾದನೆ ಸಾಧ್ಯವಾಗಿಲ್ಲ’ ಎನ್ನುತ್ತಾರೆ ಉದ್ಯಮಿ ಡಿ.ಎಸ್. ಅರುಣ್.

ದಾವಣಗೆರೆ ಜಿಲ್ಲೆಯಲ್ಲಿ ಅಕ್ಕಿ ಗಿರಣಿಗಳಲ್ಲಿ ಒಂದೇ ಪಾಳಿಯಲ್ಲಿ ಕೆಲಸ ಮಾಡಲು ಅವಕಾಶ ನೀಡಲಾಗಿದೆ. ಮೂರು ಪಾಳಿಗಳಲ್ಲಿ ಕೆಲಸ ಮಾಡಲು ಅವಕಾಶ ಕಲ್ಪಿಸಬೇಕು ಎನ್ನುವ ಬೇಡಿಕೆ ಗಿರಣಿ ಮಾಲೀಕರದ್ದು.

ಕಲಬುರ್ಗಿ ಜಿಲ್ಲೆಯಲ್ಲಿ 200ಕ್ಕೂ ಹೆಚ್ಚು ದಾಲ್‌ಮಿಲ್‌ಗಳು ಉತ್ಪಾದನೆಯಲ್ಲಿ ತೊಡಗಿವೆ. ಸೇಡಂ, ಚಿತ್ತಾಪುರ, ಶಹಾಬಾದ್ ಮತ್ತು ಚಿಂಚೋಳಿ‌ ತಾಲ್ಲೂಕುಗಳ ಸಿಮೆಂಟ್‌ ಕಾರ್ಖಾನೆಗಳು ಸ್ಥಳೀಯ ಕಾರ್ಮಿಕರನ್ನೇ ಬಳಸಿಕೊಂಡು ಉತ್ಪಾದನೆ ಆರಂಭಿಸಿವೆ. ರಾಯಚೂರು ಜಿಲ್ಲೆಯ126 ಅಕ್ಕಿ ಗಿರಣಿ ಮತ್ತು 7 ದಾಲ್‌ಮಿಲ್‌ಗಳು ಕಾರ್ಯನಿರ್ವಹಿಸುತ್ತಿವೆ.

86ರಲ್ಲಿ 20 ಮಿಲ್‌ಗಳಲ್ಲಿ ಹತ್ತಿ ಜಿನ್ನಿಂಗ್‌ ಆರಂಭಗೊಂಡಿವೆ. ಬೀದರ್ ಜಿಲ್ಲೆಯಲ್ಲಿ 338 ಕೈಗಾರಿಕೆಗಳು ಆರಂಭವಾಗಿದೆ.

ಹೈದರಾಬಾದ್‌ನಿಂದ ಕಚ್ಚಾ ವಸ್ತುಗಳು ಸಿಗದ ಕಾರಣ ಕೆಲ ಕೈಗಾರಿಕೆಗಳು ಆರಂಭಗೊಂಡಿಲ್ಲ. ಕೊಪ್ಪಳ ಹಾಗೂ ಯಾದಗಿರಿ ಜಿಲ್ಲೆಯಲ್ಲಿ 250 ಬೃಹತ್ ಮತ್ತು ಸಣ್ಣ ಕೈಗಾರಿಕೆಗಳು ಆರಂಭಗೊಂಡಿವೆ. ಶಹಾಪುರದಲ್ಲಿ ಹತ್ತಿ ಮಿಲ್ ಆರಂಭವಾಗಿದೆ.

ತುಮಕೂರು ಜಿಲ್ಲೆಯ ಬಹುತೇಕ ಕೈಗಾರಿಕೆಗಳು ಉತ್ಪಾದನೆ ಆರಂಭಿಸಿಲ್ಲ. ಗ್ರಾನೈಟ್, ಅಕ್ಕಿ ಗಿರಣಿಗಳಿಗೆ ಕಾರ್ಮಿಕರ ಕೊರತೆ ಪ್ರಮುಖವಾಗಿ ಕಾಡುತ್ತಿದೆ. ಕೋಲಾರ ಜಿಲ್ಲೆಯಲ್ಲಿ 8 ಸಾವಿರ ಕೈಗಾರಿ ಕೆಗಳಿದ್ದು, ವೇಮಗಲ್, ನರಸಾಪುರ, ಕೂರಾಂಡಹಳ್ಳಿಗಳಲ್ಲಿನ 4,300 ಕೈಗಾರಿಕೆಗಳು ಆರಂಭವಾಗಿವೆ. ಕೆಜಿಎಫ್‌ನಲ್ಲಿರುವ ಬೆಮಲ್ ಕಾರ್ಯಾರಂಭ ಮಾಡಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಕುಡುಮಲುಕುಂಟೆಯ ಕಬ್ಬಿಣ ಹಾಗೂ ಸಿಮೆಂಟ್ ಕಾರ್ಖಾನೆ ಉತ್ಪಾದನೆ ಆರಂಭಿಸಿದೆ.

‘ಪ್ಯಾಕೇಜ್‌ ಕೈ ಹಿಡಿದಿಲ್ಲ’

ಕೈಗಾರಿಕೆಗಳಿಗೆ ಸರ್ಕಾರಗಳು ಮತ್ತು ಆರ್‌ಬಿಐ ಪ್ಯಾಕೇಜ್‌ ಘೋಷಿಸಿದ್ದರೂ ಅವುಗಳು ಇನ್ನೂ ತಲುಪಿಲ್ಲ. ಇಂಥ ಪರಿಸ್ಥಿತಿಯಲ್ಲೇ ಕಟ್ಟಡ ಬಾಡಿಗೆ, ವಿದ್ಯುತ್ ಶುಲ್ಕ, ಕಾರ್ಮಿಕರಿಗೆ ವೇತನ ಎಲ್ಲವನ್ನೂ ನಿಭಾಯಿಸಬೇಕಿದೆ ಎನ್ನುವ ಅಳಲು ಉದ್ಯಮಿಗಳದ್ದು.

‘ಕೇಂದ್ರ ಸಾಲ ಸೌಲಭ್ಯವನ್ನು ಮಾತ್ರ ನೀಡಿದೆ. ಲಾಕ್‌ಡೌನ್‌ ಅವಧಿಯ ಬಾಡಿಗೆ ಮೊತ್ತ ಹಾಗೂ ಕಾರ್ಮಿಕರ ವೇತನ ಭರಿಸಬೇಕು ಎಂಬ ಬೇಡಿಕೆಗಳ ಬಗ್ಗೆ ಮೌನ ವಹಿಸಿದೆ. ಸಾಲಕ್ಕೆ ಉದ್ಯಮಿಗಳು ಶೇ 11.5ರಿಂದ ಶೇ 13ರಷ್ಟು ಬಡ್ಡಿ ಕಟ್ಟಬೇಕಿದೆ. ಲಾಕ್‌ಡೌನ್‌ ಅವಧಿಯ ಮಟ್ಟಿಗಾದರೂ ಈ ಬಡ್ಡಿದರವನ್ನು ಶೇ 3ಕ್ಕೆ ಇಳಿಸಿ ಎಂಬ ಬೇಡಿಕೆಯನ್ನೂ ಈಡೇರಿಲ್ಲ. ಕೇಂದ್ರ ಸಾಲ ನೀಡುವ ಭರವಸೆಯನ್ನಷ್ಟೇ ನೀಡಿದೆ’ ಎಂದು ಎಫ್‌ಕೆಸಿಸಿಐ ಅಧ್ಯಕ್ಷ ಸಿ.ಆರ್‌.ಜನಾರ್ದನ ಬೇಸರ ವ್ಯಕ್ತಪಡಿಸಿದರು.

‘ಕೇಂದ್ರ ಸರ್ಕಾರ ಪ್ಯಾಕೇಜ್‌ ಘೋಷಿಸಿದೆಯಾದರೂ ಕೆಲವರು ಕೈಗಾರಿಕೆ ತೆರೆಯಲು ಮುಂದಾಗುತ್ತಿಲ್ಲ. ಶಾಶ್ವತವಾಗಿ ಮುಚ್ಚುವ ಬಗ್ಗೆ ಮಾತನಾಡುತ್ತಿದ್ದಾರೆ’ ಎಂದು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಪರಿಷತ್ ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್ ಜೈನ್ ತಿಳಿಸಿದರು.

***

ಕೈಗಾರಿಕೆಗಳ ತಲ್ಲಣಗಳೇನು?

lಕೊರೋನಾ ಭಯ– ಕೆಲಸಕ್ಕೆ ಮರಳಲು ಕಾರ್ಮಿಕರ ಹಿಂದೇಟು

lಸಹಜ ಸ್ಥಿತಿ ತಲುಪಿಲ್ಲ ಕಚ್ಚಾವಸ್ತು ಪೂರೈಕೆ

lಬ್ಯಾಂಕ್ ಸಾಲದ ಮಾಸಿಕ ಕಂತು ಪಾವತಿ ಮುಂದೂಡಿದರೂ ಬಡ್ಡಿ ಹೊರೆ ಕಡಿಮೆಯಾಗಿಲ್ಲ

lಸರಕುಗಳಿಗೆ ಕುದುರುತ್ತಿಲ್ಲ ಬೇಡಿಕೆ

lವಿದ್ಯುತ್‌ ನಿಗದಿತ ಶುಲ್ಕ ವಿನಾಯಿತಿಗೆ ಸಣ್ಣ ಕೈಗಾರಿಕಾ ಪ್ರಮಾಣ ಪತ್ರ ಕೇಳಿ ಸತಾಯಿಸುತ್ತಿರುವ ಎಸ್ಕಾಂಗಳು

ಕೈಗಾರಿಕೋದ್ಯಮಿಗಳ ಬೇಡಿಕೆಗಳೇನು?

lಲಾಕ್‌ಡೌನ್‌ ಅವಧಿಯ ಸಾಲದ ಬಡ್ಡಿ ವಿನಾಯಿತಿ ನೀಡಿ

lಆಮದು– ರಫ್ತು ಚಟುವಟಿಕೆಗೆ ಅವಕಾಶ ನೀಡಿ

lಲಾಕ್‌ಡೌನ್‌ ಅವಧಿಯಲ್ಲಿ ಕಾರ್ಮಿಕರ ವೇತನದ ಶೇ 50ರಷ್ಟನ್ನಾದರೂ ಸರ್ಕಾರ ಭರಿಸಲಿ

lಲಾಕ್‌ಡೌನ್‌ ಅವಧಿಯಲ್ಲಿ ಕೈಗಾರಿಕಾ ಕಟ್ಟಡಗಳ ಬಾಡಿಗೆ ಸರ್ಕಾರ ಭರಿಸಲಿ

lಜಿಎಸ್‌ಟಿ ಪ್ರಮಾಣ ಕಡಿತಗೊಳಿಸಲಿ

lಆದಾಯ ತೆರಿಗೆ ರಿಟರ್ನ್‌ ಸೌಲಭ್ಯ ಜಾರಿಗೆ ಮೀನಮೇಷ ಬೇಡ

(ಮಾಹಿತಿ: ಎಲ್ಲ ಬ್ಯುರೊಗಳು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT