ನವದೆಹಲಿ: ಎರಡು ವರ್ಷಗಳವರೆಗೆ ಶೇ 1ರಷ್ಟು ‘ ನೈಸರ್ಗಿಕ ವಿಪತ್ತು ತೆರಿಗೆ’ ವಿಧಿಸಲು ಜಿಎಸ್ಟಿ ಮಂಡಳಿಯ ಸಚಿವರ ಸಮಿತಿಯು ಕೇರಳ ರಾಜ್ಯ ಸರ್ಕಾರಕ್ಕೆ ಅನುಮತಿ ನೀಡಿದೆ.
ಬಿಹಾರದ ಉಪ ಮುಖ್ಯಮಂತ್ರಿ ಸುಶೀಲ್ ಮೋದಿ ನೇತೃತ್ವದಲ್ಲಿನ ಸಮಿತಿಯು ಭಾನುವಾರ ಈ ನಿರ್ಧಾರ ಪ್ರಕಟಿಸಿದೆ. ಶೇ 1ರಷ್ಟು ಸೆಸ್ಗೆ ಒಳಪಡುವ ಸರಕು ಮತ್ತು ಸೇವೆಗಳನ್ನು ಕೇರಳ ಸರ್ಕಾರವೇ ನಿರ್ಧರಿಸಲಿದೆ.
ನೈಸರ್ಗಿಕ ಪ್ರಕೋಪಕ್ಕೆ ಒಳಗಾದ ರಾಜ್ಯಗಳು ಅನುಮತಿ ನೀಡಿದ ಪ್ರಮಾಣಕ್ಕಿಂತ ಹೆಚ್ಚಿನ ಮೊತ್ತದ ಸಾಲ ಪಡೆಯುವುದಕ್ಕೆ ಅವಕಾಶ ನೀಡಬೇಕು ಎಂದೂ ಸಮಿತಿಯು ಮಂಡಳಿಗೆ ಶಿಫಾರಸು ಮಾಡಿದೆ.
ಪ್ರವಾಹಕ್ಕೆ ಗುರಿಯಾಗಿ ಅಪಾರ ನಷ್ಟ ಕಂಡಿರುವ ಕೇರಳವು, ಹಣಕಾಸು ನಷ್ಟ ಸರಿದೂಗಿಸಲು ಮತ್ತು ಪುನರ್ವಸತಿ ಯೋಜನೆಗಳನ್ನು ಜಾರಿಗೆ ತರಲು ರಾಜ್ಯದ ಒಳಗೆ ಸರಕು ಮತ್ತು ಸೇವೆಗಳ ಮೇಲೆ ಸೀಮಿತ ಅವಧಿಗೆ ಪ್ರತ್ಯೇಕ ಸೆಸ್ ವಿಧಿಸಲು ಅನುಮತಿ ನೀಡಬೇಕು ಎಂಬ ಬೇಡಿಕೆ ಮುಂದಿಟ್ಟಿತ್ತು.
ಇಂತಹ ಸೆಸ್ ವಿಧಿಸಿ ಹೆಚ್ಚುವರಿ ಸಂಪನ್ಮೂಲ ಸಂಗ್ರಹಿಸಲು ಉದ್ದೇಶಿಸಿರುವ ಇತರ ರಾಜ್ಯಗಳು ಜಿಎಸ್ಟಿ ಮಂಡಳಿಗೆ ಮನವಿ ಸಲ್ಲಿಸಿ ಅನುಮತಿ ಪಡೆಯಬಹುದಾಗಿದೆ.