ಹೈದರಾಬಾದ್: ಡಿಸೆಂಬರ್ಗೆ ಅಂತ್ಯಗೊಂಡ ಮೂರನೇ ತ್ರೈಮಾಸಿಕದಲ್ಲಿ, ಭಾರತೀಯ ಜೀವ ವಿಮಾ ನಿಗಮದ (ಎಲ್ಐಸಿ) ದಕ್ಷಿಣ ಮಧ್ಯ ವಲಯದ ಒಟ್ಟು ಪ್ರೀಮಿಯಂ ವರಮಾನವು ₹35 ಸಾವಿರ ಕೋಟಿಗಳಷ್ಟಾಗಿದೆ.
‘ಈ ಹಣಕಾಸು ವರ್ಷದ ಅಂತ್ಯದ ವೇಳೆಗೆ ಇದು ₹55 ಸಾವಿರ ಕೋಟಿ ದಾಟುವ ನಿರೀಕ್ಷೆ ಇದೆ’ ಎಂದು ವಲಯದ ಮ್ಯಾನೇಜರ್ ಟಿ. ಸಿ. ಸುಶೀಲ್ ಕುಮಾರ್ ಹೇಳಿದ್ದಾರೆ. ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳನ್ನು ಒಳಗೊಂಡ ವಲಯದ ಸಾಧನೆಯ ಪರಾಮರ್ಶೆ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ.
‘ಜೀವನ್ ಶಾಂತಿ’ ಯೋಜನೆಯಡಿ ₹750 ಕೋಟಿ ಮೊತ್ತದ ಹೊಸ ವಹಿವಾಟಿನ ಪ್ರೀಮಿಯಂ ಸಂಗ್ರಹವಾಗಿದೆ. ವರ್ಷಾಂತ್ಯದ ವೇಳೆಗೆ ₹ 2 ಸಾವಿರ ಕೋಟಿಗಳ ಪ್ರೀಮಿಯಂ ಸಂಗ್ರಹವಾಗುವ ನಿರೀಕ್ಷೆ ಇದೆ’ ಎಂದು ಹೇಳಿರುವ ಸುಶೀಲ್ ಕುಮಾರ್ ಅವರು, ನಿಗಮದ ಮಾರುಕಟ್ಟೆ ಸಿಬ್ಬಂದಿಯ ಕಾರ್ಯ ದಕ್ಷತೆಯನ್ನು ಪ್ರಶಂಸಿಸಿದ್ದಾರೆ.
‘ಪರಿಪಕ್ವಗೊಂಡ ವಿಮೆ ಪಾಲಿಸಿ, ಮರಣ ಪರಿಹಾರ, ವಾರ್ಷಿಕ ಪಾವತಿ ಸೇರಿದಂತೆ ಡಿಸೆಂಬರ್ ಅಂತ್ಯದವರೆಗೆ ₹25 ಸಾವಿರ ಕೋಟಿ ಪಾವತಿಸಲಾಗಿದೆ. 48 ಗಂಟೆಗಳಲ್ಲಿ ಮರಣ ಪರಿಹಾರ ವಿತರಿಸಲಾಗಿದೆ’ ಎಂದೂ ಹೇಳಿದ್ದಾರೆ.