ನವದೆಹಲಿ: ರಾಷ್ಟ್ರೀಯ ಆಸ್ತಿ ಪುನರ್ರಚನಾ ಕಂಪನಿಯು (ಎನ್ಎಆರ್ಸಿಎಲ್–ಬ್ಯಾಡ್ ಬ್ಯಾಂಕ್) ಜೂನ್ ತಿಂಗಳಿನಿಂದ ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ ಎಂದು ಭಾರತೀಯ ಬ್ಯಾಂಕುಗಳ ಒಕ್ಕೂಟದ (ಐಬಿಎ) ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಸುನಿಲ್ ಮೆಹ್ತಾ ತಿಳಿಸಿದ್ದಾರೆ.
ಬ್ಯಾಂಕ್ಗಳಲ್ಲಿನ ವಸೂಲಾಗದ ಸಾಲದ (ಎನ್ಪಿಎ) ಸಮಸ್ಯೆ ಇತ್ಯರ್ಥಪಡಿಸಲು ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕ್ಗಳ ಸಹಯೋಗದೊಂದಿಗೆ ಇದನ್ನು ಸ್ಥಾಪಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಇದಕ್ಕೆ ಬ್ಯಾಡ್ ಬ್ಯಾಂಕ್ ಎಂದೂ ಹೇಳಲಾಗುತ್ತದೆ.
ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳು ಎನ್ಪಿಎ ಎಂದು ಗುರುತಿಸುವ ಸಾಲಗಳನ್ನು ಬ್ಯಾಡ್ ಬ್ಯಾಂಕ್ಗೆ ಖರೀದಿಸಲಿದೆ ಎಂದು ಮೆಹ್ತಾ ಹೇಳಿದ್ದಾರೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2021–22ರ ಬಜೆಟ್ನಲ್ಲಿ ಬ್ಯಾಡ್ ಬ್ಯಾಂಕ್ ಸ್ಥಾಪಿಸುವ ಪ್ರಸ್ತಾವ ಮಾಡಿದ್ದರು.
ವಂಚನೆ ಎಂದು ವರ್ಗೀಕರಿಸಿರುವ ಸಾಲವನ್ನು ಬ್ಯಾಡ್ ಬ್ಯಾಂಕ್ಗೆ ಮಾರಾಟ ಮಾಡುವಂತಿಲ್ಲ ಎಂದು ಆರ್ಬಿಐ ಹೇಳಿದೆ. ಆರ್ಬಿಐನ ವಾರ್ಷಿಕ ವರದಿಯ ಪ್ರಕಾರ, 2020ರ ಮಾರ್ಚ್ ಅಂತ್ಯಕ್ಕೆ 1.9 ಲಕ್ಷ ಕೋಟಿ ಸಾಲಗಳನ್ನು ವಂಚನೆ ಎಂದು ವರ್ಗೀಕರಿಸಲಾಗಿದೆ.