<p>ಸೃಷ್ಟಿ ಎಂದರೆ ಸಮಗ್ರತೆ ಎನ್ನುವ ಮಾತು ಈ ಮೊದಲು ಬಂದಿದೆಯಷ್ಟೆ. ಅಲ್ಲಿ ಸೃಷ್ಟಿ ಎಂದಿರುವುದು ಮೊದಲ ‘ಸೃಷ್ಟಿ’ಯನ್ನಲ್ಲ; ‘ಅವತಾರವ’ವನ್ನೇ ಸೃಷ್ಟಿ ಎಂದು ಒಕ್ಕಣಿಸಲಾಗಿದೆ. ಅವತಾರದ ಉದ್ದೇಶ ಪೂರ್ಣವಾಗಿ ನೆರವೇರಬೇಕಾದರೆ ಅದಕ್ಕೆ ಬೇಕಾದ ಎಲ್ಲ ಪೂರಕ ವಿವರಗಳೂ ಅವತರಿಸಲೇಬೇಕಾಗುತ್ತದೆ. ವಿಷ್ಣು ಒಬ್ಬನೇ ಅವತರಿಸಿದರೆ ಆಗದು; ಜೊತೆಯಲ್ಲಿ ಅವನ ಶಂಖ, ಚಕ್ರಗಳೂ ಪರಿವಾರವೂ ಅವತಾರದಲ್ಲಿ ಮೂಡಬೇಕು. ಹೀಗಾಗಿ ಅವತಾರ ಎಂಬ ‘ಸೃಷ್ಟಿ’ ಸಮಗ್ರವಾದ ವಿದ್ಯಮಾನವೇ ಆಗಬೇಕಷ್ಟೆ!</p>.<p>ಸೃಷ್ಟಿಯ ಬಗ್ಗೆ ಎಲ್ಲ ಪ್ರಾಚೀನ ಸಂಸ್ಕೃತಿಗಳಲ್ಲೂ ಸಾಕಷ್ಟು ಪರಿಕಲ್ಪನೆಗಳಿವೆ. ಭಾರತೀಯ ಸಂಸ್ಕೃತಿಯಲ್ಲೂ ಹಲವು ವಿವರಣೆಗಳಿವೆ. ರಾಮಾಯಣಕಥೆಯ ಉದ್ದಕ್ಕೂ ಅಲ್ಲಲ್ಲಿ ಈ ವಿವರಗಳನ್ನು ವಿಶ್ಲೇಷಿಸಬೇಕಾಗುತ್ತದೆಯೆನ್ನಿ!</p>.<p>ಸದ್ಯಕ್ಕೆ ಬಾಣನ ‘ಕಾದಂಬರಿ’ಯ ಮಂಗಳಪದ್ಯದ ಪ್ರಥಮ ಗೀತವನ್ನು ಇಲ್ಲಿ ನೋಡಬಹುದು:</p>.<p><em><strong>ರಜೋಜುಷೇ ಜನ್ಮನಿ ಸತ್ತ್ವವೃತ್ತಯೇ ಸ್ಥಿತೌ ಪ್ರಜಾನಾಂ</strong></em></p>.<p><em><strong>ಪ್ರಲಯೇ ತಮಃಸ್ಮೃಶೇ /</strong></em></p>.<p><em><strong>ಅಜಾಯ ಸರ್ಗಸ್ಥಿತಿನಾಶಹೇತವೇ ತ್ರಯೀಮಯಾಯ</strong></em></p>.<p><em><strong>ತ್ರಿಗುಣಾತ್ಮನೇ ನಮಃ //</strong></em></p>.<p>ಇದರ ಭಾವಾನುವಾದವನ್ನು ಸರಳವಾಗಿ ಬನ್ನಂಜೆ ಗೋವಿಂದಾಚಾರ್ಯ ಹೀಗೆ ಕಂಡರಿಸಿದ್ದಾರೆ:</p>.<p>‘ರಜಸ್ಸಿನಿಂದ ಹುಟ್ಟು, ಸತ್ತ್ವದಿಂದ ಪಾಲನೆ, ತಮಸ್ಸಿನಿಂದ ಸಂಹಾರ – ಹೀಗೆ ಮೂರು ಗುಣಗಳಿಂದ ಜಗದ ಹುಟ್ಟು–ಸಾವುಗಳಿಗೆ ಕಾರಣನಾದ, ಸ್ವಯಂ ಹುಟ್ಟು–ಸಾವುಗಳಿರದ ಭಗವಂತನಿಗೆ ವಂದನೆಗಳು.’</p>.<p>ಸತ್ತ್ವ, ರಜಸ್ಸು ಮತ್ತು ತಮಸ್ಸು – ಈ ಮೂರು ಭಾರತೀಯ ತತ್ತ್ವಜ್ಞಾನದಲ್ಲಿ ಪ್ರಮುಖ ಪರಿಕಲ್ಪನೆಗಳಲ್ಲಿ ಸೇರುತ್ತವೆ. (ಈ ವಿವರಗಳನ್ನು ಮುಂದೆ ನೋಡೋಣ.) ಸಾಮಾನ್ಯವಾಗಿ ಸತ್ತ್ವ ಎಂದರೆ ಉತ್ತಮವಾದುದೆಂದೂ, ರಜಸ್ಸು ಮಧ್ಯಮವಾದುದೆಂದೂ, ತಮಸ್ಸು ಅಧಮವಾದುದೆಂದೂ ಗ್ರಹಿಸಲಾಗುತ್ತದೆ. ಬಿಳಿಯನ್ನು ಸತ್ತ್ವ ಎಂದೂ, ಕೆಂಪನ್ನು ರಜಸ್ಸು ಎಂದೂ, ಕಪ್ಪನ್ನು ತಮಸ್ಸು ಎಂದೂ ತಿಳಿಯಲಾಗುತ್ತದೆ.</p>.<p>ಆದರೆ ಇದು ತುಂಬ ಪ್ರಾಥಮಿಕಸ್ತರದ ಗ್ರಹಿಕೆ; ಮಾತ್ರವಲ್ಲ, ಇಂಥ ಸರಳಸೂತ್ರಗಳು ಹಲವು ಸಲ ಗೊಂದಲಗಳಿಗೂ ಕಾರಣವಾಗುತ್ತವೆ. ಹೇಗೆ ಸೃಷ್ಟಿ, ಸ್ಥಿತಿ ಮತ್ತು ಲಯಗಳು ಒಂದು ಇನ್ನೊಂದರಲ್ಲಿ ಬೆರೆತುಕೊಂಡು ಅಥವಾ ಹೆಣೆದುಕೊಂಡಿರುತ್ತವೆಯೋ ಹಾಗೆಯೇ ಸತ್ತ್ವ, ರಜಸ್ಸು ಮತ್ತು ತಮಸ್ಸುಗಳು ಕೂಡ ಪ್ರತ್ಯೇಕವಾಗಿರದೆ ಅಖಂಡವಾಗಿಯೇ ಇರುತ್ತವೆ.</p>.<p>ಸೃಷ್ಟಿಯನ್ನು ರಜಸ್ಸು ಎಂದು ಕರೆದಿರುವುದರಿಂದ ಅದೊಂದು ಹೇಯಕೃತ್ಯವೆಂದೋ, ಅಥವಾ ಪ್ರಳಯವನ್ನು ತಮಸ್ಸಿಗೆ ಹೋಲಿಸಿರುವುದರಿಂದ ಅದೊಂದು ನೀಚಕೃತ್ಯವೆಂದೋ ಹೇಳುವುದು ತಾತ್ತ್ವಿಕವಾಗಿ ತಪ್ಪಾಗುತ್ತದೆ. ‘God [the Eternal] is creating the world now, as much as he ever was' (ದೇವರು ವಿಶ್ವವನ್ನು ಎಂದಿನಂತೆಯೇ ಈ ಕ್ಷಣವೂ ಸೃಜಿಸುತ್ತಿದ್ದಾನೆ)</p>.<p>– ಆನಂದ ಕುಮಾರಸ್ವಾಮಿಯವರ ಈ ಮಾತು ಇಲ್ಲಿ ವಿಚಾರಣೀಯವಾದುದು. ಸೃಷ್ಟಿ ಎನ್ನುವುದು ಎಂದೋ ಒಮ್ಮೆ ಮಾಡಿಟ್ಟ ಅಡುಗೆಯಂತಲ್ಲ; ಅದು ಪೂರ್ವಾಪೂರ್ವಗಳ ಭಿತ್ತಿಯಲ್ಲಿ ನಿರಂತರವಾಗಿ ನಡೆಯುತ್ತಿರುವ ತ್ರಿಗುಣಗಳ ನಿತ್ಯನೂತನ ನರ್ತನ. ಹೀಗಾಗಿ ಸೃಷ್ಟಿಯನ್ನು ‘ರಜಸ್ಸು’ ಎಂದು ಕರೆದಿರುವುದು ಅದರ ಸ್ವ–ಭಾವವನ್ನು ಪರಿಚಯಿಸಲಷ್ಟೆ!</p>.<p>ಹೀಗಿದ್ದರೂ ನಾವಿಲ್ಲಿ ಗಮನಿಸಬೇಕಾದ್ದು ಭಗವಂತನ ಸ್ವ–ರೂಪವಾದ ‘ಅಜಾಯ’ತತ್ತ್ವ. ಈ ಪರಿಕಲ್ಪನೆ ಕೂಡ ಭಾರತೀಯ ದರ್ಶನಶಾಸ್ತ್ರದಲ್ಲಿ ತುಂಬ ಪ್ರಮುಖವಾದ ಪರಿಕಲ್ಪನೆ. ‘ಅಜಾಯ’ ಎಂದರೆ ದೇವರಿಗೆ ಹುಟ್ಟು–ಸಾವುಗಳು ಇಲ್ಲ; ಹುಟ್ಟು–ಸಾವುಗಳೇ ಇಲ್ಲವೆಂದಮೇಲೆ ಅವನಿಗೆ ನಾಮ–ರೂಪಗಳ ಹಂಗೂ ಇರದು; ಇರಬಾರದು ಕೂಡ. ಹೀಗಿದ್ದರೂ ನಾವು ದೇವರಿಗೆ ನಾಮ–ರೂಪಗಳನ್ನು ಕೊಡುತ್ತೇವೆ.</p>.<p>ಆದರೆ ಹೀಗೆ ಕೊಡುವುದು ಮಹಾಪಾಪವೆಂದೋ, ಹಾಗೆ ಕೊಟ್ಟವರು ಪಾಪಾತ್ಮರೆಂದೋ ತಿಳಿಯಬೇಕಿಲ್ಲ ಎಂಬ ವಿವೇಕವನ್ನೂ ಈ ಪರಂಪರೆಯೇ ಒದಗಿಸಿದೆ ಎನ್ನುವುದು ಕೂಡ ಗಮನಾರ್ಹ. ಪ್ರತ್ಯಕ್ಷ ಕಣ್ಣಿಗೆ ಕಾಣದುದನ್ನು ಕಣ್ಣಿಗೆ ಕಾಣಿಸಿಕೊಳ್ಳುವ ರಸಪ್ರಜ್ಞೆಯ ಕುಶಲತೆಯೇ ಈ ಕಲಾಪ. ಗಣಿತದ ಸಮಸ್ಯೆಗಳಲ್ಲಿ ಅವ್ಯಕ್ತವಾದುದನ್ನು ಕಂಡುಹಿಡಿಯಬೇಕಾಗುತ್ತದೆ. ಆಗ ಆ ಅವ್ಯಕ್ತವಾದುದಕ್ಕೇ ನಾವು ಒಂದು ಗೊತ್ತಾದ ಚಿಹ್ನೆಯನ್ನು ಆರೋಪಿಸಿ ಪರಿಹಾರವನ್ನು ಕಂಡುಕೊಳ್ಳುತ್ತೇವೆಯಷ್ಟೆ!</p>.<p>ಆ ಚಿಹ್ನೆಯೇ ಅದರ ಬೆಲೆಯಾಗಿರುವುದಿಲ್ಲ; ಆದರೆ ಅದಿಲ್ಲದೆ ಅವ್ಯಕ್ತದ ಬೆಲೆಯನ್ನು ಕಂಡುಹಿಡಿಯುವುದು ಸುಲಭವಾಗದು. ಇಂಥ ದಾರ್ಶನಿಕ ವಿವೇಕವ್ಯವಹಾರವನ್ನು ಈ ಶ್ಲೋಕ ಸೊಗಸಾಗಿ ನಿರೂಪಿಸುತ್ತದೆ:</p>.<p><em><strong>ರೂಪಂ ರೂಪವಿವರ್ಜಿತಸ್ಯ ಭವತೋ ಧ್ಯಾನೇನ ಯತ್ಕಲ್ಪಿತಂ</strong></em></p>.<p><em><strong>ಸ್ತುತ್ಯಾsನಿರ್ವಚನೀಯತಾsಖಿಲಗುರೋ</strong></em></p>.<p><em><strong>ದೂರೀಕೃತಾ ಯನ್ಮಯಾ /</strong></em></p>.<p><em><strong>ವ್ಯಾಪಿತ್ವಂ ಚ ನಿರಾಕೃತಂ ಭಗವತೋ</strong></em></p>.<p><em><strong>ಯತ್ತೀರ್ಥಯಾತ್ರಾದಿನಾ</strong></em></p>.<p><em><strong>ಕ್ಷಂತವ್ಯಂ ಜಗದೀಶ! ಯದ್ವಿಕಲತಾದೋ–</strong></em></p>.<p><em><strong>ಷತ್ರಯಂ ಮತ್ಕೃತಮ್ //</strong></em></p>.<p>(ಜಗದೊಡೆಯ! ನೀನು ಎಲ್ಲ ರೂಪಗಳಿಗೂ ಮೀರಿದವನು; ಆದರೂ ನಾನು ನಿನಗೊಂದು ರೂಪವನ್ನು ಕಲ್ಪಿಸಿದೆ. ನೀನು ಯಾವ ಮಾತುಗಳಿಗೂ ನಿಲುಕದವನು; ಆದರೂ ನಾನು ನಿನ್ನನ್ನು ಮಾತುಗಳಿಗೆ ಸಿಲುಕಿಸಿದೆ. ನೀನು ಎಲ್ಲೆಲ್ಲೂ ಇರುವವನು; ಆದರೂ ನಾನು ನಿನ್ನನ್ನು ತೀರ್ಥಕ್ಷೇತ್ರಗಳಿಗೆ ಸಂಕೋಚಿಸಿದೆ. ಹೀಗೆ ಮನಸ್ಸು, ಮಾತು ಮತ್ತು ದೇಹ – ಈ ಮೂರು ನೆಲೆಗಳಿಂದ ಆಗಿರುವ ನನ್ನ ತಪ್ಪುಗಳನ್ನು ಮನ್ನಿಸು.)</p>.<p>ಇಲ್ಲಿ ಇನ್ನೂ ಒಂದು ವಿವರವನ್ನು ನೋಡಬಹುದು.</p>.<p>‘ಅಭಿಜ್ಞಾನಶಾಕುಂತಲ’ದ ಆರಂಭದಲ್ಲಿ ಕಾಳಿದಾಸನು, ಸೃಷ್ಟಿಯಲ್ಲಿ ಕಾಣುವ ಪ್ರತ್ಯಕ್ಷ ವಿವರಗಳನ್ನೇ ಶಿವನ ಶರೀರವಾಗಿ ಕಂಡರಿಸಿ ಮಣಿದಿದ್ದಾನೆ:</p>.<p>‘ಬ್ರಹ್ಮನ ಮೊದಲ ಸೃಷ್ಟಿಯಾದ ನೀರು; ಶಾಸ್ತ್ರೋಕ್ತರೀತಿಯಲ್ಲಿ ಹೋಮ ಮಾಡಿದ ಹವಿಸ್ಸನ್ನು ದೇವತೆಗಳಿಗೆ ತಲುಪಿಸುವ ಅಗ್ನಿ; ಯಾಗಕರ್ತೃ; ಕಾಲವ್ಯವಸ್ಥೆಗೆ ಕಾರಣರಾದ ಸೂರ್ಯ ಮತ್ತು ಚಂದ್ರ; ಕರ್ಣಗೋಚರವಾದ ಶಬ್ದವನ್ನೇ ತನ್ನ ಗುಣವಾಗಿ ಹೊಂದಿ ಎಲ್ಲವನ್ನೂ ವ್ಯಾಪಿಸಿರುವ ಆಕಾಶ; ಎಲ್ಲ ಸಚೇತನ–ಅಚೇತನ ಭೂತಗಳಿಗೂ ಉತ್ಪತ್ತಿಸ್ಥಾನವಾದ ಭೂಮಿ; ಮತ್ತು ಎಲ್ಲ ಜೀವಿಗಳ ಜೀವದುಸಿರಾದ ವಾಯು. ಈ ಎಂಟು ಪ್ರತ್ಯಕ್ಷರೂಪಗಳಿಂದ ಕೂಡಿದ ಶಿವನು ನಿಮ್ಮನ್ನು ಕಾಪಾಡಲಿ.’</p>.<p>ಆದರೆ ಕಾಳಿದಾಸನು ನಾಟಕದ ಕೊನೆಯಲ್ಲಿ ‘ಶಿವನು ನನ್ನ ಪುನರ್ಜನ್ಮವನ್ನು ಕೊನೆಗಾಣಿಸಲಿ’ ಎಂದು ಪ್ರಾರ್ಥಿಸಿದ್ದಾನೆ. ಆ ಮೂಲಕ ‘ಸೃಷ್ಟಿ’ಯಿಂದ ಪಾರಾಗಬೇಕೆನ್ನುವುದೇ ಈ ಸೃಷ್ಟಿಯ ಸಂದೇಶ ಎನ್ನುವುದನ್ನು ಅವನು ಸಾರಿದ್ದಾನೆ.</p>.<p>***</p>.<p>ದಶರಥನ ಅಶ್ವಮೇಧಯಾಗ, ಪುತ್ರಕಾಮೇಷ್ಟಿಯಾಗದೊಡನೆ, ಪೂರ್ಣವಾಯಿತು. ಅವನು ದೀಕ್ಷಾನಿಯಮವನ್ನು ಸಮಾಪ್ತಿಗೊಳಿಸಿ, ಪತ್ನಿಯರ ಸಂಗಡ ಸಮಸ್ತ ಪರಿವಾರದೊಂದಿಗೆ ಅಯೋಧ್ಯಾನಗರವನ್ನು ಪ್ರವೇಶಿಸಿದ.</p>.<p>ಯಜ್ಞ ಕಳೆದು ಒಂದು ವರ್ಷವಾಯಿತು. ಹನ್ನೆರಡನೆಯ ತಿಂಗಳು; ಚೈತ್ರಮಾಸದ ಶುಕ್ಲಪಕ್ಷ; ನವಮೀ; ಪುನರ್ವಸು ನಕ್ಷತ್ರ; ರವಿ, ಕುಜ, ಶನಿ, ಗುರು, ಶುಕ್ರ – ಈ ಐದು ಗ್ರಹಗಳು ತಮ್ಮ ಉಚ್ಚರಾಶಿಗಳಲ್ಲಿದ್ದಾರೆ. ಕರ್ಕಾಟಕ ಲಗ್ನವು ಚಂದ್ರ ಮತ್ತು ಗುರುಗಳೊಡನೆ ಉದಯವನ್ನು ಹೊಂದುತ್ತಿವೆ. ಈ ಸುಮುಹೂರ್ತದಲ್ಲಿ ಕೌಸಲ್ಯೆಯು ಸರ್ವಲಕ್ಷಣಸಂಪನ್ನದಿಂದ ಕೂಡಿರುವಂಥ ಗಂಡುಮಗುವಿಗೆ ಜನ್ಮ ನೀಡಿದ್ದಾಳೆ. ಅವನು ಸಾಕ್ಷಾತ್ ನಾರಾಯಣನ ಅರ್ಧಾಂಶ. ಅವನೇ ಶ್ರೀರಾಮಚಂದ್ರ.</p>.<p>ಅನಂತರ ಭರತನು ಕೈಕೇಯಿಯಲ್ಲಿಯೂ, ಲಕ್ಷ್ಮಣ–ಶತ್ರುಘ್ನರು ಸುಮಿತ್ರೆಯಲ್ಲಿಯೂ ಜನಿಸಿದರು. (ನಾಲ್ವರೂ ಏಕಕಾಲದಲ್ಲಿ ಜನಿಸಿದವರಲ್ಲ; ಸ್ವಲ್ಪ ಅಂತರದಲ್ಲಾದ ಈ ಜನ್ಮವಿಚಾರವನ್ನು ಮುಂದೆ ನೋಡೋಣ.)</p>.<p>ಕೌಸಲ್ಯೆಯಲ್ಲಿ ಜನಿಸಿದ ಮಗುವು ನೋಡಲು ಮನೋಹರವಾಗಿದ್ದನು (= ಅಭಿರಾಮ); ಹೀಗಾಗಿ ಅವನಿಗೆ ದಶರಥನು ‘ರಾಮ’ ಎಂದು ನಾಮಕರಣ ಮಾಡಿದ; ‘ರಾಮ’ ಜಗತ್ತಿನ ಮೊದಲ ಮಂಗಳ – ಎಂದು ಕಾಳಿದಾಸನು ‘ರಘುವಂಶ’ದಲ್ಲಿ ಸೊಗಸಾಗಿ ವರ್ಣಿಸಿದ್ದಾನೆ:</p>.<p><em><strong>ರಾಮ ಇತ್ಯಭಿರಾಮೇಣ</strong></em></p>.<p><em><strong>ವಪುಷಾ ತಸ್ಯ ಚೋದಿತಾ /</strong></em></p>.<p><em><strong>ನಾಮಧೇಯಂ ಗುರುಶ್ಚಕ್ರೇ</strong></em></p>.<p><em><strong>ಜಗತ್ಪ್ರಥಮಮಂಗಲಮ್ //</strong></em></p>.<p>(ದಶರಥನು ಅಭಿರಾಮತನುಕಾಂತಿಚೋದಿತನು ಹೆಸರಿಟ್ಟನಂದು ರಾಮನೆಂದಾ ಜಗತ್ಪ್ರಥಮ ಮಂಗಲನಾಮಧೇಯವನು ನೆನೆದು)</p>.<p><em><strong>ಅನುವಾದ: ಎಸ್. ವಿ. ಪರಮೇಶ್ವರ ಭಟ್ಟ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸೃಷ್ಟಿ ಎಂದರೆ ಸಮಗ್ರತೆ ಎನ್ನುವ ಮಾತು ಈ ಮೊದಲು ಬಂದಿದೆಯಷ್ಟೆ. ಅಲ್ಲಿ ಸೃಷ್ಟಿ ಎಂದಿರುವುದು ಮೊದಲ ‘ಸೃಷ್ಟಿ’ಯನ್ನಲ್ಲ; ‘ಅವತಾರವ’ವನ್ನೇ ಸೃಷ್ಟಿ ಎಂದು ಒಕ್ಕಣಿಸಲಾಗಿದೆ. ಅವತಾರದ ಉದ್ದೇಶ ಪೂರ್ಣವಾಗಿ ನೆರವೇರಬೇಕಾದರೆ ಅದಕ್ಕೆ ಬೇಕಾದ ಎಲ್ಲ ಪೂರಕ ವಿವರಗಳೂ ಅವತರಿಸಲೇಬೇಕಾಗುತ್ತದೆ. ವಿಷ್ಣು ಒಬ್ಬನೇ ಅವತರಿಸಿದರೆ ಆಗದು; ಜೊತೆಯಲ್ಲಿ ಅವನ ಶಂಖ, ಚಕ್ರಗಳೂ ಪರಿವಾರವೂ ಅವತಾರದಲ್ಲಿ ಮೂಡಬೇಕು. ಹೀಗಾಗಿ ಅವತಾರ ಎಂಬ ‘ಸೃಷ್ಟಿ’ ಸಮಗ್ರವಾದ ವಿದ್ಯಮಾನವೇ ಆಗಬೇಕಷ್ಟೆ!</p>.<p>ಸೃಷ್ಟಿಯ ಬಗ್ಗೆ ಎಲ್ಲ ಪ್ರಾಚೀನ ಸಂಸ್ಕೃತಿಗಳಲ್ಲೂ ಸಾಕಷ್ಟು ಪರಿಕಲ್ಪನೆಗಳಿವೆ. ಭಾರತೀಯ ಸಂಸ್ಕೃತಿಯಲ್ಲೂ ಹಲವು ವಿವರಣೆಗಳಿವೆ. ರಾಮಾಯಣಕಥೆಯ ಉದ್ದಕ್ಕೂ ಅಲ್ಲಲ್ಲಿ ಈ ವಿವರಗಳನ್ನು ವಿಶ್ಲೇಷಿಸಬೇಕಾಗುತ್ತದೆಯೆನ್ನಿ!</p>.<p>ಸದ್ಯಕ್ಕೆ ಬಾಣನ ‘ಕಾದಂಬರಿ’ಯ ಮಂಗಳಪದ್ಯದ ಪ್ರಥಮ ಗೀತವನ್ನು ಇಲ್ಲಿ ನೋಡಬಹುದು:</p>.<p><em><strong>ರಜೋಜುಷೇ ಜನ್ಮನಿ ಸತ್ತ್ವವೃತ್ತಯೇ ಸ್ಥಿತೌ ಪ್ರಜಾನಾಂ</strong></em></p>.<p><em><strong>ಪ್ರಲಯೇ ತಮಃಸ್ಮೃಶೇ /</strong></em></p>.<p><em><strong>ಅಜಾಯ ಸರ್ಗಸ್ಥಿತಿನಾಶಹೇತವೇ ತ್ರಯೀಮಯಾಯ</strong></em></p>.<p><em><strong>ತ್ರಿಗುಣಾತ್ಮನೇ ನಮಃ //</strong></em></p>.<p>ಇದರ ಭಾವಾನುವಾದವನ್ನು ಸರಳವಾಗಿ ಬನ್ನಂಜೆ ಗೋವಿಂದಾಚಾರ್ಯ ಹೀಗೆ ಕಂಡರಿಸಿದ್ದಾರೆ:</p>.<p>‘ರಜಸ್ಸಿನಿಂದ ಹುಟ್ಟು, ಸತ್ತ್ವದಿಂದ ಪಾಲನೆ, ತಮಸ್ಸಿನಿಂದ ಸಂಹಾರ – ಹೀಗೆ ಮೂರು ಗುಣಗಳಿಂದ ಜಗದ ಹುಟ್ಟು–ಸಾವುಗಳಿಗೆ ಕಾರಣನಾದ, ಸ್ವಯಂ ಹುಟ್ಟು–ಸಾವುಗಳಿರದ ಭಗವಂತನಿಗೆ ವಂದನೆಗಳು.’</p>.<p>ಸತ್ತ್ವ, ರಜಸ್ಸು ಮತ್ತು ತಮಸ್ಸು – ಈ ಮೂರು ಭಾರತೀಯ ತತ್ತ್ವಜ್ಞಾನದಲ್ಲಿ ಪ್ರಮುಖ ಪರಿಕಲ್ಪನೆಗಳಲ್ಲಿ ಸೇರುತ್ತವೆ. (ಈ ವಿವರಗಳನ್ನು ಮುಂದೆ ನೋಡೋಣ.) ಸಾಮಾನ್ಯವಾಗಿ ಸತ್ತ್ವ ಎಂದರೆ ಉತ್ತಮವಾದುದೆಂದೂ, ರಜಸ್ಸು ಮಧ್ಯಮವಾದುದೆಂದೂ, ತಮಸ್ಸು ಅಧಮವಾದುದೆಂದೂ ಗ್ರಹಿಸಲಾಗುತ್ತದೆ. ಬಿಳಿಯನ್ನು ಸತ್ತ್ವ ಎಂದೂ, ಕೆಂಪನ್ನು ರಜಸ್ಸು ಎಂದೂ, ಕಪ್ಪನ್ನು ತಮಸ್ಸು ಎಂದೂ ತಿಳಿಯಲಾಗುತ್ತದೆ.</p>.<p>ಆದರೆ ಇದು ತುಂಬ ಪ್ರಾಥಮಿಕಸ್ತರದ ಗ್ರಹಿಕೆ; ಮಾತ್ರವಲ್ಲ, ಇಂಥ ಸರಳಸೂತ್ರಗಳು ಹಲವು ಸಲ ಗೊಂದಲಗಳಿಗೂ ಕಾರಣವಾಗುತ್ತವೆ. ಹೇಗೆ ಸೃಷ್ಟಿ, ಸ್ಥಿತಿ ಮತ್ತು ಲಯಗಳು ಒಂದು ಇನ್ನೊಂದರಲ್ಲಿ ಬೆರೆತುಕೊಂಡು ಅಥವಾ ಹೆಣೆದುಕೊಂಡಿರುತ್ತವೆಯೋ ಹಾಗೆಯೇ ಸತ್ತ್ವ, ರಜಸ್ಸು ಮತ್ತು ತಮಸ್ಸುಗಳು ಕೂಡ ಪ್ರತ್ಯೇಕವಾಗಿರದೆ ಅಖಂಡವಾಗಿಯೇ ಇರುತ್ತವೆ.</p>.<p>ಸೃಷ್ಟಿಯನ್ನು ರಜಸ್ಸು ಎಂದು ಕರೆದಿರುವುದರಿಂದ ಅದೊಂದು ಹೇಯಕೃತ್ಯವೆಂದೋ, ಅಥವಾ ಪ್ರಳಯವನ್ನು ತಮಸ್ಸಿಗೆ ಹೋಲಿಸಿರುವುದರಿಂದ ಅದೊಂದು ನೀಚಕೃತ್ಯವೆಂದೋ ಹೇಳುವುದು ತಾತ್ತ್ವಿಕವಾಗಿ ತಪ್ಪಾಗುತ್ತದೆ. ‘God [the Eternal] is creating the world now, as much as he ever was' (ದೇವರು ವಿಶ್ವವನ್ನು ಎಂದಿನಂತೆಯೇ ಈ ಕ್ಷಣವೂ ಸೃಜಿಸುತ್ತಿದ್ದಾನೆ)</p>.<p>– ಆನಂದ ಕುಮಾರಸ್ವಾಮಿಯವರ ಈ ಮಾತು ಇಲ್ಲಿ ವಿಚಾರಣೀಯವಾದುದು. ಸೃಷ್ಟಿ ಎನ್ನುವುದು ಎಂದೋ ಒಮ್ಮೆ ಮಾಡಿಟ್ಟ ಅಡುಗೆಯಂತಲ್ಲ; ಅದು ಪೂರ್ವಾಪೂರ್ವಗಳ ಭಿತ್ತಿಯಲ್ಲಿ ನಿರಂತರವಾಗಿ ನಡೆಯುತ್ತಿರುವ ತ್ರಿಗುಣಗಳ ನಿತ್ಯನೂತನ ನರ್ತನ. ಹೀಗಾಗಿ ಸೃಷ್ಟಿಯನ್ನು ‘ರಜಸ್ಸು’ ಎಂದು ಕರೆದಿರುವುದು ಅದರ ಸ್ವ–ಭಾವವನ್ನು ಪರಿಚಯಿಸಲಷ್ಟೆ!</p>.<p>ಹೀಗಿದ್ದರೂ ನಾವಿಲ್ಲಿ ಗಮನಿಸಬೇಕಾದ್ದು ಭಗವಂತನ ಸ್ವ–ರೂಪವಾದ ‘ಅಜಾಯ’ತತ್ತ್ವ. ಈ ಪರಿಕಲ್ಪನೆ ಕೂಡ ಭಾರತೀಯ ದರ್ಶನಶಾಸ್ತ್ರದಲ್ಲಿ ತುಂಬ ಪ್ರಮುಖವಾದ ಪರಿಕಲ್ಪನೆ. ‘ಅಜಾಯ’ ಎಂದರೆ ದೇವರಿಗೆ ಹುಟ್ಟು–ಸಾವುಗಳು ಇಲ್ಲ; ಹುಟ್ಟು–ಸಾವುಗಳೇ ಇಲ್ಲವೆಂದಮೇಲೆ ಅವನಿಗೆ ನಾಮ–ರೂಪಗಳ ಹಂಗೂ ಇರದು; ಇರಬಾರದು ಕೂಡ. ಹೀಗಿದ್ದರೂ ನಾವು ದೇವರಿಗೆ ನಾಮ–ರೂಪಗಳನ್ನು ಕೊಡುತ್ತೇವೆ.</p>.<p>ಆದರೆ ಹೀಗೆ ಕೊಡುವುದು ಮಹಾಪಾಪವೆಂದೋ, ಹಾಗೆ ಕೊಟ್ಟವರು ಪಾಪಾತ್ಮರೆಂದೋ ತಿಳಿಯಬೇಕಿಲ್ಲ ಎಂಬ ವಿವೇಕವನ್ನೂ ಈ ಪರಂಪರೆಯೇ ಒದಗಿಸಿದೆ ಎನ್ನುವುದು ಕೂಡ ಗಮನಾರ್ಹ. ಪ್ರತ್ಯಕ್ಷ ಕಣ್ಣಿಗೆ ಕಾಣದುದನ್ನು ಕಣ್ಣಿಗೆ ಕಾಣಿಸಿಕೊಳ್ಳುವ ರಸಪ್ರಜ್ಞೆಯ ಕುಶಲತೆಯೇ ಈ ಕಲಾಪ. ಗಣಿತದ ಸಮಸ್ಯೆಗಳಲ್ಲಿ ಅವ್ಯಕ್ತವಾದುದನ್ನು ಕಂಡುಹಿಡಿಯಬೇಕಾಗುತ್ತದೆ. ಆಗ ಆ ಅವ್ಯಕ್ತವಾದುದಕ್ಕೇ ನಾವು ಒಂದು ಗೊತ್ತಾದ ಚಿಹ್ನೆಯನ್ನು ಆರೋಪಿಸಿ ಪರಿಹಾರವನ್ನು ಕಂಡುಕೊಳ್ಳುತ್ತೇವೆಯಷ್ಟೆ!</p>.<p>ಆ ಚಿಹ್ನೆಯೇ ಅದರ ಬೆಲೆಯಾಗಿರುವುದಿಲ್ಲ; ಆದರೆ ಅದಿಲ್ಲದೆ ಅವ್ಯಕ್ತದ ಬೆಲೆಯನ್ನು ಕಂಡುಹಿಡಿಯುವುದು ಸುಲಭವಾಗದು. ಇಂಥ ದಾರ್ಶನಿಕ ವಿವೇಕವ್ಯವಹಾರವನ್ನು ಈ ಶ್ಲೋಕ ಸೊಗಸಾಗಿ ನಿರೂಪಿಸುತ್ತದೆ:</p>.<p><em><strong>ರೂಪಂ ರೂಪವಿವರ್ಜಿತಸ್ಯ ಭವತೋ ಧ್ಯಾನೇನ ಯತ್ಕಲ್ಪಿತಂ</strong></em></p>.<p><em><strong>ಸ್ತುತ್ಯಾsನಿರ್ವಚನೀಯತಾsಖಿಲಗುರೋ</strong></em></p>.<p><em><strong>ದೂರೀಕೃತಾ ಯನ್ಮಯಾ /</strong></em></p>.<p><em><strong>ವ್ಯಾಪಿತ್ವಂ ಚ ನಿರಾಕೃತಂ ಭಗವತೋ</strong></em></p>.<p><em><strong>ಯತ್ತೀರ್ಥಯಾತ್ರಾದಿನಾ</strong></em></p>.<p><em><strong>ಕ್ಷಂತವ್ಯಂ ಜಗದೀಶ! ಯದ್ವಿಕಲತಾದೋ–</strong></em></p>.<p><em><strong>ಷತ್ರಯಂ ಮತ್ಕೃತಮ್ //</strong></em></p>.<p>(ಜಗದೊಡೆಯ! ನೀನು ಎಲ್ಲ ರೂಪಗಳಿಗೂ ಮೀರಿದವನು; ಆದರೂ ನಾನು ನಿನಗೊಂದು ರೂಪವನ್ನು ಕಲ್ಪಿಸಿದೆ. ನೀನು ಯಾವ ಮಾತುಗಳಿಗೂ ನಿಲುಕದವನು; ಆದರೂ ನಾನು ನಿನ್ನನ್ನು ಮಾತುಗಳಿಗೆ ಸಿಲುಕಿಸಿದೆ. ನೀನು ಎಲ್ಲೆಲ್ಲೂ ಇರುವವನು; ಆದರೂ ನಾನು ನಿನ್ನನ್ನು ತೀರ್ಥಕ್ಷೇತ್ರಗಳಿಗೆ ಸಂಕೋಚಿಸಿದೆ. ಹೀಗೆ ಮನಸ್ಸು, ಮಾತು ಮತ್ತು ದೇಹ – ಈ ಮೂರು ನೆಲೆಗಳಿಂದ ಆಗಿರುವ ನನ್ನ ತಪ್ಪುಗಳನ್ನು ಮನ್ನಿಸು.)</p>.<p>ಇಲ್ಲಿ ಇನ್ನೂ ಒಂದು ವಿವರವನ್ನು ನೋಡಬಹುದು.</p>.<p>‘ಅಭಿಜ್ಞಾನಶಾಕುಂತಲ’ದ ಆರಂಭದಲ್ಲಿ ಕಾಳಿದಾಸನು, ಸೃಷ್ಟಿಯಲ್ಲಿ ಕಾಣುವ ಪ್ರತ್ಯಕ್ಷ ವಿವರಗಳನ್ನೇ ಶಿವನ ಶರೀರವಾಗಿ ಕಂಡರಿಸಿ ಮಣಿದಿದ್ದಾನೆ:</p>.<p>‘ಬ್ರಹ್ಮನ ಮೊದಲ ಸೃಷ್ಟಿಯಾದ ನೀರು; ಶಾಸ್ತ್ರೋಕ್ತರೀತಿಯಲ್ಲಿ ಹೋಮ ಮಾಡಿದ ಹವಿಸ್ಸನ್ನು ದೇವತೆಗಳಿಗೆ ತಲುಪಿಸುವ ಅಗ್ನಿ; ಯಾಗಕರ್ತೃ; ಕಾಲವ್ಯವಸ್ಥೆಗೆ ಕಾರಣರಾದ ಸೂರ್ಯ ಮತ್ತು ಚಂದ್ರ; ಕರ್ಣಗೋಚರವಾದ ಶಬ್ದವನ್ನೇ ತನ್ನ ಗುಣವಾಗಿ ಹೊಂದಿ ಎಲ್ಲವನ್ನೂ ವ್ಯಾಪಿಸಿರುವ ಆಕಾಶ; ಎಲ್ಲ ಸಚೇತನ–ಅಚೇತನ ಭೂತಗಳಿಗೂ ಉತ್ಪತ್ತಿಸ್ಥಾನವಾದ ಭೂಮಿ; ಮತ್ತು ಎಲ್ಲ ಜೀವಿಗಳ ಜೀವದುಸಿರಾದ ವಾಯು. ಈ ಎಂಟು ಪ್ರತ್ಯಕ್ಷರೂಪಗಳಿಂದ ಕೂಡಿದ ಶಿವನು ನಿಮ್ಮನ್ನು ಕಾಪಾಡಲಿ.’</p>.<p>ಆದರೆ ಕಾಳಿದಾಸನು ನಾಟಕದ ಕೊನೆಯಲ್ಲಿ ‘ಶಿವನು ನನ್ನ ಪುನರ್ಜನ್ಮವನ್ನು ಕೊನೆಗಾಣಿಸಲಿ’ ಎಂದು ಪ್ರಾರ್ಥಿಸಿದ್ದಾನೆ. ಆ ಮೂಲಕ ‘ಸೃಷ್ಟಿ’ಯಿಂದ ಪಾರಾಗಬೇಕೆನ್ನುವುದೇ ಈ ಸೃಷ್ಟಿಯ ಸಂದೇಶ ಎನ್ನುವುದನ್ನು ಅವನು ಸಾರಿದ್ದಾನೆ.</p>.<p>***</p>.<p>ದಶರಥನ ಅಶ್ವಮೇಧಯಾಗ, ಪುತ್ರಕಾಮೇಷ್ಟಿಯಾಗದೊಡನೆ, ಪೂರ್ಣವಾಯಿತು. ಅವನು ದೀಕ್ಷಾನಿಯಮವನ್ನು ಸಮಾಪ್ತಿಗೊಳಿಸಿ, ಪತ್ನಿಯರ ಸಂಗಡ ಸಮಸ್ತ ಪರಿವಾರದೊಂದಿಗೆ ಅಯೋಧ್ಯಾನಗರವನ್ನು ಪ್ರವೇಶಿಸಿದ.</p>.<p>ಯಜ್ಞ ಕಳೆದು ಒಂದು ವರ್ಷವಾಯಿತು. ಹನ್ನೆರಡನೆಯ ತಿಂಗಳು; ಚೈತ್ರಮಾಸದ ಶುಕ್ಲಪಕ್ಷ; ನವಮೀ; ಪುನರ್ವಸು ನಕ್ಷತ್ರ; ರವಿ, ಕುಜ, ಶನಿ, ಗುರು, ಶುಕ್ರ – ಈ ಐದು ಗ್ರಹಗಳು ತಮ್ಮ ಉಚ್ಚರಾಶಿಗಳಲ್ಲಿದ್ದಾರೆ. ಕರ್ಕಾಟಕ ಲಗ್ನವು ಚಂದ್ರ ಮತ್ತು ಗುರುಗಳೊಡನೆ ಉದಯವನ್ನು ಹೊಂದುತ್ತಿವೆ. ಈ ಸುಮುಹೂರ್ತದಲ್ಲಿ ಕೌಸಲ್ಯೆಯು ಸರ್ವಲಕ್ಷಣಸಂಪನ್ನದಿಂದ ಕೂಡಿರುವಂಥ ಗಂಡುಮಗುವಿಗೆ ಜನ್ಮ ನೀಡಿದ್ದಾಳೆ. ಅವನು ಸಾಕ್ಷಾತ್ ನಾರಾಯಣನ ಅರ್ಧಾಂಶ. ಅವನೇ ಶ್ರೀರಾಮಚಂದ್ರ.</p>.<p>ಅನಂತರ ಭರತನು ಕೈಕೇಯಿಯಲ್ಲಿಯೂ, ಲಕ್ಷ್ಮಣ–ಶತ್ರುಘ್ನರು ಸುಮಿತ್ರೆಯಲ್ಲಿಯೂ ಜನಿಸಿದರು. (ನಾಲ್ವರೂ ಏಕಕಾಲದಲ್ಲಿ ಜನಿಸಿದವರಲ್ಲ; ಸ್ವಲ್ಪ ಅಂತರದಲ್ಲಾದ ಈ ಜನ್ಮವಿಚಾರವನ್ನು ಮುಂದೆ ನೋಡೋಣ.)</p>.<p>ಕೌಸಲ್ಯೆಯಲ್ಲಿ ಜನಿಸಿದ ಮಗುವು ನೋಡಲು ಮನೋಹರವಾಗಿದ್ದನು (= ಅಭಿರಾಮ); ಹೀಗಾಗಿ ಅವನಿಗೆ ದಶರಥನು ‘ರಾಮ’ ಎಂದು ನಾಮಕರಣ ಮಾಡಿದ; ‘ರಾಮ’ ಜಗತ್ತಿನ ಮೊದಲ ಮಂಗಳ – ಎಂದು ಕಾಳಿದಾಸನು ‘ರಘುವಂಶ’ದಲ್ಲಿ ಸೊಗಸಾಗಿ ವರ್ಣಿಸಿದ್ದಾನೆ:</p>.<p><em><strong>ರಾಮ ಇತ್ಯಭಿರಾಮೇಣ</strong></em></p>.<p><em><strong>ವಪುಷಾ ತಸ್ಯ ಚೋದಿತಾ /</strong></em></p>.<p><em><strong>ನಾಮಧೇಯಂ ಗುರುಶ್ಚಕ್ರೇ</strong></em></p>.<p><em><strong>ಜಗತ್ಪ್ರಥಮಮಂಗಲಮ್ //</strong></em></p>.<p>(ದಶರಥನು ಅಭಿರಾಮತನುಕಾಂತಿಚೋದಿತನು ಹೆಸರಿಟ್ಟನಂದು ರಾಮನೆಂದಾ ಜಗತ್ಪ್ರಥಮ ಮಂಗಲನಾಮಧೇಯವನು ನೆನೆದು)</p>.<p><em><strong>ಅನುವಾದ: ಎಸ್. ವಿ. ಪರಮೇಶ್ವರ ಭಟ್ಟ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>