ಬಿಮಲ್ ಜಲನ್ ಸಮಿತಿಯ ಶಿಫಾರಸು ಏನು?
ಬಿಮಲ್ ಜಲನ್ ಅಧ್ಯಕ್ಷತೆಯ ಪರಿಣತರ ಸಮಿತಿ ನೀಡಿರುವ ಶಿಫಾರಸ್ಸಿನ ಅನ್ವಯ 2019ರಿಂದ ಆರ್ಥಿಕ ಬಂಡವಾಳದ ಚೌಕಟ್ಟನ್ನು (ಇಸಿಎಫ್) ಅಳವಡಿಸಿಕೊಳ್ಳಲಾಗಿದೆ. ಇದರ ಆಧಾರದ ಮೇಲೆ ಲಾಭಾಂಶ ನೀಡಲಾಗುತ್ತಿದೆ ಎಂದು ಆರ್ಬಿಐ ಹೇಳಿದೆ. ಆರ್ಬಿಐನ ಬ್ಯಾಲೆನ್ಸ್ ಶೀಟ್ಗೆ ಅನುಗುಣವಾಗಿ ಅನಿರೀಕ್ಷಿತ ಹಣಕಾಸು ಪರಿಸ್ಥಿತಿಯನ್ನು ಎದುರಿಸಲು ಇರುವ ತುರ್ತು ನಿಧಿಯ ಪ್ರಮಾಣವನ್ನು ಶೇ 5.5ರಿಂದ ಶೇ 6.5ರ ಮಿತಿಯಲ್ಲಿ ಕಾಯ್ದುಕೊಳ್ಳುವಂತೆ ಸಮಿತಿಯ ಶಿಫಾರಸು ಮಾಡಿದೆ. 2018–19ರಿಂದ 2021–22ರ ವರೆಗೆ ಸ್ಥೂಲ ಆರ್ಥಿಕ ಪರಿಸ್ಥಿತಿ ಹಾಗೂ ಕೋವಿಡ್ ಸಾಂಕ್ರಾಮಿಕದಿಂದಾಗಿ ತುರ್ತು ನಿಧಿಯ ಪ್ರಮಾಣವನ್ನು ನಿರ್ದೇಶಕರ ಮಂಡಳಿಯು ಶೇ 5.50ಕ್ಕೆ ನಿಗದಿಪಡಿಸಿತ್ತು. 2022–23ರಲ್ಲಿ ಆರ್ಥಿಕತೆಯ ಬೆಳವಣಿಗೆ ಸುಧಾರಿಸಿದ್ದರಿಂದ ಈ ನಿಧಿಯ ಪ್ರಮಾಣವನ್ನು ಶೇ 6ಕ್ಕೆ ಹೆಚ್ಚಿಸಲಾಗಿತ್ತು.ದೇಶದ ಆರ್ಥಿಕತೆಯು ಚೇತರಿಕೆ ಕಂಡಿದ್ದರಿಂದ 2023–24ನೇ ಆರ್ಥಿಕ ವರ್ಷಕ್ಕೆ ತುರ್ತು ನಿಧಿಯ ಪ್ರಮಾಣವನ್ನು ಶೇ 6.50ಕ್ಕೆ ಹೆಚ್ಚಿಸಲಾಗಿತ್ತು ಎಂದು ಆರ್ಬಿಐ ತಿಳಿಸಿದೆ.