ಮಂಗಳೂರು: ಕರ್ಣಾಟಕ ಬ್ಯಾಂಕ್ 2020-21ರಲ್ಲಿ ₹ 482.57 ಕೋಟಿ ನಿವ್ವಳ ಲಾಭ ಗಳಿಸಿದೆ. ಕಳೆದ ಆರ್ಥಿಕ ವರ್ಷದಲ್ಲಿ ₹ 431.78 ಕೋಟಿ ಲಾಭ ಗಳಿಸಿತ್ತು.
ಈ ವರ್ಷದ 4ನೇ ತ್ರೈಮಾಸಿಕದ ಅಂತ್ಯಕ್ಕೆ ₹ 31.36 ಕೋಟಿಗಳ ನಿವ್ವಳ ಲಾಭ ಪಡೆಯುವ ಮೂಲಕ ಕಳೆದ ವರ್ಷದ ನಾಲ್ಕನೇ ತ್ರೈಮಾಸಿಕಕ್ಕಿಂತ ಶೇಕಡ 14.83ರಷ್ಟು ಹೆಚ್ಚು ಪ್ರಗತಿ ಸಾಧಿಸಿದೆ.
ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಬುಧವಾರ ನಡೆದ ನಿರ್ದೇಶಕರ ಮಂಡಳಿಯ ಸಭೆಯಲ್ಲಿ ಹಣಕಾಸು ವರದಿ ಅಂಗೀಕರಿಸಲಾಗಿದ್ದು, ಪ್ರತಿ ಷೇರಿಗೆ ₹ 1.8ರಷ್ಟು ಲಾಭಾಂಶ ನೀಡಲು ಶಿಫಾರಸು ಮಾಡಲಾಯಿತು.
ಈ ವರ್ಷದಲ್ಲಿ ಬ್ಯಾಂಕಿನ ಒಟ್ಟು ವ್ಯವಹಾರವು ₹ 1.27 ಲಕ್ಷ ಕೋಟಿಗೆ ತಲುಪಿದೆ. ಬ್ಯಾಂಕಿನ ಠೇವಣಿಗಳು ₹ 75,654.86 ಕೋಟಿ ಇದ್ದು, ₹ 51,693.70 ಕೋಟಿ ಸಾಲ ವಿತರಿಸಲಾಗಿದೆ.
‘ಕೋವಿಡ್ ಸಂಕಷ್ಟದಲ್ಲೂ ನಾವು ಉತ್ತಮ ನಿರ್ವಹಣೆಯಿಂದ ಸಾರ್ವಕಾಲಿಕ ದಾಖಲೆಯ ₹ 482.57 ಕೋಟಿ ನಿವ್ವಳ ಲಾಭ ಘೋಷಿಸಲು ಸಾಧ್ಯವಾಗಿದೆ’ ಎಂದು ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ, ಸಿಇಒ ಮಹಾಬಲೇಶ್ವರ ಎಂ.ಎಸ್. ಹೇಳಿದ್ದಾರೆ.