ಬೆಂಗಳೂರು: ಆರ್ಥಿಕ ಹಿಂಜರಿತ ಸೇರಿದಂತೆ ವಿವಿಧ ಕಾರಣಗಳಿಂದಾಗಿ ತೆರಿಗೆ ಸಂಗ್ರಹ ಇಳಿಕೆಯಾಗುವ ಮುನ್ಸೂಚನೆಯ ಹಿನ್ನೆಲೆಯಲ್ಲಿ ಪ್ರಮುಖ ಇಲಾಖೆಗಳ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೋಮವಾರ ಸಭೆ ನಡೆಸಲಿದ್ದಾರೆ.
ಪ್ರಮುಖವಾಗಿ ವಾಣಿಜ್ಯ ತೆರಿಗೆ, ಅಬಕಾರಿ, ಸಾರಿಗೆ, ನೋಂದಣಿ ಮತ್ತು ಮುದ್ರಾಂಕ, ಗಣಿ ಹಾಗೂ ಭೂ ವಿಜ್ಞಾನ ಇಲಾಖೆ ಹಿರಿಯ ಅಧಿಕಾರಿಗಳ ಜತೆಗೆ ಚರ್ಚಿಸಲಿದ್ದಾರೆ.
ಸಭೆಯಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿಯ ಒಳನೋಟ ಸಿಗಲಿದೆ. ತೆರಿಗೆ ಸಂಗ್ರಹದಲ್ಲಿನ ಸಾಧನೆ ಹಾಗೂ ಹಿನ್ನಡೆಗಳ ಕುರಿತೂ ಪರಾಮರ್ಶೆ ನಡೆಸಲಿದ್ದಾರೆ.ಬಜೆಟ್ ಸಿದ್ಧತೆಗೂ ಚಾಲನೆ ಸಿಗಲಿದ್ದು, ಸಭೆಯಲ್ಲಿ ವ್ಯಕ್ತವಾಗುವ ಹಣಕಾಸಿನ ಪರಿಸ್ಥಿತಿಯನ್ನು ನೋಡಿಕೊಂಡು ವೆಚ್ಚ ಕಡಿತ ಮಾಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ಅಬಕಾರಿ ಇಲಾಖೆ ಆದಾಯದಲ್ಲಿ ನಿಗದಿತ ಗುರಿಗಿಂತ ಅಲ್ಪ ಪ್ರಮಾಣದಲ್ಲಿ ಹೆಚ್ಚಳವಾಗಿದ್ದರೆ, ಇತರ ಇಲಾಖೆಗಳು ತೆರಿಗೆ ಸಂಗ್ರಹದಲ್ಲಿ ಹಿನ್ನಡೆ ಕಂಡಿವೆ.
ಕೇಂದ್ರ ಸರ್ಕಾರ ನೀಡುವ ತೆರಿಗೆ ಪಾಲಿನಲ್ಲೂ ಮುಂದಿನ ವರ್ಷ ₹5 ಸಾವಿರ ಕೋಟಿ ಕಡಿತವಾಗಲಿದೆ ಎಂದು ಅಧಿಕಾರಿಗಳು ಮುನ್ಸೂಚನೆ ನೀಡಿದೆ. ಜಿಎಸ್ಟಿ ಜಾರಿಯಾದ ನಂತರ ಪರಿಹಾರ ರೂಪದಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಹಣವೂ ಸಕಾಲಕ್ಕೆ ಬರುತ್ತಿಲ್ಲ. ಪ್ರಸ್ತುತ₹7 ಸಾವಿರ ಕೋಟಿಯನ್ನು ಕೇಂದ್ರ ಸರ್ಕಾರ ಬಾಕಿ ಉಳಿಸಿಕೊಂಡಿದೆ. ಇದರಿಂದ ನೆರೆ ಪರಿಹಾರ ಕಾರ್ಯಗಳನ್ನು ನಿಭಾಯಿಸುವುದು ಸರ್ಕಾರಕ್ಕೆ ಸವಾಲಾಗಿದೆ.