ಮೊನ್ನೆ ನನ್ನ ಗೆಳೆಯರೊಬ್ಬರು ಹೀಗೇ ಸಹಜವಾಗಿ ಮಾತಾಡುತ್ತಾ ಬಾಲಿವುಡ್ ಸಿನಿಮಾದ ಚರ್ಚೆ ಶುರು ಮಾಡಿದರು. ಚಿಕ್ಕಂದಿನಲ್ಲಿ ಕ್ಲಾಸಿಗೆ ಚಕ್ಕರ್ ಹೊಡೆದು ದಿನಕ್ಕೆ ಎರಡೋ ಮೂರೋ ಸಿನಿಮಾ ನೋಡುತ್ತಿದ್ದ ಕಾಲದಿಂದ ನನಗೆ ಸಿನಿಮಾದ ಬಗ್ಗೆ ಅಪಾರ ಆಸಕ್ತಿ. ಆದರೆ ಇಂದಿನ ಸಿನಿಮಾಗಳನ್ನು ಅರಗಿಸಿಕೊಳ್ಳುವುದು ತುಂಬಾ ಕಷ್ಟವಾಗುತ್ತಿದೆ. ಈ ವಿಚಾರವನ್ನು ನನ್ನ ಆ ಗೆಳೆಯರಿಗೆ ತಿಳಿಸಲಾಗಿ ಅವರು ಇಂದಿನ ಸಿನಿಮಾ ಲೋಕ ಮತ್ತು ಅದನ್ನು ಎಂಟೂ ದೆಸೆಗಳಲ್ಲಿ ಆವರಿಸಿರುವ ಗಿಲೀಟಿನ ಲೋಕದ ಬಗ್ಗೆ ಗಾಢ ಒಳನೋಟಗಳನ್ನು ನೀಡಬಲ್ಲ ಒಂದು ಸಲಹೆ ನೀಡಿದರು. ‘ಗೂಗಲ್ಗೆ ಹೋಗಿ ಮೇಕಪ್ ರಹಿತ ಬಾಲಿವುಡ್ ತಾರೆಯರು ಅಂತ ಟೈಪ್ ಮಾಡಿ. ಆಗ ಆ ಥಳುಕಿನ ಲೋಕದ ಬಣ್ಣ ಪೂರ್ತಿ ಬಿಟ್ಟುಕೊಳ್ಳುತ್ತೆ’
ನಾನಾದರೋ ಅವರ ಸಲಹೆಯನ್ನು ಗಂಭೀರವಾಗಿ ತೆಗೆದುಕೊಂಡು ಅವರು ಹೇಳಿದ ರೀತಿ ಟೈಪ್ ಮಾಡಿದಾಗ ಮೇಕಪ್ ರಹಿತ ಬಾಲಿವುಡ್ ನಟ-ನಟಿಯರ ಅನಾಕರ್ಷಕ ಭಾವಚಿತ್ರಗಳು ಕಂಪ್ಯೂಟರಿನ ಸರ್ವಸಾಕ್ಷಿ ತೆರೆಯ ಮೇಲೆ ಮೂಡಿದವು. ಅದನ್ನು ನೋಡಿ ನನಗೆ ದಂಗು ಬಡಿದಹಾಗಾಯಿತು. ಮೇಕಪ್ ಧಾರಣೆ ಮಾಡಿಕೊಂಡಾಗ ಕನಸಿನ ರಾಣಿಯರ ಹಾಗೆ ಕಂಗೊಳಿಸುವ ಕಡುಚೆಲುವೆಯರು ಇವರೇ ಏನು ಎಂದು ನನ್ನನ್ನು ನಾನೇ ಕೇಳಿಕೊಳ್ಳತೊಡಗಿದೆ.
ಭೋರ್ಗರೆವ ಮಳೆಯ ನೀರಿನ ಹೊಡೆತಕ್ಕೆ ಸಿಲುಕಿ ರಂಗುರಂಗಿನ ಚಿಟ್ಟೆಗಳು ತಮ್ಮ ರೆಕ್ಕೆಗಳಿಂದ ಬೇರ್ಪಟ್ಟು ಚದುರಿಬಿದ್ದಿರುವ ದೃಶ್ಯಗಳನ್ನು ಹಿಮಾಲಯದ ತಪ್ಪಲುಗಳಲ್ಲಿ ಹಲವು ಬಾರಿ ಕಂಡಿರುವ ನನಗೆ ರೆಕ್ಕೆಯಿಂದ ಬೇರ್ಪಟ್ಟ ಚಿಟ್ಟೆಗಳು ಕೇವಲ ಹುಳಗಳಂತೆ ಕಾಣುವುದು ನೆನಪಾಯಿತು. ಮೇಕಪ್ ವಿಮುಕ್ತೆಯರಾದ ಸಿನಿಮಾ ನಟಿಯರೂ ಅತ್ಯಂತ ರೂಪರಹಿತೆಯರಾಗಿ ಕಂಡರು. ಅಂದರೆ ಅವರು ಹುಳುಗಳಂತೆ ಅಂತ ನಾನು ಹೇಳುತ್ತಿಲ್ಲ. ಅವರನ್ನು ಅಗೌರವದಿಂದ ನೋಡುವುದು ಸರಿಯಲ್ಲ. ಆದರೆ ಹೇಗೆ ಚಿಟ್ಟೆಯ ರೆಕ್ಕೆ ರೂಪ ಮತ್ತು ಅದರ ರೆಕ್ಕೆ ಕಳೆದ ರೂಪ ಎರಡರ ನಡುವಿನ ತದ್ವಿರುದ್ಧ ಸಂಬಂಧ ನನಗೆ ಒಂದು ವಿದ್ಯುತ್ ಛಳುಕು ಹೊಡೆಸಿತ್ತೋ ಅದೇ ರೀತಿಯ ಅನುಭವ ಈ ಫೋಟೊಗಳನ್ನು ನೋಡಿದಾಗ ಆಯಿತು ಎಂದು ಮಾತ್ರ ಹೇಳುತ್ತಿದ್ದೇನೆ. ಇಂದಿನ ಯುವತಿಯರ ಆರಾಧ್ಯ ಆದರ್ಶಗಳಾಗಿರುವ, ಇಂದಿನ ಯುವಕರ ಕಾಮವನ್ನು ಕ್ರೂರವಾಗಿ ಕೆರಳಿಸುವ ಅಂದಗಾತಿಯರು ಇವರೇನಾ ಎಂದು ಬೆಚ್ಚಿದೆ.
ಇಂದಿನ ಯುವಪೀಳಿಗೆಯನ್ನು ಟೀಕಿಸುತ್ತಾ ನನ್ನ ದೌರ್ಬಲ್ಯಗಳನ್ನು ಇಳಿವಯಸ್ಸಿನಲ್ಲಿ ಮುಚ್ಚಿ-ಡುವ ಪ್ರಯಾಸವನ್ನೂ ನಾನಿಲ್ಲಿ ಮಾಡುತ್ತಿಲ್ಲ. ವಯಸ್ಸಾದ ಹಾಗೆ ಕಾಮಾಕರ್ಷಣೆ ಕಡಿಮೆಯಾಗುತ್ತದೆಂದೂ ನಾನು ತಿಳಿದಿಲ್ಲ. ನನ್ನ ಮೆಚ್ಚಿನ ಹೀರೋಯಿನ್ಗಳಾಗಿರುವ ರಾಣಿ ಮುಖರ್ಜಿ ಮತ್ತು ಪ್ರಿಯಾಂಕ ಛೋಪ್ರಾ ಇಬ್ಬರೂ ಇಷ್ಟು ಸಾದಾ ಕಾಣುತ್ತಾರಲ್ಲ ಎಂದು ನನಗೆ ಅತೀವ ವಿಷಾದ,ಖೇದವುಂಟಾದುದನ್ನು ಲೋಕಸಾಕ್ಷಿಯಾಗಿ ಒಪ್ಪಿಕೊಳ್ಳುತ್ತೇನೆ.
ಕಳೆದ ಅರ್ಧ ಶತಮಾನದಿಂದ ಸಿನಿಮಾ ಲೋಕ ನಮ್ಮ ಲೋಕವನ್ನು ಹೇಗೆ ಪ್ರಭಾವಿಸುತ್ತದೆ ಎಂದು ನಾನು ಬಲ್ಲೆ. ಆಯಾ ದಶಕಗಳಲ್ಲಿ ಜನಪ್ರಿಯರಾಗಿದ್ದ ನಟ-ನಟಿಯರು ಆ ಕಾಲದ ಗಂಡಸು ಹೆಂಗಸರ ಉಡುಗೆ ತೊಡಿಗೆಗಳನ್ನು, ಕೇಶವಿನ್ಯಾಸವನ್ನು, ಚಲನವಲನಗಳನ್ನು, ಭಾವಭಂಗಿಗಳನ್ನು ರೂಪಿಸುತ್ತಾರೆ ಎಂದು ಕಣ್ಣಾರೆ ಕಂಡಿದ್ದೇನೆ.
ನಮ್ಮ ಪ್ರೆಸ್ಸಿನಲ್ಲಿ ಹರಿ ಎಂಬ ಅದ್ಭುತವಾದ ಯುವಕ ಕೆಲಸ ಮಾಡುತ್ತಿದ್ದ. ಅವನು ಆ ಕಾಲದ ಹಾಟ್ ಹೀರೋ ದೇವಾನಂದ್ರ ನಕಲಾಗುವುದೇ ತನ್ನ ಜೀವನದ ಪರಮೋದ್ದೇಶವೆಂದು ತಿಳಿದಿದ್ದ. ದೇವಾನಂದ್ ಹಾಗೆ ತಲೆಯನ್ನು ವಾರೆ ಮಾಡಿ ನೋಡುವುದನ್ನು ಮಾತಾಡುವುದನ್ನು ಬಹಳ ಶ್ರಮಪಟ್ಟು ಅಭ್ಯಾಸ ಮಾಡಿಕೊಂಡಿದ್ದ. ಜೊತೆಗೆ ಅದೇ ರೀತಿಯ ಹೇರ್ ಸ್ಟೈಲ್, ಅದೇ ರೀತಿಯ ದಿರಿಸು. ಇದಕ್ಕಾಗಿ ಅವನನ್ನು ನಮ್ಮ ಪ್ರೆಸ್ಸಿನಲ್ಲೇ ಕೆಲಸ ಮಾಡುತ್ತಿದ್ದ ಅವರ ಮಾವ ಚಿನ್ನಪ್ಪ ಯಾವಾಗಲೂ ಬೈಯುತ್ತಿದ್ದರು. ಮಿಕ್ಕವರು ಅವನನ್ನು ಮರಿ ದೇವಾನಂದ್ ಅತ ಕರೆಯುತ್ತಿದ್ದರು. ಆದರೆ ಹರಿ ಇವೆಲ್ಲಕ್ಕೂ ಕುರುಡಾಗಿ ಕಿವುಡಾಗಿ ತನ್ನ ದೇವಾನಂದ್ತನವನ್ನು ದಿನೇದಿನೇ ವರ್ಧಿಸಿಕೊಳ್ಳುತ್ತಲೇ ಇದ್ದ. ಪಾಪ, ಒಂದು ದಿನ ಒಂದು ದುರ್ಘಟನೆ ಸಂಭವಿಸಿತು. ದೇವಾನಂದ್ನ ಹೆಸರಾಂತ ಸಿನಿಮಾ ‘ಸಿ.ಐ.ಡಿ’ಯ ‘ಲೇಕೆ ಪೆಹಲಾ ಪೆಹಲಾ ಪ್ಯಾರ್’ ಹಾಡು ಹೇಳುತ್ತಾ ಆಧ್ಯಾತ್ಮಿಕ ಆನಂದದಲ್ಲಿ, ಕನಕಪುರದ ಬಯಲುನಾಟಕ ತಂಡದವರ ‘ರಾಮಾಂಜನೇಯ ಯುದ್ಧ’ ನಾಟಕದ ಕರಪತ್ರಗಳನ್ನು ಟ್ರೆಡಲ್ ಮಿಷನ್ನಿನಲ್ಲಿ ಪ್ರಿಂಟ್ ಮಾಡುತ್ತಿದ್ದವನು ಆ ಆನಂದದಲ್ಲಿ ಕಾಗದದ ಜೊತೆಗೆ ತನ್ನ ತೋರು ಬೆರಳನ್ನೂ ಮಿಷನ್ನಿನೊಳಗಡೆ ತುರುಕಿಸಿ ಆ ಬೆರಳನ್ನು ಅಪ್ಪಚ್ಚಿ ಮಾಡಿಕೊಂಡ. ಸಿನಿಮಾ ಹಾಡು ಹಾಡುತ್ತಿದ್ದ ಬಾಯಿ ನೋವಿನಿಂದ ಕಿರುಚತೊಡಗಿತ್ತು. ಕೂಡಲೇ ನಮ್ಮ ಮ್ಯಾನೇಜರ್ ರಾಮರಾವ್ ಅವನನ್ನು ವಿಕ್ಟೋರಿಯಾ ಆಸ್ಪತ್ರೆಯ ಎಮರ್ಜೆನ್ಸಿ ವಿಭಾಗಕ್ಕೆ ಕರೆದೊಯ್ಯಲಾಗಿ ಅಲ್ಲಿನ ತಜ್ಞರು ಆ ದೇವಾನಂದ್ ಭಕ್ತನ ತೋರುಬೆಳನ್ನು ಅವನ ದೇವಾನಂದ್ಮಯ ಘಟದಿಂದ ಕತ್ತರಿಸಿ ಹಾಕಿದರು.
‘ಪೆಹಲಾ ಪೆಹಲಾ ಪ್ಯಾರ್ ನ’ ಆ ಗಾಯದಿಂದ ಅವನು ಮೂರು ಮಾಸಗಳಲ್ಲಿ ಗುಣವಾಗಿ ತೋರುಬೆರಳುರಹಿತನಾಗಿ ಕೆಲಸಕ್ಕೆ ಹಿಂದಿರುಗಿದ. ಆದರೆ ಅವನ ದೇವಾನಂದ್ತನ ಆ ಘಟನೆಯಿಂದ ಯಾವ ರೀತಿಯಿಂದಲೂ ಕಡಿಮೆಯಾಗಲಿಲ್ಲ.
ಆ ಹರಿಯನ್ನು ಸದಾ ತಮಾಷೆ ಮಾಡುತ್ತಿದ್ದ ನಾನೂ ಮುಂದೊಮ್ಮೆ ಅವನಂತೆಯೇ ಅನುಕರಣಾಪರಾಯಣನಾದೆ. ಒಂದಷ್ಟು ದಿನ ಎಂ ಜಿ ಆರ್ ಹಾಡುಗಳನ್ನು ದೇವರನಾಮವೆಂಬಂತೆ ಗುನುಗುತ್ತಾ ನನ್ನ ಸಹಪಾಠಿಗಳ ನಡುವೆ ಸುಳಿಯುತ್ತಿದ್ದೆ. ನನ್ನ ಸಿನಿಮಾ ಹುಚ್ಚು ನನ್ನ ಓದಿಗೆ ಮುಳುವಾಗಿ ಎಸ್ ಎಸ್ ಎಲ್ ಸಿಯಲ್ಲಿ ಅದ್ಭುತವಾದ ರೀತಿಯಲ್ಲಿ ಫಿಸಿಕ್ಸ್ ಮತ್ತು ಮ್ಯಾಥ್ಸ್ ನಲ್ಲಿ ಢುಮುಕಿ ಹೊಡೆದ ಸಂದರ್ಭದಲ್ಲಿ ಧರ್ಮೇಂದ್ರ ನಟಿಸಿದ ಆ ಯುಗದ ಸೂಪರ್ ಹಿಟ್ ‘ಫೂಲ್ ಔರ್ ಪತ್ಥರ್’ ಸಿನಿಮಾದ ಫ್ಯಾನಾಗಿಹೋದೆ. ಆ ಸಿನಿಮಾವನ್ನು ಅದೆಷ್ಟು ಸಲ ನೋಡಿದೆನೋ ನೆನಪಿಲ್ಲ.ಧರ್ಮೇಂದ್ರರಂತೆ ಎದೆಯ ಮತ್ತು ತೋಳಿನ ಮಾಂಸ ಖಂಡಗಳನ್ನು ಉಬ್ಬಿಸಿಕೊಳ್ಳಲೆಂದು ಗರಡಿ ಸಾಧನೆ ಮಾಡತೊಡಗಿದೆ. ಅವರ ರೀತಿಯಲ್ಲಿ ಜರ್ಕಿನ್ ಹಾಕಿಕೊಂಡು ಕನ್ನಡಿ ಮುಂದೆ ನಿಂತು ಪಡಿಮೂಡಿದಾಕೃತಿಗೆ ನಾನೇ ಮುಗ್ಧನಾಗುತ್ತಿದ್ದಾಗ ನನ್ನ ಗುಂಗುರುಕೂದಲು ನನ್ನನ್ನು ಕೆರಳಿಸಿತು. ಧರ್ಮೇಂದ್ರನ ಹಾಗೆ ನೀಳವಲ್ಲದ ಮತ್ತು ನಿಗುರಿ ನಿಲ್ಲುವ ಕೂದಲನ್ನು ಪಡೆಯಬೇಕೆಂದು ಪಣ ತೊಟ್ಟೆ. ನಾಯಿಯ ಡೊಂಕುಬಾಲದಂತೆ ಅದೆಷ್ಟು ಬಾಚಿನೇರವಾಗಿ ನಿಲ್ಲಿಸಿದರೂ ಮತ್ತೆ ಸುರಳುಸುರಳಿ ಸುತ್ತಿಕೊಳ್ಳುತ್ತಿದ್ದ ನನ್ನ ಕೂದಲನ್ನು ಶಪಿಸತೊಡಗಿದೆ. ನನ್ನ ಪ್ರಾಣಮಿತ್ರರಾದ ಚೌರದಂಗಡಿಯವರನ್ನು ಬೇಡಿಕೊಳ್ಳತೊಡಗಿದೆ: ‘ಹೇಗಾದರೂ ಮಾಡಿ ನನ್ನ ಕೂದಲನ್ನು ಧರ್ಮೇಂದ್ರರ ಕೂದಲಹಾಗೆ ಮಾಡಿ’ ಎಂದು. ಅವರು ಮುಸುಮುಸು ನಗುತ್ತಿದ್ದರು. ಕೊನೆಗೊಮ್ಮೆ ಬಹುಮಟ್ಟಿಗೆ ಯಶಸ್ವಿಯಾದಾಗ ನನ್ನ ಕಿಲಾರಿ ರೋಡಿನ ರೌಡಿ ಗೆಳೆಯರು ನನ್ನನ್ನು ನೋಡಿ ‘ ಏನಮ್ಮಾ, ಥೇಟ್ ಧರ್ಮೇದ್ರನ ಥರ ಕಾಣ್ತಾ ಇದ್ಯಲ್ಲೋ’ ಅಂದಾಗ ಸಾಸಿವೆಯ ಮೇಲೆ ಸಾಗರ ಹರಿದಂತಾಗಿ ಹಿರಿಹಿರಿಹಿಗ್ಗಿದೆ. ಅವರ ತಜ್ಞ ಸಲಹಾನುಸಾರ ಮೂರು ಬಾರಿ ತಲೆಯನ್ನು ಬೋಡಿ ಹೊಡೆಸಿಕೊಂಡೆ.
ಇನ್ನೊಂದು ಘಟ್ಟದಲ್ಲಿ ಶಿವಾಜಿಗಣೇಶನ್ರ ಹಾಗೆ ಸ್ಟೈಲಾಗಿ ಸಿಗರೇಟು ಸೇದಬೇಕೆಂದು ಸಿಗರೇಟು ದಾಸನಾಗಿ ಹೋದೆ. ಅಂದು ಶುರುವಾದ ಆ ದುಶ್ಚಟ ಇಂದಿಗೂ ಬಿಟ್ಟಿಲ್ಲ.
ಈ ಲಘುಘಟನೆಗಳನ್ನು ನೆನಪಿಸಿಕೊಳ್ಳುವು ದರ ಗಂಭೀರ ಉದ್ದೇಶವೆಂದರೆ ನಮ್ಮ ಯುಗದ ಜನಪ್ರಿಯ ಮಾಧ್ಯಮವಾದ ಸಿನಿಮಾ ನಮ್ಮನ್ನು ಯಾವ ಮಟ್ಟದಲ್ಲಿ ಪ್ರಭಾವಿಸುತ್ತದೆ ಎಂಬು ದನ್ನು ಮನವರಿಕೆ ಸೋದಾಹರಣವಾಗಿ, ಮಾಡಿಕೊಡಲು. ತೆರೆಯ ಮೇಲಿನ ಬಿಂಬಗಳು ಆಲೋಚನಾ ಪೂರ್ವ ಸ್ಥಿತಿಯಲ್ಲಿ, ವಿಮರ್ಶಾ ಶಕ್ತಿಗೆ ಹೊರತಾಗಿ ನಮ್ಮನ್ನು ಲೂಟಿ ಮಾಡಿ ಬಿಟ್ಟಿರುತ್ತವೆ. ದೈವವಶಾತ್ ಮುಂದೆ ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿಯಾದ ಸಂದರ್ಭದಲ್ಲಿ ನಮ್ಮ ಗುರುಗಳಾದ ಲಂಕೇಶರಂಥವರ ಆರೋಗ್ಯಕರ ಪ್ರಭಾವದಿಂದ ಗಂಭೀರ ಸಿನಿಮಾದ ಬಗ್ಗೆ ತೀವ್ರ ಆಸಕ್ತಿ ಬೆಳೆಸಿಕೊಂಡ ಕಾರಣ ಜನಪ್ರಿಯ ಸಿನಿಮಾದ ಅದಮ್ಯ ಮೋಡಿಯಿಂದ ಪಾರಾದೆ. ಆದರೆ ನಮ್ಮ ಲೋಕದ ಎಲ್ಲಾ ಮನುಜರಿಗೆ ಆ ಅದೃಷ್ಟ ದುರ್ಲಭ.
ನಾನು ಈಗಾಗಲೇ ಕಂಡು ಉಂಡಿರುವ ಅರ್ಧಶತಮಾನಕ್ಕೂ ಹೆಚ್ಚಿನ ಜೀವಾವಧಿಯಲ್ಲಿ ನನ್ನ ಹರೆಯದ ಕಾಲಕ್ಕೆ ಹೋಲಿಸಿದರೆ ಇಂದು ತೆರೆಯ ಮೇಲಿನ ಬಿಂಬಗಳ ಪ್ರಭಾವ ಅದೆಷ್ಟೋ ಪಟ್ಟು ಹೆಚ್ಚಿದೆ. ಈಗಂತೂ ಅವರದೇ ಜಗತ್ತು. ಉದಾಹರಣೆಗೆ ಬಾಲಿವುಡ್ ಇಂದು ಹಾಲಿವುಡ್ಡನ್ನೂ ಹಿಂದೆ ಹಾಕಿ ಇಂದಿನ ಜಗತ್ತಿನ ಯುವಪೀಳಿಗೆಯ ವಿಶ್ವಸಂಸ್ಕೃತಿಯಾಗಿ ಬೆಳೆದು ನಿಂತಿದೆ. ಇತಿಹಾಸಾರ್ಹ ವ್ಯಕ್ತಿಗಳ ಮೇಣದ ಪ್ರತಿಮೆಗಳನ್ನು ಪ್ರದರ್ಶಿಸುವ ಮೇಡಂ ಟುಸ್ಸಾಡ್ ಮ್ಯೂಸಿಯಮ್ನವರು ಮೊನ್ನೆ ಮೊನ್ನೆ ತಮ್ಮ ಸಂಗ್ರಹಾಲಯಕ್ಕೆ ಅಮಿತಾಭ್ ಬಚ್ಚನ್, ಐಶ್ವರ್ಯ ರೈ, ಕರೀನಾ, ಹೃತಿಕ್ ರೋಷನ್ ಮತ್ತು ಶಾರುಖ್ ಖಾನ್ ಅವರ ಪ್ರತಿಮೆಗಳನ್ನು ಸೇರ್ಪಡೆ ಮಾಡಿದ್ದಾರೆ. ಬರ್ಲಿನ್ನಲ್ಲಿ ಅವುಗಳ ಸಾರ್ವಜನಿಕ ಪ್ರದರ್ಶನ ಒಂದು ದಿನ ನಡೆದಾಗ ಇಲ್ಲಿನ ಯುವಕ ಯುವತಿಯರು ತಮ್ಮ ದೇವರ ಜೊತೆಗೆ ಫೋಟೊ ತೆಗೆಸಿಕೊಳ್ಳಲಿಚ್ಛಿಸುವ ಭಕ್ತ ಶಿರೋಮಣಿಗಳ ಹಾಗೆ ಆ ಪ್ರತಿಮೆಗಳ ಮೈ ಸೋಕಿ ನಿಂತು ತಮ್ಮ ಬದುಕಿನ ಆ ಪರಮಾನಂದದ ಗಳಿಗೆಗಳನ್ನು ಫೋಟೊ ತೆಗೆಸಿಕೊಳ್ಳುತ್ತಿರುವುದನ್ನು ಕಂಡು ನಾನು ಬೆರಗಾಗಿಹೋದೆ.
ಜನಪ್ರಿಯ ಕಲೆಗಳು ಇಂದು ನಮ್ಮ ಜಗತ್ತನ್ನು ಬುದ್ಧ -ಏಸೂಗಳಿಗಿಂತಾ ಇತಿಹಾಸ ಪ್ರಸಿದ್ಧ ನಾಯಕರುಗಳಿಗಿಂತಾ ಜಗಜ್ಜಾಹೀರಾದ ಕಲಾಕಾರರಿಗಿಂತಾ ಹೆಚ್ಚಿನ ಪ್ರಮಾಣದಲ್ಲಿ ಪ್ರಭಾವಿಸುತ್ತಿವೆ. ಅವುಗಳಲ್ಲಿ ಸಿಂಹಪಾಲು ಸಿನಿಮಾಗಳದು, ಜಾಹಿರಾತುಗಳದು. ನಮ್ಮ ದೃಶ್ಯ ಮಾಧ್ಯಮಗಳ ಸಮಾಚಾರ ಭಾಗಗಳು ಇಂದು ಸಿನಿಮಾ ಮತ್ತು ಜಾಹೀರಾತಿನ ನಡುವೆ ಸ್ಯಾಂಡ್ವಿಚ್ಚಾಗಿದೆ. ಸ್ಪಪ್ನದರ್ಶನ ಮಾಡಿಸಿ ನಿಜದ ನೆನಹನ್ನು ಮರೆಸುವ ಇಂಥ ಬಿಂಬಗಳ ಹಲ್ಲೆ ರಾಜಕಾರಣವನ್ನೂ ಹೊಕ್ಕಿದೆ. ಚುನಾವಣಾ ಪ್ರಚಾರ, ಜನಪ್ರತಿನಿಧಿಗಳ ವಾಗ್ವಾದಗಳು ಎಲ್ಲವೂ ಇಂದು ಬಿಂಬಾವೃತ ಜಗತ್ತಿನಲ್ಲಿ ಭ್ರಮಾತ್ಮಕ ಮನರಂಜನೆಯ ಆಯಾಮ ಪಡೆದುಕೊಂಡಿವೆ.
ಧರ್ಮವನ್ನು ಜನರ ಅಫೀಮೆಂದು ಕರೆದ ಕಾರ್ಲ್ ಮಾರ್ಕ್ಸ್ ಇವತ್ತು ಈ ಧರಿತ್ರಿಗೆ ವಾಪಸಾದರೆ ತನ್ನ ಹೇಳಿಕೆಯನ್ನು ಬದಲಿಸಿ ಈ ಬಿಂಬಗಳ ಸಂಭ್ರಮವನ್ನೇ ಜನರ ಅಫೀಮೆಂದು ಕರೆದಾನು. ವಾಣಿಜ್ಯೀಕರಣಗೊಂಡು ಕೃತಾರ್ಥರಾಗಿರುವ ತೋರಿಕೆಯ ಲೋಕೋದ್ಧಾರಕ ಗುರುಶ್ರೇಷ್ಠರು ತಮ್ಮ ಪ್ರಚಾರಗಳಲ್ಲಿ ಜಾಹೀರಾತು ಮತ್ತು ಸಿನಿಮಾದ ಪ್ರಚಾರ ಮಾದರಿಗಳನ್ನು ಶರವೇಗದಿಂದ ಅಳವಡಿಸಿಕೊಳ್ಳಹತ್ತಿದ್ದಾರೆ. ಸಮಾಜದ ಸ್ವವಿಮರ್ಶೆಯನ್ನು ಜಾಗೃತವಾಗಿರಿಸಬೇಕಾದ ಜವಾಬ್ದಾರಿ ಹೊತ್ತ ಸಾಹಿತಿವರೇಣ್ಯರೂ ಈ ಬಿಂಬಗಳ ಲೋಕದ ಸಂಭ್ರಮದೊಂದಿಗೆ ಪೈಪೋಟಿಗಿಳಿಯುತ್ತಿದ್ದಾರೆ (ಉದಾಹರಣೆ: ಜೈಪುರ ಉತ್ಸವ). ಕಬೀರ ಹೇಳುತ್ತಾನೆ:
ಇಡೀ ಜಗತ್ತು ಸುಖಿಯಾಗಿ ಮಲಗಿದೆ; ಆದರೆ ದಾಸ ಕಬೀರ ದುಃಖಿ; ಆದ್ದರಿಂದ ಎಚ್ಚೆತ್ತು ಕುಳಿತಿದ್ದಾನೆ. ಎಲ್ಲರೂ ಸ್ವಪ್ನಾವೃತರಾಗಿರುವಾಗ ಜಾಗರವಿದ್ದು ಸುತ್ತಾ ಘೇರಾಯಿಸುತ್ತಿರುವ ಅಪಾಯಗಳನ್ನು ಮುಂಗಂಡು ಮಲಗಿರುವ ಜಗತ್ತನ್ನು ಎಚ್ಚರಿಸಲು ಇಂದು ಅಲ್ಪಸಂಖ್ಯಾತರಾಗಿರುವ ಕಲಾಕಾರರು ಏನು ಮಾಡಲ್ಲರು? ಬಿಂಬಗಳ ಹಿಂದಿರುವ ನಿಜಗಳನ್ನು ಅತಿ ಕಠೋರ ಶೋಷಣೆಗೊಳಗಾದವರು ಮಾತ್ರ ಅರ್ಥ ಮಾಡಿಕೊಳ್ಳುತ್ತಿದ್ದಾರೆ. ತಮ್ಮ ನೆಲ, ಜಲ, ಗಾಳಿಗಾಗಿ ಹೋರಾಡುತ್ತಿದ್ದಾರೆ. ಅವರಿಂದ ದೂರದಲ್ಲಿ ಪ್ರಜ್ಞಾವಂತರು ಹ್ಯಾಮ್ಲೆಟ್ಟನ ಥರ ಯೋಚಿಸುತ್ತಾ ಕೂತಿದ್ದಾರೆ-. ಪರ್ಯಾಯ ಸ್ವಪ್ನಗಳ ಬಗ್ಗೆ, ಪರ್ಯಾಯ ಜಗತ್ತುಗಳ ಬಗ್ಗೆ... ನನಗೆ ಸಿದ್ದರಾಮನ ಒಂದು ಸಾಲು ನೆನಪಾಗುತ್ತಿದೆ: ‘ಸ್ಪಪ್ನದಲ್ಲಿ ಬಂದ ಮಾಯಾಬದ್ಧತ್ವವ ಸ್ವಪ್ನದಲ್ಲಿ ಪರಿಹರಿಸಾ ಕಪಿಲಸಿಧ್ಧ ಮಲ್ಲಿಕಾರ್ಜುನ’.
ನಿಮ್ಮ ಅನಿಸಿಕೆ ತಿಳಿಸಿ:
editpagefeedback@prajavani.co.in
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.