ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುರಣನ | ಒಲಿಯದ ನೆಲದಲ್ಲಿ ಬೆಳೆಯಲಾಗದ ಕತೆ

ಬಿಜೆಪಿ ಸಿದ್ಧಾಂತಕ್ಕೆ ಇಲ್ಲಿ ಪಕ್ಷ ಕಟ್ಟಿದವರೇ ಪೂರ್ಣ ಬದ್ಧರಾಗಿರಲಿಲ್ಲ; ಬದ್ಧರಾಗಿದ್ದವರು ನಾಯಕರಾಗಲಿಲ್ಲ
Last Updated 20 ಏಪ್ರಿಲ್ 2023, 23:30 IST
ಅಕ್ಷರ ಗಾತ್ರ

ಮಾಮೂಲು ಎನ್ನಬಹುದಾದ ಚುನಾವಣಾ ಕಾಲದ ಪಕ್ಷಾಂತರ ಪ್ರಕರಣಗಳಲ್ಲೂ ಬಹುವಿಧಗಳಿವೆ. ಬೇರೆ ಪಕ್ಷಗಳನ್ನು ಬಿಟ್ಟು ಯಾರಾದರೂ ಬಿಜೆಪಿ ಸೇರಿದರೆ ಅದು ಹೆಚ್ಚು ಸುದ್ದಿಯಾಗುವುದಿಲ್ಲ. ಆದರೆ ಬಿಜೆಪಿಯಲ್ಲಿ ಬಹುಕಾಲದಿಂದ ಇದ್ದವರು ಒಮ್ಮಿಂದೊಮ್ಮೆಗೇ ಬೇರೆ ಪಕ್ಷವೊಂದನ್ನು ಸೇರಿದರೆ, ಅದರಲ್ಲೂ ಕಾಂಗ್ರೆಸ್ ಸೇರಿಕೊಂಡರೆ ಅದು ದೊಡ್ಡ ಮಟ್ಟದಲ್ಲಿ ಸುದ್ದಿ ಆಗುತ್ತದೆ. ಇನ್ನು ಆರ್‌ಎಸ್ಎಸ್‌ನ ಸಂಸ್ಕಾರ ಪಡೆದು ಬಿಜೆಪಿಯಲ್ಲಿ ಬೆಳೆದವರು ಕಾಂಗ್ರೆಸ್ ಸೇರಿದರಂತೂ ಅದೂ ಇನ್ನೂ ವಿಶೇಷ ಸುದ್ದಿ. ಅದಕ್ಕೆ ಕಾರಣವಿದೆ.

ಸ್ವಾತಂತ್ರ್ಯಪೂರ್ವದಲ್ಲಿ ಯುವಕರನ್ನು ತಮ್ಮ ಕಲ್ಪನೆಯ ಹಿಂದೂರಾಷ್ಟ್ರದ ಸಾಕ್ಷಾತ್ಕಾರಕ್ಕಾಗಿ ತೊಡಗಿಸಲೆಂದೇ ಈ ಆರ್‌ಎಸ್‌ಎಸ್‌ ಮತ್ತು ಅದರ ಸಹವರ್ತಿ ರಾಜಕೀಯ ಸಂಘಟನೆಗಳು ಹುಟ್ಟಿಕೊಂಡಿರುವುದು. ಕಾಂಗ್ರೆಸ್ಸಿನ ಕಲ್ಪನೆಯ ರಾಷ್ಟ್ರ ಮತ್ತು ಬಿಜೆಪಿಯ ಕಲ್ಪನೆಯ ರಾಷ್ಟ್ರಗಳು ಮೂಲದಲ್ಲಿ ಬೇರೆಬೇರೆಯೇ ಆಗಿವೆ. ಹಾಗಾಗಿಯೇ ಸಂಘದ ಅಂಗಳದಲ್ಲಿ ನಿಂತು ಅಂಗೈಯನ್ನು ಊರ್ಧ್ವಮುಖವಾಗಿ ಎದೆಮಟ್ಟ ಹಿಡಿದು ‘ಪ್ರಭೋ ಶಕ್ತಿಮಾನ್ ಹಿಂದೂ ರಾಷ್ಟ್ರಾಂಗ ಭೂತ’ ಎಂದು ಪಠಿಸಿದ ಯಾರೂ ಕಾಂಗ್ರೆಸ್ ಸೇರುವುದು ಬಿಡಿ, ಅವರವರ ಊರಿನ ಕಾಂಗ್ರೆಸ್ ಕಚೇರಿಯ ಕಡೆ ತಲೆ ಹಾಕಿ ಮಲಗುವುದೂ ನಿಷಿದ್ಧ ಎಂಬ ಪರಿಸ್ಥಿತಿ ಇರುವುದು.

ಸಂಘದ ಸಹಜ ವಾಸನೆಯುಳ್ಳವರು ಮತ್ತು ಮೂಲ ಬಿಜೆಪಿಗರು ಮಾತ್ರವಲ್ಲ, ಆ ಪಕ್ಷದ ಕಡೆಗೆ ಒಮ್ಮೆ ಹೋಗಿ, ಅದರ ಸಿದ್ಧಾಂತಕ್ಕೆ ಯಥಾಶಕ್ತಿ-ಯಥಾಭಕ್ತಿ ತಮ್ಮ ಮಿದುಳನ್ನು ಸಮರ್ಪಿಸಿದವರು ಕೂಡಾ ಯಾವತ್ತಿಗೂ ಮತ್ತೆ ಕಾಂಗ್ರೆಸ್ಸಿಗೆ ಮರಳಿದ ಪ್ರಕರಣಗಳು ವಿರಳಾತಿವಿರಳ. ಆದರೆ, ಕರ್ನಾಟಕದಲ್ಲಿ ಈ ಬಾರಿಯ ಚುನಾವಣಾ ಕಣ ನೋಡುತ್ತಿದ್ದರೆ ಚರಿತ್ರೆ ಗತಿ ಬದಲಿಸುತ್ತಿರುವಂತಿದೆ.

ಹಾಗೆಂದು ಈತನಕ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದವರು ಇಲ್ಲವೇ ಇಲ್ಲ ಎಂದೇನಲ್ಲ. ಎ.ಕೆ.ಸುಬ್ಬಯ್ಯ ಅವರ ಒಂದು ಪ್ರಕರಣ, ಧನಂಜಯ ಕುಮಾರ್ ಅವರ ಇನ್ನೊಂದು ಪ್ರಕರಣ, ಹಾಗೆಯೇ ಮೈಸೂರು ಮತ್ತು ಶಿವಮೊಗ್ಗದ ಮಾಜಿ ಎಂಪಿಗಳಿಬ್ಬರ ಮತ್ತು ಪುತ್ತೂರಿನ ಮಾಜಿ ಶಾಸಕಿಯೊಬ್ಬರ ಪಕ್ಷಾಂತರ ಪ್ರಕರಣ ಇತ್ಯಾದಿ ಗಳೆಲ್ಲಾ ನಡೆದುಹೋಗಿವೆ. ಆದರೆ ಇವೆಲ್ಲವೂ ಬಿಡಿ ಪ್ರಕರಣಗಳು. ಬಿಜೆಪಿ ಇನ್ನೂ ಕರ್ನಾಟಕದಲ್ಲಿ ಸರಿಯಾದ ನೆಲೆಯನ್ನು ಕಂಡುಕೊಳ್ಳುವ ಹಾದಿಯಲ್ಲಿದ್ದಾಗ ಘಟಿಸಿದ ನಿರೀಕ್ಷಿತ ಪ್ರಕರಣಗಳು. ಈ ಬಾರಿ ಆಗುತ್ತಿರುವುದು ಭಿನ್ನವಾದ ರೀತಿಯ ಮರುವಲಸೆ (reverse migration). ಇದನ್ನು ಹಿಂದಿನ ಪ್ರಕರಣಗಳಿಗೆ
ಹೋಲಿಸಲಾಗದು.

ಈಗ ಬಿಜೆಪಿ ಎನ್ನುವುದು ಬಲಭಯಂಕರ ರಾಷ್ಟ್ರೀಯ ಪಕ್ಷ. ಪ್ರಬಲ ನಾಯಕತ್ವದ ಆಸರೆ ಇರುವ ಪಕ್ಷ. ಬೇಕಾದವರನ್ನು ಸೆಳೆಯಲು, ಬಿಟ್ಟು ಹೋದವರನ್ನು ಮಣಿಸಲು ಯಾವ ಮಟ್ಟಕ್ಕೂ ಇಳಿಯಲು ಸಿದ್ಧವಿರುವ ಪಕ್ಷ. ಇಂತಹ ಪಕ್ಷವೊಂದರಲ್ಲಿ ಬಹುಕಾಲ ಆಯಕಟ್ಟಿನ ಸ್ಥಾನದಲ್ಲಿದ್ದವರು, ಆರ್‌ಎಸ್‌ಎಸ್‌ ಸಿದ್ಧಾಂತದಲ್ಲಿ ತಮ್ಮ ಆತ್ಮವನ್ನು ಅದ್ದಿ ತೆಗೆದವರು ಆ ಪಕ್ಷವನ್ನು ಬಿಡುತ್ತಿರುವುದು ಮಾತ್ರವಲ್ಲ, ಬಿಟ್ಟವರು ಕಾಂಗ್ರೆಸ್ ಸೇರುತ್ತಿರುವ ಬೆಳವಣಿಗೆ ಏನಿದೆ ಇದನ್ನು ವಿಶೇಷವಾಗಿ ಪರಿಶೀಲಿಸಬೇಕಿದೆ.

ಬಿಜೆಪಿಯಲ್ಲಿ ಪ್ರಶ್ನಾತೀತ ನಾಯಕರೆನಿಸಿಕೊಂಡವರು ಮುಂದಿನ ತಿಂಗಳ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಲ್ಲಿ ಮಾಡಿದ ಒಂದು ಸಣ್ಣ ಪ್ರಮಾಣದ ಪ್ರಯೋಗವು ಪಕ್ಷದೊಳಗೆ ಉಂಟು ಮಾಡಿದ ತಲ್ಲಣಕ್ಕೆ ಓರ್ವ ಮಾಜಿ ಮುಖ್ಯಮಂತ್ರಿ, ಓರ್ವ ಮಾಜಿ ಉಪ ಮುಖ್ಯಮಂತ್ರಿ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿ ಆ ಪಕ್ಷದ ಅಭ್ಯರ್ಥಿಗಳೇ ಆಗಿಬಿಟ್ಟರು. ಇದಕ್ಕೆ ಮೊದಲೇ ಹಲವು ಬೆಳವಣಿಗೆಗಳಾಗಿವೆ. ತೀರಾ ಇತ್ತೀಚಿನವರೆಗೆ ಕಟ್ಟಾ ಹಿಂದುತ್ವವಾದಿ ಬಿಜೆಪಿಗರಂತೆ ಮೆರೆಯುತ್ತಿದ್ದ ಇಬ್ಬರು– ಮೂವರು ಈಗ ಕಾಂಗ್ರೆಸ್ಸಿನ ಅಭ್ಯರ್ಥಿಗಳು. ಇನ್ನು ಮಾಜಿ ಶಾಸಕರನ್ನು ಒಳಗೊಂಡಂತೆ ಬಿಜೆಪಿಯ ಕೆಲವರ ನಡೆ ಈ ಬಾರಿ ಕಾಂಗ್ರೆಸ್ಸಿನ ಕಡೆಗೆ ಆಗಿದೆ. ಈ ಬೆಳವಣಿಗೆಗಳು ಏನೇನೋ ಕತೆ ಹೇಳುತ್ತವೆ. ಅವು ಚುನಾವಣೆಯ ಕಾಲದ ಸಾಮಾನ್ಯ ರಾಜಕೀಯ ಕತೆಗಳಲ್ಲ. ಆಲಿಸಿದವರಿಗೆ ಅಲ್ಲಿ ಕನ್ನಡದ ಮಣ್ಣಿನ ಗುಣಕ್ಕೂ ಬಿಜೆಪಿಯ ಸೈದ್ಧಾಂತಿಕ ನಿಲುವಿಗೂ ಕೂಡಿಬಾರದ ವಿರಸದ ಕತೆಯೊಂದು ಕೇಳಿಸುತ್ತದೆ.

ಎಲ್ಲರಿಗೂ ತಿಳಿದಿರುವಂತೆ, 1962ರಲ್ಲೇ ತನ್ನ ಹಿಂದಿನ ಅವತಾರವಾದ ಜನಸಂಘದ ಹೆಸರಲ್ಲಿ ನಾಲ್ಕು ಸ್ಥಾನಗಳನ್ನು ಗೆದ್ದು, 1983ರಲ್ಲಿ 18 ಸ್ಥಾನಗಳನ್ನು ಗೆದ್ದು, 1994 ಮತ್ತು 1999ರಲ್ಲಿ 40ರ ಆಸುಪಾಸಿನ ಸಂಖ್ಯೆಯ ಸ್ಥಾನಗಳನ್ನು ಗಳಿಸುವಲ್ಲಿಗೆ ಕರ್ನಾಟಕದಲ್ಲಿ ಆ ಪಕ್ಷದ ಬೆಳವಣಿಗೆಯ ಒಂದು ಹಂತ ಇಲ್ಲಿಗೆ ಮುಗಿದುಹೋಗಿತ್ತು. ಆನಂತರ ಕರ್ನಾಟಕದಲ್ಲಿ ಬಿಜೆಪಿ ಬೆಳೆದದ್ದಲ್ಲ. ಆನಂತರ ಅದು ಕೃತಕವಾಗಿ ಕೊಬ್ಬಿದ್ದು, ಅಸಹಜವಾಗಿ ಉಬ್ಬಿದ್ದು. ಹಾಗೆ ಉಬ್ಬುವಷ್ಟು ಉಬ್ಬಿಸಿಕೊಂಡು ಕೊಬ್ಬುವಷ್ಟು ಕೊಬ್ಬಿಸಿಕೊಂಡ ಮೇಲೂ ಅದಕ್ಕೆ ರಾಜ್ಯದಲ್ಲಿ ಸರಳ ಬಹುಮತವನ್ನೂ ಈತನಕ ಪಡೆಯಲಾಗಿಲ್ಲ ಎಂದರೆ ಅದರಿಂದ ತಿಳಿಯುವುದಾದರೂ ಏನು? ಬಿಜೆಪಿಗೆ ಎಲ್ಲವೂ ಇತ್ತು. ಜನರನ್ನು ಸಮ್ಮೋಹನಗೊಳಿಸಬಲ್ಲ ಸಿದ್ಧಾಂತವಿತ್ತು. ಕೈತುಂಬಾ ಕಾಸಿತ್ತು. ಊರೂರಲ್ಲಿ ಮೂರ್ನಾಲ್ಕು ಮಾದರಿಯಲ್ಲಿ ತಯಾರಾಗಿರುವ ಕಾರ್ಯಕರ್ತರ ಪಡೆ ಇತ್ತು. ಭಯಾನಕ ಐಟಿ ಸೆಲ್‌ನ ನೆರವಿತ್ತು. ಏನನ್ನೂ ಹೇಳಲು ಏನನ್ನೂ ಮಾಡಲು ಸಿದ್ಧರಿರುವ ದೊಡ್ಡ ನಾಯಕರಿದ್ದರು. ಇಷ್ಟೆಲ್ಲಾ ಇದ್ದು ಕೂಡಾ ಆ ಪಕ್ಷಕ್ಕೆ ಈತನಕ ಸ್ವಂತ ಶಕ್ತಿಯಿಂದ ಅಧಿಕಾರಕ್ಕೆ ಬರಲಾಗಲಿಲ್ಲ ಎಂದರೆ ಅದರರ್ಥ ಬಿಜೆಪಿಯ ಸ್ವಭಾವ ಮತ್ತು ಕರ್ನಾಟಕದ ಅಂತಃಸತ್ವಗಳ ಮಧ್ಯೆ ಏನೋ ಒಂದು ಅನಿರ್ವಚನೀಯ ಅಂತರವಿದೆ ಎಂದು ತಾನೇ.

ಇದನ್ನರಿತ ಬಿಜೆಪಿ, ಕನ್ನಡ ಮಣ್ಣಿನ ಗುಣವನ್ನೇ ಕೆಡಿಸಿ ತನ್ನ ಸಿದ್ಧಾಂತವನ್ನು ಸ್ಥಾಪಿಸಿಬಿಡಬೇಕೆಂದು ಹಟ ಹಿಡಿದು ಹೊರಟಿರುವ ಸಂದರ್ಭದಲ್ಲಿ, ಅದಕ್ಕೆ ಕರ್ನಾಟಕದ ಕುರಿತಾದ ಇನ್ನೊಂದು ಸತ್ಯ ಮುಖಾಮುಖಿಯಾಗಿದೆ. ಅದೇನೆಂದರೆ, ಮತದಾರರ ವಿಚಾರ ಅಂತಿರಲಿ, ಆ ಪಕ್ಷದ ಸಿದ್ಧಾಂತ ಏನಿದೆ ಅದು ಕರ್ನಾಟಕದಲ್ಲಿ ಬಿಜೆಪಿಯ ಮುಂಚೂಣಿ ನಾಯಕರ ಅಂತರಂಗದ ಆಳಕ್ಕೆ ಕೂಡಾ ಪೂರ್ತಿಯಾಗಿ ಇಳಿದಿಲ್ಲ ಎನ್ನುವುದು. ಹಾಗಾಗಿಯೇ ಅಂದು ಯಡಿಯೂರಪ್ಪ ಸಲೀಸಾಗಿ ಪಕ್ಷದಿಂದ ಹೊರನಡೆದದ್ದು (ಆನಂತರ ಅವರು ಮರಳಿ ಬಂದರು ಎನ್ನುವುದು ಇಲ್ಲಿ ಅಪ್ರಸ್ತುತ).

ಹಾಗಾಗಿಯೇ, ಜಗದೀಶ ಶೆಟ್ಟರ್ ಅಂತಹವರು ಇಂದು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಲು ಸಾಧ್ಯವಾಗಿದ್ದು. ಪಕ್ಷವನ್ನು ಮೂಲದಿಂದ ಕಟ್ಟಿ ಬೆಳೆಸಿದ, ಆರ್‌ಎಸ್ಎಸ್‌ನ ಸಾರಸರ್ವದಲ್ಲಿ ಮಿಂದೆದ್ದಿದ್ದ ಇವರಂತಹವರು ಕೂಡ ಬಿಜೆಪಿಗೆ ಪೂರ್ಣ ಬದ್ಧರಾಗಿ ಉಳಿಯಲು ಸಿದ್ಧರಿರಲಿಲ್ಲ. ಒಂದು ವೇಳೆ ಬಿಜೆಪಿಯ ಸಿದ್ಧಾಂತ ಅವರೀರ್ವರನ್ನು ಸಂಪೂರ್ಣವಾಗಿ ಹಿಡಿದಿಟ್ಟು ಕೊಂಡಿದ್ದರೆ, ಅಧಿಕಾರದಿಂದ ಇಳಿಸುವುದು ಬಿಡಿ, ಅಕ್ಷರಶಃ ಅವರನ್ನು ನೆಲಕ್ಕೆ ಕೆಡವಿದ್ದರೂ ಅವರು ‘ನೆನೆವುದೆನ್ನ ಮನಂ ಹಿಂದೂ ರಾಷ್ಟ್ರಮಂ’ ಅಂತ ಅಲ್ಲೇ ಇರುತ್ತಿದ್ದರು. ಅವರನ್ನು ಪಕ್ಷದ ಜತೆ ಬೆಸೆದದ್ದು ಅಧಿಕಾರವೇ ವಿನಾ ಸಿದ್ಧಾಂತವಲ್ಲ.

ಇದೇ ವೇಳೆ ಬಿಜೆಪಿಯ ಸಿದ್ಧಾಂತವನ್ನು ಪೂರ್ಣವಾಗಿ ಮೈಗೂಡಿಸಿಕೊಂಡ ಯಾರೊಬ್ಬರಿಗೂ ಇಲ್ಲಿ ನಾಯಕರಾಗಿ ಮೆರೆಯಲು ಸಾಧ್ಯವಾಗಿಲ್ಲ. ಕರ್ನಾಟಕದ ಮಣ್ಣಿಗೂ ಬಿಜೆಪಿಯ ರಾಜಕೀಯ ಮಾದರಿಗೂ ಕೂಡಿಬರುತ್ತಿಲ್ಲ ಎನ್ನುವ ಕಾರಣಕ್ಕೆ ಹೀಗಾಗಿದ್ದು. ಈಗಲಾದರೂ ಬಿಜೆಪಿಗೆ ಈ ಸತ್ಯ ಅರ್ಥವಾಗಿ ಅದರ ಸಿದ್ಧಾಂತವನ್ನು ಈ ನೆಲದ ಅಪೇಕ್ಷೆಗನುಗುಣವಾಗಿ ಸಡಿಲಗೊಳಿಸಿ ರಾಜಕೀಯ ನಡೆಸಿದರೆ ಅದಕ್ಕೆ ಇಲ್ಲಿ ಸದೃಢವಾಗಿ ಬೇರೂರಲು ಸಾಧ್ಯವಾಗಬಹುದೇನೋ? ಬಿಜೆಪಿ ಆ ಹಾದಿ ಆರಿಸಿಕೊಂಡ ಹಾಗೆ ಕಾಣಿಸುತ್ತಿಲ್ಲ. ಬದಲಿಗೆ ಅದು ತನ್ನ ಸೈದ್ಧಾಂತಿಕ ಅಸ್ತ್ರಗಳಾದ ಧರ್ಮಾಂಧತೆಯ ವಿಷ ಮತ್ತು ಕೋಮುವಾದಿ ರಾಷ್ಟ್ರೀಯತೆಯ ಅಮಲುಗಳ ಮಿತಿಯನ್ನು ಸರಿದೂಗಿಸಲು ಜಾತಿ ಸಮೀಕರಣ, ದೆಹಲಿ ನಾಯಕರ ವರ್ಚಸ್ಸಿನಂತಹವುಗಳನ್ನೆಲ್ಲ ಬಳಸಿ ಹೇಗೋ ಅಧಿಕಾರ ಹಿಡಿದು, ಆ ಅಧಿಕಾರದ ಮೂಲಕ ಕರ್ನಾಟಕದಲ್ಲಿ ಅದರ ಬೆಳವಣಿಗೆಗೆ ಅಡ್ಡಿಯಾಗಿರುವ ಕನ್ನಡ ಜನಮಾನಸದ ರಾಜಕೀಯ ವಿವೇಕವನ್ನೇ ಹೊಸಕಿಹಾಕುವ ಸನ್ನಾಹದಲ್ಲಿದ್ದಂತಿದೆ. ಇದನ್ನೇ ಅದು ಪ್ರಯೋಗ ಎಂದು ಕರೆಯುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT