ಮುಂಬೈ: ನಿರೀಕ್ಷೆಯಂತೆ ಭಾರತೀಯ ರಿಸರ್ವ್ ಬ್ಯಾಂಕ್, ತನ್ನ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆಯಲ್ಲಿ ಅಲ್ಪಾವಧಿ ಬಡ್ಡಿದರಗಳಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ.
ಮುಂದಿನ ದಿನಗಳಲ್ಲಿ ಹಣದುಬ್ಬರ ಹೆಚ್ಚಳಗೊಳ್ಳುವ ಆತಂಕ ನಿಜವಾಗದಿದ್ದರೆ ಬಡ್ಡಿ ದರ ತಗ್ಗಿಸುವ ಭರವಸೆ ನೀಡಿದೆ. ಕುಂಠಿತಗೊಂಡಿರುವ ಆರ್ಥಿಕತೆಗೆ ಚೇತರಿಕೆ ನೀಡಲು ಸಾಲ ನೀಡಿಕೆ ಪ್ರಮಾಣ ಹೆಚ್ಚಿಸಬೇಕು ಎಂದು ಬ್ಯಾಂಕ್ಗಳಿಗೆ ಮನವಿಯನ್ನೂ ಮಾಡಿಕೊಂಡಿದೆ.
ಬುಧವಾರ ಇಲ್ಲಿ ನಡೆದ ಹಣಕಾಸು ನೀತಿ ಸಮಿತಿಯ ಸಭೆಯು (ಎಂಪಿಸಿ), ಅಲ್ಪಾವಧಿಯಲ್ಲಿ ಬ್ಯಾಂಕ್ಗಳಿಗೆ ಆರ್ಬಿಐ ನೀಡುವ ಸಾಲಕ್ಕೆ ವಿಧಿಸುವ ಬಡ್ಡಿ ದರ (ರೆಪೊ) ಶೇ 6.5 ಮಟ್ಟದಲ್ಲಿಯೇ ಉಳಿಸಿಕೊಳ್ಳಲು ಒಮ್ಮತದ ತೀರ್ಮಾನಕ್ಕೆ ಬಂದಿದೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ಎರಡು ಬಾರಿ ಬಡ್ಡಿ ದರ ಹೆಚ್ಚಿಸಿದ್ದ ಕೇಂದ್ರೀಯ ಬ್ಯಾಂಕ್, ಈಗ ತಟಸ್ಥ ಧೋರಣೆ ತಳೆದಿದೆ.
ಹಣದುಬ್ಬರ ಕುರಿತ ಅಂದಾಜನ್ನು ಪರಿಷ್ಕರಿಸಲಾಗಿದೆ. ಕಚ್ಚಾ ತೈಲ ಬೆಲೆ ಏರಿಕೆಯೂ ಸೇರಿದಂತೆ ಈ ಹಿಂದೆ ಅಂದಾಜಿಸಿದ್ದ ಅನೇಕ ಗಂಡಾಂತರಗಳ ಪ್ರಭಾವ ಕ್ಷೀಣಿಸಿರುವುದರಿಂದ ಈ ನಿಲುವಿಗೆ ಬಂದಿದೆ.
ಹಣದುಬ್ಬರ: ಈ ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ಹಣದುಬ್ಬರ ಹೆಚ್ಚಳವು ಶೇ 2.7 ರಿಂದ ಶೇ 3.2ರ ಮಧ್ಯೆ ಇರಲಿದೆ. ಇದು ಆರ್ಬಿಐ ನಿಗದಿಪಡಿಸಿರುವ ಶೇ 4ಕ್ಕಿಂತ ಕಡಿಮೆ ಇದೆ.
‘ಹಣದುಬ್ಬರ ಹೆಚ್ಚಳ ಸಾಧ್ಯತೆಯು ಕಾರ್ಯಗತಗೊಳ್ಳದಿದ್ದರೆ ‘ಎಂಪಿಸಿ’ಯು ಅದಕ್ಕೆ ಅನುಗುಣವಾಗಿ ಬಡ್ಡಿ ದರ ಕಡಿತದ ನಿರ್ಧಾರ ಕೈಗೊಳ್ಳಲಿದೆ’ ಎಂದು ಆರ್ಬಿಐ ಗವರ್ನರ್ ಉರ್ಜಿತ್ ಪಟೇಲ್ ಹೇಳಿದ್ದಾರೆ.