ಸೋಮವಾರ, ಮಾರ್ಚ್ 27, 2023
23 °C

ಏನಿದು ಪ್ರಧಾನ್ ಮಂತ್ರಿ ಕರಮ್ ಯೋಗಿ ಮಾನ್ ಧನ್ ಯೋಜನೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಬಜೆಟ್  ಭಾಷಣದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಧಾನ್ ಮಂತ್ರಿ ಕರಮ್ ಯೋಗಿ ಮಾನ್ ಧನ್ ಯೋಜನೆಯನ್ನು ಘೋಷಿಸಿದ್ದಾರೆ. ವಾರ್ಷಿಕ ಆದಾಯ ₹1.5 ಕೋಟಿಗಿಂತ ಕಡಿಮೆ ಇರುವ ಚಿಲ್ಲರೆ ವ್ಯಾಪಾರಿ ಮತ್ತು ಅಂಗಡಿ ಮಾಲೀಕರಿಗಾಗಿರುವ ಪಿಂಚಣಿ ಯೋಜನೆ ಇದಾಗಿದೆ. 3 ಕೋಟಿ ವ್ಯಾಪಾರಿಗಳು ಈ ಯೋಜನೆಯ ಫಲಾನುಭವಿಗಳಾಗಲಿದ್ದಾರೆ.

ಈ ಯೋಜನೆ ಪಡೆಯಲು ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಹೊಂದಿರುವುದು ಕಡ್ಡಾಯ. ಪಿಂಚಣಿಗಾಗಿ ಅರ್ಜಿ ಸಲ್ಲಿಸುವವರು ಪ್ರತೀ ತಿಂಗಳು ಇಂತಿಷ್ಟು ಹಣ ಪಾವತಿ ಮಾಡಬೇಕಾಗಿದ್ದು ಅಷ್ಟೇ ಮೊತ್ತವನ್ನು ಸರ್ಕಾರ ಪಾವತಿ ಮಾಡಲಿದೆ.

ಈ ಹಿಂದೆ ಮಧ್ಯಂತರ ಬಜೆಟ್‌ನಲ್ಲಿ  'ಪ್ರಧಾನಮಂತ್ರಿ ಶ್ರಮ್‌ ಯೋಗಿ ಮಾನ್‌ ಧನ್‌ ಸಮ್ಮಾನ್‌’ ಯೋಜನೆ ಘೋಷಿಸಲಾಗಿತ್ತು. ಅಸಂಘಟಿತ ಕಾರ್ಮಿಕರಿಗಾಗಿರುವ ಪಿಂಚಣಿ ಯೋಜನೆ ಇದಾಗಿದೆ. ಪ್ರಧಾನಮಂತ್ರಿ ಶ್ರಮ್‌ ಯೋಗಿ ಮಾನ್‌ ಧನ್‌  ಯೋಜನೆಯಂತೆಯೇ ಇರಲಿದೆ ಪ್ರಧಾನ್ ಮಂತ್ರಿ ಕರಮ್ ಯೋಗಿ ಮಾನ್ ಧನ್ ಯೋಜನೆ. 

 ಪ್ರಧಾನಮಂತ್ರಿ ಶ್ರಮ್‌ ಯೋಗಿ ಮಾನ್‌ ಧನ್‌ ಯೋಜನೆಯಡಿಯಲ್ಲಿ, 60 ವರ್ಷ ದಾಟಿದವರಿಗೆ ತಿಂಗಳಿಗೆ ₹3,000 ಪಿಂಚಣಿ ನೀಡಲಾಗುತ್ತದೆ.

ಪ್ರಧಾನಮಂತ್ರಿ ಶ್ರಮ್‌ ಯೋಗಿ ಮಾನ್‌ ಧನ್‌ ಸಮ್ಮಾನ್‌ ​ಯೋಜನೆ

* ನಿಮ್ಮ ತಿಂಗಳ ಆದಾಯ ₹15,000 ಮತ್ತು ಅದಕ್ಕಿಂತ ಕಡಿಮೆ ಆಗಿರಬೇಕು. ನಿಮ್ಮ ವಯಸ್ಸು 18- 40 ಆಗಿದ್ದರೆ ಈ ಯೋಜನೆಯ ಫಲ ಪಡೆಯಲು ಅರ್ಜಿ ಸಲ್ಲಿಸಬಹುದು.

* ನೀವು  ಈಗಾಗಲೇ ಪಿಂಚಣಿ ಯೋಜನೆಗಳಾದ ನ್ಯೂ ಪೆನ್ಶನ್ ಸ್ಕೀಮ್ (ಎನ್‌ಪಿಎಸ್) . ಇಪಿಎಫ್‌ಒ, ಇಎಸ್‍ಐಸಿ ಫಲಾನುಭವಿಗಳಾಗಿದ್ದರೆ ಪ್ರಧಾನಮಂತ್ರಿ ಶ್ರಮ್‌ ಯೋಗಿ ಮಾನ್‌ ಧನ್‌ ಸಮ್ಮಾನ್‌ ಯೋಜನೆಗೆ ಅರ್ಜಿ  ಸಲ್ಲಿಸುವಂತಿಲ್ಲ.

* ನೀವು ಪ್ರತಿ  ತಿಂಗಳು ಇಂತಿಷ್ಟು ಹಣ ಇಲ್ಲಿ ಜಮೆ ಮಾಡಬೇಕಾಗುತ್ತದೆ. ಯೋಜನೆಗೆ ಸೇರುವ ಹೊತ್ತಲ್ಲಿ ನಿಮ್ಮ ವಯಸ್ಸಿಗೆ ಅನುಗುಣವಾಗಿರುತ್ತದೆ ನೀವು ಪಾವತಿ ಮಾಡಬೇಕಾದ ಹಣ. ನೀವು ಪಾವತಿ ಮಾಡುವ ಮೊತ್ತದಷ್ಟೇ ಹಣವನ್ನು ಸರ್ಕಾರ ಕೂಡಾ ಪಾವತಿಸುತ್ತದೆ.

* ಒಂದು ವೇಳೆ ನೀವು ಹಣ ಪಾವತಿ ಮಾಡುವುದನ್ನು ನಿಲ್ಲಿಸಿದರೆ, ದಂಡವನ್ನೂ ತೆರಬೇಕಾಗುತ್ತದೆ.  

* ಈ ಯೋಜನೆಯಲ್ಲಿ 10 ವರ್ಷಗಳ ಕಾಲ ನೀವು ಹಣ ಪಾವತಿ ಮಾಡಬೇಕಾಗುತ್ತದೆ. 10 ವರ್ಷಕ್ಕಿಂತ ಮುನ್ನ ನೀವು ಯೋಜನೆಯಿಂದ ಹೊರಬರುವುದಾದರೆ ನೀವು ಪಾವತಿ ಮಾಡಿದ ಹಣದ ಜತೆಗೆ ಉಳಿತಾಯ ಧನಕ್ಕಾಗಿ ಬ್ಯಾಂಕ್‌ಗಳು ನೀಡುತ್ತಿರುವ ಬಡ್ಡಿದರದಲ್ಲಿ ನಿಮ್ಮ ಹಣಕ್ಕೆ ಬಡ್ಡಿ ಸಿಗುತ್ತದೆ.

* 10 ವರ್ಷಗಳ ನಂತರ ಮತ್ತು ನಿವೃತ್ತಿ ವಯಸ್ಸಿಗೆ ಮುನ್ನವೇ ನೀವು ಯೋಜನೆಯನ್ನು ತೊರೆಯುವುದಾದರೆ ನಿಮ್ಮ ಹಣದ ಜತೆಗೆ ಬ್ಯಾಂಕ್‌ಗಳು ಉಳಿತಾಯ ಖಾತೆಗೆ ನೀಡುವ ಬಡ್ಡಿದರಗಳಲ್ಲಿ ಅತೀ ಹೆಚ್ಚು, ಬಡ್ಡಿದರವನ್ನು ಸೇರಿಸಿ ಮೊತ್ತ ನಿಮಗೆ ಸಿಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು