<p>ಜಗತ್ತಿನ ರಂಗಭೂಮಿಯ ರಾಜಧಾನಿ ಎಂದು ಕರೆಸಿಕೊಳ್ಳುವ ಬರ್ಲಿನ್ನಲ್ಲಿ ಕಳೆದ ಶನಿವಾರ ಒಂದು ಅತ್ಯಂತ ಗಾಢವಾದ ರಂಗಪ್ರಯೋಗ ನಡೆಯಿತು.<br /> <br /> ಜರ್ಮನಿಯ ವಿಖ್ಯಾತ ಕವಿ, ನಾಟಕಕಾರ ಮತ್ತು ರಂಗಕರ್ಮಿಯಾದ ಬೆರ್ಟೋಲ್ಟ್ ಬ್ರೆಷ್ಟ್ ಸ್ಥಾಪಿಸಿದ `ಬರ್ಲಿನರ್ ಆನ್ ಶಾಂಬಲ್~ ನಾಟಕಗೃಹದ ಪ್ರಧಾನ ರಂಗಮಂಚದಲ್ಲಿ ಅಮೆರಿಕಾದ ಹೆಸರಾಂತ ನಿರ್ದೇಶಕ ರಾಬರ್ಟ್ ವಿಲ್ಸನ್, ಷೇಕ್ಸ್ಪಿಯರನ ಸಾನೆಟ್ಟುಗಳನ್ನಾಧರಿಸಿದ ಒಂದು ರಂಗರೂಪವನ್ನು ನೀಡಿದರು.</p>.<p> ಮೂರು ಗಂಟೆಗಳ ಕಾಲ ತುಂಬಿದ ಪ್ರೇಕ್ಷಕಗೃಹದ ಎಲ್ಲರನ್ನು ಅಲುಗಾಡದಂತೆ ಹಿಡಿದು ಕೂರಿಸಿದ ಈ ಪ್ರಯೋಗ ಮುಗಿದಾಗ ಮುದಗೊಂಡ ಪ್ರೇಕ್ಷಕರು ಸುಮಾರು ಹತ್ತು ನಿಮಿಷಗಳ ಕಾಲ ಎಡೆಬಿಡದ ಕರತಾಡನ ಮಾಡಿದರು. 2009ರಲ್ಲಿ ಇದೇ ಪ್ರಯೋಗ ಇದೇ ರಂಗಮಂಚದಲ್ಲಿ ನಡೆದಿದ್ದು, ಆಗಲೂ ಅಪಾರ ಜನಮೆಚ್ಚುಗೆ ಪಡೆದಿತ್ತು.<br /> <br /> ವಿಲ್ಸನ್ರ ವಿಶಿಷ್ಟ ಪ್ರಯೋಗಗಳ ಬಗೆಗೆ ಎಲ್ಲ ರಂಗಪ್ರೇಮಿಗಳಿಗೂ ಎಲ್ಲಿಲ್ಲದ ಕುತೂಹಲ. ವಿಲ್ಸನ್ ಕೇವಲ ರಂಗತಜ್ಞ ಮಾತ್ರವಲ್ಲ. ಚಿತ್ರಕಲೆ, ಶಿಲ್ಪ, ಸಂಗೀತ ಈ ಎಲ್ಲ ಕಲೆಗಳಲ್ಲಿ ನಿಷ್ಣಾತರಾಗಿದ್ದು ಅವೆಲ್ಲವನ್ನೂ ತಮ್ಮ ರಂಗಪ್ರಯೋಗದೊಳಗೆ ತುಂಬುತ್ತಾರೆ. ಜೊತೆಗೆ ರಂಗಭೂಮಿಯ ಬೆಳಕು ವ್ಯವಸ್ಥೆಯಲ್ಲಿ ಅವರ ಕೈಚಳಕ ಅಮೋಘವಾದುದು. <br /> <br /> ಅವರ ಪ್ರಯೋಗಗಳಲ್ಲಿ ಬೆಳಕು ಲಿಯೊನಾರ್ಡೋನ ಚಿತ್ರಗಳಲ್ಲಿ ಆಗುವಂತೆ ಒಂದು ಭಾವಗೀತಾತ್ಮಕ ಭಾಷೆಯಾಗಿ ಮಾರ್ಪಡುತ್ತದೆ. ಒಟ್ಟಿನಲ್ಲಿ ತಮಗೆ ಪರಿಣತಿಯಿರುವ ಎಲ್ಲಾ ಕಲೆಗಳನ್ನೂ ಮೇಳೈಸಿ ವಿಲ್ಸನ್ ಒಂದು ದಟ್ಟವಾದ ರಂಗಭಾಷೆಯನ್ನು ಪ್ರತಿ ಪ್ರಯೋಗದಲ್ಲೂ ಸಜೀವಗೊಳಿಸುತ್ತಾರೆ.<br /> <br /> ಅವರ ಪ್ರಯೋಗಗಳ ಬಗ್ಗೆ ಪರೋಕ್ಷವಾಗಿ ಮಾತ್ರ ತಿಳಿದಿದ್ದ ನನಗೆ ಅದನ್ನು ನೇರವಾಗಿ ನೋಡುವ ಅವಕಾಶ ಮೊದಲ ಬಾರಿ ಸಿಕ್ಕಿತು. ಈ ಅವಕಾಶ ನನ್ನ ತಲೆಮಾರಿನ ಅದೆಷ್ಟೋ ಜನ ರಂಗಕರ್ಮಿಗಳ ಕನಸು. <br /> <br /> ಇಪ್ಪತ್ತು ವರ್ಷಗಳ ಹಿಂದೆ ಅವರ ಕೆಲವು ಪ್ರಯೋಗಗಳ ಕ್ಯಾಸೆಟ್ಗಳನ್ನು ನಾನು ಬರ್ಲಿನ್ ವಿಶ್ವವಿದ್ಯಾಲಯದ ಭಂಡಾರದಲ್ಲಿ ವೀಕ್ಷಿಸಿದ್ದೆ. ವಿಶೇಷವಾಗಿ ಅವರು ಬರ್ಲಿನ್ನ ಒಲಿಂಪಿಕ್ ಸ್ಟೇಡಿಯಂನಲ್ಲಿ ಪ್ರಯೋಗ ಮಾಡಿದ ಹಾಫ್ತಸ್ಮಾಲ್ ಕವಿಯ `ಬರ್ತ್ ಆಫ್ ವೀನಸ್~ ಕವಿತೆಯ ರಂಗರೂಪ ನನ್ನನ್ನು ಗಾಢವಾಗಿ ತಟ್ಟಿತ್ತು.</p>.<p>ಪ್ರಕೃತಿಯ ಸಮೃದ್ಧಿಯ ಪುನರಾವರ್ತನೆಯನ್ನು ಕೊಂಡಾಡುವ ಆ ಕವಿತೆಯ ಸಾಲುಗಳನ್ನು ಯುದ್ಧೋತ್ತರ ಜರ್ಮನಿಯ ದಾರಿದ್ರ್ಯದ ಪ್ರತಿಮೆಗಳ ಹಿನ್ನೆಲೆಯಲ್ಲಿ ಕೇಳಿಸಿ ಒಂದು ವಿಚಿತ್ರ ವ್ಯಂಗ್ಯವನ್ನು ಆ ರಂಗಪ್ರಸ್ತುತಿಯ ಮೂಲಕ ಅವರು ಅಭಿವ್ಯಕ್ತಿಸಿದ್ದರು. ಶಬ್ದಕಾವ್ಯ ಮತ್ತು ದೃಶ್ಯಕಾವ್ಯಗಳ ವ್ಯಂಗ್ಯಾತ್ಮಕ ಸಂಬಂಧ ನನ್ನನ್ನು ಬಹಳ ಕಾಡಿತ್ತು. <br /> <br /> ಈ ಹಿಂದೆ ಷೇಕ್ಸ್ಪಿಯರ್, ಬ್ರೆಷ್ಟ್ ಮುಂತಾದ ಹಲವು ನಾಟಕಕಾರರ ಕೃತಿಗಳನ್ನು ವಿಭಿನ್ನ ಬಗೆಗಳಲ್ಲಿ ರಂಗಕ್ಕೆ ತಂದ ವಿಲ್ಸನ್ ಈ ಬಾರಿ ಷೇಕ್ಸ್ಪಿಯರನ ನಾಟಕೇತರ ಕೃತಿಯೊಂದನ್ನು ರಂಗಕ್ಕೆ ಅಳವಡಿಸಲು ಎತ್ತಿಕೊಂಡಿದ್ದಾರೆ.<br /> <br /> ಷೇಕ್ಸ್ಪಿಯರನ ಕೃತಿ ಸಮುಚ್ಚಯದಲ್ಲಿ ಆತನ ಸಾನೆಟ್ಟುಗಳಿಗೆ ಒಂದು ಪ್ರಮುಖ ಸ್ಥಾನವಿದೆ. ಅಷ್ಟೇ ಅಲ್ಲದೆ, ಇಡೀ ಯೂರೋಪಿನ ಮತ್ತು ಜಗತ್ತಿನ ಪ್ರೇಮಕಾವ್ಯದ ಇತಿಹಾಸದಲ್ಲಿ ಅದರ ಜಾಗ ಅನನ್ಯವಾದುದು.<br /> <br /> ಹದಿನಾಲ್ಕು ಸಾಲುಗಳ ರಚನೆಯಾದ ಸಾನೆಟ್ಟು ಮೊದಲು ಹುಟ್ಟಿದ್ದು ಸುಮಾರು ಹದಿಮೂರನೆ ಶತಮಾನದ ಇಟಲಿಯಲ್ಲಿ ಎಂದು ಹೇಳಲಾಗುತ್ತದೆ. ಪೆರ್ಟ್ರಾರ್ಕ್, ಡಾಂಟೆ ಮುಂತಾದವರು ಈ ಪ್ರಕಾರದ ಮೊದಲಿಗರು. <br /> <br /> ಇಟಲಿಯಾ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ ಈ ಪ್ರಕಾರ ಎಲಿಜಬೀತನ್ ಯುಗಕ್ಕೆ ಮೊದಲೇ ಇಂಗ್ಲೆಂಡಿನಲ್ಲಿ ಹುಟ್ಟಿತಾದರೂ ಅದು ತನ್ನ ಗರಿಮೆಯನ್ನು ಪಡೆದದ್ದು ಷೇಕ್ಸ್ಪಿಯರನ ಪರುಷಸ್ಪರ್ಶದಿಂದ.<br /> <br /> ಇನ್ನು ಕೆಲವರ ಪ್ರಕಾರ ಸಾನೆಟ್ಟು ಬಂದದ್ದು ಅರಬೀ ಪ್ರಕಾರವಾದ ಗಜಲ್ನ ಮೂಲಕ. ಸ್ಪೇನ್ಅನ್ನು ನಿಡುಗಾಲ ಆಳಿದ ಅರಬ್ಬರು ಈ ಪ್ರಕಾರವನ್ನು ಯೂರೋಪಿಗೆ ತಂದರಂತೆ. ಈ ಎರಡು ದೃಷ್ಟಿಗಳಲ್ಲಿ ಯಾವುದು ಸರಿಯಾಗಿದ್ದರೂ ಷೇಕ್ಸ್ಪಿಯರನ ಅನನ್ಯ ಸ್ಥಾನಕ್ಕೆ ಕೊರೆ ಬರುವುದಿಲ್ಲ.<br /> <br /> ಕಾರಣ ಇಷ್ಟೆ: ಮೊದಲಿನಿಂದ ಪ್ರೇಮ ಸಾನೆಟ್ಟುಗಳ ಹುರುಳಾಗಿತ್ತೆಂಬುದು ನಿಜವಾದರೂ ಈ ಪ್ರೇಮ ಬಹುಮಟ್ಟಿಗೆ ಆದರ್ಶಗೊಂಡು ಇಹದ ಗಡಿಗಳಾಚೆಗೆ ನುಸುಳಿಹೋಗುತ್ತಿತ್ತು. ದೈವೀಕ ಪ್ರೇಮವಾಗಿ ಮಾರ್ಪಾಟು ಹೊಂದುತ್ತಿತ್ತು.<br /> <br /> ಹೀಗೆ ಅಲೌಕಿಕವಾಗಿದ್ದ ಪ್ರೇಮದ ವಸ್ತುವನ್ನು ಮನುಷ್ಯಲೋಕದ ನಡುವೆ ನಾವು ನಡೆದಾಡುವ ನೆಲದ ಮೇಲೆ ನಿಲ್ಲಿಸಿದ್ದು ಷೇಕ್ಸ್ಪಿಯರನ ವಿಶಿಷ್ಟ ಸಾಧನೆ. ಅಂದಮಾತ್ರಕ್ಕೆ ಷೇಕ್ಸ್ಪಿಯರನ ಪ್ರೇಮಕಲ್ಪನೆ ಆದರ್ಶವಿಹೀನವೆಂದಲ್ಲ. ಆದರೆ ಆ ಅದರ್ಶ ಅವನ ಹಿಂದಿನ ಪ್ರೇಮ ಕಾವ್ಯದಲ್ಲಿದ್ದಂತೆ ಆಧ್ಯಾತ್ಮಿಕವಲ್ಲ, ಮಾನವೀಯವಾದುದು. <br /> <br /> ಸಾನೆಟ್ ಸಾಹಿತ್ಯದಲ್ಲಿ ಷೇಕ್ಸ್ಪಿಯರ್ ತಂದ ಇನ್ನೊಂದು ಗಣನೀಯ ಮಾರ್ಪಾಟು: ಆ ವರೆಗಿನ ಸಾನೆಟ್ ರಚನೆಗಳಲ್ಲೊಬ್ಬ ಆದರ್ಶ ಮಹಿಳೆ ಸಾನೆಟ್ಟಿನ ಕೇಂದ್ರವಾಗಿರುತ್ತಿದ್ದಳು (ಡಾಂಟೆಯ ಕಾವ್ಯದಲ್ಲಿ ಬಿಯಾತ್ರಿಚೆ ಇದ್ದ ಹಾಗೆ; ಆದರೆ ಷೇಕ್ಸ್ಪಿಯರನ ಸಾನೆಟ್ಟುಗಳ ನಾಯಕ ಒಬ್ಬ ಗಂಡಸು. ಆತ ಷೇಕ್ಸ್ಪಿಯರನ ಆಶ್ರಯದಾತ ಅರ್ಲ್ ಆಫ್ ಸೌದ್ಯಾಪ್ಟನ್ ಎಂದು ಗುರುತಿಸಲಾಗಿದೆ. <br /> <br /> ಅವನ ಜೊತೆಗಿನ ತನ್ನ ಪ್ರೇಮವನ್ನು ಷೇಕ್ಸ್ಪಿಯರ್ ಮಾನವೀಯ ರೀತಿಯಲ್ಲಿ ಆದರ್ಶವಾಗಿಸುತ್ತಾನೆ. ಬದಲಾಗುತ್ತಿರುವ ಜಗತ್ತಿನಲ್ಲಿ ಪ್ರೇಮದ ನಿರಂತರತೆ ಎಲ್ಲಿದೆ? ಷೇಕ್ಸ್ಪಿಯರನ ಉತ್ತರ: ಮಾನವ ಸಂತಾನದಲ್ಲಿ ಅಥವಾ ಪ್ರೇಮವನ್ನು ಕೀರ್ತಿಸುವ ಕಾವ್ಯದಲ್ಲಿ.<br /> <br /> ತನ್ನ ಪ್ರಿಯನೂ ಧಣಿಯೂ ಆದ ಸೌದ್ಯಾಪ್ಟನ್ನನ ಜೊತೆಗಿನ ತನ್ನ ಆದರ್ಶ ಪ್ರೇಮಕ್ಕೆ ವಿರುದ್ಧವಾದ, ಶುದ್ಧ ಲೈಂಗಿಕವಾದ ಇನ್ನೊಂದು ಪ್ರೇಮದ ಬಗ್ಗೆಯೂ ಷೇಕ್ಸ್ಪಿಯರ್ ಹಲವು ಸಾನೆಟ್ಟುಗಳನ್ನು ಬರೆದಿದ್ದಾನೆ. ಆ ತೊಗಲ ತೀಟೆಯ ಗುರಿ ಅವನ ಪ್ರೇಯಸಿ `ಕಪ್ಪು ಹೆಣ್ಣು~ ಇವಳು ಪರಿಶುದ್ಧವಾದ ಲೈಂಗಿಕ ಜಂತು. <br /> <br /> `ಎರಡು ಪ್ರೇಮಗಳಿವೆ ನನಗೆ; ಒಂದರಿಂದ ಸಮಾಧಾನ, ಇನ್ನೊಂದರಿಂದ ನಿರಾಶೆ~-ಹೀಗೆಂದು ತನ್ನೆರಡು ವಿಭಿನ್ನ ಬಗೆಯ ಪ್ರೇಮಗಳ ಕುರಿತು ಸಾನೆಟ್ಟೊಂದರಲ್ಲಿ ಹೇಳುತ್ತಾನೆ.<br /> <br /> ಷೇಕ್ಸ್ಪಿಯರ್ ಮತ್ತು ಸೌದ್ಯಾಪ್ಟನ್ನರ ಪ್ರೇಮದ ಸ್ವರೂಪದ ಬಗ್ಗೆ ಹಲವು ಜಟಿಲ ಚರ್ಚೆಗಳು ನಡೆದಿವೆ. ಇದನ್ನು ಸಲಿಂಗರತಿಯ ಸಂಬಂಧವೆಂದೂ ವಾದಿಸಲಾಗಿದೆ. <br /> <br /> ಸನಾತನ ಗ್ರೀಸಿನಂತೆ ಎಲಿಜಬೀತನ್ ಇಂಗ್ಲೆಂಡಿನಲ್ಲೂ ಸಲಿಂಗರತಿ ಚಾಲ್ತಿಯಲ್ಲಿತ್ತು. ಷೇಕ್ಸ್ಪಿಯರನ ಸಮಕಾಲೀನ ನಾಟಕಕಾರ ಕ್ರಿಸ್ಟೊಫರ್ ಮಾರ್ಲೋವನ ಸಾನೆಟ್ಟುಗಳಲ್ಲಿ ತನ್ನ ಗಂಡು ಪ್ರೇಮಿಯ ಬಗೆಗಿನ ಸಲಿಂಗಕಾಮದ ಸ್ಪಷ್ಟ ಸೂಚನೆಗಳಿವೆ.<br /> <br /> ಆದರೆ ಷೇಕ್ಸ್ಪಿಯರನಲ್ಲಿ ತನ್ನ ನಾಯಕನ ಸೌಂದರ್ಯದ ಬಣ್ಣನೆಯಿರುವುದು ದಿಟವಾದರೂ ಅದರಲ್ಲಿ ಸಲಿಂಗಪ್ರೇಮದ ಸೂಚನೆಗಳು ಅಷ್ಟು ಬಲವಾಗಿಲ್ಲ. ತನ್ನ ಇನಿಯನ ಪ್ರೇಮದಿಂದ ಗಡೀಪಾರಾದ ಮೇಲೆ ಅವನೊಂದಿಗಿನ ತನ್ನ ನಂಟನ್ನು ಷೇಕ್ಸ್ಪಿಯರ್ `ನಿಷ್ಠಾವಂತ ಮನಸುಗಳ ಮದುವೆ~ ಎಂದು ಗುರುತಿಸುತ್ತಾನೆ. <br /> <br /> ಗಂಡಸರ ನಡುವಿನ ಗಾಢ ಸಂಬಂಧಗಳೆಲ್ಲವನ್ನೂ ಸಲಿಂಗರತಿಯ ಅಡಿಯಲ್ಲಿ ತರುವುದಾದರೆ ಸ್ನೇಹವೆಂಬ ಕಾವ್ಯದ ಮುಖ್ಯವಸ್ತು ನಾಪತ್ತೆಯಾಗಿ ಬಿಡುತ್ತದೆ. ಆದರೆ ತಮ್ಮ ರಂಗ ಅಳವಡಿಕೆಯಲ್ಲಿ ಸ್ವಘೋಷಿತ ಸಲಿಂಗಕಾಮಿಯಾದ ವಿಲ್ಸನ್ ಸಲಿಂಗರತಿಯ ಅರ್ಥಗಳಿಗೆ ವಿಶೇಷ ಒತ್ತನ್ನು ನೀಡಿದ್ದಾರೆ ಅನ್ನುವುದು ಗಮನಾರ್ಹ. <br /> <br /> ಇದು ಒಂದು ವ್ಯಾಖ್ಯಾನವಾಗಿ ಅದೆಷ್ಟು ಸರಿ, ಹೇಳುವುದು ಕಠಿಣ. ಆದರೆ ಈ ಓದಿನಿಂದ ಈ ರಂಗ ಅಳವಡಿಕೆಗೆ ಲಾಭವಾಗಿದೆ. ಆದಿಮ ಪ್ರೇಮದ ಲಿಂಗಮೂಲವಾದ ಚೌಕಟ್ಟುಗಳಿಂದ ಅದನ್ನು ಬಿಡುಗಡೆ ಮಾಡಿ, ಪ್ರೇಮದ ಆದಿಮತೆಯನ್ನು ಧ್ವನಿಸುವದರಲ್ಲಿ ಈ ಪ್ರದರ್ಶನ ಯಶಸ್ವಿಯಾಗಿದೆ.<br /> <br /> ಷೇಕ್ಸ್ಪಿಯರನ ಸಾನೆಟ್ಟುಗಳ ಸರಣಿ ನಾಟಕಕೃತಿಯಾಗಿ ರಚನೆಯಾಗಿಲ್ಲ, ನಿಜ. ಆದರೆ, ಅದರಲ್ಲಿ ನಾಟಕೀಯತೆಯ ಅಂಶಗಳು ಯಥೇಚ್ಛವಾಗಿವೆ. ಅದರ ಕೇಂದ್ರದಲ್ಲಿ ಒಂದು ಸ್ವಾರಸ್ಯಕಾರಿಯಾದ ಪ್ರೇಮ ತ್ರಿಕೋನದ ಕಥೆಯಿದೆ. ಇಲ್ಲಿ ಕವಿ, ಗಂಡುಪ್ರೇಮಿ, ಕಪ್ಪು ಹೆಣ್ಣು, ಎದುರಾಳಿ ಕವಿ ಈ ನಾಲ್ಕು ಮಾನವ ಪಾತ್ರಗಳಿವೆ.<br /> <br /> ಅಲ್ಲದೆ ಸರ್ವಭಕ್ಷಕನಾದ ಕಾಲರಾಯನೂ ಇಲ್ಲಿನ ಒಂದು ಪಾತ್ರವೆಂದು ಹೇಳಲಾಗಿದೆ. ಸಾನೆಟ್ಟು ಸರಣಿಯ ಕತೆ ಬಿಚ್ಚಿಕೊಳ್ಳುತ್ತಾ ಹೋದ ಹಾಗೆ ಈ ಪಾತ್ರಗಳು ಅತ್ಯಂತ ತೀವ್ರವಾದ ನಾಟಕೀಯ ಗಳಿಗೆಗಳನ್ನು ಹಾದು ಹೋಗುತ್ತವೆ.<br /> <br /> ಸಾನೆಟ್ಟುಗಳನ್ನು ಒಂದು ನಾಟಕದ ಸ್ವಗತ ಮತ್ತು ಸಂಭಾಷಣೆಗಳ ಸರಣಿಯಂತೆ ನೋಡಲೂ ಸಾಧ್ಯ. ಆದರೆ ತಮ್ಮ ಪ್ರಯೋಗದಲ್ಲಿ ವಿಲ್ಸನ್ ಈ ಕೃತಿಯ ಎಲ್ಲ ನಾಟಕೀಯ ಅಂಶಗಳನ್ನು ತ್ಯಜಿಸಿ ತಮ್ಮ ಪ್ರಯೋಗಕ್ಕೆ ಶುದ್ಧಾಂಗವಾದ ರಂಗ ಸ್ವರೂಪವನ್ನು ತಂದಿದ್ದಾರೆ.<br /> <br /> ನಮ್ಮಲ್ಲಿ ನಾಟಕೀಯತೆಯನ್ನೇ ರಂಗ ಸ್ವರೂಪವೆಂದು ವಾದಿಸುವವರಿದ್ದಾರೆ. ಸಾಂಪ್ರದಾಯಿಕ ನಾಟಕೀಯತೆಯನ್ನು ದೂರ ಬಿಸುಟ ಅಬ್ಸರ್ಡ್ ಮುಂತಾದ ಆಧುನಿಕ ನಾಟಕಗಳ ಪ್ರಭಾವ ನಮ್ಮ ಆಧುನಿಕ ನಾಟಕಕಾರರ ಮೇಲೂ ಆಯಿತು. <br /> <br /> ಆದರೆ, ಅವರು ಸಾಂಪ್ರದಾಯಿಕ ನಾಟಕಗಳ ಜಾಡನ್ನು ಪೂರ್ತಿ ಬಿಟ್ಟುಕೊಡಲಿಲ್ಲ. ಆದರೆ ಪರಿಶುದ್ಧ ಪ್ರಯೋಗಶೀಲ ರಂಗನಿರ್ದೇಶಕ ವಿಲ್ಸನ್ರ ರಂಗತಂತ್ರಗಳು ನಾಟಕದ ಮೂಲ ಅಂಶಗಳಾದ ಕಥನ, ಪಾತ್ರ, ಸಂಘರ್ಷ ಈ ಎಲ್ಲಕ್ಕೂ ಎಳ್ಳುನೀರು ಬಿಟ್ಟಿವೆ. <br /> <br /> ಆಧುನಿಕ ಅಮೂರ್ತಕಲೆ ಸ್ಥಳೈಕ್ಯದ ನಿಯಮವನ್ನು, ಆಧುನಿಕ ಕಾದಂಬರಿ ಕಥನದ ಚೌಕಟ್ಟನ್ನು, ಆಧುನಿಕ ವಾಸ್ತು ಕೇಂದ್ರೀಯತೆಯನ್ನು, ಆಧುನಿಕ ಸಂಗೀತ ಸಂಯೋಜನೆಯನ್ನು, ಆಧುನಿಕ ಕಾವ್ಯ ಛಂದಸ್ಸನ್ನು ಬಿಟ್ಟು ಕೊಟ್ಟ ಹಾಗೆ.<br /> <br /> ವಿಲ್ಸನ್ನರ ಈ ಪ್ರಯೋಗದಲ್ಲಿ ಕತೆಯಿಲ್ಲ. ಪಾತ್ರಗಳಿಲ್ಲ. ಬದಲಿಗೆ ಪ್ರತಿಮೆಗಳಿವೆ, ಶಬ್ದಗಳಿವೆ, ಚಲನೆಗಳಿವೆ, ಆಕೃತಿಗಳಿವೆ, ಲಯಗಳಿವೆ, ದೇಶಗಳಿವೆ. ಸ್ಥಿರ ವ್ಯಕ್ತಿತ್ವದ ಕಲ್ಪನೆಗೆ ಹೊರತಾಗಿ ಗಂಡಸರು ಹೆಣ್ಣುಪಾತ್ರಗಳನ್ನೂ ಹೆಂಗಸರು ಗಂಡುಪಾತ್ರಗಳನ್ನೂ ವಹಿಸುತ್ತಾ ಹೋಗುತ್ತಾರೆ. <br /> <br /> ಆಧುನಿಕ ವಿವರಗಳು ಪ್ರಾಚೀನ ವಿವರಗಳೊಂದಿಗೆ ಕಲೆಸಿ ಹೋಗುತ್ತವೆ. ಈ ನಡುವೆ ಸಾನೆಟ್ಟುಗಳನ್ನಾಧರಿಸಿದ ದೃಶ್ಯಾವಳಿಗಳ ನಡು ನಡುವೆ ಬೊಂಬೆ ಬಿಲ್ಲು ಬಾಣ ಹಿಡಿದ ಕಾಮದೇವ ಕ್ಯುಪಿಡ್ ಮತ್ತೆ ಮತ್ತೆ ಬಂದು ಹೋಗುತ್ತಿರುತ್ತಾನೆ. <br /> <br /> ಸಾನೆಟ್ಟುಗಳನ್ನು ದೃಶ್ಯ ಮಾಧ್ಯಮಕ್ಕೆ ಅಳವಡಿಸುವ ಸರಳ ತಂತ್ರವೂ ಇಲ್ಲಿಲ್ಲ. ಬದಲಿಗೆ ಹಲವಾರು ರಂಗಾಭಿವ್ಯಕ್ತಿ ಸಾಧ್ಯತೆಗಳ ನಡುವೆ, ಪರಿಕರಗಳ ನಡುವೆ ಸಾನೆಟ್ಟುಗಳ ಪಠಣ, ನರ್ತನ, ಗಾಯನ - ಎಲ್ಲಾ ಬಂದು ಹೋಗುತ್ತವೆ. ಈ ಎಲ್ಲ ರಂಗಕ್ರಿಯೆಗಳ ಮೂಲಕ ಹಲವು ಕಲೆಗಳ ಸೇರುದಾಣವಾದ ರಂಗಭೂಮಿ ಒಂದು ಭಿನ್ನವಾದ ಸಂರಚನೆಯನ್ನು ಪಡೆದುಕೊಳ್ಳುತ್ತದೆ. <br /> <br /> ಈ ರೀತಿಯ ಅಮೂರ್ತ ರಂಗಕಲೆ ಜನಸಾಮಾನ್ಯರನ್ನೂ ಆಳವಾಗಿ ಮುಟ್ಟಬಲ್ಲದು ಎಂಬುದಕ್ಕೆ ಆ ಸಂಜೆಯ ಪ್ರೇಕ್ಷಕ ಗೃಹದ ಎಡೆಬಿಡದ ಕರತಾಡನ ದ್ಯೋತಕವಾಗಿತ್ತು. ಈ ಕೃತಿ ವಿಲ್ಸನ್ನರ ಹಿಂದಿನ ಪ್ರಯೋಗಗಳ ಹಾಗೆ ವಿದ್ವಜ್ಜನ ಮನ್ನಣೆ ಪಡೆಯುವುದರ ಬಗ್ಗೆಯೂ ಅನುಮಾನವಿಲ್ಲ.<br /> <br /> ಆದರೆ ಸರ್ಕಾರ, ರಂಗಶಾಲೆಗಳು, ಅನುದಾನಗಳು, ಸಂಸ್ಥೆಗಳು-ಇವೆಲ್ಲವುಗಳ ಹೊರಗೆ ನಿಂತು ಕಲ್ಸ್ರೂಹೆ ಎಂಬ ಸಣ್ಣ ನಗರದಲ್ಲಿ ಸಣ್ಣ ಪ್ರಮಾಣದಲ್ಲಿ ಅತ್ಯಂತ ಅರ್ಥಪೂರ್ಣ ರಂಗಪ್ರಯೋಗ ಮಾಡುತ್ತಿರುವ ನನ್ನ ಆತ್ಮೀಯ ಗೆಳೆಯ ಥೋರ್ಸ್ಟನ್ ಕ್ರೇಲೋಸ್ಗೆ ಈ ರೀತಿಯ ರಂಗಭೂಮಿಯ ಬಗ್ಗೆ ಎಷ್ಟು ಗೌರವವಿದೆಯೋ ಅಷ್ಟೇ ಅನುಮಾನಗಳಿವೆ. <br /> <br /> ಕಾಫ್ಕಾನ ಪತ್ರಗಳ ಮತ್ತು ದಿನಚರಿಗಳ ಆಧಾರದ ಮೇಲೆ ಅತ್ಯಂತ ಜನಪ್ರಿಯವಾಗುತ್ತಿರುವ, ಈಗಾಗಲೇ ನೂರಕ್ಕೂ ಹೆಚ್ಚು ಪ್ರದರ್ಶನ ಕಂಡಿರುವ ನಾಟಕದ ನಿರ್ದೇಶಕನಾದ ಆತ ಹೀಗೆನ್ನುತ್ತಾನೆ:<br /> <br /> `ವಿಲ್ಸನ್ ಮಹಾನ್ ಗಟ್ಟಿಗನೆಂಬುದರ ಬಗ್ಗೆ ಎರಡು ಮಾತಿಲ್ಲ. ಆತ ನಮ್ಮೆಲ್ಲರಿಗೆ ದೊಡ್ಡ ಸವಾಲು. ಆದರೆ ಆ ರೀತಿಯ ಶ್ರೀಮಂತ ರಂಗಭೂಮಿಗೆ ಬರ್ಲಿನ್ನಂಥ ಮಹಾನಗರ ಬೇಕು, ಆನ್ಶ್ಯಾಂಬಲ್ನಂಥ ವ್ಯವಸ್ಥಿತ ಜಾಗ ಬೇಕು, ಅದನ್ನು ನಡೆಸುವುದಕ್ಕೆ ಸರ್ಕಾರದ ಅಥವಾ ದುಡ್ಡಿನ ದೊಡ್ಡಪ್ಪಗಳ ಲಕ್ಷಾಂತರ ಯೂರೋಗಳ ಅನುದಾನ ಬೇಕು.<br /> <br /> ತರಬೇತಿ ಪಡೆದ ರಂಗಕರ್ಮಿಗಳ, ಮ್ಯಾನೇಜರುಗಳ, ಇತರ ಸಿಬ್ಬಂದಿ ವರ್ಗದ ಜಟಿಲ ವ್ಯವಸ್ಥೆ ಬೇಕು. ಇಷ್ಟೆಲ್ಲ ಆದ ಮೇಲೆ ರಂಗಭೂಮಿ ನಿಮ್ಮ ಬಾಲಿವುಡ್ ಸಿನಿಮಾದ ಹಾಗೆ ತನ್ನ ಕಲಾಸ್ವರೂಪವನ್ನು ತ್ಯಜಿಸಿ ಒಂದು ಬೃಹತ್ ಉದ್ಯಮದ ಸ್ವರೂಪವನ್ನು ಪಡೆಯುತ್ತದೆ. <br /> <br /> ಆದರೆ ರಂಗಭೂಮಿಯ ಶಕ್ತಿಯಿರುವುದು ಅದರ ಸರಳತೆ ಮತ್ತು ಸ್ವಾತಂತ್ರ್ಯಗಳಲ್ಲಿ. ಆ ಬೃಹತ್ ಉದ್ದಿಮೆಯ ಬೆಳವಣಿಗೆಯನ್ನು ಯಾರೂ ತಡೆಯಲಾಗುವುದಿಲ್ಲ. <br /> <br /> ಆದರೆ ಜನರ ನಡುವೆ ಹೋಗಿ ನಮ್ಮ ಸ್ವಾತಂತ್ರ್ಯವನ್ನು ಬಿಟ್ಟುಕೊಡದೆ ನಾಟಕವಾಡಿಸಬೇಕೆಂದುಕೊಂಡಿರುವ ನಮ್ಮಂಥ ಕಿರಿಯರು, ಸರ್ಕಾರ, ಅನುದಾನಗಳಿಂದ ದೂರ ಉಳಿದು ಹಾಸಿಗೆಯಿದ್ದಷ್ಟು ಕಾಲುಚಾಚುವ ನಮ್ಮಂಥ ಫಕೀರರು ಕ್ರಮಿಸಬೇಕಾದ ಹಾದಿ ಖಂಡಿತಾ ಅದಲ್ಲ.~<br /> <br /> ಈ ಬಗ್ಗೆ ನಾನೂ ಆಲೋಚಿಸುತ್ತಿದ್ದೇನೆ. ಕನ್ನಡಮ್ಮನ ಮಕ್ಕಳಾದ ನನ್ನ ಸರೀಕ ರಂಗಕರ್ಮಿಗಳೂ ಆಲೋಚಿಸುತ್ತಾರೆಂದು ಹಾರೈಸುತ್ತೇನೆ.</p>.<p><strong> (ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in)</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಜಗತ್ತಿನ ರಂಗಭೂಮಿಯ ರಾಜಧಾನಿ ಎಂದು ಕರೆಸಿಕೊಳ್ಳುವ ಬರ್ಲಿನ್ನಲ್ಲಿ ಕಳೆದ ಶನಿವಾರ ಒಂದು ಅತ್ಯಂತ ಗಾಢವಾದ ರಂಗಪ್ರಯೋಗ ನಡೆಯಿತು.<br /> <br /> ಜರ್ಮನಿಯ ವಿಖ್ಯಾತ ಕವಿ, ನಾಟಕಕಾರ ಮತ್ತು ರಂಗಕರ್ಮಿಯಾದ ಬೆರ್ಟೋಲ್ಟ್ ಬ್ರೆಷ್ಟ್ ಸ್ಥಾಪಿಸಿದ `ಬರ್ಲಿನರ್ ಆನ್ ಶಾಂಬಲ್~ ನಾಟಕಗೃಹದ ಪ್ರಧಾನ ರಂಗಮಂಚದಲ್ಲಿ ಅಮೆರಿಕಾದ ಹೆಸರಾಂತ ನಿರ್ದೇಶಕ ರಾಬರ್ಟ್ ವಿಲ್ಸನ್, ಷೇಕ್ಸ್ಪಿಯರನ ಸಾನೆಟ್ಟುಗಳನ್ನಾಧರಿಸಿದ ಒಂದು ರಂಗರೂಪವನ್ನು ನೀಡಿದರು.</p>.<p> ಮೂರು ಗಂಟೆಗಳ ಕಾಲ ತುಂಬಿದ ಪ್ರೇಕ್ಷಕಗೃಹದ ಎಲ್ಲರನ್ನು ಅಲುಗಾಡದಂತೆ ಹಿಡಿದು ಕೂರಿಸಿದ ಈ ಪ್ರಯೋಗ ಮುಗಿದಾಗ ಮುದಗೊಂಡ ಪ್ರೇಕ್ಷಕರು ಸುಮಾರು ಹತ್ತು ನಿಮಿಷಗಳ ಕಾಲ ಎಡೆಬಿಡದ ಕರತಾಡನ ಮಾಡಿದರು. 2009ರಲ್ಲಿ ಇದೇ ಪ್ರಯೋಗ ಇದೇ ರಂಗಮಂಚದಲ್ಲಿ ನಡೆದಿದ್ದು, ಆಗಲೂ ಅಪಾರ ಜನಮೆಚ್ಚುಗೆ ಪಡೆದಿತ್ತು.<br /> <br /> ವಿಲ್ಸನ್ರ ವಿಶಿಷ್ಟ ಪ್ರಯೋಗಗಳ ಬಗೆಗೆ ಎಲ್ಲ ರಂಗಪ್ರೇಮಿಗಳಿಗೂ ಎಲ್ಲಿಲ್ಲದ ಕುತೂಹಲ. ವಿಲ್ಸನ್ ಕೇವಲ ರಂಗತಜ್ಞ ಮಾತ್ರವಲ್ಲ. ಚಿತ್ರಕಲೆ, ಶಿಲ್ಪ, ಸಂಗೀತ ಈ ಎಲ್ಲ ಕಲೆಗಳಲ್ಲಿ ನಿಷ್ಣಾತರಾಗಿದ್ದು ಅವೆಲ್ಲವನ್ನೂ ತಮ್ಮ ರಂಗಪ್ರಯೋಗದೊಳಗೆ ತುಂಬುತ್ತಾರೆ. ಜೊತೆಗೆ ರಂಗಭೂಮಿಯ ಬೆಳಕು ವ್ಯವಸ್ಥೆಯಲ್ಲಿ ಅವರ ಕೈಚಳಕ ಅಮೋಘವಾದುದು. <br /> <br /> ಅವರ ಪ್ರಯೋಗಗಳಲ್ಲಿ ಬೆಳಕು ಲಿಯೊನಾರ್ಡೋನ ಚಿತ್ರಗಳಲ್ಲಿ ಆಗುವಂತೆ ಒಂದು ಭಾವಗೀತಾತ್ಮಕ ಭಾಷೆಯಾಗಿ ಮಾರ್ಪಡುತ್ತದೆ. ಒಟ್ಟಿನಲ್ಲಿ ತಮಗೆ ಪರಿಣತಿಯಿರುವ ಎಲ್ಲಾ ಕಲೆಗಳನ್ನೂ ಮೇಳೈಸಿ ವಿಲ್ಸನ್ ಒಂದು ದಟ್ಟವಾದ ರಂಗಭಾಷೆಯನ್ನು ಪ್ರತಿ ಪ್ರಯೋಗದಲ್ಲೂ ಸಜೀವಗೊಳಿಸುತ್ತಾರೆ.<br /> <br /> ಅವರ ಪ್ರಯೋಗಗಳ ಬಗ್ಗೆ ಪರೋಕ್ಷವಾಗಿ ಮಾತ್ರ ತಿಳಿದಿದ್ದ ನನಗೆ ಅದನ್ನು ನೇರವಾಗಿ ನೋಡುವ ಅವಕಾಶ ಮೊದಲ ಬಾರಿ ಸಿಕ್ಕಿತು. ಈ ಅವಕಾಶ ನನ್ನ ತಲೆಮಾರಿನ ಅದೆಷ್ಟೋ ಜನ ರಂಗಕರ್ಮಿಗಳ ಕನಸು. <br /> <br /> ಇಪ್ಪತ್ತು ವರ್ಷಗಳ ಹಿಂದೆ ಅವರ ಕೆಲವು ಪ್ರಯೋಗಗಳ ಕ್ಯಾಸೆಟ್ಗಳನ್ನು ನಾನು ಬರ್ಲಿನ್ ವಿಶ್ವವಿದ್ಯಾಲಯದ ಭಂಡಾರದಲ್ಲಿ ವೀಕ್ಷಿಸಿದ್ದೆ. ವಿಶೇಷವಾಗಿ ಅವರು ಬರ್ಲಿನ್ನ ಒಲಿಂಪಿಕ್ ಸ್ಟೇಡಿಯಂನಲ್ಲಿ ಪ್ರಯೋಗ ಮಾಡಿದ ಹಾಫ್ತಸ್ಮಾಲ್ ಕವಿಯ `ಬರ್ತ್ ಆಫ್ ವೀನಸ್~ ಕವಿತೆಯ ರಂಗರೂಪ ನನ್ನನ್ನು ಗಾಢವಾಗಿ ತಟ್ಟಿತ್ತು.</p>.<p>ಪ್ರಕೃತಿಯ ಸಮೃದ್ಧಿಯ ಪುನರಾವರ್ತನೆಯನ್ನು ಕೊಂಡಾಡುವ ಆ ಕವಿತೆಯ ಸಾಲುಗಳನ್ನು ಯುದ್ಧೋತ್ತರ ಜರ್ಮನಿಯ ದಾರಿದ್ರ್ಯದ ಪ್ರತಿಮೆಗಳ ಹಿನ್ನೆಲೆಯಲ್ಲಿ ಕೇಳಿಸಿ ಒಂದು ವಿಚಿತ್ರ ವ್ಯಂಗ್ಯವನ್ನು ಆ ರಂಗಪ್ರಸ್ತುತಿಯ ಮೂಲಕ ಅವರು ಅಭಿವ್ಯಕ್ತಿಸಿದ್ದರು. ಶಬ್ದಕಾವ್ಯ ಮತ್ತು ದೃಶ್ಯಕಾವ್ಯಗಳ ವ್ಯಂಗ್ಯಾತ್ಮಕ ಸಂಬಂಧ ನನ್ನನ್ನು ಬಹಳ ಕಾಡಿತ್ತು. <br /> <br /> ಈ ಹಿಂದೆ ಷೇಕ್ಸ್ಪಿಯರ್, ಬ್ರೆಷ್ಟ್ ಮುಂತಾದ ಹಲವು ನಾಟಕಕಾರರ ಕೃತಿಗಳನ್ನು ವಿಭಿನ್ನ ಬಗೆಗಳಲ್ಲಿ ರಂಗಕ್ಕೆ ತಂದ ವಿಲ್ಸನ್ ಈ ಬಾರಿ ಷೇಕ್ಸ್ಪಿಯರನ ನಾಟಕೇತರ ಕೃತಿಯೊಂದನ್ನು ರಂಗಕ್ಕೆ ಅಳವಡಿಸಲು ಎತ್ತಿಕೊಂಡಿದ್ದಾರೆ.<br /> <br /> ಷೇಕ್ಸ್ಪಿಯರನ ಕೃತಿ ಸಮುಚ್ಚಯದಲ್ಲಿ ಆತನ ಸಾನೆಟ್ಟುಗಳಿಗೆ ಒಂದು ಪ್ರಮುಖ ಸ್ಥಾನವಿದೆ. ಅಷ್ಟೇ ಅಲ್ಲದೆ, ಇಡೀ ಯೂರೋಪಿನ ಮತ್ತು ಜಗತ್ತಿನ ಪ್ರೇಮಕಾವ್ಯದ ಇತಿಹಾಸದಲ್ಲಿ ಅದರ ಜಾಗ ಅನನ್ಯವಾದುದು.<br /> <br /> ಹದಿನಾಲ್ಕು ಸಾಲುಗಳ ರಚನೆಯಾದ ಸಾನೆಟ್ಟು ಮೊದಲು ಹುಟ್ಟಿದ್ದು ಸುಮಾರು ಹದಿಮೂರನೆ ಶತಮಾನದ ಇಟಲಿಯಲ್ಲಿ ಎಂದು ಹೇಳಲಾಗುತ್ತದೆ. ಪೆರ್ಟ್ರಾರ್ಕ್, ಡಾಂಟೆ ಮುಂತಾದವರು ಈ ಪ್ರಕಾರದ ಮೊದಲಿಗರು. <br /> <br /> ಇಟಲಿಯಾ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ ಈ ಪ್ರಕಾರ ಎಲಿಜಬೀತನ್ ಯುಗಕ್ಕೆ ಮೊದಲೇ ಇಂಗ್ಲೆಂಡಿನಲ್ಲಿ ಹುಟ್ಟಿತಾದರೂ ಅದು ತನ್ನ ಗರಿಮೆಯನ್ನು ಪಡೆದದ್ದು ಷೇಕ್ಸ್ಪಿಯರನ ಪರುಷಸ್ಪರ್ಶದಿಂದ.<br /> <br /> ಇನ್ನು ಕೆಲವರ ಪ್ರಕಾರ ಸಾನೆಟ್ಟು ಬಂದದ್ದು ಅರಬೀ ಪ್ರಕಾರವಾದ ಗಜಲ್ನ ಮೂಲಕ. ಸ್ಪೇನ್ಅನ್ನು ನಿಡುಗಾಲ ಆಳಿದ ಅರಬ್ಬರು ಈ ಪ್ರಕಾರವನ್ನು ಯೂರೋಪಿಗೆ ತಂದರಂತೆ. ಈ ಎರಡು ದೃಷ್ಟಿಗಳಲ್ಲಿ ಯಾವುದು ಸರಿಯಾಗಿದ್ದರೂ ಷೇಕ್ಸ್ಪಿಯರನ ಅನನ್ಯ ಸ್ಥಾನಕ್ಕೆ ಕೊರೆ ಬರುವುದಿಲ್ಲ.<br /> <br /> ಕಾರಣ ಇಷ್ಟೆ: ಮೊದಲಿನಿಂದ ಪ್ರೇಮ ಸಾನೆಟ್ಟುಗಳ ಹುರುಳಾಗಿತ್ತೆಂಬುದು ನಿಜವಾದರೂ ಈ ಪ್ರೇಮ ಬಹುಮಟ್ಟಿಗೆ ಆದರ್ಶಗೊಂಡು ಇಹದ ಗಡಿಗಳಾಚೆಗೆ ನುಸುಳಿಹೋಗುತ್ತಿತ್ತು. ದೈವೀಕ ಪ್ರೇಮವಾಗಿ ಮಾರ್ಪಾಟು ಹೊಂದುತ್ತಿತ್ತು.<br /> <br /> ಹೀಗೆ ಅಲೌಕಿಕವಾಗಿದ್ದ ಪ್ರೇಮದ ವಸ್ತುವನ್ನು ಮನುಷ್ಯಲೋಕದ ನಡುವೆ ನಾವು ನಡೆದಾಡುವ ನೆಲದ ಮೇಲೆ ನಿಲ್ಲಿಸಿದ್ದು ಷೇಕ್ಸ್ಪಿಯರನ ವಿಶಿಷ್ಟ ಸಾಧನೆ. ಅಂದಮಾತ್ರಕ್ಕೆ ಷೇಕ್ಸ್ಪಿಯರನ ಪ್ರೇಮಕಲ್ಪನೆ ಆದರ್ಶವಿಹೀನವೆಂದಲ್ಲ. ಆದರೆ ಆ ಅದರ್ಶ ಅವನ ಹಿಂದಿನ ಪ್ರೇಮ ಕಾವ್ಯದಲ್ಲಿದ್ದಂತೆ ಆಧ್ಯಾತ್ಮಿಕವಲ್ಲ, ಮಾನವೀಯವಾದುದು. <br /> <br /> ಸಾನೆಟ್ ಸಾಹಿತ್ಯದಲ್ಲಿ ಷೇಕ್ಸ್ಪಿಯರ್ ತಂದ ಇನ್ನೊಂದು ಗಣನೀಯ ಮಾರ್ಪಾಟು: ಆ ವರೆಗಿನ ಸಾನೆಟ್ ರಚನೆಗಳಲ್ಲೊಬ್ಬ ಆದರ್ಶ ಮಹಿಳೆ ಸಾನೆಟ್ಟಿನ ಕೇಂದ್ರವಾಗಿರುತ್ತಿದ್ದಳು (ಡಾಂಟೆಯ ಕಾವ್ಯದಲ್ಲಿ ಬಿಯಾತ್ರಿಚೆ ಇದ್ದ ಹಾಗೆ; ಆದರೆ ಷೇಕ್ಸ್ಪಿಯರನ ಸಾನೆಟ್ಟುಗಳ ನಾಯಕ ಒಬ್ಬ ಗಂಡಸು. ಆತ ಷೇಕ್ಸ್ಪಿಯರನ ಆಶ್ರಯದಾತ ಅರ್ಲ್ ಆಫ್ ಸೌದ್ಯಾಪ್ಟನ್ ಎಂದು ಗುರುತಿಸಲಾಗಿದೆ. <br /> <br /> ಅವನ ಜೊತೆಗಿನ ತನ್ನ ಪ್ರೇಮವನ್ನು ಷೇಕ್ಸ್ಪಿಯರ್ ಮಾನವೀಯ ರೀತಿಯಲ್ಲಿ ಆದರ್ಶವಾಗಿಸುತ್ತಾನೆ. ಬದಲಾಗುತ್ತಿರುವ ಜಗತ್ತಿನಲ್ಲಿ ಪ್ರೇಮದ ನಿರಂತರತೆ ಎಲ್ಲಿದೆ? ಷೇಕ್ಸ್ಪಿಯರನ ಉತ್ತರ: ಮಾನವ ಸಂತಾನದಲ್ಲಿ ಅಥವಾ ಪ್ರೇಮವನ್ನು ಕೀರ್ತಿಸುವ ಕಾವ್ಯದಲ್ಲಿ.<br /> <br /> ತನ್ನ ಪ್ರಿಯನೂ ಧಣಿಯೂ ಆದ ಸೌದ್ಯಾಪ್ಟನ್ನನ ಜೊತೆಗಿನ ತನ್ನ ಆದರ್ಶ ಪ್ರೇಮಕ್ಕೆ ವಿರುದ್ಧವಾದ, ಶುದ್ಧ ಲೈಂಗಿಕವಾದ ಇನ್ನೊಂದು ಪ್ರೇಮದ ಬಗ್ಗೆಯೂ ಷೇಕ್ಸ್ಪಿಯರ್ ಹಲವು ಸಾನೆಟ್ಟುಗಳನ್ನು ಬರೆದಿದ್ದಾನೆ. ಆ ತೊಗಲ ತೀಟೆಯ ಗುರಿ ಅವನ ಪ್ರೇಯಸಿ `ಕಪ್ಪು ಹೆಣ್ಣು~ ಇವಳು ಪರಿಶುದ್ಧವಾದ ಲೈಂಗಿಕ ಜಂತು. <br /> <br /> `ಎರಡು ಪ್ರೇಮಗಳಿವೆ ನನಗೆ; ಒಂದರಿಂದ ಸಮಾಧಾನ, ಇನ್ನೊಂದರಿಂದ ನಿರಾಶೆ~-ಹೀಗೆಂದು ತನ್ನೆರಡು ವಿಭಿನ್ನ ಬಗೆಯ ಪ್ರೇಮಗಳ ಕುರಿತು ಸಾನೆಟ್ಟೊಂದರಲ್ಲಿ ಹೇಳುತ್ತಾನೆ.<br /> <br /> ಷೇಕ್ಸ್ಪಿಯರ್ ಮತ್ತು ಸೌದ್ಯಾಪ್ಟನ್ನರ ಪ್ರೇಮದ ಸ್ವರೂಪದ ಬಗ್ಗೆ ಹಲವು ಜಟಿಲ ಚರ್ಚೆಗಳು ನಡೆದಿವೆ. ಇದನ್ನು ಸಲಿಂಗರತಿಯ ಸಂಬಂಧವೆಂದೂ ವಾದಿಸಲಾಗಿದೆ. <br /> <br /> ಸನಾತನ ಗ್ರೀಸಿನಂತೆ ಎಲಿಜಬೀತನ್ ಇಂಗ್ಲೆಂಡಿನಲ್ಲೂ ಸಲಿಂಗರತಿ ಚಾಲ್ತಿಯಲ್ಲಿತ್ತು. ಷೇಕ್ಸ್ಪಿಯರನ ಸಮಕಾಲೀನ ನಾಟಕಕಾರ ಕ್ರಿಸ್ಟೊಫರ್ ಮಾರ್ಲೋವನ ಸಾನೆಟ್ಟುಗಳಲ್ಲಿ ತನ್ನ ಗಂಡು ಪ್ರೇಮಿಯ ಬಗೆಗಿನ ಸಲಿಂಗಕಾಮದ ಸ್ಪಷ್ಟ ಸೂಚನೆಗಳಿವೆ.<br /> <br /> ಆದರೆ ಷೇಕ್ಸ್ಪಿಯರನಲ್ಲಿ ತನ್ನ ನಾಯಕನ ಸೌಂದರ್ಯದ ಬಣ್ಣನೆಯಿರುವುದು ದಿಟವಾದರೂ ಅದರಲ್ಲಿ ಸಲಿಂಗಪ್ರೇಮದ ಸೂಚನೆಗಳು ಅಷ್ಟು ಬಲವಾಗಿಲ್ಲ. ತನ್ನ ಇನಿಯನ ಪ್ರೇಮದಿಂದ ಗಡೀಪಾರಾದ ಮೇಲೆ ಅವನೊಂದಿಗಿನ ತನ್ನ ನಂಟನ್ನು ಷೇಕ್ಸ್ಪಿಯರ್ `ನಿಷ್ಠಾವಂತ ಮನಸುಗಳ ಮದುವೆ~ ಎಂದು ಗುರುತಿಸುತ್ತಾನೆ. <br /> <br /> ಗಂಡಸರ ನಡುವಿನ ಗಾಢ ಸಂಬಂಧಗಳೆಲ್ಲವನ್ನೂ ಸಲಿಂಗರತಿಯ ಅಡಿಯಲ್ಲಿ ತರುವುದಾದರೆ ಸ್ನೇಹವೆಂಬ ಕಾವ್ಯದ ಮುಖ್ಯವಸ್ತು ನಾಪತ್ತೆಯಾಗಿ ಬಿಡುತ್ತದೆ. ಆದರೆ ತಮ್ಮ ರಂಗ ಅಳವಡಿಕೆಯಲ್ಲಿ ಸ್ವಘೋಷಿತ ಸಲಿಂಗಕಾಮಿಯಾದ ವಿಲ್ಸನ್ ಸಲಿಂಗರತಿಯ ಅರ್ಥಗಳಿಗೆ ವಿಶೇಷ ಒತ್ತನ್ನು ನೀಡಿದ್ದಾರೆ ಅನ್ನುವುದು ಗಮನಾರ್ಹ. <br /> <br /> ಇದು ಒಂದು ವ್ಯಾಖ್ಯಾನವಾಗಿ ಅದೆಷ್ಟು ಸರಿ, ಹೇಳುವುದು ಕಠಿಣ. ಆದರೆ ಈ ಓದಿನಿಂದ ಈ ರಂಗ ಅಳವಡಿಕೆಗೆ ಲಾಭವಾಗಿದೆ. ಆದಿಮ ಪ್ರೇಮದ ಲಿಂಗಮೂಲವಾದ ಚೌಕಟ್ಟುಗಳಿಂದ ಅದನ್ನು ಬಿಡುಗಡೆ ಮಾಡಿ, ಪ್ರೇಮದ ಆದಿಮತೆಯನ್ನು ಧ್ವನಿಸುವದರಲ್ಲಿ ಈ ಪ್ರದರ್ಶನ ಯಶಸ್ವಿಯಾಗಿದೆ.<br /> <br /> ಷೇಕ್ಸ್ಪಿಯರನ ಸಾನೆಟ್ಟುಗಳ ಸರಣಿ ನಾಟಕಕೃತಿಯಾಗಿ ರಚನೆಯಾಗಿಲ್ಲ, ನಿಜ. ಆದರೆ, ಅದರಲ್ಲಿ ನಾಟಕೀಯತೆಯ ಅಂಶಗಳು ಯಥೇಚ್ಛವಾಗಿವೆ. ಅದರ ಕೇಂದ್ರದಲ್ಲಿ ಒಂದು ಸ್ವಾರಸ್ಯಕಾರಿಯಾದ ಪ್ರೇಮ ತ್ರಿಕೋನದ ಕಥೆಯಿದೆ. ಇಲ್ಲಿ ಕವಿ, ಗಂಡುಪ್ರೇಮಿ, ಕಪ್ಪು ಹೆಣ್ಣು, ಎದುರಾಳಿ ಕವಿ ಈ ನಾಲ್ಕು ಮಾನವ ಪಾತ್ರಗಳಿವೆ.<br /> <br /> ಅಲ್ಲದೆ ಸರ್ವಭಕ್ಷಕನಾದ ಕಾಲರಾಯನೂ ಇಲ್ಲಿನ ಒಂದು ಪಾತ್ರವೆಂದು ಹೇಳಲಾಗಿದೆ. ಸಾನೆಟ್ಟು ಸರಣಿಯ ಕತೆ ಬಿಚ್ಚಿಕೊಳ್ಳುತ್ತಾ ಹೋದ ಹಾಗೆ ಈ ಪಾತ್ರಗಳು ಅತ್ಯಂತ ತೀವ್ರವಾದ ನಾಟಕೀಯ ಗಳಿಗೆಗಳನ್ನು ಹಾದು ಹೋಗುತ್ತವೆ.<br /> <br /> ಸಾನೆಟ್ಟುಗಳನ್ನು ಒಂದು ನಾಟಕದ ಸ್ವಗತ ಮತ್ತು ಸಂಭಾಷಣೆಗಳ ಸರಣಿಯಂತೆ ನೋಡಲೂ ಸಾಧ್ಯ. ಆದರೆ ತಮ್ಮ ಪ್ರಯೋಗದಲ್ಲಿ ವಿಲ್ಸನ್ ಈ ಕೃತಿಯ ಎಲ್ಲ ನಾಟಕೀಯ ಅಂಶಗಳನ್ನು ತ್ಯಜಿಸಿ ತಮ್ಮ ಪ್ರಯೋಗಕ್ಕೆ ಶುದ್ಧಾಂಗವಾದ ರಂಗ ಸ್ವರೂಪವನ್ನು ತಂದಿದ್ದಾರೆ.<br /> <br /> ನಮ್ಮಲ್ಲಿ ನಾಟಕೀಯತೆಯನ್ನೇ ರಂಗ ಸ್ವರೂಪವೆಂದು ವಾದಿಸುವವರಿದ್ದಾರೆ. ಸಾಂಪ್ರದಾಯಿಕ ನಾಟಕೀಯತೆಯನ್ನು ದೂರ ಬಿಸುಟ ಅಬ್ಸರ್ಡ್ ಮುಂತಾದ ಆಧುನಿಕ ನಾಟಕಗಳ ಪ್ರಭಾವ ನಮ್ಮ ಆಧುನಿಕ ನಾಟಕಕಾರರ ಮೇಲೂ ಆಯಿತು. <br /> <br /> ಆದರೆ, ಅವರು ಸಾಂಪ್ರದಾಯಿಕ ನಾಟಕಗಳ ಜಾಡನ್ನು ಪೂರ್ತಿ ಬಿಟ್ಟುಕೊಡಲಿಲ್ಲ. ಆದರೆ ಪರಿಶುದ್ಧ ಪ್ರಯೋಗಶೀಲ ರಂಗನಿರ್ದೇಶಕ ವಿಲ್ಸನ್ರ ರಂಗತಂತ್ರಗಳು ನಾಟಕದ ಮೂಲ ಅಂಶಗಳಾದ ಕಥನ, ಪಾತ್ರ, ಸಂಘರ್ಷ ಈ ಎಲ್ಲಕ್ಕೂ ಎಳ್ಳುನೀರು ಬಿಟ್ಟಿವೆ. <br /> <br /> ಆಧುನಿಕ ಅಮೂರ್ತಕಲೆ ಸ್ಥಳೈಕ್ಯದ ನಿಯಮವನ್ನು, ಆಧುನಿಕ ಕಾದಂಬರಿ ಕಥನದ ಚೌಕಟ್ಟನ್ನು, ಆಧುನಿಕ ವಾಸ್ತು ಕೇಂದ್ರೀಯತೆಯನ್ನು, ಆಧುನಿಕ ಸಂಗೀತ ಸಂಯೋಜನೆಯನ್ನು, ಆಧುನಿಕ ಕಾವ್ಯ ಛಂದಸ್ಸನ್ನು ಬಿಟ್ಟು ಕೊಟ್ಟ ಹಾಗೆ.<br /> <br /> ವಿಲ್ಸನ್ನರ ಈ ಪ್ರಯೋಗದಲ್ಲಿ ಕತೆಯಿಲ್ಲ. ಪಾತ್ರಗಳಿಲ್ಲ. ಬದಲಿಗೆ ಪ್ರತಿಮೆಗಳಿವೆ, ಶಬ್ದಗಳಿವೆ, ಚಲನೆಗಳಿವೆ, ಆಕೃತಿಗಳಿವೆ, ಲಯಗಳಿವೆ, ದೇಶಗಳಿವೆ. ಸ್ಥಿರ ವ್ಯಕ್ತಿತ್ವದ ಕಲ್ಪನೆಗೆ ಹೊರತಾಗಿ ಗಂಡಸರು ಹೆಣ್ಣುಪಾತ್ರಗಳನ್ನೂ ಹೆಂಗಸರು ಗಂಡುಪಾತ್ರಗಳನ್ನೂ ವಹಿಸುತ್ತಾ ಹೋಗುತ್ತಾರೆ. <br /> <br /> ಆಧುನಿಕ ವಿವರಗಳು ಪ್ರಾಚೀನ ವಿವರಗಳೊಂದಿಗೆ ಕಲೆಸಿ ಹೋಗುತ್ತವೆ. ಈ ನಡುವೆ ಸಾನೆಟ್ಟುಗಳನ್ನಾಧರಿಸಿದ ದೃಶ್ಯಾವಳಿಗಳ ನಡು ನಡುವೆ ಬೊಂಬೆ ಬಿಲ್ಲು ಬಾಣ ಹಿಡಿದ ಕಾಮದೇವ ಕ್ಯುಪಿಡ್ ಮತ್ತೆ ಮತ್ತೆ ಬಂದು ಹೋಗುತ್ತಿರುತ್ತಾನೆ. <br /> <br /> ಸಾನೆಟ್ಟುಗಳನ್ನು ದೃಶ್ಯ ಮಾಧ್ಯಮಕ್ಕೆ ಅಳವಡಿಸುವ ಸರಳ ತಂತ್ರವೂ ಇಲ್ಲಿಲ್ಲ. ಬದಲಿಗೆ ಹಲವಾರು ರಂಗಾಭಿವ್ಯಕ್ತಿ ಸಾಧ್ಯತೆಗಳ ನಡುವೆ, ಪರಿಕರಗಳ ನಡುವೆ ಸಾನೆಟ್ಟುಗಳ ಪಠಣ, ನರ್ತನ, ಗಾಯನ - ಎಲ್ಲಾ ಬಂದು ಹೋಗುತ್ತವೆ. ಈ ಎಲ್ಲ ರಂಗಕ್ರಿಯೆಗಳ ಮೂಲಕ ಹಲವು ಕಲೆಗಳ ಸೇರುದಾಣವಾದ ರಂಗಭೂಮಿ ಒಂದು ಭಿನ್ನವಾದ ಸಂರಚನೆಯನ್ನು ಪಡೆದುಕೊಳ್ಳುತ್ತದೆ. <br /> <br /> ಈ ರೀತಿಯ ಅಮೂರ್ತ ರಂಗಕಲೆ ಜನಸಾಮಾನ್ಯರನ್ನೂ ಆಳವಾಗಿ ಮುಟ್ಟಬಲ್ಲದು ಎಂಬುದಕ್ಕೆ ಆ ಸಂಜೆಯ ಪ್ರೇಕ್ಷಕ ಗೃಹದ ಎಡೆಬಿಡದ ಕರತಾಡನ ದ್ಯೋತಕವಾಗಿತ್ತು. ಈ ಕೃತಿ ವಿಲ್ಸನ್ನರ ಹಿಂದಿನ ಪ್ರಯೋಗಗಳ ಹಾಗೆ ವಿದ್ವಜ್ಜನ ಮನ್ನಣೆ ಪಡೆಯುವುದರ ಬಗ್ಗೆಯೂ ಅನುಮಾನವಿಲ್ಲ.<br /> <br /> ಆದರೆ ಸರ್ಕಾರ, ರಂಗಶಾಲೆಗಳು, ಅನುದಾನಗಳು, ಸಂಸ್ಥೆಗಳು-ಇವೆಲ್ಲವುಗಳ ಹೊರಗೆ ನಿಂತು ಕಲ್ಸ್ರೂಹೆ ಎಂಬ ಸಣ್ಣ ನಗರದಲ್ಲಿ ಸಣ್ಣ ಪ್ರಮಾಣದಲ್ಲಿ ಅತ್ಯಂತ ಅರ್ಥಪೂರ್ಣ ರಂಗಪ್ರಯೋಗ ಮಾಡುತ್ತಿರುವ ನನ್ನ ಆತ್ಮೀಯ ಗೆಳೆಯ ಥೋರ್ಸ್ಟನ್ ಕ್ರೇಲೋಸ್ಗೆ ಈ ರೀತಿಯ ರಂಗಭೂಮಿಯ ಬಗ್ಗೆ ಎಷ್ಟು ಗೌರವವಿದೆಯೋ ಅಷ್ಟೇ ಅನುಮಾನಗಳಿವೆ. <br /> <br /> ಕಾಫ್ಕಾನ ಪತ್ರಗಳ ಮತ್ತು ದಿನಚರಿಗಳ ಆಧಾರದ ಮೇಲೆ ಅತ್ಯಂತ ಜನಪ್ರಿಯವಾಗುತ್ತಿರುವ, ಈಗಾಗಲೇ ನೂರಕ್ಕೂ ಹೆಚ್ಚು ಪ್ರದರ್ಶನ ಕಂಡಿರುವ ನಾಟಕದ ನಿರ್ದೇಶಕನಾದ ಆತ ಹೀಗೆನ್ನುತ್ತಾನೆ:<br /> <br /> `ವಿಲ್ಸನ್ ಮಹಾನ್ ಗಟ್ಟಿಗನೆಂಬುದರ ಬಗ್ಗೆ ಎರಡು ಮಾತಿಲ್ಲ. ಆತ ನಮ್ಮೆಲ್ಲರಿಗೆ ದೊಡ್ಡ ಸವಾಲು. ಆದರೆ ಆ ರೀತಿಯ ಶ್ರೀಮಂತ ರಂಗಭೂಮಿಗೆ ಬರ್ಲಿನ್ನಂಥ ಮಹಾನಗರ ಬೇಕು, ಆನ್ಶ್ಯಾಂಬಲ್ನಂಥ ವ್ಯವಸ್ಥಿತ ಜಾಗ ಬೇಕು, ಅದನ್ನು ನಡೆಸುವುದಕ್ಕೆ ಸರ್ಕಾರದ ಅಥವಾ ದುಡ್ಡಿನ ದೊಡ್ಡಪ್ಪಗಳ ಲಕ್ಷಾಂತರ ಯೂರೋಗಳ ಅನುದಾನ ಬೇಕು.<br /> <br /> ತರಬೇತಿ ಪಡೆದ ರಂಗಕರ್ಮಿಗಳ, ಮ್ಯಾನೇಜರುಗಳ, ಇತರ ಸಿಬ್ಬಂದಿ ವರ್ಗದ ಜಟಿಲ ವ್ಯವಸ್ಥೆ ಬೇಕು. ಇಷ್ಟೆಲ್ಲ ಆದ ಮೇಲೆ ರಂಗಭೂಮಿ ನಿಮ್ಮ ಬಾಲಿವುಡ್ ಸಿನಿಮಾದ ಹಾಗೆ ತನ್ನ ಕಲಾಸ್ವರೂಪವನ್ನು ತ್ಯಜಿಸಿ ಒಂದು ಬೃಹತ್ ಉದ್ಯಮದ ಸ್ವರೂಪವನ್ನು ಪಡೆಯುತ್ತದೆ. <br /> <br /> ಆದರೆ ರಂಗಭೂಮಿಯ ಶಕ್ತಿಯಿರುವುದು ಅದರ ಸರಳತೆ ಮತ್ತು ಸ್ವಾತಂತ್ರ್ಯಗಳಲ್ಲಿ. ಆ ಬೃಹತ್ ಉದ್ದಿಮೆಯ ಬೆಳವಣಿಗೆಯನ್ನು ಯಾರೂ ತಡೆಯಲಾಗುವುದಿಲ್ಲ. <br /> <br /> ಆದರೆ ಜನರ ನಡುವೆ ಹೋಗಿ ನಮ್ಮ ಸ್ವಾತಂತ್ರ್ಯವನ್ನು ಬಿಟ್ಟುಕೊಡದೆ ನಾಟಕವಾಡಿಸಬೇಕೆಂದುಕೊಂಡಿರುವ ನಮ್ಮಂಥ ಕಿರಿಯರು, ಸರ್ಕಾರ, ಅನುದಾನಗಳಿಂದ ದೂರ ಉಳಿದು ಹಾಸಿಗೆಯಿದ್ದಷ್ಟು ಕಾಲುಚಾಚುವ ನಮ್ಮಂಥ ಫಕೀರರು ಕ್ರಮಿಸಬೇಕಾದ ಹಾದಿ ಖಂಡಿತಾ ಅದಲ್ಲ.~<br /> <br /> ಈ ಬಗ್ಗೆ ನಾನೂ ಆಲೋಚಿಸುತ್ತಿದ್ದೇನೆ. ಕನ್ನಡಮ್ಮನ ಮಕ್ಕಳಾದ ನನ್ನ ಸರೀಕ ರಂಗಕರ್ಮಿಗಳೂ ಆಲೋಚಿಸುತ್ತಾರೆಂದು ಹಾರೈಸುತ್ತೇನೆ.</p>.<p><strong> (ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in)</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>