ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ದಾರ್ ಪಟೇಲರಿಗೆ ಸಲ್ಲಬೇಕು ಅರ್ಹ ಗೌರವ

Last Updated 14 ನವೆಂಬರ್ 2017, 19:30 IST
ಅಕ್ಷರ ಗಾತ್ರ

1947ರ ಆಗಸ್ಟ್‌ 15ರಂದು ಸ್ವಾತಂತ್ರ್ಯ ಪಡೆದಾಗ ಭಾರತ ಎದುರಿಸುತ್ತಿದ್ದ ಅತಿದೊಡ್ಡ ಸಮಸ್ಯೆ ತನ್ನ ಭೌಗೋಳಿಕ ವ್ಯಾಪ್ತಿಯಲ್ಲೇ ಇದ್ದ 554 ಸಂಸ್ಥಾನಗಳದ್ದಾಗಿತ್ತು. ಹೀಗೆ ಇದ್ದ ಸಂಸ್ಥಾನ ಗಳಲ್ಲಿ ಕೆಲವು ದೊಡ್ಡವು, ಇನ್ನು ಕೆಲವು ಚಿಕ್ಕವು. ಭಾರತದ ಎಲ್ಲೆಡೆಯೂ ಹರಡಿಕೊಂಡಿದ್ದ ಈ ಸಂಸ್ಥಾನಗಳ ಒಟ್ಟು ವ್ಯಾಪ್ತಿ ದೇಶದ ಒಟ್ಟು ವಿಸ್ತೀರ್ಣದ ಐದನೆಯ ಎರಡು ಭಾಗಗಳಷ್ಟು ಇತ್ತು. ಬ್ರಿಟಿಷ್ ಸರ್ಕಾರದ ತೀರ್ಮಾನದ ಅನ್ವಯ ಇವು ತಾವು ಸ್ವತಂತ್ರ ಸಂಸ್ಥಾನಗಳು ಎಂದು ಘೋಷಿಸಿಕೊಳ್ಳಬಹುದಿತ್ತು, ಭಾರತದಲ್ಲಿ ವಿಲೀನ ಆಗಬಹುದಿತ್ತು ಅಥವಾ ಪಾಕಿಸ್ತಾನದ ಜೊತೆ ಸೇರಿಕೊಳ್ಳಬಹುದಿತ್ತು. ಭಾರತದ ಒಕ್ಕೂಟ ವ್ಯವಸ್ಥೆಯೊಳಗೆ ಈ ಸಂಸ್ಥಾನಗಳನ್ನು ವಿಲೀನ ಮಾಡಿಕೊಳ್ಳುವುದು, ದೇಶ ಸ್ವಾತಂತ್ರ್ಯ ಪಡೆದ ದಿನ ಇದ್ದ ಅತಿದೊಡ್ಡ ರಾಜಕೀಯ ಹಾಗೂ ಆಡಳಿತಾತ್ಮಕ ಸಮಸ್ಯೆಯಾಗಿತ್ತು. ಈ ಸವಾಲಿಗೆ ಎದೆಯೊಡ್ಡಿದವರು ಉಪಪ್ರಧಾನಿ ಸರ್ದಾರ್‌ ವಲ್ಲಭಭಾಯ್ ಪಟೇಲರು.

ಈ ಎಲ್ಲ ಸಂಸ್ಥಾನಗಳನ್ನು ಒಗ್ಗೂಡಿಸಲು ಸಾಧ್ಯವಾಗಿದ್ದಕ್ಕೆ ಕಾರಣ ಪಟೇಲರ ದೃಢ ನಿಶ್ಚಯ, ಎದೆಗಾರಿಕೆ ಹಾಗೂ ಮುತ್ಸದ್ದಿತನ. ಸರ್ದಾರ್‌ ಪಟೇಲರು ಇಲ್ಲದಿದ್ದಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ ಎಂಬುದೂ ನಿಜ. ಕೇಂದ್ರ ಸೇವೆಗಳು ಸೇರಿದಂತೆ ಹಲವು ಮೂಲಭೂತ ಉಪಕ್ರಮಗಳನ್ನು ಕೈಗೊಂಡಿದ್ದಕ್ಕಾಗಿಯೂ ದೇಶ ಅವರಿಗೆ ಋಣಿಯಾಗಿರುತ್ತದೆ. ಹೀಗಿದ್ದರೂ ನೆಹರೂ–ಗಾಂಧಿಗಳ ಸಣ್ಣತನ ಹಾಗೂ ಅವರಲ್ಲಿನ ಅಭದ್ರತೆಯ ಭಾವದ ಕಾರಣದಿಂದಾಗಿ ದೇಶದ ಪ್ರಜ್ಞೆಯಲ್ಲಿ ಸರ್ದಾರ್ ಅವರಿಗೆ ಸರಿಯಾದ ಸ್ಥಾನ ಸಿಕ್ಕಿಲ್ಲ. ಈ ಕಾರಣದಿಂದಾಗಿ, ಸರ್ದಾರ್ ಪಟೇಲರ ಜನ್ಮ
ದಿನವಾದ ಅಕ್ಟೋಬರ್‌ 31ನ್ನು ಪ್ರತಿವರ್ಷ ಸೂಕ್ತ ರೀತಿಯಲ್ಲಿ ಆಚರಿಸಲು ನರೇಂದ್ರ ಮೋದಿ ನೇತೃತ್ವದ ಸರ್ಕಾರ ನಡೆಸುತ್ತಿರುವ ಪ್ರಯತ್ನ
ಗಳು ಮೆಚ್ಚುಗೆಗೆ ಅರ್ಹವಾಗುತ್ತವೆ.

ದೇಶವನ್ನು ಒಗ್ಗೂಡಿಸುವ ಕೆಲಸ ಸಂಕೀರ್ಣವಾಗಿತ್ತು, ಅದರಲ್ಲಿ ಸಾಕಷ್ಟು ನೋವು ಕೂಡ ಇತ್ತು. ತನ್ನ ರಾಜ್ಯ ಪಾಕಿಸ್ತಾನದ ಜೊತೆ ವಿಲೀನ ಆಗಲಿದೆ ಎಂದು ಹೈದರಾಬಾದಿನ ನಿಜಾಮ ಘೋಷಿಸಿದ್ದ. ‘ಜೀರ್ಣವಾಗದ ವಸ್ತುವೊಂದು ದೇಶದ ಹೊಟ್ಟೆಯೊಳಗೆ ಇರಲು ಬಿಡಲಾರೆ’ ಎಂದು ಪಟೇಲರು ಹೇಳಿದ್ದರು ಎಂಬ ವರದಿಗಳಿವೆ. ಹೈದರಾಬಾದಿನ ಆಡಳಿತದ ಮೇಲೆ ನಿಯಂತ್ರಣ ಸಾಧಿಸಲು ಹಾಗೂ ಆ ರಾಜ್ಯವನ್ನು ದೇಶದ ಒಕ್ಕೂಟ ವ್ಯವಸ್ಥೆಯ ತೆಕ್ಕೆಗೆ ತೆಗೆದು
ಕೊಳ್ಳಲು ಪಟೇಲರು ಸೇನೆಯನ್ನು ಕಳುಹಿಸಿದರು. ಪಟೇಲರ ದೂರದರ್ಶಿತ್ವ ಇಲ್ಲದಿದ್ದಿದ್ದರೆ, ಪಾಕಿಸ್ತಾನದ ಭಾಗವೊಂದು ದಕ್ಷಿಣ ಭಾರತದಲ್ಲಿ ಇರುತ್ತಿತ್ತು – ಪಾಕಿಸ್ತಾನದ ಜೊತೆಯಲ್ಲೇ ಬರುವ ಸಮಸ್ಯೆಗಳನ್ನೂ ತಂದಿರುತ್ತಿತ್ತು.

ಜುನಾಗಡ ಇನ್ನೊಂದು ಸವಾಲಾಗಿತ್ತು. ಈ ರಾಜ್ಯದ ಸುತ್ತಲಿನ ರಾಜ್ಯಗಳು ಭಾರತದ ಜೊತೆ ವಿಲೀನಕ್ಕೆ ಒಪ್ಪಿದ್ದವು. ಆದರೆ ಜುನಾಗಡದ ರಾಜ ಪಾಕಿಸ್ತಾನದ ಜೊತೆ ವಿಲೀನಕ್ಕೆ ಸಹಿ ಮಾಡಿದ್ದ. ಸರ್ದಾರ್ ಪಟೇಲರು ಇರದಿದ್ದರೆ, ಇಂದಿನ ಗುಜರಾತ್‌ನಲ್ಲಿ ನಾವು ಪಾಕಿಸ್ತಾನದ ಒಂದು ತುಂಡನ್ನು ಕಾಣಬೇಕಿತ್ತು. ಭೋಪಾಲ್‌ನ ನವಾಬ ಹಾಗೂ ಇಂದೋರ್‌ನ ಮಹಾರಾಜ ಭಾರತದ ಜೊತೆ ವಿಲೀನಕ್ಕೆ ವಿರೋಧ ವ್ಯಕ್ತಪಡಿಸಿದರು. ಭೋಪಾಲವು ಸ್ವತಂತ್ರವಾಗಿ ಇರಬೇಕು, ಎರಡೂ ರಾಷ್ಟ್ರಗಳ ಜೊತೆ ಸ್ನೇಹ ಸಂಬಂಧ ಇಟ್ಟುಕೊಳ್ಳಬೇಕು ಎಂಬುದು ನವಾಬನ ಬಯಕೆ ಆಗಿತ್ತು. ಇಬ್ಬರನ್ನೂ ಒಪ್ಪಿಸಬೇಕಿತ್ತು. ಜೋಧ್‌ಪುರದ ಮಹಾರಾಜನಿಗೆ ತನ್ನದೇ ಆದ ಬೇಡಿಕೆಗಳು ಇದ್ದವು. ‘ಮಹಾರಾಜ ಪಾಕಿಸ್ತಾನದ ಜೊತೆ ಸೇರಿ
ಕೊಳ್ಳಲು ಸಿದ್ಧನಾಗಿದ್ದ. ಏಕೆಂದರೆ, ಸಹಿ ಹಾಕಿದ ಖಾಲಿ ಹಾಳೆಯೊಂದನ್ನು ಇರಿಸಿದ್ದ ಜಿನ್ನಾ, ಅದರಲ್ಲಿ ಷರತ್ತುಗಳನ್ನೆಲ್ಲ ಬರೆಯುವಂತೆ ಹೇಳಿ
ದ್ದರು’ ಎಂದು ಸ್ವಾತಂತ್ರ್ಯ ದೊರೆತ ಸಂದರ್ಭದಲ್ಲಿ ನಡೆದ ವಿದ್ಯಮಾನಗಳ ಕುರಿತು ಅತ್ಯಂತ ಖಚಿತವಾಗಿ ಬರೆದಿರುವ ವಿ.ಪಿ. ಮೆನನ್ ಹೇಳಿ
ದ್ದಾರೆ. ನಂತರದ ದಿನಗಳಲ್ಲಿ, ಪಾಕಿಸ್ತಾನದ ಜೊತೆ ಸೇರಿಕೊಳ್ಳದಂತೆ ಮಹಾರಾಜನನ್ನು ಜಾಣ
ತನದಿಂದ ಒಪ್ಪಿಸಲಾಯಿತು.

ದೇಶದ ಏಕೀಕರಣದ ಯಶಸ್ಸಿಗೆ ‘ಸರ್ದಾರ್‌ ಪಟೇಲರು ಅಂದಿನ ರಾಜರನ್ನು ಜಾಣತನದಿಂದ ನಿಭಾಯಿಸಿದ್ದು ಕಾರಣ’ ಎಂದು ಮೆನನ್‌ ಹೇಳು
ತ್ತಾರೆ. ಪಟೇಲರು ‘ದೇಶದ ಉಕ್ಕಿನ ಮನುಷ್ಯ’ ಎಂದು ಕರೆಸಿಕೊಂಡಿದ್ದರೂ ಅತ್ಯಂತ ವಿಶ್ವಾಸಾರ್ಹವಾದ ಅವರ ವಿನಮ್ರ ಮನೋ
ಭಾವವು ರಾಜ್ಯಗಳ ಆಡಳಿತಗಾರರ ಪ್ರೀತಿಗೆ ಕಾರಣವಾಯಿತು. ಅವರು ಪಟೇಲರ ಸಲಹೆಯನ್ನು ಕಿರಿಕಿರಿ ಮಾಡದೆಯೇ ಒಪ್ಪಿಕೊಂಡರು. ದೇಶದ ರಾಜ್ಯಗಳನ್ನು ಒಗ್ಗೂಡಿಸಿದ್ದು ‘ಭಾರತದ ಭೌಗೋಳಿಕ, ರಾಜಕೀಯ ಹಾಗೂ ಆರ್ಥಿಕ ಏಕೀಕರಣದ ಪೂರ್ಣತ್ವ, ಈ ಆಸೆಯು ಶತಮಾನ
ಗಳ ಕಾಲದಿಂದಲೂ ದೂರದ ಕನಸಾಗಿ ಉಳಿದಿತ್ತು, ದೇಶ ಸ್ವಾತಂತ್ರ್ಯ ಪಡೆದ ನಂತರವೂ ಇದನ್ನು ಸಾಧಿಸುವುದು ಎಂದಿನಂತೆಯೇ ಕಷ್ಟ ಎಂದು ಭಾವಿಸಲಾಗಿತ್ತು’ ಎಂದು ಪಟೇಲರು ಸಂವಿಧಾನದ ಕರಡು ರಚನಾ ಸಭೆಯಲ್ಲಿ ಬಣ್ಣಿಸಿದ್ದಾರೆ. ಪ್ರತಿ ಮಹಾರಾಜ ಹಾಗೂ ನವಾಬನ ಮಾತುಗಳನ್ನು ಕೇಳುತ್ತ ಕುಳಿತರೆ, ಭಾರತವು ಚೂರು ಚೂರಾಗುತ್ತದೆ, ಭಾರತದ ಹೃದಯ ಹಾಗೂ ಉದರ ಭಾಗಗಳಲ್ಲಿ ಪಾಕಿಸ್ತಾನಕ್ಕೆ ನಿಷ್ಠೆ ತೋರಿಸುವ ಹಲವು ಸ್ವತಂತ್ರ ರಾಷ್ಟ್ರ ಮತ್ತು ರಾಜ್ಯಗಳು ಇರುವಂತಾಗುತ್ತದೆ ಎಂಬುದನ್ನು ಪಟೇಲರು ಅರಿತಿದ್ದರು. ಅಂತಹ ರಾಷ್ಟ್ರಗಳು ಇದ್ದಿದ್ದರೆ ದೇಶದ ಏಕತೆ ಹಾಗೂ ಸಮಗ್ರತೆ
ಯನ್ನು ಅಪಾಯಕ್ಕೆ ಒಡ್ಡುವಂತಹ, ದೇಶದ ಆಂತರಿಕ ಭದ್ರತೆಗೆ ಅಪಾಯ ತರುವಂತಹ ರೋಗಗಳನ್ನು ದೇಶ ಹುಟ್ಟಿದ ದಿನದಿಂದಲೇ ಬೆಳೆಸಿ
ದಂತೆ ಆಗುತ್ತಿತ್ತು.

ಭಾರತದ ರಾಜ್ಯಗಳನ್ನು ಒಗ್ಗೂಡಿಸಿದ್ದು ವಿಶ್ವದ ಯಾವುದೇ ನಾಯಕನ ಅತ್ಯಂತ ವಿಶಿಷ್ಟ ಸಾಧನೆಗಳಿಗೆ ಸರಿಸಮವಾದದ್ದು. ದುರದೃಷ್ಟದ ಸಂಗತಿಯೆಂದರೆ ಭಾರತದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ಅವರು ಪಟೇಲರ ಕೊಡುಗೆಗಳನ್ನು ಗುರುತಿಸಲು ವಿಫಲರಾದರು. ಪ‍ಟೇಲರ ಮರಣವನ್ನು ತಾತ್ಕಾಲಿಕ ಸಂಸತ್ತಿನಲ್ಲಿ 1950ರ ಅಕ್ಟೋಬರ್ 15ರಂದು ಘೋಷಿಸಿದ ನೆಹರೂ, ‘ಪಟೇಲರು ನವ ಭಾರತದ ನಿರ್ಮಾತೃ ಹಾಗೂ ಭಾರತವನ್ನು ಒಗ್ಗೂಡಿಸಿದ ವ್ಯಕ್ತಿ’ ಎಂದು ಶ್ಲಾಘಿಸಿದರು. ಆದರೆ ಇವು ಪೊಳ್ಳು ಮಾತುಗಳಾಗಿದ್ದವು. ಏಕೆಂದರೆ ನೆಹರೂ ಅವರ ಕೃತಿಗಳು ಈ ಮಾತುಗಳಿಗೆ ತಕ್ಕಂತೆ ಇರಲಿಲ್ಲ. ‘ದೇಶದ ಕೆಲಸಗಳು ಎಂದಿಗೂ ಸ್ಥಗಿತಗೊಳ್ಳುವುದಿಲ್ಲ, ಸ್ಥಗಿತಗೊಳ್ಳಬಾರದು’ ಎಂದು ತಪ್ಪು ಅರ್ಥ ನೀಡುವ ಮನವಿಯ ಮೂಲಕ ನೆಹರೂ ಅವರು ಪಟೇಲರ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳದಂತೆ ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ಹಾಗೂ ಅಧಿಕಾರಿಗಳಿಗೆ ಸಲಹೆ ನೀಡಿದರು. ಪಟೇಲರು ಮೃತಪಟ್ಟ ದಿನ ನೆಹರೂ ಅವರು, ಪಟೇಲರ ಕಾರನ್ನು ವಿದೇಶಾಂಗ ಸಚಿವಾಲಯಕ್ಕೆ ತಕ್ಷಣ ಹಿಂದಿರುಗಿಸಬೇಕು, ಮುಂಬೈನಲ್ಲಿ (ಅಂದಿನ ಬಾಂಬೆ) ನಡೆಯುವ ಅವರ ಅಂತ್ಯಸಂಸ್ಕಾರದಲ್ಲಿ ಯಾವುದೇ ಅಧಿಕಾರಿ ಸರ್ಕಾರಿ ಖರ್ಚಿನಲ್ಲಿ ಹೋಗಬಾರದು ಎಂಬ ಸೂಚನೆ ನೀಡಿದ್ದರು ಎನ್ನುವ ಮಾತುಗಳಿವೆ.

ಸಾಧನೆ ತೋರಿದವರಿಗೆ ರಾಷ್ಟ್ರದ ವತಿಯಿಂದ ಗೌರವ ಸಲ್ಲಿಸುವ ಪದ್ಧತಿ 1954ರಲ್ಲಿ ಆರಂಭವಾದರೂ, ನೆಹರೂ ಅವರು ಭಾರತರತ್ನ ಪುರಸ್ಕಾರಕ್ಕೆ ಪಟೇಲರ ಹೆಸರು ಸೂಚಿಸಲಿಲ್ಲ. ಆದರೆ ಆಘಾತದ ಸಂಗತಿಯೆಂದರೆ ನೆಹರೂ ಅವರು 1955ರಲ್ಲಿ ಭಾರತರತ್ನ ಪುರಸ್ಕಾರವನ್ನು ತಮಗೆ ತಾವೇ ಕೊಟ್ಟುಕೊಂಡರು! 1991ರಲ್ಲಿ ನೆಹರೂ–ಗಾಂಧಿಗಳು ಅಧಿಕಾರದಲ್ಲಿ ಇಲ್ಲದಿದ್ದ ಸಂದರ್ಭದಲ್ಲಿ ದೇಶ ಪಟೇಲರಿಗೆ ಭಾರತರತ್ನದ ಗೌರವ ಸಮರ್ಪಿಸಿತು.

ಸರ್ದಾರ್ ಪಟೇಲರ ಸಾಧನೆಗಳನ್ನು ಮರೆಯಲ್ಲೇ ಇರಿಸಲು ದೇಶದಲ್ಲಿ ನಿರಂತರ ಯತ್ನವೊಂದು ನಡೆದಿದೆ. ಪಟೇಲರ ಸಾಧನೆಗಳಲ್ಲಿ ಅತಿ
ದೊಡ್ಡದು ದೇಶದ ಏಕೀಕರಣ. ನೆಹರೂ–ಗಾಂಧಿಗಳ ಆಸ್ಥಾನಿಕರಾದ ಇತಿಹಾಸಕಾರರು ಹಾಗೂ ಅಕಾಡೆಮಿಕ್ ವ್ಯಕ್ತಿಗಳು ನಡೆಸಿದ ಕಿಡಿಗೇಡಿತನ
ವನ್ನು ತಕ್ಷಣ ಸರಿಪಡಿಸಬೇಕಿದೆ. ಏಕೀಕೃತ ಭಾರತವನ್ನು ನಿರ್ಮಿಸಲು ಪಟೇಲರು ನಡೆಸಿದ ಅಸಾಮಾನ್ಯ ಕೆಲಸದ ಬಗ್ಗೆ ವಿಸ್ತೃತವಾದ ಅಧ್ಯಾಯವೊಂದರ ಮೂಲಕ ಶಾಲೆಗಳಲ್ಲಿ ಕಲಿಸಬೇಕು. ಪಟೇಲರಿಗೆ ತಕ್ಕುದಾದ ಸಂಸ್ಥೆಯೊಂದನ್ನು ರಾಜಪಥದಲ್ಲಿ ಹುಟ್ಟುಹಾಕಬೇಕು. 555 ತುಂಡುಗಳಾಗಿದ್ದ (554 ಸಂಸ್ಥಾನಗಳು ಹಾಗೂ ಬ್ರಿಟಿಷ್ ಆಡಳಿತದಲ್ಲಿದ್ದ ಒಂದು ಭಾಗ) ಭಾರತವನ್ನು ಒಗ್ಗೂಡಿಸಿದ ವ್ಯಕ್ತಿಯನ್ನು ದೇಶದ ಜನ ಆ ಮೂಲಕ ನೆನಪಿಸಿಕೊಳ್ಳುವಂತಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT