ಚಾಮರಾಜನಗರ: ಸಾಮಾನ್ಯವಾಗಿ ಆಷಾಢ ಮಾಸದಲ್ಲಿ ಯಾವ ದೇವಾಲಯದಲ್ಲೂ ರಥೋತ್ಸವ ನಡೆಯುವುದಿಲ್ಲ. ಆದರೆ, ಚಾಮರಾಜನಗರದ ಐತಿಹಾಸಿಕ ಚಾಮರಾಜೇಶ್ವರ ಸ್ವಾಮಿ ದೇವಸ್ಥಾನ ಇದಕ್ಕಿಂತ ಭಿನ್ನ. ಇಲ್ಲಿ ಪ್ರತಿ ವರ್ಷ ಆಷಾಢ ಮಾಸದಲ್ಲಿ ತೇರು ನಡೆಯುತ್ತದೆ.
ಈ ಕಾರಣಕ್ಕೆ ಚಾಮರಾಜೇಶ್ವರಸ್ವಾಮಿಯ ರಥೋತ್ಸವ ಪ್ರಸಿದ್ಧಿ ಗಳಿಸಿದೆ. 200 ವರ್ಷಗಳ ಇತಿಹಾಸವಿರುವ ಈ ದೇವಾಲಯದ ಜಾತ್ರೆಯಲ್ಲಿ ಸಾವಿರಾರು ಜನರು ಪಾಲ್ಗೊಳ್ಳುತ್ತಾರೆ.
ಆಗ ತಾನೆ ಮದುವೆಯಾದ ನವಜೋಡಿಗಳು ತಮ್ಮ ಇಷ್ಟಾರ್ಥ ಈಡೇರಿಕೆಗಾಗಿ ಜಾತ್ರೆ ದಿನ ದೇವಾಲಯಕ್ಕೆ ಬರುತ್ತಾರೆ. ಹರಕೆ ಸಲ್ಲಿಸುತ್ತಾರೆ.
ಸಾಮಾನ್ಯವಾಗಿ ನವ ದಂಪತಿ ಆಷಾಢ ಮಾಸದಲ್ಲಿ ದೂರ ಇರುತ್ತಾರೆ. ಈ ಜಾತ್ರೆಯ ನೆಪದಲ್ಲಿ ಅವರು ಭೇಟಿಯಾಗಿ, ಜೊತೆಗೆ ದೇವರ ದರ್ಶನ ಪಡೆಯುತ್ತಾರೆ. ಆ ಕಾರಣಕ್ಕೆ ಈ ಜಾತ್ರೆ ವಿಶೇಷ.