ಕೊರಟಗೆರೆ: ತಾಲ್ಲೂಕಿನ ಎಲೆರಾಂಪುರದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ 30 ವರ್ಷಗಳ ಹಳೆಯ ಮರಗಳನ್ನು ಹರಾಜು ಮಾಡದೇ ಅರಣ್ಯ ಇಲಾಖೆಯವರು ಕಟಾವು ಮಾಡಿದ್ದಾರೆ. ಇದನ್ನು ಪ್ರಶ್ನಿಸಿದ ಗ್ರಾಮದ ರೈತ ಸಂಘದ ಉಪಾಧ್ಯಕ್ಷ ವೈ.ಎನ್.ಸೋಮಶೇಖರ್ ವಿರುದ್ಧ ಪೊಲೀಸರು ಸುಳ್ಳು ಪ್ರಕರಣ ದಾಖಲಿಸಿ ಜೈಲಿಗೆ ಕಳಿಸಿದ್ದಾರೆ ಎಂದು ಆರೋಪಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸದಸ್ಯರು ತಾಲ್ಲೂಕು ಕಚೇರಿ ಎದರು ಪ್ರತಿಭಟನೆ ನಡೆಸಿದರು.
ಇಲ್ಲಿನ ವಲಯ ಅರಣ್ಯ ಇಲಾಖೆ ಅಧಿಕಾರಿ ಸತೀಶ್ಚಂದ್ರ ರೈತ ಮುಖಂಡನ ವಿರುದ್ಧ ದೂರು ನೀಡಿದ್ದು, ಸಿಪಿಐ ಎಸ್.ಮುನಿರಾಜು ಹಳೆಯ ದ್ವೇಷದ ಕಾರಣ ದೂರು ನೀಡಿದ ಕೆಲವೇ ಗಂಟೆಯಲ್ಲಿ ವಿಚಾರ ಮಾಡದೇ ಪ್ರಕರಣ ದಾಖಲಿಸಿದ್ದಾರೆ. ಕಾನೂನು ದುರುಪಯೋಗ ಮಾಡಿದ ವಲಯ ಅರಣ್ಯ ಇಲಾಖೆ ಅಧಿಕಾರಿ ಹಾಗೂ ಸಿಪಿಐ ಅವರನ್ನು ಅಮಾನತು ಮಾಡಬೇಕು ಎಂದು ರೈತರು ಆಗ್ರಹಿಸಿದರು.
ಜಿಲ್ಲಾ ವಲಯ ಅರಣ್ಯಾಧಿಕಾರಿ ಹಾಗೂ ಪೊಲೀಸ್ ಇಲಾಖೆ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಬಂದು ನ್ಯಾಯ ದೊರಕಿಸಿಕೊಡುವವರೆಗೂ ಹೋರಾಟ ನಿಲ್ಲಿಸುವುದಿಲ್ಲ. ಕೂಡಲೇ ರೈತ ಮುಖಂಡ ಸೋಮಶೇಖರ್ ಅವರನ್ನು ಬೇಷರತ್ತಾಗಿ ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ ಜಿಲ್ಲೆಯಾದ್ಯಂತ ರೈತರು ತಾಲ್ಲೂಕು ಕಚೇರಿ ಹಾಗೂ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕುವುದಾಗಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಎ.ಗೋವಿಂದರಾಜು ಎಚ್ಚರಿಸಿದರು.
ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಸಮಾವೇಶಗೊಂಡ ರೈತ ಸಂಘದ ಸದಸ್ಯರು ಅರಣ್ಯಾಧಿಕಾರಿ ಹಾಗೂ ಪೊಲೀಸ್ ಇಲಾಖೆ ಅಧಿಕಾರಿ ವಿರುದ್ಧ ಮುಖ್ಯ ಯರಸ್ತೆಯುದ್ದಕ್ಕೂ ಘೋಷಣೆ ಕೂಗಿದರು. ತಾಲ್ಲೂಕು ಕಚೇರಿ ಎದುರು ಧರಣಿ ಕುಳಿತು ಪ್ರತಿಭಟಿಸಿದರು.
ಮಧುಗಿರಿ ಪ್ರಧಾನ ಕಾರ್ಯದರ್ಶಿ ಜೆ.ಸಿ.ಶಂಕರಪ್ಪ, ವೆಂಕಟೇಶಗೌಡ, ಸಿದ್ದರಾಜು, ಲಕ್ಷ್ಮಣಗೌಡ, ದೊಡ್ಡಮಾಳಯ್ಯ, ರಂಗಹನುಮಯ್ಯ, ಶಬೀರ್ ಬಾಷಾ, ನರಸಿಂಹಮೂರ್ತಿ, ರಂಗಹನುಮಯ್ಯ, ನಾರಾಯಣಪ್ಪ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.