ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರು ಪೂರ್ಣಿಮೆ: ಧಮ್ಮಚಕ್ಕಪವತ್ತನಸುತ್ತ

Last Updated 4 ಜುಲೈ 2020, 19:30 IST
ಅಕ್ಷರ ಗಾತ್ರ

‘ಭಗವಾನ್ ಬುದ್ಧರು 2609 ವರ್ಷಗಳ ಹಿಂದೆ ಸಾರನಾಥದಲ್ಲಿ, ಜಿಂಕೆವನದಲ್ಲಿ ಧಮ್ಮಚಕ್ಕಪವತ್ತನ ಸುತ್ತವನ್ನು ಉಪದೇಶಿಸಿದರು. ಈ ಧಮ್ಮೋಪದೇಶ ಮಾಡಿದ್ದರಿಂದಲೇ ಈ ಆಷಾಢ ಪೂರ್ಣಿಮೆಯನ್ನು ಗುರುಪೂರ್ಣಿಮೆ ಮತ್ತು ಧಮ್ಮದಿವಸವೆಂದು ಆಚರಿಸುತ್ತೇವೆ. ಇದು ಚಾತುರ್ಮಾಸ್ಯದ ಮೊಟ್ಟಮೊದಲನೆಯ ದಿನವಾಗಿದ್ದು, ಮೂರು ತಿಂಗಳು ‘ವರ್ಷವಾಸ’ ಅಂದರೆ ಭಿಕ್ಖುಗಳು ಒಂದೇ ಸ್ಥಳದಲ್ಲಿ ಇದ್ದು ಧ್ಯಾನ ಸಾಧನೆಯಲ್ಲಿ ತೊಡಗಿಕೊಳ್ಳುತ್ತಾರೆ. ಹಾಗೆಯೇ ಗೃಹಸ್ಥರು ಕೂಡ ಈ ವರ್ಷವಾಸದ ಸಮಯದಲ್ಲಿ ಬಹಳಷ್ಟು ಸಮಯವನ್ನು ಧ್ಯಾನಭ್ಯಾಸ, ವಿಹಾರಗಳಿಗೆ ಹೋಗಿ ಸಂಘದಾನ ಮಾಡುವುದು, ಧಮ್ಮೋಪದೇಶವನ್ನು ಕೇಳುವುದು ಮುಂತಾದ ಧಮ್ಮಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ. ಜೀವನದಲ್ಲಿ ನಾವು ಕೇವಲ ಹಣವನ್ನು ಗಳಿಸಿ ಅಥವಾ ಕುಟುಂಬವನ್ನು ನಡೆಸಿ ಅದರಲ್ಲಿಯೇ ಅಂತ್ಯವಾಗಬಾರದು. ಈ ಎಲ್ಲ ಚಟುವಟಿಕೆಗಳ ನಡುವೆ ನಮ್ಮ ಮನಸ್ಸನ್ನು ಬೆಳೆಸುವುದಕ್ಕೆ ಸಹಾಯಕಾರಿ ಆಗಬೇಕು, ಮನಸ್ಸನ್ನು ಬೆಳೆಸುತ್ತಾ ಬೋಧಿಯೆಡೆಗೆ ಸಾಗಬೇಕು – ಇದು ನಮ್ಮ ಜೀವನದ ಮುಖ್ಯ ಗುರಿಯಾಗಿರಬೇಕು.

ಧಮ್ಮಚಕ್ಕಪವತ್ತನ ಸುತ್ತದಲ್ಲಿ ಭಗವಾನ್ ಬುದ್ಧರು ಹೇಳುವ ಹಾಗೆ ಮೊದಲನೇಯ ಸತ್ಯ ದುಃಖ ಸತ್ಯ, ಇಂದು ನಾವು ಎದುರಿಸುತ್ತಿರುವ ಕೊರೊನಾ ಸಮಸ್ಯೆ ಈ ಸತ್ಯ. ಎರಡನೇಯ ಸತ್ಯ ದುಃಖಕ್ಕೆ ಕಾರಣ, ತೃಷ್ಣೆ ಮತ್ತು ಅಜ್ಞಾನ. ಅಂದರೆ ಜಾಗರೂಕರಾಗಿ ಇಲ್ಲದೆ ಇರುವುದು. ಮೂರನೇಯ ಸತ್ಯ ದುಃಖದ ಅಂತ್ಯ ಅಂದರೆ, ಸುಖ. ಈ ಕೊರೊನಾ ಮಹಾಮಾರಿಗೆ ಪರಿಹಾರವಿದ್ದು, ಜಗತ್ತಿನ ಎಲ್ಲಾ ಜೀವಿಗಳಿಗೆ ಮೈತ್ರಿಯನ್ನು ನೀಡುತ್ತ, ಸಾವಧಾನವಾಗಿ ಇರುವುದು. ನಾಲ್ಕನೇಯ ಸತ್ಯ, ಸುಖಕ್ಕೆ ಮಾರ್ಗ, ಆ ಸುಖದ ಮಾರ್ಗ ಅಷ್ಠಾಂಗಿಕ ಮಾರ್ಗ. ಇಲ್ಲಿ ಸರಿಯಾದ ತಿಳಿವಳಿಕೆ, ಯೋಚನೆ, ಮಾತು, ಪ್ರಯತ್ನ, ಧ್ಯಾನ ಮತ್ತು ಎಲ್ಲ ಕೊರೊನಾ ನಿಯಂತ್ರಣ ನಿಯಮಗಳನ್ನು ಪಾಲಿಸುತ್ತ ಪರಿಹಾರ ಪಡೆಯಬೇಕು.

ಈ ಗುರುಪೂರ್ಣಿಮೆಯ ಧಮ್ಮಚಕ್ಕಪವತ್ತನ ದಿನದಂದು ಭಗವಾನ್ ಬುದ್ಧರ ಆಶೀರ್ವಾದ ನಿಮ್ಮೆಲರ ಮೇಲೆ ಸದಾ ಇದ್ದು ಜಗತ್ತಿನಲ್ಲಿ ಎಲ್ಲರೂ ಸುಖವಾಗಿರಲಿ ಎಂದು ಆಶಿಸುತ್ತೇವೆ.‘

– ಆನಂದ ಭಂತೆ,

ಮಹಾಬೋಧಿ ಸೊಸೈಟಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT