ಬೆಂಗಳೂರು: ದೇಶದ ಅತಿದೊಡ್ಡ ಜೀವ ವಿಮೆ ಸಂಸ್ಥೆಯಾಗಿರುವ `ಭಾರತೀಯ ಜೀವ ವಿಮಾ ನಿಗಮವು (ಎಲ್ಐಸಿ), ಚಿಣ್ಣರ ಶೈಕ್ಷಣಿಕ ಮತ್ತಿತರ ಅಗತ್ಯಗಳನ್ನು ಈಡೇರಿಸುವ `ಜೀವನ್ ಅಂಕುರ್~ ಹೆಸರಿನ ಹೊಸ ಯೋಜನೆ ಆರಂಭಿಸಿದೆ.
17 ವರ್ಷ ವಯೋಮಾನ ವರೆಗಿನ ಮಕ್ಕಳನ್ನು ಹೊಂದಿರುವ ಪಾಲಕರಿಗೆ ಇದು ಹೆಚ್ಚು ಪ್ರಯೋಜನಕಾರಿಯಾಗಿದೆ. ಪಾಲಕರು ತಮ್ಮ ಮಕ್ಕಳಿಗೆ ಸಂಬಂಧಿಸಿದ ಎಲ್ಲ ಸಂದರ್ಭಗಳಲ್ಲಿನ ಹೊಣೆಗಾರಿಕೆಗಳನ್ನು ಅನ್ಯರನ್ನು ಅವಲಂಬಿಸದೇ ಸಮರ್ಥವಾಗಿ ನಿಭಾಯಿಸಬಹುದಾಗಿದೆ ಎಂದು `ಎಲ್ಐಸಿ~ ತಿಳಿಸಿದೆ.
ಈ ಯೋಜನೆಯು ಪಾಲಕರಿಗೂ ಜೀವ ವಿಮೆ ಸೌಲಭ್ಯ ಒದಗಿಸಲಿದೆ. ಪಾಲಿಸಿ ಜಾರಿಯಲ್ಲಿ ಇರುವ ಅವಧಿಯಲ್ಲಿ ಒಂದು ವೇಳೆ ಪಾಲಕರು ಆಕಸ್ಮಿಕವಾಗಿ ಮೃತಪಟ್ಟರೆ, ಮಕ್ಕಳ ಹೆಸರಿಗೆ ವಿಮೆ ಪರಿಹಾರ ಮೊತ್ತವನ್ನು ತಕ್ಷಣಕ್ಕೆ ವರ್ಗಾಯಿಸಲಾಗುವುದು. ಇಂತಹ ಪ್ರಕರಣಗಳಲ್ಲಿ ಮಕ್ಕಳನ್ನೇ ಪಾಲಿಸಿಯ ನಾಮಕರಣ (ನಾಮಿನಿ) ಫಲಾನುಭವಿಗಳನ್ನಾಗಿ ಪರಿಗಣಿಸಲಾಗುವುದು. ವಿಮೆ ಮೊತ್ತದ ಶೇ 10ರಷ್ಟನ್ನು ಪಾಲಿಸಿಯ ಉಳಿದ ಅವಧಿ ಉದ್ದಕ್ಕೂ ಪಾವತಿಸಲಾಗುವುದು. ಇದರಿಂದ ಮಗುವಿನ ಶಿಕ್ಷಣ ವೆಚ್ಚವು ಯಾವುದೇ ಹೆಚ್ಚುವರಿ ವೆಚ್ಚ ಇಲ್ಲದೇ ಭರಿಸಲು ಸಾಧ್ಯವಾಗಲಿದೆ. ಕನಿಷ್ಠ ಪಾಲಿಸಿ ಮೊತ್ತವು ರೂ 1 ಲಕ್ಷವಾಗಿದ್ದು, ಗರಿಷ್ಠ ಮೊತ್ತಕ್ಕೆ ಯಾವುದೇ ಮಿತಿ ಇಲ್ಲ.