ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೋರಿರುವ ಹಿನ್ನೆಲೆಯಲ್ಲಿ ಭಾರತದಿಂದ ಇರಾನ್ಗೆ ಬಾಸ್ಮತಿ ಅಕ್ಕಿ ರಫ್ತು ಮಾಡುವುದಕ್ಕೆ ತಡೆ ಬೀಳುವ ಸಾಧ್ಯತೆ ಇದೆ.
ಸದ್ಯದ ಪರಿಸ್ಥಿತಿಯಲ್ಲಿ ಇರಾನ್ಗೆ ಬಾಸ್ಮತಿ ಅಕ್ಕಿ ರಫ್ತು ಮಾಡಲು ಸಾಧ್ಯವಿಲ್ಲ. ಪರಿಸ್ಥಿತಿ ತಿಳಿಯಾಗುವವರೆಗೆ ರಫ್ತು ಬೇಡಿಕೆ ಸ್ವೀಕರಿಸಬೇಡಿ ಎಂದು ಅಖಿಲ ಭಾರತ ಅಕ್ಕಿ ರಫ್ತುದಾರರ ಸಂಘವು (ಎಐಆರ್ಇಎ) ತನ್ನ ಸದಸ್ಯರಿಗೆ ಮನವಿ ಮಾಡಿಕೊಂಡಿದೆ.
‘ಬಾಸ್ಮತಿ ಅಕ್ಕಿ ರಫ್ತು ಸ್ಥಗಿತಗೊಂಡರೆ ದೇಶದಲ್ಲಿನ ಸಂಗ್ರಹ ಹೆಚ್ಚಳಗೊಳ್ಳಲಿದೆ. ಅದರಿಂದ ಬೆಲೆ ಅಗ್ಗವಾಗಿ ಬೆಳೆಗಾರರ ಆದಾಯಕ್ಕೆ ಖೋತಾ ಬೀಳಲಿದೆ’ ಎಂದು ‘ಎಐಆರ್ಇಎ’ ಅಧ್ಯಕ್ಷ ಎನ್. ಆರ್. ಗುಪ್ತ ಅವರು ತಿಳಿಸಿದ್ದಾರೆ.
ದೇಶಿ ಬಾಸ್ಮತಿ ಅಕ್ಕಿಗೆ ಇರಾನ್ ಪ್ರಮುಖ ರಫ್ತು ದೇಶವಾಗಿದೆ. ಆ ದೇಶದ ವಿರುದ್ಧದ ಅಮೆರಿಕದ ಆರ್ಥಿಕ ದಿಗ್ಬಂಧನದ ಕಾರಣಕ್ಕೆ ಹಿಂದಿನ ವರ್ಷದ ರಫ್ತಿಗೆ ಸಂಬಂಧಿಸಿದಂತೆ ₹ 900 ಕೋಟಿ ಪಾವತಿ ಬಾಕಿ ಉಳಿದಿದೆ.
ಹಿಂದಿನ ವರ್ಷದ ಒಟ್ಟು ರಫ್ತಿನ ಮೊತ್ತ* ₹ 32,800 ಕೋಟಿ ಆಗಿತ್ತು. ಈ ಪೈಕಿ ಇರಾನ್ಗೆ ರಫ್ತು ಮಾಡಿದ ಮೊತ್ತವು₹ 10,800 ಕೋಟಿ.