ನವದೆಹಲಿ: ಚಿನ್ನಾಭರಣಗಳಿಗೆ ಹಾಲ್ಮಾರ್ಕ್ ಕಡ್ಡಾಯ ಮಾಡಿರುವುದನ್ನು ವಿರೋಧಿಸಿ, ಚಿನ್ನಾಭರಣ ವ್ಯಾಪಾರಿಗಳು ಆಗಸ್ಟ್ 23ರಂದು ಸಾಂಕೇತಿಕ ಪ್ರತಿಭಟನೆ ನಡೆಸಲಿದ್ದಾರೆ.
ದೇಶದ ನಾಲ್ಕೂ ವಲಯಗಳ ಮುತ್ತು ಮತ್ತು ಆಭರಣ ಉದ್ಯಮದ 350ಕ್ಕೂ ಹೆಚ್ಚಿನ ಸಂಘಟನೆಗಳು ಈ ಪ್ರತಿಭಟನೆಗೆ ಬೆಂಬಲ ನೀಡಲಿವೆ ಎಂದು ಅಖಿಲ ಭಾರತ ಮುತ್ತು ಮತ್ತು ಆಭರಣ ಪರಿಷತ್ತು (ಜಿಜೆಸಿ) ಹೇಳಿದೆ.
ಹಾಲ್ಮಾರ್ಕ್ ಕಡ್ಡಾಯ ಎಂಬ ನಿಯಮವು ಜೂನ್ 16ರಿಂದ ಹಂತ ಹಂತವಾಗಿ ಜಾರಿಗೆ ಬಂದಿದೆ. ಈ ಮೊದಲು ಹಾಲ್ಮಾರ್ಕ್ ಹಾಕುವುದು ಐಚ್ಛಿಕವಾಗಿತ್ತು.
ಹಾಲ್ಮಾರ್ಕ್ ಹಾಕುವುದು ತೀರಾ ಹೆಚ್ಚು ಸಮಯ ಬೇಡುತ್ತದೆ. ಈ ವರ್ಷ ತಯಾರಾಗುವ ಚಿನ್ನಾಭರಣಗಳಿಗೆ ಈಗಿರುವ ಸಾಮರ್ಥ್ಯದ ಪ್ರಕಾರ ಹಾಲ್ಮಾರ್ಕ್ ಹಾಕಲು ಇನ್ನೂ ಮೂರರಿಂದ ನಾಲ್ಕು ವರ್ಷಗಳು ಬೇಕಾಗುತ್ತವೆ ಎಂದು ಜಿಜೆಸಿ ನಿರ್ದೇಶಕ ದಿನೇಶ್ ಜೈನ್ ಹೇಳಿದರು.
ಹಾಲ್ಮಾರ್ಕ್ ಹಾಕುವ ವ್ಯವಸ್ಥೆಯು ಲೋಪರಹಿತ ಅಲ್ಲ. ಒಂದೇ ಚಿನ್ನಾಭರಣಕ್ಕೆ ಎರಡೆರಡು ಹಾಲ್ಮಾರ್ಕ್ ಹಾಕಿರುವ, ಒಂದೇ ಹಾಲ್ಮಾರ್ಕ್ಅನ್ನು ಬೇರೆ ಬೇರೆ ಆಭರಣಗಳಿಗೆ ಹಾಕಿರುವ ನಿದರ್ಶನಗಳು ಇವೆ ಎಂದು ಅವರು ಹೇಳಿದರು.