ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರಾಂಗದೆಯ ಮಣಿಪುರದಲ್ಲಿ ‘ಯುಗಾದಿ’...

Last Updated 10 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಈ ಸಲ ಯುಗಾದಿಯನ್ನು ನಾನು ಆಚರಿ­ಸಿದ್ದು ಕರ್ನಾಟಕದಲ್ಲಲ್ಲ, ಮಣಿಪುರ­ದಲ್ಲಿ. ಮಣಿಪುರಿಗಳ ಯುಗಾದಿ, ಕನ್ನಡಿಗ, -ತೆಲುಗರ ಯುಗಾದಿ ಒಂದೇ ದಿವಸ ಬೀಳುತ್ತವೆ. ಯಾಕೆಂದರೆ ನಮ್ಮ ಹಾಗೆ ಅವರ ವರ್ಷ­ಮಾನವೂ ಚಾಂದ್ರಮಾನ ಪದ್ಧತಿಯ ಅನು­ಸಾರ.

ಮಂಗೋಲಿಯನ್ ಜನಾಂಗೀಯ ಲಕ್ಷಣ­ಗಳ ಮಣಿಪುರಿಗಳು ಪ್ರಧಾನತಃ ಮೇಥೇಯ್ ಬುಡಕಟ್ಟಿನವರು; ಅವರಾಡುವ ಭಾಷೆ ಚೀಣೀ- ಬರ್ಮೀಯ ಭಾಷೆಗಳನ್ನು ಹೋಲುತ್ತದೆ. ದಕ್ಷಿಣ ಭಾರತದ ನಾವು ದ್ರಾವಿಡ ಮೂಲದವರು; ನಮ್ಮ ಭಾಷೆಗಳು ದ್ರಾವಿಡ ಭಾಷೆಗಳು. ಸಾಂಸ್ಕೃ­ತಿ­ಕವಾಗಿ ಮಣಿಪುರದ ಮುಖ್ಯ ಬುಡಕಟ್ಟಿನ ಮೇಥೇಯ್‌ಗಳು, ಇತರ ಭಾರತೀಯರಿಗಿಂತ ಪೂರ್ವ ಏಷ್ಯಾದವರ ಥರ. ಆದರೆ ದ್ರಾವಿಡ­ರಾದ ನಾವು ಪೂರ್ವ ಏಷ್ಯಾದವರು ಇಬ್ಬರಿಗೂ ಸಮಾನವಾದುದು ಚಾಂದ್ರಮಾನ ಕಾಲಗಣನಾ­ಕ್ರಮ.

ಮಣಿಪುರದ ರಕ್ತಸಿಕ್ತ ಸಮಕಾಲೀನ ಇತಿಹಾಸ ನಮ್ಮೆಲ್ಲರಿಗೂ ತುಸು ಗೊತ್ತಿದೆ. ಆದರೆ ನೆತ್ತರಿ­ನಾಟ ಮಣಿಪುರದ ಮಣ್ಣಿಗೆ ಹೊಸತಲ್ಲ. ಶತಶತ­ಮಾನಗಳಿಂದ ಮಲೆವಾಸಿಗಳಾದ ನಾಗಾಗಳು ನೆಲನಿವಾಸಿಗಳಾದ  ಮೇಥೇಯ್‌ಗಳು ಸದಾ ಪರ­ಸ್ಪರ ಹೋರಾಡುತ್ತಾ ಇದ್ದರು. ಈ ಹಿಂಸ್ರ ಪ್ರವೃತ್ತಿ ಇಂದಿನ ಮಣಿಪುರದ ಸಂಕೀರ್ತನವೆಂಬ ಡೊಳ್ಳಿನ ರೀತಿಯ ಕುಣಿತದಲ್ಲಿ ಶಕ್ತಿಯುತ ಲಯಬದ್ಧತೆಯಾಗಿ ಕಲಾರೂಪದಲ್ಲಿ ಅಭಿವ್ಯಕ್ತ­ಗೊಳ್ಳುತ್ತದೆ. ಆದರೆ ಮಣಿಪುರದ ಇನ್ನಿತರ ಆಡುಕಲೆಗಳಲ್ಲಿ ಪ್ರಶಾಂತತೆಯೇ ಹೂರಣ.

ಸೃಷ್ಟಿ ಪುರಾಣದ ಕತೆಯನ್ನು ಕುಣಿತದಲ್ಲಿ ಹೇಳುವ ಲಾಯ್ ಹರೋಬಾದಲ್ಲಿ, ಮಣಿಪುರಿ ಗೀತ ರೂಪಕಗಳಲ್ಲಿ, ವೈಷ್ಣವ ಕಥಾವಸ್ತುಗಳ­ನ್ನ­ಭಿನಯಿಸುವ ಮಣಿಪುರಿ ನರ್ತನದಲ್ಲಿ ಕಲಾಕಾರ ಯಾವುದೋ ಹಗಲುಗನಸಿನಲ್ಲಿ ತೇಲುವ ತೆಳುಮೋಡದಂತೆ ಚಲಿಸುತ್ತಾನೆ.
ತನ್ನ ಗತಾನುಗತಿಕ ಸಂಸ್ಕೃತಿಯನ್ನು ಬದುಕು­ತ್ತಿದ್ದ ಮಣಿಪುರಿಗಳ ಇತಿಹಾಸದಲ್ಲಿ ಬಹುಕಾಲ ಪಲ್ಲಟಗಳಾಗಲೇ ಇಲ್ಲ.

ಮೂರು ಸಾವಿರ ವರ್ಷ­ಗಳ ಇತಿಹಾಸದ ಈ ನೆಲದಲ್ಲಿ ಹದಿನೆಂಟನೇ ಶತ­ಮಾನದಲ್ಲಿ ಗರೀಬನಿವಾಸನೆಂಬ ಅರಸ ಗೌಡೀಯ ವೈಷ್ಣವ ಮತವನ್ನು ರಾಜಾಶ್ರಿತ ಧರ್ಮವನ್ನಾಗಿ ಘೋಷಿಸಿದ. ಆದರೆ ಬಹು­ಮಟ್ಟಿಗೆ ಮಣಿಪುರಿ ಜನತೆ ಮತಾಂತರ ಹೊಂದ­ಲಿಲ್ಲ. ಹಾಗೆ ಹೊಂದಿದವರು ತಮ್ಮ ಸನಾತನ ಧರ್ಮದ ಚೌಕಟ್ಟಿನಲ್ಲಿ ಹೊಸಧರ್ಮವನ್ನು ಅಳ­ವಡಿಸಿಕೊಂಡರು, ಅಷ್ಟೆ. ಈ ಅಳವಡಿಕೆ ಮಣಿ­ಪುರದ ಕಲೆಗಳಲ್ಲಿ ಬಿಂಬಿತವಾಗಿದೆ. ಅವರ ಸಂಸ್ಕೃ­ತಿ­ಯಲ್ಲಿ ಕೂಡಾ. ಕೆಲವು ಮಣಿಪುರಿ ವೈಷ್ಣವರ ಮನೆಗಳಲ್ಲಿ ಒಂದುಕಡೆ ಶ್ರೀ ಕೃಷ್ಣನ ಮೂರ್ತಿ, ಇನ್ನೊಂದು ಮೂಲೆಯಲ್ಲಿ ಮೇಥೀಯ್ ದೇವತೆ ಸನಾಮಿಯ ಪೂಜಾಗೃಹ ಇದೆ.

ಈಶಾನ್ಯ ಭಾರತದ ಹಲವು ಪ್ರದೇಶಗಳಲ್ಲಿ- ಉದಾಹರಣೆಗೆ ನಾಗಾ, ಕಾಸಿ, ಮಿಜೋರಾಂ ಪ್ರದೇಶಗಳಲ್ಲಿ ಬಹುಸಂಖ್ಯಾತರು ಕ್ರಿಸ್ತಾನುಯಾ ಯಿಗಳಾಗಿ ಮತ ಬದಲಾಯಿಸಿದರು. ಆದರೆ ಮಣಿಪುರದಲ್ಲಿ ಆದ ಕ್ರೈಸ್ತ ಮತಾಂತರ ಬಹಳ ಕಡಿಮೆ. ಇಸ್ಲಾಂ ಧರ್ಮ ಈ ನೆಲದಲ್ಲಿ ನೆಲೆ­ಯೂ­ರಲಿಲ್ಲ. ಗತಕಾಲದಲ್ಲಿ ಬೌದ್ಧ ಧರ್ಮ ಮ್ಯಾನ್ಮಾರಿಗೆ ಹೋದದ್ದು ಮಣಿಪುರದ ಮೂಲಕ. ಆದರೆ ಮಣಿಪುರಿಗಳು ಬೌದ್ಧ­ಧರ್ಮಕ್ಕೂ ಒಲಿಯಲಿಲ್ಲ. ವೈಷ್ಣವ ಧರ್ಮವನ್ನು ಅರಸನೊಬ್ಬ ತಮ್ಮ ಮೇಲೆ ಹೇರಿದಾಗ ಅವರು ಅದನ್ನೊಪ್ಪಿಕೊಂಡದ್ದು ಮೇಲ್ಮಟ್ಟದಲ್ಲಿ ಮಾತ್ರ.

ಮಣಿಪುರದ ನನ್ನ ಆತ್ಮೀಯ ಸ್ನೇಹಿತರೂ ರಂಗ­ತಜ್ಞರೂ ಮಾನವ ಸ್ವಾತಂತ್ರ್ಯ ಆಂದೋ­ಲ­ನ­ಕಾರರೂ ಆದ ಲೋಕೇಂದ್ರ ಆರಂಬಮ್ ಪ್ರಕಾರ ಮಣಿಪುರದ ಜನತೆ ಮೂರು ಬಾರಿ ಹಲ್ಲೆ­ಗೊಳಗಾದರು. ಮೊದಲನೆಯದು ಹಿಂದೂ­ಗಳ ಹಲ್ಲೆ. ಎರಡನೆಯದು ಬ್ರಿಟಿಷ್ ಹಲ್ಲೆ. ಮೂರನೆಯದು ಭಾರತ ಸರ್ಕಾರದ ಹಲ್ಲೆ.ಇವುಗಳ ಉಗ್ರ ಪರಿಣಾಮ ಅರವತ್ತರ ದಶಕದಲ್ಲಿ ಭಯೋತ್ಪಾದಕ ಹೋರಾಟದ ಸ್ವರೂಪ ತಳೆಯಿತು. ಅದನ್ನು ನಿಯಂತ್ರಿಸಲು ಭಾರತ ಸರ್ಕಾರ ರಕ್ಷಣಾ ಪಡೆಯವರನ್ನು ದೊಡ್ಡ ಪ್ರಮಾಣದಲ್ಲಿ ಅಲ್ಲಿಗೆ ರವಾನಿಸಿತು. ಬಂಡುಕೋರ ಗುಂಪುಗಳು  ತುಂಡು ತುಂಡಾಗಿ ಪರಸ್ಪರ ಕಾದತೊಡಗಿದವು. ಜೊತೆಗೆ ಭಾರ­ತೀಯ ರಕ್ಷಣಾಪಡೆಗಳು ಉಗ್ರಕ್ರಮಕ್ಕೆ ತೊಡಗಿ­ದವು. ಅಲ್ಲಿಂದ ಶುರುವಾಯಿತು ಹಲ್ಲೆ, ಪ್ರತಿ­ಹಲ್ಲೆಗಳ ಕಠೋರ ಇತಿಹಾಸ.

ಕೊಲೆ, ಮಾನ ಭಂಗಗಳ ಕರಾಳ ಅಧ್ಯಾಯ. ಮಣಿಪುರದ ಯುವ­ಪೀಳಿಗೆಯವರು ರೊಚ್ಚಿಗೆದ್ದು ಭಾರ­ತೀಯ ರಕ್ಷಣಾ ಪಡೆಯ ವಾಪಸಾತಿಯ ಬೇಡಿಕೆಯನ್ನು ಮುಂದಿಟ್ಟರು. ಇರೋಮ್ ಶರ್ಮಿಳಾ ಅವರು ಈ ಸಂದರ್ಭದಲ್ಲೇ ಆಮರ­ಣಾಂತ ಉಪವಾಸ ಶುರು ಮಾಡಿದ್ದು. ಅವರ ಪ್ರತಿ­ಭಟನೆ ಇನ್ನೂ ಮುಂದುವರಿದಿದೆ. ಯುವ­ಪೀಳಿಗೆಯವರು ಭಾರತವನ್ನು ದುರದೃಷ್ಟವ­ಶಾತ್ ಎದುರಾಳಿ ಯನ್ನಾಗಿ ನೋಡುತ್ತಿದ್ದಾರೆ. ವಿಮೋಚನೆಗೆ ಹಾತೊರೆಯುತ್ತಿದ್ದಾರೆ- ಬದುಕಿ­ನಲ್ಲಿ, ಕಾವ್ಯದಲ್ಲಿ, ಕಲೆಗಳಲ್ಲಿ. ಆದರೆ ಮಣಿ­ಪುರಿ­ಗಳಲ್ಲಿ ಮತಭೇದವಿಲ್ಲದೆ ಇಲ್ಲ.

ಈ ಬಾರಿ ನಾನು ಭಾಗವಹಿಸಿದ ಕವಿಮೇಳ­ವೊಂದ­ರಲ್ಲಿ ಯುವ ಮಣಿಪುರಿ ಕವಿಯೊಬ್ಬ ಮ್ಯಾನ್ಮಾರ್‌ಗೆ ಪ್ರೇಮಪತ್ರವೊಂದನ್ನು ಕವಿತೆ ರೂಪದಲ್ಲಿ ಬರೆದು, ‘ಭಾರತದಿಂದ ತನ್ನನ್ನು ಬಿಡಿಸು, ನಿನ್ನವನಾಗಿಸಿಕೊ’ ಎಂದು ಪ್ರಾರ್ಥಿಸಿದ್ದ. ಆದರೆ ಮಧ್ಯವಯಸ್ಕರು ಇನ್ನೂ ಭಾರತದ ಸಂವಿ­ಧಾನದ ಚೌಕಟ್ಟಲ್ಲಿ ಸುಧಾರಣೆ ಬಯಸುತ್ತಿ­ದ್ದಾರೆ. ನನ್ನ ಇನ್ನೊಬ್ಬ ಮಿತ್ರ ಕ್ಯೋಗೆನ್ ಹೇಳು­ತ್ತಾರೆ: ಯುವಕರ ಸಿಟ್ಟಿಗೆ ಕಾರಣಗಳಿವೆ. ಆದರೆ ಆ ಸಿಟ್ಟು ಪರಿಹಾರ ನೀಡಲಾರದು. ಮಣಿಪುರಕ್ಕೆ ಬೇಕಾದ್ದು ಅತಿ ಉಗ್ರ ಬದಲಾವಣೆಯಲ್ಲ. ಅದಕ್ಕೆ ಒಂದು ಸಾಂತ್ವನದ ಅಗತ್ಯವಿದೆ.

ಆದರೆ ಯುವಪೀಳಿಗೆಯವರು ಭಾರತದ ಸಂಸ್ಕೃತಿ­ಯಿಂದ ದೂರ ಸಿಡಿಯತೊಡಗಿದ್ದಾರೆ. ಬಂಗಾಳಿ ಪ್ರಭಾವ ಹದಿನೆಂಟನೆ ಶತಮಾನದಲ್ಲಿ ಶುರುವಾದಾಗ ಬರಹದ ಅಭಿವ್ಯಕ್ತಿಗೆ ಬಂಗಾಳಿ ವರ್ಣಮಾಲೆಯ ಮೊರೆ ಹೋಗಲಾಯಿತು. ಈಗಿನ ಯುವ ಜನತೆ ಬಂಗಾಳಿ ವರ್ಣಮಾಲೆ­ಯನ್ನು ಬಿಟ್ಟು ತಮ್ಮ ಮೆಥೇಯ್ ಬರವಣಿ­ಗೆಯ ವ್ಯವಸ್ಥೆಗೆ ಉತ್ಸಾಹದಿಂದ ಹಿಂತಿರುಗಿ­ದ್ದಾರೆ. ಕಲಾ­ಕಾರರು, ಕವಿಗಳು, ರಂಗಕರ್ಮಿಗಳು ತಮ್ಮ ಹಿಂದುಯೇತರ ಅಸ್ಮಿತೆಯನ್ನು ಸೃಜನಶೀಲವಾಗಿ ಅರಸತೊಡಗಿದ್ದಾರೆ. ಹಿಂಸೆ ಮತ್ತು ತಲ್ಲಣಗಳ ಹುಟ್ಟುಗುರುತುಗಳನ್ನು ಧರಿಸಿಕೊಂಡ ಮಣಿಪು­ರದ ಸಾಮೂಹಿಕ ಸೃಜನಶೀಲ ಪ್ರತಿಭೆ ಅಸಾಧಾ­ರಣ ತೆರನಾಗಿ ಮೈದಾಳುತ್ತಿದೆ.

ಭರತಖಂಡದ ಪ್ರದೇಶಗಳಲ್ಲಿ ಅತ್ಯಂತ ವಿಶಿಷ್ಟ­ವಾದ ಮಣಿಪುರದ ಇಂದಿನ ಹೆಸರು ಅಪ್ಪಟ ಭಾರ­ತೀಯವಾಗಿ ಕೇಳುತ್ತದೆ. ಆದರೆ ಆ ಪ್ರದೇ­ಶದ ಮೂಲ ಹೆಸರು  ಕಾಂಗ್ಲಾಪಾಕ್ ಅಥವಾ ಮೇಥೇ­ಯಿಪಾಕ್ ಎಂದು. ಮಹಾಭಾರತದ ಚಿತ್ರಾಂಗದಾಳ ಕತೆಯ ಭಿತ್ತಿ ಮಣಿಪುರವಾಗಿದೆ. ತನ್ನ ದೇಶಾಟನೆಯ  ಪರ್ವದಲ್ಲಿ ಮಣಿಪುರಕ್ಕೆ ಬಂದ ಅರ್ಜುನ ಮಣಿಪುರದ ಗಂಡುವೇಷಧಾರಿ ಚಿತ್ರಾಂಗದೆಯಲ್ಲಿ ಅನುರಕ್ತನಾಗಿ ಮೈಸಲಿಗೆ ಬೆಳೆಸಿ ಅವಳನ್ನು ಪುತ್ರವತಿಯನ್ನಾಗಿಸಿ ಅವಳಿಂದ ಅಗಲಿ ತನ್ನ ಪ್ರಯಾಣವನ್ನು ಮುಂದುವರಿಸು­ತ್ತಾನೆ.

ಚಿತ್ರಾಂಗದೆಗೆ ಹುಟ್ಟಿದ ಮಗ ಬಬ್ರು­ವಾಹನ ವೀರಪುರುಷನಾಗಿ ಬೆಳೆದು ಮುಂದೊಮ್ಮೆ ತನ್ನ ತಂದೆ ಅರ್ಜುನನಿಗೆ ಯುದ್ಧರಂಗದಲ್ಲಿ ಎದುರಾಗಿ ತನ್ನ ತಂದೆಯನ್ನು ಸೋಲಿಸಿ, ಕೊಂದ ನಂತರ ತಂದೆಯನ್ನೇ ಕೊಂದೆ­ನೆಂಬ ಅರಿವಾಗಿ ಪಶ್ಚಾತ್ತಾಪದಿಂದ ಆತ್ಮಹತ್ಯೆಗೆ­ಳೆ­ಸಿದಾಗ ತನ್ನ ಸಾಕುತಾಯಿ ಉಲೂಪಿ ನೀಡಿದ ರತ್ನ­ದಬಲದಿಂದ ಅರ್ಜುನನ್ನು ಪುನರುಜ್ಜೀವ­ಗೊಳಿಸಿ ಅವನೊಡನೆ ಹಸ್ತಿನಾಪುರಕ್ಕೆ ತೆರಳುತ್ತಾನೆ.

ಮಹಾಭಾರತದ ಈ ಉಪಾಖ್ಯಾನ ವನ್ನು ರವೀಂದ್ರನಾಥ ಟ್ಯಾಗೋರ್ ತಮ್ಮ ‘ಚಿತ್ರಾ’ ನಾಟ­ಕ­ದಲ್ಲಿ ಅವಿಸ್ಮರಣೀಯ ಶೃಂಗಾರ ಕಥಾ­ನ­ಕವನ್ನಾಗಿ ಬಿಡಿಸಿದ್ದಾರೆ. ಇದೊಂದು ಸುಂದರ ನೃತ್ಯರೂಪಕವಾಗಿ ವಿಶ್ವಪ್ರಸಿದ್ಧ. ಇದೇ ಕತೆಯನ್ನು ಕುವೆಂಪು ಅವರು ತಮ್ಮ ‘ಚಿತ್ರಾಂಗದಾ’ ಎಂಬ ಕಥನಕವನದಲ್ಲಿ ಇನ್ನೊಂದು ಬಗೆಯಲ್ಲಿ ಹೇಳಿ­ದ್ದಾರೆ. ಬಬ್ರುವಾಹನನ ಕಾಳಗದ ಕತೆ ಯಕ್ಷ­ಗಾನ ರೂಪಕಗಳ ಮೂಲಕ, ತೆಲುಗು ಮತ್ತು ಕನ್ನಡ ಸಿನಿಮಾಗಳ ರೂಪದಲ್ಲಿ ಜನಪ್ರಿಯ. ಈ ಕತೆಯಲ್ಲಿರುವ ಪ್ರತಿಲೈಂಗಿಕತೆಯ ಆಯಾಮ­ವನ್ನು ಟ್ಯಾಗೋರ್ ಅವರ ಕಥಾನಕವನ್ನಾಧರಿಸಿ ಋತುಪರ್ಣೊಘೋಷ್ ನಿರ್ಮಿಸಿದ ‘ಚಿತ್ರಾಂಗದಾ’ ಸಿನಿಮಾದಲ್ಲಿ ಅನ್ವೇಷಿಸಲಾಗಿದೆ.

ನನಗೆ ಗೊತ್ತಿದ್ದ ಹಾಗೆ ಈ ಕತೆಯ ರಾಜಕೀಯ ಮಗ್ಗುಲಿಗೆ ಈ ಮಹನೀಯರಾರೂ ಒತ್ತು ನೀಡಿಲ್ಲ. ಮುಂದೊಮ್ಮೆ ಯಾರದೋ ಕಲೆಯ ಮೂಸೆ­ಯಲ್ಲಿ ಅರ್ಜುನ, ಚಿತ್ರಾಂಗದೆ, ಬಬ್ರು­ವಾಹನರ ಕತೆ ಸ್ತ್ರೀಪ್ರಧಾನ ಸಂಸ್ಕೃತಿಯನ್ನು ಗಂಡುಸಂಸ್ಕೃತಿ ಹೇಗೆ ಶೋಷಿಸುತ್ತದೆ ಎಂಬುದರ ಕುರಿತ ಕತೆಯಾಗಿ ಮೂಡಬಹುದು. ಇಂದಿನ ಮಣಿಪುರದ ಸಮಾಜ- ಸಂಸ್ಕೃತಿಗಳಲ್ಲಿ, ಕಲೆಗಳಲ್ಲಿ ಮಣಿಪುರಿ ಪ್ರತಿಭೆ ಅರ್ಜುನನ ವಿರುದ್ಧ ಸೆಟೆದು ನಿಂತ ಬಬ್ರುವಾಹನನನ್ನು ಹೋಲುತ್ತಿದೆ. ಈ ಕತೆ ಮಹಾಭಾರತದ ಕತೆಯಂತೆ ಸುಖಾಂತ್ಯವಾಗಿ ಸಮ­ರಸದಲ್ಲಿ ಕೊನೆಗೊಳ್ಳುತ್ತದೋ ಇಲ್ಲವೋ ಕಾದು ನೋಡೋಣ.

ಮಣಿಪುರದ ಅತ್ಯಂತ ಶಕ್ತವಾದ ರಂಗ­ಭೂಮಿ ಸಮಕಾಲೀನ ಮಣಿಪುರದ ದಂದುಗ­ಗ­ಳನ್ನು ವಿವಿಧ ಬಗೆಗಳಲ್ಲಿ ಬಿಡಿಸಿಡುತ್ತಿದೆ. ಮಣಿ­ಪುರದ ರಂಗನಿರ್ದೇಶಕ ರತನ್ ಥಿಯಾಮ್ ಅವರು ತಮ್ಮ ಮಹಾಭಾರತ ಆಧಾರಿತ ರಂಗ ನಿರ್ಮಿತಿಗಳಲ್ಲಿ,  ಅಶೋಕನ ಕತೆಯಾಧಾರಿತ ‘ಉತ್ತರ ಪ್ರಿಯದರ್ಶಿಕಾ’ ನಾಟಕದಲ್ಲಿ ಹಿಂಸ್ರ ವಾತಾವರಣದಲ್ಲಿ ಅಸ್ತಿತ್ವದ, ಉಳಿವಿನ ಸವಾ­ಲು­ಗಳನ್ನು ಅನ್ವೇಷಿಸಿದ್ದಾರೆ.

ಮಣಿಪುರದ ವರ್ಣ­ರಂಜಿತವಾದ, ರಸವತ್ತಾದ ಸಾಂಸ್ಕೃತಿಕ ಅಂಶ­ಕ್ಕಿಂತ ಅಲಂಕೃತವಾದ ಅವರ ಶೈಲಿಯು ಸಮ­ನ್ವೀ­ಕರಣ ದೃಷ್ಟಿಯಿಂದ ಪ್ರೇರಿತವಾಗಿರುವುದರಿಂದ ಭಾರತದಾದ್ಯಂತ, ವಿಶ್ವದಾದ್ಯಂತ ಜನಪ್ರಿಯ­ವಾ­ಗಿದೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ರಂಗೋತ್ಸವಗಳಲ್ಲಿ ಸರ್ವಜನಾಕರ್ಷಕವಾಗಿ ರಂಜಿಸುತ್ತವೆ.

ಆದರೆ ಮಣಿಪುರದ ಇನ್ನೊಬ್ಬ ಖ್ಯಾತ ನಿರ್ದೇ­ಶಕ ಕನ್ಹೈಲಾಲ್ ಅವರು ತಮ್ಮ ರಂಗಕೃತಿಗಳಲ್ಲಿ ಇಂದಿನ ಮಣಿಪುರದ ಸನ್ನಿವೇಶದ ಸಂಘರ್ಷಾ­ತ್ಮ­ತೆಗೆ ಒತ್ತು ನೀಡುತ್ತಾರೆ. ಎಪ್ಪತ್ತರ ದಶಕದಲ್ಲಿ ಕರ್ನಾಟಕವನ್ನೂ ಒಳಗೊಂಡು ಭಾರತದ ಹಲ­ವೆ­ಡೆ­ಗಳಲ್ಲಿ ಪ್ರಸ್ತುತಗೊಳಿಸಲ್ಪಟ್ಟ ಅವರ ‘ಪೆಬೆತ್’ ನಾಟಕ ತಾಯಿಹಕ್ಕಿಯೊಂದು ಪರ­ಕೀಯ ಹಲ್ಲೆಗೊಳಗಾದ ತನ್ನ ಮುದ್ದುಮರಿ
ಗ­ಳನ್ನು ಹೇಗೆ ಸಂರಕ್ಷಿಸುತ್ತದೆಂಬುದನ್ನು ಮನೋ­ಜ್ಞ­­ವಾಗಿ ಚಿತ್ರಿಸಿತು. ಇಲ್ಲಿ ಹಲ್ಲೆಕೋರನನ್ನು ಬಂಗಾಳಿ ವೈಷ್ಣವನಾಗಿ ಕಲ್ಪಿಸಿಕೊಳ್ಳಲಾಗಿದೆ.

ಮುಂದೆ ಮಹಾಶ್ವೇತಾ ದೇವಿಯವರ ‘ದೋಪ್ತಿ’ ಕತೆಯಾಧಾರಿತ ಅವರ ಬಹುಚರ್ಚಿತ ನಾಟಕ ಹೊರಗಿನ ಸೇನಾಪಡೆಯವರು ತನ್ನ ಜನಾಂಗದ­ವರ ಮೇಲೆ ಹೇರುವ ಹಿಂಸೆಯನ್ನು ಹೋರಾಟ­ಗಾರ್ತಿಯೊಬ್ಬಳ ಮೇಲೆ ಮಿಲಿಟರಿ ಧೂರ್ತರು ಮಾಡುವ ಸಾಮೂಹಿಕ ಮಾನಭಂಗವನ್ನಾಗಿ ಚಿತ್ರಿಸಲಾಯಿತು. ಈ ನಾಟಕದ ಕೊನೆಯ ದೃಶ್ಯ­ದಲ್ಲಿ ಬರ್ಬರ ಗ್ಯಾಂಗ್‌ರೇಪ್‌ಗೆ ಶಿಕಾರಿಯಾದ ಹೆಂಗಸೊಬ್ಬಳು ಕೊನೆಗೆ ತನ್ನ ಕೊನೆಯ ಅರಿವೆ­ಗಳನ್ನು ಕಳಚಿಹಾಕಿ ತನ್ನ ಪೂರ್ಣ­ನಗ್ನತೆ­ಯಿಂದ ಸೇನಾಪತಿಯನ್ನು ಎದುರಿಸಿ ಅವನ ಹುಂಬ ಗಂಡುತನವನ್ನು ಬುಡಸಮೇತ ಅಲುಗಿ­ಸು­ತ್ತಾಳೆ.

ಈ ನಾಟಕ ಮಣಿಪುರದಲ್ಲಿ ಹಲವು ಟೀಕೆಗಳಿಗೆ ಗುರಿಯಾಯಿತು. ಹಿಂಸೆಯ ವಾತಾ­ವ­ರ­ಣದಲ್ಲಿ ಕನ್ಹೈ, ಮಣಿಪುರಿ ಮಹಿಳೆಯ ನಗ್ನತೆಯನ್ನು ವಿಜೃಂ­ಭಿಸಿ ಮಣಿಪುರದ ಮರ್ಯಾದೆಗೆ ಧಕ್ಕೆ­ಯುಂಟು ಮಾಡಿದ್ದಾರೆಂದು ಅನುಮಾನಿಸ­ಲಾಯಿತು. ಆದರೆ ಕೆಲ ವರ್ಷಗಳ ಬಳಿಕ ದಿನೇ ದಿನೇ ಹೆಚ್ಚುತ್ತಿದ್ದ ಮಾನಭಂಗದ ಕೃತ್ಯಗಳನ್ನು ವಿರೋಧಿಸಲು ಮಣಿಪುರದ ಹೆಂಗಸರು ಅಸ್ಸಾಂ ರೈಫಲ್ಸ್‌ನ ಮುಖ್ಯ ಕಚೇರಿಯ ಮುಂದೆ ನಿರ್ವಾ­ಣ­ವಾಗಿ ನಿಂತು ಪ್ರತಿಭಟಿಸಿದಾಗ ‘ದೋಪ್ತಿ’ ನಾಟ­ಕದ ಕೊನೆಯ ದೃಶ್ಯ  ವಾಸ್ತವತೆಯ ರಂಗ­ದಲ್ಲಿ ಪುನರ್ ನಿರ್ಮಾಣವಾಯಿತು. ಮೊನ್ನೆ ಇದೇ ನಾಟಕದ ರಂಗಪ್ರಸ್ತುತಿ ನಡೆದಾಗ ಹಿಂದೆ ಈ ನಾಟಕವನ್ನು ಕಠೋರವಾಗಿ ಟೀಕಿಸಿದ್ದ ಮಣಿ­ಪುರದ ಪ್ರೇಕ್ಷಕಗಣ ಸಜಲನಯನರಾಗಿ ಎದ್ದು ನಿಂತು ಕರತಾಡನ ಮಾಡಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.

ಮಣಿಪುರದ ಇನ್ನೊಬ್ಬ ಪ್ರತಿಭಾವಂತ ನಿರ್ದೇ­ಶಕ ಲೋಕೇಂದ್ರ ಆರಂಬಮ್ ಮಣಿಪುರದ ಹಿಂಸಾ ವಾತಾವರಣವನ್ನು ಇನ್ನೊಂದು ಬಗೆ­ಯಲ್ಲಿ ತಮ್ಮ ‘ಮ್ಯಾಕ್‌ಬೆತ್ ’ ರೂಪಾಂತರದಲ್ಲಿ  ಚಿತ್ರಿಸುತ್ತಾರೆ. ಮಣಿಪುರದಲ್ಲಿ ಮಾನಭಂಗಗ­ಳನ್ನೆಸ­ಗಿದವರು ಹೊರಗಿನ ಮಿಲಿಟರಿಯವರು ಮಾತ್ರವಲ್ಲ. ಸ್ವತಃ ಮಣಿಪುರಿಗಳೂ ಇಂಥಾ ಕರಾಳ­ ಕೃತ್ಯಗಳನ್ನೆಸಗುವ ವಿಪರ್ಯಾಸವನ್ನು ಅವರು ಚಿತ್ರಿಸಿದರು.

ಮಣಿಪುರ ಸರ್ಕಾರದ ಮಂತ್ರಿಕುವರನೊಬ್ಬ ಆದಿವಾಸಿ ಹೆಣ್ಣು­ಮಗಳನ್ನು ಮಾನಭಂಗಗೊಳಿಸಿ ತನ್ನ ರಾಜಕೀಯ­ಪ್ರಭಾವ­ದಿಂದ ಕಾನೂನು ಸಜೆಯನ್ನು ತಪ್ಪಿಸಿಕೊಂಡ­ನಂತೆ. ಮಣಿಪುರದ ಮೇಥೇಯ್ ಜನಾಂಗದ ಏಳು ಮಂದಿ ಪ್ರಾಚೀನ ದೇವತೆಗಳು ಅವನನ್ನು ಶಿಕ್ಷಿ­ಸುವರೆಂಬ ನಂಬುಗೆ ಈ ನಾಟಕಕ್ಕೆ ಪ್ರೇರಣೆ­ಯಾಯಿತು. ಈ ‘ಮ್ಯಾಕ್‌ಬೆತ್’ ಅವತರಣಿಕೆ ಷೇಕ್ಸ್‌ಪಿಯರನ ನಾಟಕದ ಕತೆಯನ್ನು ಹಿಂದು­ಮುಂದಾಗಿಸುತ್ತದೆ. ಅಪರಾಧಿಯಾದ ಮ್ಯಾಕ್‌­ಬೆತ್‌ನ ಸಜೆಯಿಂದ ಶುರುವಾಗಿ ಅವನ ಅಪರಾ­ಧವಾದ ಕೊಲೆಯಿಂದ ಕೊನೆಯಾಗುತ್ತದೆ. ಇಲ್ಲಿ ಮ್ಯಾಕ್‌ಬೆತ್‌ನ ಮೂವರು ಮಾಟಗಾತಿಯರಿಗೆ ಬದಲಾಗಿ ಏಳುಮಂದಿ ದೇವತೆಗಳಿದ್ದಾರೆ.

ಮಣಿಪುರದ ಜಟಿಲ ರಾಜನೈತಿಕ ವಾತಾವ­ರಣ ಪ್ರತ್ಯೇಕತಾವಾದಿಗಳ ಅಥವಾ ಸಮನ್ವಯ­ವಾದಿಗಳ ದೃಷ್ಟಿಕೋನಗಳಷ್ಟು ಸರಳವಲ್ಲವೆಂಬ ಸತ್ಯವನ್ನು ಆ ಸಮುದಾಯದ ಪ್ರಧಾನ ಅಭಿ­ವ್ಯಕ್ತಿ­ಗಳಲ್ಲೊಂದಾಗಿರುವ ರಂಗಭೂಮಿ ಸಾಬೀತು­ಗೊಳಿಸುತ್ತದೆ. ಮೂವರು ಪ್ರತಿಭಾವಂತ ರಂಗ­ನಿರ್ದೇಶಕರು ಸಮಕಾಲೀನ ದಂದುಗಗಳ ಅಗ್ನಿ­ಕೊಂಡ ಹಾಯುವುದಕ್ಕೆ ತಮ್ಮ ಪ್ರೇರಣೆಗಳನ್ನು ಇಂದಿನ ಸವಾಲುಗಳ ನಡುವೆಯೂ ತಮ್ಮ ಪಾರಂಪರಿಕ ಮೌಲ್ಯಗಳಲ್ಲೇ ಹುಡುಕುತ್ತಿದ್ದಾರೆ.

ಕನ್ಹೈಲಾಲ್ ಅವರ ಕರೆಯೋಲೆಯ ಮೇರೆಗೆ ಅವರ ನಾಕು ದಿವಸಗಳ ರಂಗಪ್ರಯೋಗ ವಿವರ­ಣೆಯನ್ನು ವೀಕ್ಷಿಸಲು ಇಂಫಾಲ್‌ಗೆ ಹಲವು ಮಂದಿ ಭಾರತದ ಮತ್ತು ಹೊರಗಿನ ರಂಗ­ಕರ್ಮಿ­ಗಳ ಜೊತೆಗೆ ಹೋಗಿದ್ದ ನಾನು ನಮ್ಮ ಮತ್ತು ಮಣಿಪುರಿಗಳ ಯುಗಾದಿಯ ದಿವಸ ಅಲ್ಲಿದ್ದಾಗ ಈ ಯುಗಾದಿ ನಮಗೆ ಹಾಗೂ ಮಣಿಪುರಿಗಳಿಗೆ ಹಿಂಸೆ ಮತ್ತು ಶೋಷಣೆಗಳನ್ನು ದಾಟಿದ ಹೊಸ­ಯುಗದ ಮುನ್ನುಡಿಯಾಗ­ಲೆಂದು ಮಣಿಪುರದ ಎಲ್ಲ ಬುಡಕಟ್ಟು ದೇವತೆ­ಗಳಲ್ಲಿ ಮೊರೆಯಿಟ್ಟೆ.

ಆಗವರು ನನ್ನ ಕಿವಿಯಲ್ಲಿ ಪಿಸುಗುಟ್ಟಿದರು: ‘ಇಡೀ ಪೃಥ್ವಿಯ ಯುಗಾದಿ ಬರುವವರೆಗೂ ಪ್ರತ್ಯೇಕ ಜನಾಂಗಗಳ ಯುಗಾದಿಗಳು ಕೇವಲ ಆಚರಣೆಗಳು.’

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT