ಶಿವಮೊಗ್ಗ: ರದ್ದಾದ ನೋಟು ಬದಲಾವಣೆಗೆ ಅನುಮತಿ ನೀಡಿ ರಿಸರ್ವ್ ಬ್ಯಾಂಕ್ (ಆರ್ಬಿಐ) ಇತ್ತೀಚೆಗೆ ಆದೇಶ ಹೊರಡಿಸಿದೆ. ಆದೇಶ ಹೊರಬೀಳುತ್ತಿದ್ದಂತೆ ಬೀದರ್, ಬೆಳಗಾವಿ, ದಕ್ಷಿಣ ಕನ್ನಡ, ವಿಜಯಪುರ, ಬೆಂಗಳೂರು, ಮಂಡ್ಯ ಹಾಗೂ ಮೈಸೂರು ಡಿಸಿಸಿ ಬ್ಯಾಂಕ್ಗಳು ದೊಡ್ಡ ಆರ್ಥಿಕ ಸಂಕಷ್ಟದಿಂದ ಪಾರಾಗಿವೆ.
ಕಳೆದ ವರ್ಷದ ನವೆಂಬರ್ 8ರಂದು ಸರ್ಕಾರ ₹ 500 ಹಾಗೂ ₹ 1 ಸಾವಿರ ಮುಖ ಬೆಲೆಯ ನೋಟುಗಳನ್ನು ರದ್ದು ಮಾಡುವ ನಿರ್ಧಾರ ಪ್ರಕಟಿಸಿದ ನಂತರ ಹಳೆಯ ನೋಟುಗಳನ್ನು ಬದಲಿಸಿಕೊಳ್ಳಲು ಹಾಗೂ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಿಕೊಳ್ಳಲು ಡಿ.31ರವರೆಗೆ ಅವಕಾಶ ಕಲ್ಪಿಸಲಾಗಿತ್ತು.
ಹಳೆಯ ನೋಟುಗಳನ್ನು ಸ್ವೀಕರಿಸಲು ರಾಷ್ಟ್ರೀಕೃತ ಹಾಗೂ ಕೆಲವು ಕಾರ್ಪೋರೇಟ್ ಬ್ಯಾಂಕ್ಗಳಿಗೆ ಅವಕಾಶ ನೀಡಿದ್ದ ರಿಸರ್ವ್ ಬ್ಯಾಂಕ್, ಸಹಕಾರ ವಲಯದ ಬ್ಯಾಂಕ್ಗಳಲ್ಲಿ ನೋಟು ಬದಲಿಸಲು ನಿರಾಕರಿಸಿತ್ತು. ನೋಟು ರದ್ದತಿಯ ನಂತರ ರಿಸರ್ವ್ ಬ್ಯಾಂಕ್ನ ಈ ಆದೇಶ ತಲುಪುವುದರ ಒಳಗೆ ರಾಜ್ಯದ ಹಲವು ಡಿಸಿಸಿ ಬ್ಯಾಂಕ್ಗಳಲ್ಲಿ ಭಾರಿ ಪ್ರಮಾಣದ ನೋಟುಗಳು ಜಮೆಯಾಗಿದ್ದವು.