ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ, ಹರಿಯಾಣ ಕೊಟ್ಟ ಸಂದೇಶ

ಎರಡು ರಾಜ್ಯಗಳ ಚುನಾವಣಾ ಫಲಿತಾಂಶ ಹೇಳಿದ ನಾಲ್ಕು ಪ್ರಮುಖ ಪಾಠ
Last Updated 6 ನವೆಂಬರ್ 2019, 20:30 IST
ಅಕ್ಷರ ಗಾತ್ರ

ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭೆಗಳಿಗೆ ನಡೆದ ಚುನಾವಣೆಯ ಫಲಿತಾಂಶ ಸ್ಪಷ್ಟವಾಗುತ್ತಿದ್ದಂತೆ, ಕರ್ನಾಟಕದ ರಾಜಕೀಯವನ್ನು ಗಮನಿಸುವ ಹಲವರು ಈ ಫಲಿತಾಂಶದ ಪರಿಣಾಮ ಕರ್ನಾಟಕದಲ್ಲಿ ಏನಾಗಬಹುದು ಎಂಬ ಬಗ್ಗೆ ಆಲೋಚಿಸಲು ಶುರು ಮಾಡಿದರು. ಕರ್ನಾಟಕವು ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಇರುವ ಏಕೈಕ ನೆಲೆ. ಅಲ್ಲದೆ, ಡಿಸೆಂಬರ್ ಆರಂಭದಲ್ಲಿ ಇಲ್ಲಿ ಬಹಳ ಮುಖ್ಯವಾದ ಉಪ ಚುನಾವಣೆಗಳು ನಡೆಯಲಿವೆ. ಈಗ ಮುಕ್ತಾಯಗೊಂಡಿರುವ ಎರಡು ರಾಜ್ಯಗಳ ಚುನಾವಣೆ ಹಾಗೂ ಅದರ ಫಲಿತಾಂಶ ಹೇಳಿದ ನಾಲ್ಕು ಪ್ರಮುಖ ಪಾಠಗಳು ಕರ್ನಾಟಕದ ಸಂದರ್ಭದಲ್ಲಿ ಗಮನಾರ್ಹವಾಗುತ್ತವೆ.

ಮೊದಲನೆಯದು, ರಾಜ್ಯಗಳ ಮಟ್ಟದಲ್ಲಿ ನಡೆಯುವ ಚುನಾವಣೆಗಳು ತಮ್ಮವೇ ಆದ ತರ್ಕವನ್ನು ಹೊಂದಿರುತ್ತವೆ. ಅವು ಹಿಂದಿನ ರಾಷ್ಟ್ರೀಯ ಅಲೆಯ ಪ್ರತಿಫಲನ ಅಲ್ಲ. ಲೋಕಸಭಾ ಚುನಾವಣೆ ವೇಳೆ ಹರಿಯಾಣದಲ್ಲಿ ಬಿಜೆಪಿ ಗಳಿಸಿದ ಮತಗಳ ಪ್ರಮಾಣಕ್ಕೂ, ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಲ್ಲಿ ಗಳಿಸಿದ ಮತಗಳ ಪ್ರಮಾಣಕ್ಕೂ ಹೋಲಿಕೆ ಮಾಡಿದರೆ ಇದು ಖಚಿತವಾಗು ತ್ತದೆ. ಲೋಕಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದ ವಿಧಾನಸಭಾ ಕ್ಷೇತ್ರಗಳ ಮಟ್ಟದಲ್ಲಿ ಬಿಜೆಪಿ ಸಾಧಿಸಿದ್ದ ಮುನ್ನಡೆ ಹಾಗೂ ಈಗ ಅಲ್ಲಿ ಬಿಜೆಪಿ ನೇತೃತ್ವದ ಮೈತ್ರಿ ಕೂಟವು ಗೆದ್ದುಕೊಂಡಿರುವ ಸೀಟುಗಳಲ್ಲಿ ಆಗಿರುವ ಕುಸಿತ ಕಂಡರೆ ಕೂಡ ಇದೇ ವಿಚಾರ ಗೊತ್ತಾಗುತ್ತದೆ. ಹಾಗಾಗಿ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಕರ್ನಾಟಕದಲ್ಲಿ 28ರಲ್ಲಿ 25 ಸ್ಥಾನ ಗೆದ್ದುಕೊಂಡಿದೆಯಾದರೂ, ಅದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯುವ ಉಪಚುನಾವಣೆಗಳಲ್ಲಿ ಆ ಪಕ್ಷ ಪಡೆಯಬಹುದಾದ ಬೆಂಬಲದ ಅಳತೆಗೋಲು ಅಲ್ಲ.

ಕೆಲವು ತಿಂಗಳುಗಳ ಅಂತರವು ಮತದಾರ ಪ್ರತಿಕ್ರಿಯಿಸುವ ಬಗೆಯಲ್ಲಿ ಬಹುದೊಡ್ಡ ವ್ಯತ್ಯಾಸ ಸೃಷ್ಟಿಸಬಲ್ಲದು. ಕರ್ನಾಟಕದ ವಿಚಾರದಲ್ಲಿ ಇದಕ್ಕೆ ಅತ್ಯುತ್ತಮ ಉದಾಹರಣೆ 1984-85ರಲ್ಲಿ ಸಿಗುತ್ತದೆ. ಇಂದಿರಾ ಗಾಂಧಿ ಅವರು ಹತ್ಯೆಯಾದ ನಂತರದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ರಾಜೀವ್ ಗಾಂಧಿ ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ದೊಡ್ಡ ಜಯ ಸಾಧಿಸಿತು. ಅದಾದ ಕೆಲವೇ ತಿಂಗಳುಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ರಾಮಕೃಷ್ಣ ಹೆಗಡೆ ನೇತೃತ್ವದಲ್ಲಿ ಜನತಾ ಪಕ್ಷವು ಸ್ಪಷ್ಟ ಬಹುಮತ ಪಡೆದುಕೊಂಡಿತು.

ಎರಡನೆಯದು, ವಿಧಾನಸಭಾ ಚುನಾವಣೆಗಳಲ್ಲಿ ಫಲಿತಾಂಶದ ಮೇಲೆ ಸ್ಥಳೀಯ ವಿಚಾರಗಳು ರಾಷ್ಟ್ರೀಯ ಚರ್ಚೆಗಳಿಗಿಂತ ಹೆಚ್ಚಿನ ಪ್ರಭಾವ ಬೀರುತ್ತವೆ. ಹರಿಯಾಣದಲ್ಲಿ ಬಹುಮತ ಪಡೆಯಲು ಬೇಕಿರುವಷ್ಟು ಸ್ಥಾನಗಳನ್ನು ಗೆದ್ದುಕೊಳ್ಳಲು ಬಿಜೆಪಿ ವಿಫಲವಾಗಿ
ದ್ದಕ್ಕೆ, ಹಿಂದಿನ ಅವಧಿಯಲ್ಲಿ ಸಚಿವರಾಗಿದ್ದ ಹಲವರು ಸೋತಿದ್ದಕ್ಕೆ ಒಂದಕ್ಕೊಂದು ಬೆಸೆದುಕೊಂಡಿರುವ ಎರಡು ವಿಷಯಗಳು ಕಾರಣ. ಮನೋಹರಲಾಲ್‌ ಖಟ್ಟರ್ ನೇತೃತ್ವದ ಸರ್ಕಾರದ ಸಾಧನೆ ಚೆನ್ನಾಗಿ ಇಲ್ಲದಿದ್ದುದು ಹಾಗೂ ರಾಜ್ಯ ಸರ್ಕಾರದ ಬಗೆಗಿನ ಜನರ ಅತೃಪ್ತಿಯನ್ನು ನಿವಾರಿಸಲು ಕೇಂದ್ರದ ನಾಯಕತ್ವ ವಿಫಲವಾಗಿದ್ದು ಮೊದಲ ಕಾರಣ. ಹಾಲಿ ಶಾಸಕರ ವಿರುದ್ಧ ವ್ಯಕ್ತವಾದ ಬಲವಾದ ಆಡಳಿತ ವಿರೋಧಿ ಅಲೆ ಎರಡನೆಯ ಕಾರಣ. ಎರಡನೆಯ ಕಾರಣವು ಮಹಾರಾಷ್ಟ್ರದಲ್ಲಿ ಕೂಡ ಕೆಲಸ ಮಾಡಿದೆ.

ಚುನಾವಣಾ ಫಲಿತಾಂಶದ ವಿಶ್ಲೇಷಣೆಯೊಂದರ ಪ್ರಕಾರ, ಪ್ರವಾಹ ಪೀಡಿತ ಪ್ರದೇಶಗಳ ಹಾಗೂ ನೀರಿನ ಅಭಾವ ಎದುರಿಸಿದ ಪ್ರದೇಶಗಳ ಹಾಲಿ ಶಾಸಕರು ಹಿನ್ನಡೆ ಅನುಭವಿಸಿದ್ದಾರೆ. ಇದು ಕರ್ನಾಟಕಕ್ಕೂ ಒಂದು ಪಾಠ. ಕರ್ನಾಟಕದಲ್ಲಿ ಈಗ ಉಪಚುನಾವಣೆ ನಡೆಯಲಿರುವ ಕ್ಷೇತ್ರಗಳಲ್ಲಿ ಗೆದ್ದಿದ್ದು ಜೆಡಿಎಸ್ ಅಥವಾ ಕಾಂಗ್ರೆಸ್ ಅಭ್ಯರ್ಥಿಗಳು. ರಾಜೀನಾಮೆ ನೀಡಿದವರಿಗೆ, ನಿಷ್ಠೆ ಬದಲಿಸುವ ಸಾಧ್ಯತೆ ಇರುವವರಿಗೆ ಟಿಕೆಟ್ ನೀಡಲು ಬಿಜೆಪಿ ತೀರ್ಮಾನಿಸುವುದಾದರೆ, ರಾಜೀನಾಮೆ ನೀಡಿದ/ ಅನರ್ಹಗೊಂಡ ಶಾಸಕರ ಬಗ್ಗೆ ಜನರಲ್ಲಿ ಇರುವ ಭಾವನೆ ಹಾಗೂ ಪಕ್ಷಾಂತರಿಗಳಿಗೆ ಮಣೆ ಹಾಕುವ ಬಗ್ಗೆ ಬಿಜೆಪಿಯಲ್ಲೇ ಇರುವ ಅಸಮಾಧಾನದ ಬಗ್ಗೆ ಗಮನ ನೀಡುವುದು ಮುಖ್ಯ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದವರ ಕಾರಣದಿಂದಾಗಿಯೇ ಕಾಂಗ್ರೆಸ್–ಜೆಡಿಎಸ್ ನೇತೃತ್ವದ ಸರ್ಕಾರ ಪತನವಾಗಿ, ಬಿಜೆಪಿ ನೇತೃತ್ವದ ಸರ್ಕಾರ ರಚನೆ ಸಾಧ್ಯವಾಯಿತು ಎಂದು ಮುಖ್ಯಮಂತ್ರಿಯವರು, ಪಕ್ಷಾಂತರಿಗಳಿಗೆ ಟಿಕೆಟ್ ಕೊಡುವುದನ್ನು ಸಮರ್ಥಿಸಿಕೊಳ್ಳಬಹುದು. ಆದರೆ, ಆ ಮಾತು ಮತದಾರರಿಗೆ ಹಾಗೂ ಪಕ್ಷದ ಕಾರ್ಯಕರ್ತರಿಗೆ ಸಮಾಧಾನ ತರಲಿಕ್ಕಿಲ್ಲ.

ಮುಖ್ಯಮಂತ್ರಿಯವರ ಧ್ವನಿ ಇದೆ ಎನ್ನಲಾದ ಈಚಿನ ಒಂದು ವಿಡಿಯೊ ಸುತ್ತಲಿನ ವಿವಾದವು ಸಮಸ್ಯೆಯನ್ನು ಇನ್ನಷ್ಟು ಜಟಿಲಗೊಳಿಸುತ್ತದೆ. ತಕ್ಷಣಕ್ಕೆ ಏನನ್ನೋ ಪಡೆದುಕೊಳ್ಳಲು ಬಿಜೆಪಿಯು ದೀರ್ಘಾವಧಿ ಹಿತಾಸಕ್ತಿಗಳನ್ನು ಬಲಿಕೊಟ್ಟಿತೇ ಎಂಬುದು ಮುಖ್ಯ ಪ್ರಶ್ನೆ.

ಮೂರನೆಯದಾಗಿ, ಅತಿಯಾದ ಆತ್ಮವಿಶ್ವಾಸ ಹಾಗೂ ಅತಿಯಾದ ನಿರೀಕ್ಷೆಗಳನ್ನು ಹುಟ್ಟಿಸುವುದರ ಅಪಾಯ ಗಳತ್ತ ಕೂಡ ಹರಿಯಾಣ ಮತ್ತು ಮಹಾರಾಷ್ಟ್ರದ ಫಲಿತಾಂಶಗಳು ಗಮನ ಸೆಳೆಯುತ್ತವೆ. ಹರಿಯಾಣದಲ್ಲಿ 90ರಲ್ಲಿ 75 ಸ್ಥಾನಗಳನ್ನು ಗೆದ್ದುಕೊಳ್ಳಬಹುದು, ಮಹಾರಾಷ್ಟ್ರದಲ್ಲಿ ಬಹುಮತಕ್ಕೆ ಹತ್ತಿರವಾದ ಸಂಖ್ಯಾಬಲ ಪಡೆದುಕೊಳ್ಳಬಹುದು ಎಂದು ಬಿಜೆಪಿ ಭಾವಿಸಿತ್ತು. ಇವೆರಡೂ ಗುರಿಗಳನ್ನು ತಲುಪಲು ಪಕ್ಷಕ್ಕೆ ಸಾಧ್ಯವಾಗಲಿಲ್ಲ. ಅದರ ಪರಿಣಾಮಗಳನ್ನು ಬಿಜೆಪಿ ಎರಡೂ ರಾಜ್ಯಗಳಲ್ಲಿ ಎದುರಿಸುತ್ತಿದೆ. ಅದೇ ರೀತಿ, ಕರ್ನಾಟಕ ದಲ್ಲಿ ಕೂಡ ಬಿಜೆಪಿ ಅತಿಯಾದ ಆತ್ಮವಿಶ್ವಾಸದಲ್ಲಿ ಇರುವಂತಿದೆ. ಆದರೆ, ರಾಜ್ಯದ ನಾಯಕತ್ವ ಹಾಗೂ ರಾಷ್ಟ್ರೀಯ ನಾಯಕತ್ವದ ನಡುವೆ ಸರಿಯಾದ ಸಂವಹನ ಇಲ್ಲದಿರುವಂತೆ ತೋರುತ್ತಿರುವುದು ಬಿಜೆಪಿಗೆ ಕರ್ನಾಟಕ ದಲ್ಲಿ ಒಂದು ಹೆಚ್ಚುವರಿ ತಲೆನೋವು. ಪಕ್ಷದ ಆಡಳಿತ ವ್ಯವಸ್ಥೆಯನ್ನು ಒಗ್ಗೂಡಿಸದೆ ಉಪಚುನಾವಣೆ ಕಣಕ್ಕೆ ಧುಮುಕುವುದರಿಂದ ವಿರೋಧ ಪಕ್ಷಗಳಿಗೆ ಅಗತ್ಯ ಅನುಕೂಲ ಮಾಡಿಕೊಟ್ಟಂತೆ ಆಗುತ್ತದೆ.

ಇನ್ನು, ಚುನಾವಣಾ ಫಲಿತಾಂಶ ಹೇಳಿದ ಕೊನೆಯ ಪಾಠ. ಆಡಳಿತ ಪಕ್ಷದ ಎದುರಿನಲ್ಲಿ ಎದ್ದು ಕಾಣುವ, ವಿಶ್ವಾಸಾರ್ಹತೆ ಹೊಂದಿರುವ ಹಾಗೂ ಒಗ್ಗಟ್ಟು ಪ್ರದರ್ಶಿ ಸುವ ವಿರೋಧ ಪಕ್ಷಗಳು ಎಲ್ಲ ಸಂದರ್ಭಗಳಲ್ಲೂ ಚುನಾವಣಾ ಕಣದಲ್ಲಿ ಕಠಿಣ ಸವಾಲು ಒಡ್ಡಬಲ್ಲವು. ಇದನ್ನು ಹರಿಯಾಣದಲ್ಲಿ ದುಶ್ಯಂತ್ ಚೌಟಾಲಾ ಹಾಗೂ ಮಹಾರಾಷ್ಟ್ರದಲ್ಲಿ ಶರದ್ ಪವಾರ್ ಸಾಬೀತು ಮಾಡಿ ತೋರಿಸಿದ್ದಾರೆ. ಎರಡೂ ರಾಜ್ಯಗಳಲ್ಲಿ ತುಸು ತಡವಾಗಿ ಎಚ್ಚೆತ್ತುಕೊಂಡಂತೆ ಕಂಡ ಕಾಂಗ್ರೆಸ್ ಪಕ್ಷವು, ಆಡಳಿತಾರೂಢ ಪಕ್ಷಕ್ಕೆ ತುಸು ಹೆಚ್ಚಿನ ರಾಜಕೀಯ ಸ್ಥಳಾವಕಾಶ ಕಲ್ಪಿಸಿಕೊಟ್ಟಿತು. ಇದು ಕರ್ನಾಟಕದಲ್ಲಿ ಕೂಡ ಪುನರಾವರ್ತನೆ ಆಗಬಹುದೇ? ಉಪಚುನಾವಣೆಯಂತಹ ಸಂದರ್ಭಗಳಲ್ಲಿ ಈ ಪ್ರಶ್ನೆ ಹೆಚ್ಚು ಯುಕ್ತವಾಗುತ್ತದೆ. ಉಪಚುನಾವಣೆಗಳಲ್ಲಿ ಪ್ರತೀ ಕ್ಷೇತ್ರದ ಮತದಾರರ ಮನಸ್ಸಿನಲ್ಲಿ ನಡೆಯುವ ತರ್ಕ ಹಾಗೂ ಚುನಾವಣಾ ಸ್ಪರ್ಧೆ ವಿಭಿನ್ನ ರೀತಿಯಲ್ಲಿ ಇರುತ್ತವೆ. ಹಾಗಾಗಿ, ವಿರೋಧ ಪಕ್ಷಗಳು ಬಿಜೆಪಿಗೆ ಎದುರಾಗಿ ಹೇಗೆ ಸಿದ್ಧವಾಗುತ್ತವೆ, ಬಿಜೆಪಿಗೆ ಪರ್ಯಾಯವಾಗಿ ತಾವು ಹೇಗೆ ಸ್ವೀಕಾರಾರ್ಹ ಎಂದು ತೋರಿಸಿಕೊಳ್ಳುತ್ತವೆ ಎನ್ನುವುದು ಬಹಳ ಮುಖ್ಯ. ಉಪಚುನಾವಣೆ ನಡೆಯಲಿರುವ ಕ್ಷೇತ್ರಗಳು ಬಿಜೆಪಿಯ ಕೈಯಲ್ಲಿ ಇದ್ದವಲ್ಲ. ಬದಲಿಗೆ, ಆ ಕ್ಷೇತ್ರಗಳನ್ನು ಎದುರಾಳಿ ಪಕ್ಷಗಳಿಂದ ಕಸಿದುಕೊಳ್ಳಲು ಬಿಜೆಪಿ ಯತ್ನಿಸುತ್ತಿರುವ ಕಾರಣ, ಇವೆಲ್ಲ ವಿಚಾರಗಳು ಹೆಚ್ಚು ಮುಖ್ಯವಾಗುತ್ತವೆ.

ಒಟ್ಟಾರೆಯಾಗಿ ಹೇಳಬೇಕೆಂದರೆ, ಕರ್ನಾಟಕದಲ್ಲಿ ನಡೆಯಲಿರುವ ಉಪಚುನಾವಣೆಯನ್ನು ಬಹಳ ಸೂಕ್ಷ್ಮವಾಗಿ ಗಮನಿಸಲಾಗುತ್ತದೆ. ಏಕೆಂದರೆ, ಇದು ರಾಜ್ಯ ರಾಜಕಾರಣದ ಹಣೆಬರಹವನ್ನು ವ್ಯಾಖ್ಯಾನಿಸಲಿದೆ, ತೀರ್ಮಾನಿಸಲಿದೆ. ಬಿಜೆಪಿಯು ಆಡಳಿತ
ಪಕ್ಷವಾಗಿ ಮುಂದುವರಿಯಲಿದೆಯೇ ಎಂಬುದನ್ನೂ ತೀರ್ಮಾನಿಸಲಿದೆ. ಈ ನಡುವೆ, ಶಾಸಕರ ಅನರ್ಹತೆ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ನೀಡುವ ತೀರ್ಪು ಗಮನಾರ್ಹವಾಗುತ್ತದೆ. ಈ ತೀರ್ಪು ರಾಜಕೀಯದ ಹಲವು ಲೆಕ್ಕಾಚಾರಗಳನ್ನು, ಚುನಾವಣಾ ಹೊಂದಾಣಿಕೆಗಳನ್ನು ಬದಲಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT