ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗತಿಬಿಂಬ ಅಂಕಣ: ಶ್ರೇಷ್ಠತೆಯ ವ್ಯಸನಕ್ಕೆ ಜಾತಿಗಣತಿ ಮದ್ದು– ವೈ.ಗ.ಜಗದೀಶ್‌ ಲೇಖನ

ಸಮೀಕ್ಷಾ ವರದಿ ಬಹಿರಂಗಪಡಿಸುವ ಅವಕಾಶ ಕೈಚೆಲ್ಲದಿರಲಿ ಸಿದ್ದರಾಮಯ್ಯ
Published 16 ಅಕ್ಟೋಬರ್ 2023, 0:32 IST
Last Updated 16 ಅಕ್ಟೋಬರ್ 2023, 0:32 IST
ಅಕ್ಷರ ಗಾತ್ರ

ಬಿಹಾರದಲ್ಲಿ ಜಾತಿ ಜನಗಣತಿ ವರದಿ ಬಿಡುಗಡೆ ಯಾಗಿದ್ದೇ ತಡ, ಜಾತಿಯ ಪದರುಗಳನ್ನೇ ಹಿಂದುತ್ವದ ಸಾಂಸ್ಥಿಕ ನೆಲೆಗೆ ಅಡಿಪಾಯವಾಗಿ ಇರಿಸಿಕೊಂಡ ಕೋಮುವಾದಿಗಳು ಹೌಹಾರಿದ್ದಾರೆ. ಹಿಂದೂಧರ್ಮದ ಅಸ್ತಿತ್ವವು ಜಾತಿಯ ಶ್ರೇಣೀಕರಣದ ಮೇಲೆ ನಿಂತಿದೆ. ಶ್ರೇಷ್ಠತೆಯ ವ್ಯಸನ ಈಗ ಎಲ್ಲ ಪ್ರಬಲ ಜಾತಿಗಳ ಪುರೋಹಿತಶಾಹಿ ವರ್ಗವನ್ನೂ ವ್ಯಾಪಿಸಿಕೊಂಡಿದ್ದು, ತನಗಿಂತ ‘ಕೆಳಗೆ’ ಎಂದು ಭಾವಿಸಿಕೊಂಡ ಜನಪದರನ್ನು ಕೀಳಾಗಿ ಕಾಣುವುದನ್ನು ಮುಂದುವರಿಸಿದೆ.

ಜಾತಿ ಜನಗಣತಿಯ ಬಳಿಕ ಎಲ್ಲ ಸಮುದಾಯಗಳ ನೈಜ ಅಂಕಿ ಅಂಶಗಳು ಗೊತ್ತಾದರೆ, ರಾಜಕೀಯ, ಸಾಮಾಜಿಕ, ಆರ್ಥಿಕ ಪ್ರಾತಿನಿಧ್ಯದ ಕೂಗು ಬಲಗೊಳ್ಳುತ್ತಾ ಹೋಗುತ್ತದೆ. ಅಲಕ್ಷಿತ ಸಮುದಾಯಗಳ ಜನರನ್ನು ಕಾಲಾಳುಗಳನ್ನಾಗಿ ಬಳಸಿಕೊಂಡು ರಾಜಕಾರಣ ಮಾಡುತ್ತಿರುವ ಪ್ರಬಲ ಜಾತಿಗಳ ಹಿತಾಸಕ್ತಿಗೆ ಹೊಡೆತ ಬೀಳಲಿದೆ. ಈ ಕಾರಣಕ್ಕಾಗಿಯೇ, ಜಾತಿಗಣತಿಯ ವಿರುದ್ಧ ಅಪಸ್ವರಗಳು ಎದ್ದಿವೆ.

ಇತ್ತೀಚಿನ ವರ್ಷಗಳಲ್ಲಿ ದೇಶದೊಳಗಿನ ಯಾವುದೇ ವಿದ್ಯಮಾನಗಳಿಗೂ ಪ್ರತಿಕ್ರಿಯೆ ನೀಡದ ಪ್ರಧಾನಿ ನರೇಂದ್ರ ಮೋದಿಯವರು ಈಚೆಗೆ ಎರಡು ಬಾರಿ ಮೌನ ಮುರಿದರು. ಸನಾತನಧರ್ಮದ ಕುರಿತು ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್‌ ಆಡಿದ ಮಾತಿಗೆ ನೀಡಿದ ಪ್ರತಿಕ್ರಿಯೆ ಮೊದಲನೆಯದು. ಜಾತಿಗಣತಿ ವರದಿ ಬಿಡುಗಡೆಯಾದ ಬಳಿಕ, ಅದನ್ನು ಉಲ್ಲೇಖಿಸದೇ ಪ್ರತಿ
ಕ್ರಿಯಿಸಿದ ಅವರು, ‘ವಿರೋಧ ಪಕ್ಷಗಳು ದೇಶವನ್ನು ಜಾತಿ ಆಧಾರದ ಮೇಲೆ ವಿಭಜಿಸಿವೆ. ಈಗ ಮಾಡುತ್ತಿರುವುದೂ ಅಂತಹುದೇ ಪಾಪದ ಕೆಲಸ’ ಎಂದಿದ್ದರು.

ಬಿಹಾರ ಸರ್ಕಾರದ ನಡೆಯು ದೇಶದಲ್ಲಿ ಸಂಚಲನ ಮೂಡಿಸಿದೆ. ಕರ್ನಾಟಕದಲ್ಲೂ ‘ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ’ಯ ವರದಿಯನ್ನು ಬಿಡುಗಡೆ ಮಾಡಬೇಕೆಂಬ ಕೂಗು ಎದ್ದಿದೆ. ಅದಕ್ಕೆ ವಿರೋಧವೂ ವ್ಯಕ್ತವಾಗಿದೆ. ಈ ಬಗ್ಗೆ ಮಾತನಾಡಿದ್ದ ಜೆಡಿಎಸ್‌ ನಾಯಕ ಎಚ್.ಡಿ.ಕುಮಾರಸ್ವಾಮಿ, ‘ಕಾಂಗ್ರೆಸ್‌ ಪಕ್ಷವು ಜಾತಿಗಣತಿ ವರದಿ ಮುಂದಿಟ್ಟುಕೊಂಡು ಜಾತಿ, ಜಾತಿಗಳ ಮಧ್ಯೆ ವಿಷಬೀಜ ಬಿತ್ತಲು ಹೊರಟಿದೆ. ಈಗ ಜಾತಿಗಣತಿ ನಡೆಸಿ ಯಾವ ಸಾಧನೆ ಮಾಡುತ್ತಾರೆ? ಸಮಾಜ ಒಡೆಯಲು ಜಾತಿಗಣತಿ ಮಾಡುತ್ತಿದ್ದಾರೆಯೇ? ಇದು ಜಾತಿ ದ್ವೇಷಕ್ಕೆ ಕಾರಣವಾಗಲಿದೆ’ ಎಂದಿದ್ದರು. ಹೀಗೆ ಹೇಳಿದ ಮರುದಿನವೇ, ಅವರ ‘ಸಾಮ್ರಾಜ್ಯ’ವೇ ಆಗಿದ್ದ ರಾಮನಗರ ತಾಲ್ಲೂಕಿನ ಚನ್ನಮಾನಹಳ್ಳಿಯ ದೇವಸ್ಥಾನದ ಆವರಣದಲ್ಲಿರುವ ನಲ್ಲಿಯಲ್ಲಿ ನೀರು ಹಿಡಿಯಲು ಹೋದ, ಪರಿಶಿಷ್ಟ ಜಾತಿಗೆ ಸೇರಿದ 13 ವರ್ಷದ ಬಾಲಕಿಯನ್ನು ದೇವಸ್ಥಾನದ ಪೂಜಾರಿ ಹಾಗೂ ಆತನ ಸಹೋದರಿ ಜಾತಿ ಹೆಸರಲ್ಲಿ ನಿಂದಿಸಿ, ಅವರ ಕಡೆಯವರ ಮೇಲೆ ಹಲ್ಲೆ ಮಾಡಿದ್ದರು. 

ಅದಾದ ಮೂರು ದಿನಗಳಲ್ಲೇ, ಬೇರೊಂದು ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದ 20 ವರ್ಷದ ಮಗಳನ್ನು ಅಪ್ಪನೇ ಕತ್ತು ಸೀಳಿ ಹತ್ಯೆ ಮಾಡಿದ ಘಟನೆ ದೇವನಹಳ್ಳಿ ತಾಲ್ಲೂಕಿನ ಬಿದಲೂರು ಗ್ರಾಮದಲ್ಲಿ ನಡೆದಿದೆ. ವಾಲ್ಮೀಕಿ ಸಮುದಾಯದ ಯುವತಿ, ತಂದೆ ಯಿಂದ ಮರ್ಯಾದೆಗೇಡು ಹತ್ಯೆಗೀಡಾದ ದುರ್ದೈವಿ. ಈ ಎರಡೂ ಪ್ರಕರಣಗಳು ಜಾತಿ ದ್ವೇಷ, ಜಾತಿ ಶ್ರೇಷ್ಠತೆಯ ಧೂರ್ತರ ಧೋರಣೆಗೆ ನಿದರ್ಶನ. ಜಾತಿಗಣತಿ ನಡೆದರೆ ದ್ವೇಷ ಹುಟ್ಟುತ್ತದೆ ಎಂದಾದರೆ, ಈ ಎರಡು ಪ್ರಕರಣ
ಗಳನ್ನು ಕುಮಾರಸ್ವಾಮಿ ಏನೆಂದು ಅರ್ಥೈಸುತ್ತಾರೆ? 

ದೇಶದಲ್ಲಿ 1931ರಲ್ಲಿ ಜಾತಿವಾರು ಗಣತಿ ನಡೆದಿದ್ದು ಬಿಟ್ಟರೆ ಮತ್ತೆ ನಡೆದಿಲ್ಲ. ಮನಮೋಹನ್‌ ಸಿಂಗ್
ಪ್ರಧಾನಿಯಾಗಿದ್ದ ಮೊದಲ ಅವಧಿಯಲ್ಲಿ ದೇಶದಲ್ಲಿ ಪ್ರಾಯೋಗಿಕವಾಗಿ ಸಾಮಾಜಿಕ, ಆರ್ಥಿಕ ಸಮೀಕ್ಷೆ ನಡೆಸಲು ಕರ್ನಾಟಕಕ್ಕೆ ಅನುದಾನ ನೀಡಿದ್ದರು. ಧರ್ಮಸಿಂಗ್‌ ಮುಖ್ಯಮಂತ್ರಿಯಾಗಿದ್ದಾಗ, ಕಾಂಗ್ರೆಸ್–ಜೆಡಿಎಸ್‌ ನೇತೃತ್ವದ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಇದರ ಬಗ್ಗೆ ಆಸ್ಥೆ ವಹಿಸಿ, ರಾಜ್ಯದ ಪಾಲನ್ನು ನೀಡಿದ್ದರು. ಆಗ ಪ್ರಕ್ರಿಯೆಗೆ ಚಾಲನೆ ಸಿಕ್ಕಿತ್ತು. ಬಳಿಕ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾದಾಗ ಇದರ ಮೊದಲ ಹಂತದ ಪ್ರಕ್ರಿಯೆ ಶುರುವಾಗಿದ್ದರೂ ಮುಂದೆ ಸಾಗಿರಲಿಲ್ಲ. ಸಮೀಕ್ಷೆ ನಡೆಯಬೇಕಾದರೆ ಮತ್ತೆ ಸಿದ್ದರಾಮಯ್ಯನವರೇ ಬರಬೇಕಾಯಿತು. 2013ರಲ್ಲಿ ಮುಖ್ಯ
ಮಂತ್ರಿಯಾದ ಅವರು ಇದಕ್ಕೆ ಬೇಕಾದ ಅನುದಾನ, ಎಲ್ಲ ಇಲಾಖೆಗಳ ನೆರವನ್ನೂ ಕೊಡಿಸಿದರು. 2018ರ ವಿಧಾನಸಭೆ ಚುನಾವಣೆಗೆ ಮುನ್ನ, ವರದಿಯನ್ನು ಸ್ವೀಕರಿಸುವ ಇರಾದೆ ಅವರಲ್ಲಿತ್ತು. ಆದರೆ, ಸಚಿವ ಸಂಪುಟದಲ್ಲಿದ್ದ ಪ್ರಬಲ ಜಾತಿಗಳ ಪ್ರತಿನಿಧಿಗಳು ಅದಕ್ಕೆ ಸಹಕಾರ ಕೊಡಲಿಲ್ಲ. ಈಗ ಮತ್ತೆ, ಸಿದ್ದರಾಮಯ್ಯನವರ ಮುಂದೆ ಸವಾಲು ಎದುರಾಗಿದೆ.

₹ 158 ಕೋಟಿ ವೆಚ್ಚ ಮಾಡಿ ಸಿದ್ಧವಾಗಿರುವ ವರದಿ ಮಂಡನೆಗೆ ಸಣ್ಣಪುಟ್ಟ ಕಾನೂನು ತೊಡಕುಗಳು ಇರಬಹುದು. ವರದಿ ಪಡೆಯುವುದು ಕಷ್ಟವೇನಲ್ಲ. ದೇಶದಲ್ಲಿ ಜಾತಿ ಜನಗಣತಿ ನಡೆಸಬೇಕು ಎಂಬ ಪ್ರಬಲ ಬೇಡಿಕೆಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮುಂದಿಟ್ಟಿದ್ದಾರೆ. ಹೀಗಾಗಿ, ಸಚಿವ ಸಂಪುಟದ ಲ್ಲಿರುವ ಪ್ರಬಲ ಜಾತಿಯ ಕೆಲವು ಪ್ರತಿನಿಧಿಗಳು ಎಷ್ಟೇ ವಿರೋಧಿಸಿದರೂ ರಾಹುಲ್‌ ಅಸ್ತ್ರ ತೋರಿಸಿ ಬಚಾವಾ
ಗಬಹುದಾದ ಅಮೂಲ್ಯ ಅವಕಾಶ ಸಿದ್ದರಾಮಯ್ಯನವರಿಗೆ ಸಿಕ್ಕಿದೆ.

ರಾಜ್ಯದಲ್ಲಿ ಸಮೀಕ್ಷೆ ಸರಿಯಾಗಿ ನಡೆದಿಲ್ಲ, ಹೀಗಾಗಿ ಅದನ್ನು ಒಪ್ಪಬಾರದು ಎಂಬ ವಾದ ಕೆಲವರದ್ದಾಗಿದೆ. ಇಲ್ಲೊಂದು ಗಮನಿಸಬೇಕಾದ ವೈಚಿತ್ರ್ಯವಿದೆ.

2019ರ ಲೋಕಸಭೆ ಚುನಾವಣೆ ಪೂರ್ವದಲ್ಲಿ ಪ್ರಧಾನಿ ಮೋದಿಯವರು, ಗರಿಷ್ಠ ಶೇ 4ರಷ್ಟು ಜನಸಂಖ್ಯೆ ಇದೆ ಎಂದು ಅಂದಾಜಿಸಲಾದ ಬ್ರಾಹ್ಮಣ, ವೈಶ್ಯ ಸೇರಿದಂತೆ ಐದು ಜಾತಿಗಳಿಗೆ ಶೇ 10ರಷ್ಟು ಮೀಸಲಾತಿಯನ್ನು ಆರ್ಥಿಕವಾಗಿ ಹಿಂದುಳಿದವರ ಹೆಸರಿನಲ್ಲಿ ನೀಡಿದರು. ಹಿಂದುಳಿದವರ, ಪರಿಶಿಷ್ಟ ಜಾತಿ–ಪಂಗಡದವರ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲು ಮುಂದಾದಾಗಲೆಲ್ಲ, ಇಂದಿರಾ ಸಾಹ್ನಿ ಪ್ರಕರಣ ದಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪನ್ನು ಕೇಂದ್ರ ಸರ್ಕಾರ ಮುಂದಿಡುತ್ತಿತ್ತು. ಆದರೆ ಪ್ರಬಲ ಜಾತಿಗಳಲ್ಲಿನ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಕಲ್ಪಿಸುವಾಗ ಶೇ 50ರ ಮಿತಿ ಅಡ್ಡಿಯಾಗಲಿಲ್ಲ. ಈ ಜಾತಿಗಳವರ ಹಿಂದುಳಿದಿರುವಿಕೆಯನ್ನು ಖಚಿತಪಡಿಸುವ ಯಾವುದೇ ಅಂಕಿ ಅಂಶಗಳೂ ಸರ್ಕಾರದ ಬಳಿ ಇರಲಿಲ್ಲ. ಹಾಗಿದ್ದರೂ ಮೀಸಲಾತಿ ಸಿಂಧುವಾಯಿತು.

ಕರ್ನಾಟಕದಲ್ಲಿದ್ದ ಬಿಜೆಪಿ ನೇತೃತ್ವದ ಸರ್ಕಾರ ತನ್ನ ಕೊನೆಯ ದಿನಗಳಲ್ಲಿ, ಮುಸ್ಲಿಂ ಸಮುದಾಯಕ್ಕೆ ಇದ್ದ ಶೇ 4ರ ಮೀಸಲಾತಿಯನ್ನು ರದ್ದುಪಡಿಸಿ, ಅದನ್ನು ಒಕ್ಕಲಿಗರು, ಲಿಂಗಾಯತರಿಗೆ ತಲಾ ಶೇ 2ರಷ್ಟು ಹಂಚಿತು. ಪರಿಶಿಷ್ಟ ಪಂಗಡದ ಮೀಸಲಾತಿಯನ್ನೂ ಹೆಚ್ಚಿಸಿತು. ಅದಕ್ಕೆ ಕೂಡ ನಿಖರ ಅಂಕಿ ಅಂಶಗಳು ಇರಲಿಲ್ಲ. ಈಗ ಜಾತಿಗಣತಿಯ ಬಗ್ಗೆ ತಕರಾರು ತೆಗೆದ ಪ್ರಧಾನಿ ಮೋದಿಯವರು ತಮ್ಮದೇ ಪಕ್ಷದ ಆಡಳಿತವಿದ್ದ ರಾಜ್ಯ ಸರ್ಕಾರವೊಂದರ ನೀತಿಯ ಬಗ್ಗೆ ಬಾಯಿಬಿಡಲಿಲ್ಲ. 

ಬಿಜೆಪಿ ನೇತೃತ್ವದ ಸರ್ಕಾರ ಇದ್ದಾಗ, ಹೋರಾಟ ನಡೆಸುವುದಾಗಿ ಹೇಳಿ ಮೀಸಲಾತಿ ಪ್ರಮಾಣ ಹೆಚ್ಚಿಸಿಕೊಂಡ ಲಿಂಗಾಯತ, ಒಕ್ಕಲಿಗರ ಸಂಘಗಳೇ ಈಗ ಸಮೀಕ್ಷಾ ವರದಿಯನ್ನು ವಿರೋಧಿಸುತ್ತಿವೆ. ಈ ವರದಿ ಹೊರಬಂದು, ಜಾತಿವಾರು ಜನಸಂಖ್ಯೆ, ರಾಜಕೀಯ, ಔದ್ಯೋಗಿಕ ಪ್ರಾತಿನಿಧ್ಯದ ಮಾಹಿತಿಗಳು ಹೊರಬಂದರೆ ತಮ್ಮ ಪ್ರಾತಿನಿಧ್ಯಕ್ಕೆ ಕುತ್ತು ಬಂದೀತೆಂಬ ಭಯವು ವಿರೋಧಕ್ಕೆ ಕಾರಣ ಎಂಬುದರಲ್ಲಿ ಸಂಶಯ ಬೇಕಿಲ್ಲ.

ವರದಿ ಹೊರಬರಲಿ, ಬಾರದಿರಲಿ ಜಾತಿ ಇರುವುದು, ಅದೇ ಪರಿಗಣನೆಗೆ ಒಳಗಾಗುತ್ತಿರುವುದು ವಾಸ್ತವ. ಜಾತಿ ಇಲ್ಲವೆನ್ನುವವರು, ಜಾತಿ ಹೋಗಬೇಕು ಎನ್ನುವವರು ಜಾತಿಗೊಂದು ಮಠವನ್ನು, ನಿಗಮವನ್ನು ಬೆಂಬಲಿಸುತ್ತಲೇ ಬಂದಿದ್ದಾರೆ. ಇಂತಹ ಹೊತ್ತಿನೊಳಗೆ, ಸಿದ್ದರಾಮಯ್ಯನವರು ಸಾಮಾಜಿಕ– ಆರ್ಥಿಕ ಸಮೀಕ್ಷಾ ವರದಿಯನ್ನು ಬಹಿರಂಗಪಡಿಸಬೇಕು. ಸಂಗ್ರಹಿಸಲಾದ ದತ್ತಾಂಶಗಳು ಸಾರ್ವಜನಿಕವಾಗಿ ಲಭ್ಯವಾಗುವಂತೆಯೂ ನೋಡಿಕೊಳ್ಳಬೇಕು. ಈ ಕೆಲಸವು ಏಕಕಾಲಕ್ಕೆ, ಜಾತಿ ಶ್ರೇಷ್ಠತೆಯನ್ನೇ ಪ್ರತಿಪಾದಿಸುತ್ತಾ ಜಾತಿ ವ್ಯವಸ್ಥೆಯನ್ನು ಪೋಷಿಸಿಕೊಂಡು ಲಾಭ ಗಿಟ್ಟಿಸಿಕೊಂಡ ವೈದಿಕ ಸನಾತನಿಗಳು, ದೇಶದ ತುಂಬೆಲ್ಲ ಜನಾಂಗ ದ್ವೇಷವನ್ನೇ ಬಿತ್ತುತ್ತಾ ತಮ್ಮ ಅಧಿಕಾರದ ವಿಸ್ತರಣೆಗೆ ಹವಣಿಸುತ್ತಿರುವ ಕೋಮುವಾದಿಗಳಿಗೆ ನೀಡುವ ಪೆಟ್ಟೂ ಆಗುತ್ತದೆ.

ಜನವಿರೋಧಿ ಶಕ್ತಿಗಳನ್ನು ಹಿಮ್ಮೆಟ್ಟಿಸುವುದರ ಜತೆಗೆ, ಇಲ್ಲಿಯವರೆಗೆ ಎಲ್ಲ ಸೌಲಭ್ಯಗಳಿಂದ ವಂಚಿತಗೊಂಡ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಕೊಡಿಸುವ ದಾರಿಯೂ, ಕತ್ತಲೆಗೆ ತಳ್ಳಿಸಿಕೊಂಡಿರುವವರಿಗೆ ನೀಡಬಹುದಾದ ದೊಂದಿಯ ಬೆಳಕೂ ಆದೀತು.

ವೈ.ಗ.ಜಗದೀಶ್‌

ವೈ.ಗ.ಜಗದೀಶ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT