<p>ಮೊಘಲ್ ಚಕ್ರವರ್ತಿ ಶಹಾಜಹಾನ್ ತನ್ನ ವಿಶಾಲವಾದ ಅರಮನೆಯಲ್ಲಿ ಮಲಗಿದ್ದ. ರಾತ್ರಿ ಸುಮಾರು ಎರಡು ಗಂಟೆಯಾಗಿರಬೇಕು. ಅವನಿಗೆ ಎಚ್ಚರವಾಯಿತು. ಅವು ಬೇಸಿಗೆಯ ದಿನಗಳು. ಶಹಾಜಹಾನನಿಗೆ ಗಂಟಲು ಒಣಗಿ ಕುಡಿಯಲು ನೀರು ಬೇಕೆನಿಸಿತ್ತು. <br /> <br /> ಎಂದಿನಂತೆ ಸೇವಕರನ್ನು ಕೂಗಿದ. ಯಾವ ಪ್ರತ್ಯುತ್ತರವೂ ಬರಲಿಲ್ಲ. ಸದಾ, ಸರ್ವದಾ ಈತನ ಸೇವೆಗೆಂದೇ ಎಚ್ಚರವಾಗಿರುತ್ತಿದ್ದ ಸೇವಕರು ಧ್ವನಿಗೊಡಲಿಲ್ಲ.ಶಹಾಜಹಾನ್ ಕರುಣಾಳುವಾಗಿದ್ದ.<br /> <br /> ಬಹುಶಃ ತನ್ನ ಸೇವಕರು ಇಡೀ ದಿನ ದುಡಿದು ದುಡಿದು ಸುಸ್ತಾಗಿ ಮಲಗಿರಬೇಕು. ಅವರನ್ನೇಕೆ ಎಬ್ಬಿಸಬೇಕೆಂದುಕೊಂಡು ತಾನೇ ಹಾಸಿಗೆಯಿಂದೆದ್ದು ಸ್ವಲ್ಪ ದೂರದಲ್ಲಿದ್ದ ನೀರಿನ ಹೂಜಿಯ ಬಳಿಗೆ ಹೋದ. <br /> <br /> ಅವತ್ತು ಅದೇನು ದೈವವೊ ಹೂಜಿಯಲ್ಲೂ ನೀರು ಇರಲಿಲ್ಲ. ಮೊಘಲ್ ಚಕ್ರವರ್ತಿಗೆ ರಾತ್ರಿ ನೀರಡಿಕೆಯಾದರೆ ಒಂದು ಹನಿ ನೀರೂ ಇರಲಿಲ್ಲ.ಶಹಾಜಹಾನ್ ತನ್ನಷ್ಟಕ್ಕೆ ತಾನೇ ನಕ್ಕ.<br /> <br /> ಪಾಪ! ಮಲಗಿರುವ ಸೇವಕರನ್ನು ಎಬ್ಬಿಸಿ ತೊಂದರೆ ಕೊಡುವುದು ಬೇಡ, ಒಂದು ದಿನ ತಾನೇ ಕೆಲಸಮಾಡಿಕೊಂಡರೆ ಆಗದೇ ಎಂದುಕೊಂಡು ತನ್ನ ಮಲಗುವ ಕೋಣೆಯಿಂದ ಸ್ವಲ್ಪವೇ ದೂರದಲ್ಲಿದ್ದ ಬಾವಿಗೆ ಹೊರಟ. <br /> <br /> ಅದೊಂದು ಬೆಳದಿಂಗಳ ರಾತ್ರಿ, ಆಕಾಶ ಶುಭ್ರವಾಗಿದೆ. ಚಂದ್ರನ ಬೆಳಕು ಎಲ್ಲೆಡೆಗೆ ಚೆಲ್ಲಿದೆ. ಬಾವಿಯ ಕಟ್ಟೆಯ ಮೇಲೊಂದು ಹಿತ್ತಾಳೆಯ ಕೊಡ ಇದೆ. ಮುಂದೆ ನೀರು ಎಳೆಯಲು ಸಿದ್ಧವಾಗಿದ್ದ ರಾಟೆಯ ಮೇಲೆ ಹಗ್ಗವನ್ನೂ ಹಾಕಲಾಗಿತ್ತು.<br /> <br /> ಚಕ್ರವರ್ತಿಗೆ ಎಂದಾದರೂ ಬಾವಿಯಿಂದ ನೀರು ಎಳೆದು ಅಭ್ಯಾಸವಿರುತ್ತದೆಯೇ? ಆತ ಮೊದಲು ಬಾವಿಯಲ್ಲಿ ಬಗ್ಗಿ ನೋಡಿದ. ಚಂದ್ರನ ಪ್ರತಿಬಿಂಬ ಆಳವಾದ ಬಾವಿಯ ನೀರಿನಲ್ಲಿ ಸುಂದರವಾಗಿ ಕಾಣುತ್ತಿತ್ತು. <br /> <br /> ಕೊಡದ ಬಾಯಿಗೆ ಹಗ್ಗ ತೊಡಿಸಿ ನೀರಿಗೆ ಬಿಡಬೇಕೆಂದುಕೊಂಡು ಹಿಂದಕ್ಕೆ ಸರಿದ. ಆಗ ನೇತಾಡುತ್ತಿದ್ದ ಕಬ್ಬಿಣದ ರಾಟೆ ಅವನ ಹಣೆಗೆ ಬಡಿಯಿತು. ಕ್ಷಣಾರ್ಧದಲ್ಲಿ ರಕ್ತ ಚಿಮ್ಮಿತು. ಅಯ್ಯೋ ಎಂದು ಕಿರುಚಿದ ಶಹಾಜಹಾನ್.<br /> <br /> ಅವನ ಕೈ ಬಡಿದು ಕಟ್ಟೆಯ ಮೇಲಿದ್ದ ಕೊಡ ಢಮಾರೆಂದು ಬಾವಿಯಲ್ಲಿ ಬಿತ್ತು. ಈ ಭಾರೀ ಸದ್ದು ಕಾವಲುಗಾರರನ್ನು ಎಚ್ಚರಿಸಿತು. ಒಂದೇ ನಿಮಿಷದಲ್ಲಿ ಚಕ್ರವರ್ತಿಯ ಕಾವಲುಗಾರರು, ಸೇವಕರು ಎಲ್ಲರೂ ಅಲ್ಲಿಗೆ ಓಡಿ ಬಂದರು.<br /> <br /> ಚಕ್ರವರ್ತಿಯನ್ನು ಅಲ್ಲಿ ಕಂಡು, ಅವನ ಹಣೆಯಿಂದ ಸುರಿಯುತ್ತಿದ್ದ ರಕ್ತವನ್ನು ನೋಡಿ ಎಲ್ಲರೂ ಗಾಬರಿಯಾದರು. ಅವರ ಗಾಬರಿಗೆ ಅನೇಕ ಕಾರಣಗಳು. ಚಕ್ರವರ್ತಿ ಎದ್ದು ಹೊರಗೆ ಬರುವವರೆಗೆ ತಮ್ಮ ಗಮನಕ್ಕೆ ಬರದಿದ್ದುದು ತಮ್ಮ ಬೇಜವಾಬ್ದಾರಿಯಲ್ಲವೇ? ಈ ನಿರ್ಲಕ್ಷ್ಯಕ್ಕೆ ಚಕ್ರವರ್ತಿ ಅದಾವ ಶಿಕ್ಷೆ ನೀಡುತ್ತಾನೋ? <br /> <br /> ಆದರೆ ಶಹಾಜಹಾನ್ ಇವರ ಮೇಲೆ ಕೋಪಿಸಿಗೊಂಡು ಕೂಗಾಡಲಿಲ್ಲ. ಬದಲಾಗಿ ರಕ್ತ ಸೋರುತ್ತಿದ್ದ ಹಣೆಯನ್ನು ಒತ್ತಿ ಹಿಡಿದುಕೊಂಡು, `ಅಲ್ಲಾ, ನಿನ್ನ ಕೃಪೆ ದೊಡ್ಡದು~ ಎನ್ನುತ್ತ ನಗುತ್ತಿದ್ದ.<br /> <br /> ಅಲ್ಲಿಗೆ ಧಾವಿಸಿ ಬಂದ ಮಂತ್ರಿಗಳಿಗೆ ಆಶ್ಚರ್ಯವಾಯಿತು. `ಪ್ರಭೂ, ವೈದ್ಯರು ಬರುತ್ತಿದ್ದಾರೆ, ಶುಶ್ರೂಷೆ ಮಾಡುತ್ತಾರೆ. ಆದರೆ ತಾವು ನಗುತ್ತಿರುವ ಕಾರಣ ಅರ್ಥವಾಗುತ್ತಿಲ್ಲ~ ಎಂದರು ಮಂತ್ರಿಗಳು. <br /> <br /> ಆಗ ಚಕ್ರವರ್ತಿ ಹೇಳಿದ, `ನೋಡಿ ಭಗವಂತನ ಕೃಪೆ ಎಷ್ಟು ದೊಡ್ಡದು! ಅವನ ಲೀಲೆಯೇ ವಿಚಿತ್ರ. ತಾನಾಗಿಯೇ ಎದ್ದು ಬಾವಿಯಿಂದ ಒಂದು ಕೊಡ ನೀರನ್ನು ಎಳೆದುಕೊಂಡು ದಾಹ ತಣಿಸಿಕೊಳ್ಳಲಾಗದ ಅಶಕ್ತ ವ್ಯಕ್ತಿಯ ಕೈಯಲ್ಲಿ ಇಡೀ ಮೊಘಲ್ ಸಾಮ್ರೋಜ್ಯದ ಸಿಂಹಾಸನವನ್ನು ಕೊಟ್ಟಿದ್ದಾನೆ!~ <br /> <br /> ದೇವರ ಕೃಪೆ ಇದ್ದರೆ ಯಾವುದೂ ಅಸಾಧ್ಯವಲ್ಲ. ಅವನ ಕೃಪೆಯಲ್ಲಿ ನಂಬಿಕೆ ಇರಲಿ, ಆದರೆ ಅತ್ಮವಿಶ್ವಾಸದೊಂದಿಗೆ ಸತತ ಪರಿಶ್ರಮ ಮಾಡುವ ಮನಸ್ಸೂ ಇರಲಿ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೊಘಲ್ ಚಕ್ರವರ್ತಿ ಶಹಾಜಹಾನ್ ತನ್ನ ವಿಶಾಲವಾದ ಅರಮನೆಯಲ್ಲಿ ಮಲಗಿದ್ದ. ರಾತ್ರಿ ಸುಮಾರು ಎರಡು ಗಂಟೆಯಾಗಿರಬೇಕು. ಅವನಿಗೆ ಎಚ್ಚರವಾಯಿತು. ಅವು ಬೇಸಿಗೆಯ ದಿನಗಳು. ಶಹಾಜಹಾನನಿಗೆ ಗಂಟಲು ಒಣಗಿ ಕುಡಿಯಲು ನೀರು ಬೇಕೆನಿಸಿತ್ತು. <br /> <br /> ಎಂದಿನಂತೆ ಸೇವಕರನ್ನು ಕೂಗಿದ. ಯಾವ ಪ್ರತ್ಯುತ್ತರವೂ ಬರಲಿಲ್ಲ. ಸದಾ, ಸರ್ವದಾ ಈತನ ಸೇವೆಗೆಂದೇ ಎಚ್ಚರವಾಗಿರುತ್ತಿದ್ದ ಸೇವಕರು ಧ್ವನಿಗೊಡಲಿಲ್ಲ.ಶಹಾಜಹಾನ್ ಕರುಣಾಳುವಾಗಿದ್ದ.<br /> <br /> ಬಹುಶಃ ತನ್ನ ಸೇವಕರು ಇಡೀ ದಿನ ದುಡಿದು ದುಡಿದು ಸುಸ್ತಾಗಿ ಮಲಗಿರಬೇಕು. ಅವರನ್ನೇಕೆ ಎಬ್ಬಿಸಬೇಕೆಂದುಕೊಂಡು ತಾನೇ ಹಾಸಿಗೆಯಿಂದೆದ್ದು ಸ್ವಲ್ಪ ದೂರದಲ್ಲಿದ್ದ ನೀರಿನ ಹೂಜಿಯ ಬಳಿಗೆ ಹೋದ. <br /> <br /> ಅವತ್ತು ಅದೇನು ದೈವವೊ ಹೂಜಿಯಲ್ಲೂ ನೀರು ಇರಲಿಲ್ಲ. ಮೊಘಲ್ ಚಕ್ರವರ್ತಿಗೆ ರಾತ್ರಿ ನೀರಡಿಕೆಯಾದರೆ ಒಂದು ಹನಿ ನೀರೂ ಇರಲಿಲ್ಲ.ಶಹಾಜಹಾನ್ ತನ್ನಷ್ಟಕ್ಕೆ ತಾನೇ ನಕ್ಕ.<br /> <br /> ಪಾಪ! ಮಲಗಿರುವ ಸೇವಕರನ್ನು ಎಬ್ಬಿಸಿ ತೊಂದರೆ ಕೊಡುವುದು ಬೇಡ, ಒಂದು ದಿನ ತಾನೇ ಕೆಲಸಮಾಡಿಕೊಂಡರೆ ಆಗದೇ ಎಂದುಕೊಂಡು ತನ್ನ ಮಲಗುವ ಕೋಣೆಯಿಂದ ಸ್ವಲ್ಪವೇ ದೂರದಲ್ಲಿದ್ದ ಬಾವಿಗೆ ಹೊರಟ. <br /> <br /> ಅದೊಂದು ಬೆಳದಿಂಗಳ ರಾತ್ರಿ, ಆಕಾಶ ಶುಭ್ರವಾಗಿದೆ. ಚಂದ್ರನ ಬೆಳಕು ಎಲ್ಲೆಡೆಗೆ ಚೆಲ್ಲಿದೆ. ಬಾವಿಯ ಕಟ್ಟೆಯ ಮೇಲೊಂದು ಹಿತ್ತಾಳೆಯ ಕೊಡ ಇದೆ. ಮುಂದೆ ನೀರು ಎಳೆಯಲು ಸಿದ್ಧವಾಗಿದ್ದ ರಾಟೆಯ ಮೇಲೆ ಹಗ್ಗವನ್ನೂ ಹಾಕಲಾಗಿತ್ತು.<br /> <br /> ಚಕ್ರವರ್ತಿಗೆ ಎಂದಾದರೂ ಬಾವಿಯಿಂದ ನೀರು ಎಳೆದು ಅಭ್ಯಾಸವಿರುತ್ತದೆಯೇ? ಆತ ಮೊದಲು ಬಾವಿಯಲ್ಲಿ ಬಗ್ಗಿ ನೋಡಿದ. ಚಂದ್ರನ ಪ್ರತಿಬಿಂಬ ಆಳವಾದ ಬಾವಿಯ ನೀರಿನಲ್ಲಿ ಸುಂದರವಾಗಿ ಕಾಣುತ್ತಿತ್ತು. <br /> <br /> ಕೊಡದ ಬಾಯಿಗೆ ಹಗ್ಗ ತೊಡಿಸಿ ನೀರಿಗೆ ಬಿಡಬೇಕೆಂದುಕೊಂಡು ಹಿಂದಕ್ಕೆ ಸರಿದ. ಆಗ ನೇತಾಡುತ್ತಿದ್ದ ಕಬ್ಬಿಣದ ರಾಟೆ ಅವನ ಹಣೆಗೆ ಬಡಿಯಿತು. ಕ್ಷಣಾರ್ಧದಲ್ಲಿ ರಕ್ತ ಚಿಮ್ಮಿತು. ಅಯ್ಯೋ ಎಂದು ಕಿರುಚಿದ ಶಹಾಜಹಾನ್.<br /> <br /> ಅವನ ಕೈ ಬಡಿದು ಕಟ್ಟೆಯ ಮೇಲಿದ್ದ ಕೊಡ ಢಮಾರೆಂದು ಬಾವಿಯಲ್ಲಿ ಬಿತ್ತು. ಈ ಭಾರೀ ಸದ್ದು ಕಾವಲುಗಾರರನ್ನು ಎಚ್ಚರಿಸಿತು. ಒಂದೇ ನಿಮಿಷದಲ್ಲಿ ಚಕ್ರವರ್ತಿಯ ಕಾವಲುಗಾರರು, ಸೇವಕರು ಎಲ್ಲರೂ ಅಲ್ಲಿಗೆ ಓಡಿ ಬಂದರು.<br /> <br /> ಚಕ್ರವರ್ತಿಯನ್ನು ಅಲ್ಲಿ ಕಂಡು, ಅವನ ಹಣೆಯಿಂದ ಸುರಿಯುತ್ತಿದ್ದ ರಕ್ತವನ್ನು ನೋಡಿ ಎಲ್ಲರೂ ಗಾಬರಿಯಾದರು. ಅವರ ಗಾಬರಿಗೆ ಅನೇಕ ಕಾರಣಗಳು. ಚಕ್ರವರ್ತಿ ಎದ್ದು ಹೊರಗೆ ಬರುವವರೆಗೆ ತಮ್ಮ ಗಮನಕ್ಕೆ ಬರದಿದ್ದುದು ತಮ್ಮ ಬೇಜವಾಬ್ದಾರಿಯಲ್ಲವೇ? ಈ ನಿರ್ಲಕ್ಷ್ಯಕ್ಕೆ ಚಕ್ರವರ್ತಿ ಅದಾವ ಶಿಕ್ಷೆ ನೀಡುತ್ತಾನೋ? <br /> <br /> ಆದರೆ ಶಹಾಜಹಾನ್ ಇವರ ಮೇಲೆ ಕೋಪಿಸಿಗೊಂಡು ಕೂಗಾಡಲಿಲ್ಲ. ಬದಲಾಗಿ ರಕ್ತ ಸೋರುತ್ತಿದ್ದ ಹಣೆಯನ್ನು ಒತ್ತಿ ಹಿಡಿದುಕೊಂಡು, `ಅಲ್ಲಾ, ನಿನ್ನ ಕೃಪೆ ದೊಡ್ಡದು~ ಎನ್ನುತ್ತ ನಗುತ್ತಿದ್ದ.<br /> <br /> ಅಲ್ಲಿಗೆ ಧಾವಿಸಿ ಬಂದ ಮಂತ್ರಿಗಳಿಗೆ ಆಶ್ಚರ್ಯವಾಯಿತು. `ಪ್ರಭೂ, ವೈದ್ಯರು ಬರುತ್ತಿದ್ದಾರೆ, ಶುಶ್ರೂಷೆ ಮಾಡುತ್ತಾರೆ. ಆದರೆ ತಾವು ನಗುತ್ತಿರುವ ಕಾರಣ ಅರ್ಥವಾಗುತ್ತಿಲ್ಲ~ ಎಂದರು ಮಂತ್ರಿಗಳು. <br /> <br /> ಆಗ ಚಕ್ರವರ್ತಿ ಹೇಳಿದ, `ನೋಡಿ ಭಗವಂತನ ಕೃಪೆ ಎಷ್ಟು ದೊಡ್ಡದು! ಅವನ ಲೀಲೆಯೇ ವಿಚಿತ್ರ. ತಾನಾಗಿಯೇ ಎದ್ದು ಬಾವಿಯಿಂದ ಒಂದು ಕೊಡ ನೀರನ್ನು ಎಳೆದುಕೊಂಡು ದಾಹ ತಣಿಸಿಕೊಳ್ಳಲಾಗದ ಅಶಕ್ತ ವ್ಯಕ್ತಿಯ ಕೈಯಲ್ಲಿ ಇಡೀ ಮೊಘಲ್ ಸಾಮ್ರೋಜ್ಯದ ಸಿಂಹಾಸನವನ್ನು ಕೊಟ್ಟಿದ್ದಾನೆ!~ <br /> <br /> ದೇವರ ಕೃಪೆ ಇದ್ದರೆ ಯಾವುದೂ ಅಸಾಧ್ಯವಲ್ಲ. ಅವನ ಕೃಪೆಯಲ್ಲಿ ನಂಬಿಕೆ ಇರಲಿ, ಆದರೆ ಅತ್ಮವಿಶ್ವಾಸದೊಂದಿಗೆ ಸತತ ಪರಿಶ್ರಮ ಮಾಡುವ ಮನಸ್ಸೂ ಇರಲಿ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>