ಕಲಬುರ್ಗಿ: ಇಲ್ಲಿನ ಬಿದ್ದಾಪುರ ಕಾಲೊನಿಯಲ್ಲಿರುವ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶುಕ್ರವಾರ, ಮಹಾಶಿವರಾತ್ರಿ ಅಂಗವಾಗಿ ವೈಭವದಿಂದ ಗಿರಿಜಾ ಕಲ್ಯಾಣೋತ್ಸವ ಜರುಗಿತು.
ಮಠದ ಆದಿಶಂಕರಾಚಾರ್ಯ ಅಷ್ಟೋತ್ತರ ಸೇವಾ ಸಮಿತಿ ವತಿಯಿಂದ ಆಚರಿಸಿದ ಈ ಕಲ್ಯಾಣ ಮಹೋತ್ಸವದಲ್ಲಿ ನಗರದ ಸುತ್ತಲಿನಿಂದ ನೂರಾರು ಗೃಹಿಣಿಯರು, ತರುಣಿಯರು ಪಾಲ್ಗೊಂಡು ತಮ್ಮ ಹರಕೆ ತೀರಿಸಿದರು.
ಪಾರ್ವತಿ ಹಾಗೂ ಪರಮೇಶ್ವರನ ನೂತನ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಅಭಿಷೇಕ, ಮಹಾರುದ್ರಾಭಿಷೇಕ, ಫಲ ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ ಸೇರಿದಂತೆ ವೈವಿಧ್ಯಮಯ ಪೂಜೆಗಳನ್ನು ನೆರವೇರಿಸಲಾಯಿತು.
ನಂತರ ಶಾಸ್ತ್ರೋಕ್ತವಾಗಿ ಪುಣ್ಯಾವಚನ ಹಾಗೂ ವಿವಾಹ ವಿಧಾನಗಳನ್ನು ನೆರವೇರಿಸಲಾಯಿತು. ಪುರೋಹಿತರು ವೇದ ಮಂತ್ರ ಪಠಣ ಮಾಡಿದರು. ಕಾರ್ಯಕ್ರಮದಲ್ಲಿ ಸೇರಿದ ವಿವಿಧ ಭಜನಾ ಮಂಡಳಿಗಳ ಮಹಿಳೆಯರು ಭಜನೆಗಳನ್ನು ಹಾಡಿ, ಶಿವನಾಮ ಜಪ ಮಾಡಿದರು.
ನವಲಿ ಕೃಷ್ಣಾಚಾರ್ಯ, ಚಂದ್ರಕಾಂತ ನಾಗೂರ, ನಾನಾಸಾಹೇಬ್ ನೇತೃತ್ವದಲ್ಲಿ ಅಷ್ಟೋತ್ತರ ಸೇವಾ ಸಮಿತಿಯ ಸದಸ್ಯರು ಈ ವಿವಾಹ ಮಹೋತ್ಸವನ್ನು ನೆರವೇರಿಸಿದರು.
ಬೆಳಿಗ್ಗೆಯಿಂದ ಸಂಜೆಯವರೆಗೂ ಅಪಾರ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ರಾತ್ರಿ ಸಾಂಸ್ಕೃತಿಕ ಹಾಗೂ ಭಕ್ತಿ ಕಾರ್ಯಕ್ರಮಗಳು ನೆರವೇರಿದವು.