ಇಂದು ಜಗತ್ತು ಹಲವು ವಿಧದ ಆತಂಕಗಳ ನಡುವೆ ಉಸಿರಾಡುತ್ತಿದೆ. ಮತಾಂಧತೆಯ ಅಟ್ಟಹಾಸ ನಿರಂತರವಾಗಿ ಹೆಚ್ಚಾಗುತ್ತಿದೆ. ನನ್ನ ಮತವೇ ಶ್ರೇಷ್ಠ, ಉಳಿದವರದ್ದು ಕನಿಷ್ಠ – ಎಂಬ ಧೋರಣೆಯೇ ಇದಕ್ಕೆ ಕಾರಣವಾಗಿರುವುದು. ಇಂಥ ಧೋರಣೆಯನ್ನೇ ಮನಸ್ಸಿನಲ್ಲಿರುವ ಕಸ ಎಂದು ಸುಭಾಷಿತ ಕರೆಯುತ್ತಿರುವುದು. ನಮ್ಮ ಮುಂದೆ ಇರುವ ಮನುಷ್ಯರು ಕೂಡ ನಮ್ಮಂತೆಯೇ ಮನುಷ್ಯರು; ಅವರಿಗೂ ನಮ್ಮಂತೆಯೇ ಬದುಕುವ ಹಕ್ಕಿದೆ – ಎಂಬ ಭಾವನೆ ಯಾರ ಮನಸ್ಸಿನಲ್ಲಿ ಗಟ್ಟಿಯಾಗಿ ನೆಲೆಯಾಗಿರುತ್ತದೆಯೋ ಅಂಥವರು ಮಾತ್ರ ಜಗತ್ತಿನಲ್ಲಿ ಶಾಂತಿ–ನೆಮ್ಮದಿಗಳನ್ನು ಉಂಟುಮಾಡಬಲ್ಲರು. ಎಲ್ಲರೂ ಶತ್ರುಗಳು ಎಂಬ ಭಾವನೆಯನ್ನೇ ಮನಸ್ಸಿನಲ್ಲಿ ತುಂಬಿಕೊಂಡಿದ್ದರೆ ಆಗ ಜಗತ್ತು ನಮ್ಮ ಪಾಲಿಗೆ ನರಕವಾಗಿಯೇ ಕಾಣುತ್ತದೆ.