ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರ ಭವಿಷ್ಯ: 21-11-2021ರಿಂದ 27-11-2020ರವರೆಗೆ

Last Updated 20 ನವೆಂಬರ್ 2021, 18:45 IST
ಅಕ್ಷರ ಗಾತ್ರ

ಮೇಷ ರಾಶಿ ( ಅಶ್ವಿನಿ ಭರಣಿ ಕೃತಿಕ 1)

ವೈಯಕ್ತಿಕ ತೊಂದರೆಯಿಂದ ಕೆಲಕಾಲ ಬಿಡುಗಡೆಯನ್ನು ಹೊಂದುವಿರಿ. ಪತ್ನಿಯ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಕಾಣಬಹುದು. ಉದ್ಯೋಗ ಆಕಾಂಕ್ಷಿಗಳಿಗೆ ಉದ್ಯೋಗದ ಬಗ್ಗೆ ಭರವಸೆ ದೊರೆಯುತ್ತದೆ. ವಿದೇಶಿ ವ್ಯವಹಾರಸ್ಥರ ಪರಿಚಯದಿಂದಾಗಿ ವ್ಯವಹಾರಕ್ಕೆ ಹೊಸ ತಿರುವು ದೊರೆಯುತ್ತದೆ. ಅತಿಯಾದ ಆಯಾಸ ನಿಮ್ಮನ್ನು ಬಾಧಿಸಬಹುದು. ಇದಕ್ಕಾಗಿ ವೈದ್ಯರ ಸಲಹೆಯನ್ನು ಪಡೆಯಿರಿ. ವೈವಾಹಿಕ ಜೀವನದಲ್ಲಿ ಭಾಗ್ಯೋದಯವನ್ನು ಕಾಣುವಿರಿ. ರಾಜಕೀಯದಲ್ಲಿ ಇರುವವರಿಗೆ ಬೇಸರ ಮೂಡಿಸುವ ಸುದ್ದಿಯೊಂದು ಕೇಳಿಬರುತ್ತದೆ. ಸರ್ಕಾರದಿಂದ ಬರಬೇಕಾಗಿದ್ದ ಹಣ ಹಂತ ಹಂತವಾಗಿ ಬರುತ್ತದೆ. ಹಣದ ಒಳಹರಿವು ಸಾಮಾನ್ಯ ಸ್ಥಿತಿಯಲ್ಲಿರುತ್ತದೆ. ಕಣ್ಣಿನ ಆರೋಗ್ಯದ ಬಗ್ಗೆ ಎಚ್ಚರ ವಹಿಸಿರಿ.

ವೃಷಭರಾಶಿ (ಕೃತಿಕಾ2 3 4 ರೋಹಿಣಿ ಮೃಗಶಿರಾ1 2)

ಆರ್ಥಿಕ ಸಂಪನ್ಮೂಲ ಚೇತರಿಕೆಯತ್ತ ಸಾಗುತ್ತದೆ. ಹಣದ ಒಳಹರಿವು ನಿಮ್ಮ ನಿರೀಕ್ಷೆಯಷ್ಟು ಇರುತ್ತದೆ. ನೀರಿನಿಂದ ಅಥವಾ ಆಹಾರದಿಂದ ನಿಮ್ಮ ಆರೋಗ್ಯ ವ್ಯತ್ಯಾಸ ಆಗಬಹುದು. ಹಿರಿಯ ಸರ್ಕಾರಿ ಅಧಿಕಾರಿಗಳಿಗೆ ಸ್ಥಾನ ಬದಲಾವಣೆ ಆಗಬಹುದು. ಬೇರೆಯವರ ಒತ್ತಡಕ್ಕಾಗಿ ಗೊತ್ತಿಲ್ಲದ ಜಾಗದಲ್ಲಿ ಹಣ ಹೂಡಿ ಮೋಸ ಹೋಗಬೇಡಿ. ಹಿರಿಯರ ಸಲಹೆ, ಮಾರ್ಗದರ್ಶನವನ್ನು ಅನುಸರಿಸುವುದು ನಿಮಗೆ ಒಳಿತಾಗುವುದು. ವಿದೇಶಿ ವ್ಯವಹಾರಗಳನ್ನು ಮಾಡುವವರಿಗೆ ವ್ಯವಹಾರ ವಿಸ್ತರಿಸುತ್ತದೆ. ಕುಲಕಸುಬನ್ನು ನಡೆಸುತ್ತಿರುವವರಿಗೆ ಅದರಲ್ಲಿ ಆದಾಯ ಬಂದೇ ಬರುತ್ತದೆ. ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಬೇಕಾದ ಅನುಕೂಲತೆಗಳು ಒದಗಿಬರುತ್ತವೆ. ಬೆಂಕಿಯೊಡನೆ ಕೆಲಸ ಮಾಡುವವರು ಸ್ವಲ್ಪ ಎಚ್ಚರ ವಹಿಸಿರಿ.

ಮಿಥುನ ರಾಶಿ (ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)

ಅನವಶ್ಯಕ ಮಾತುಗಳಿಂದ ಬಂಧುಗಳ ನಡುವೆ ನಿಷ್ಠುರಕ್ಕೆ ಒಳಗಾಗುವ ಸಾಧ್ಯತೆಗಳಿವೆ. ಉದ್ಯೋಗದಲ್ಲಿರುವವರಿಗೆ ಪದೋನ್ನತಿ ಒದಗುವ ಸಾಧ್ಯತೆಗಳಿವೆ. ಆದಾಯಕ್ಕಿಂತ ಹೆಚ್ಚು ಖರ್ಚು ಸಾಧ್ಯತೆಯಿದೆ. ವೆಚ್ಚಕ್ಕೆ ಕಡಿವಾಣ ಹಾಕಿರಿ. ದೈವಾನುಗ್ರಹದಿಂದ ನಿಮ್ಮ ಕೆಲಸ ಕಾರ್ಯಗಳು ನೆರವೇರುತ್ತವೆ. ರಾಜಕೀಯದಲ್ಲಿ ತೊಡಗಿಕೊಳ್ಳುವ ಮಹಿಳೆಯರಿಗೆ ಯಶಸ್ಸು ಇರುತ್ತದೆ. ಕೈಗಾರಿಕೆ ಉದ್ದಿಮೆದಾರರಿಗೆ ಉತ್ಪಾದನೆಯಲ್ಲಿ ಹೆಚ್ಚಳವಾಗಿ ಆದಾಯ ಹೆಚ್ಚುತ್ತದೆ. ದೂರ ಪ್ರಯಾಣದಲ್ಲಿ ಸ್ವಲ್ಪ ತೊಂದರೆಗಳಾಗುವ ಸಂದರ್ಭವಿದೆ ಎಚ್ಚರ ವಹಿಸಿರಿ. ಯಾವುದೇ ದೊಡ್ಡ ಮೊತ್ತದ ಕಾರ್ಯ ಯೋಜನೆಗಳನ್ನು ಈಗ ಆರಂಭಿಸಬೇಡಿರಿ. ಹೂಡಿಕೆ ಹಣವೇ ಮುಳುಗಬಹುದು ಎಚ್ಚರವಾಗಿರಿ.

ಕಟಕ ರಾಶಿ ( ಪುನರ್ವಸು 4 ಪುಷ್ಯ ಆಶ್ಲೇಷ)

ಅನವಶ್ಯಕ ಪ್ರಯಾಣದಿಂದ ಧನ ನಷ್ಟ ಆಗಬಹುದು. ಮನರಂಜನಾ ಕಾರ್ಯಕ್ರಮಗಳನ್ನು ನಡೆಸುವವರಿಗೆ ಹೆಚ್ಚು ಕಾರ್ಯಕ್ರಮಗಳು ಒದಗಿ ಹೆಚ್ಚು ಸಂಪಾದನೆಯಾಗುತ್ತದೆ. ಸಂಗೀತಗಾರರಿಗೆ ಸಂಪಾದನೆ ಹೆಚ್ಚುವ ಸಾಧ್ಯತೆಯಿದೆ. ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಸಾಕಷ್ಟು ಶ್ರಮ ಪಡುವಿರಿ. ಸಂಸ್ಥೆಗಳಲ್ಲಿನ ಹಿರಿಯ ಅಧಿಕಾರಿಗಳಿಗೆ ಕಾರ್ಯದೊತ್ತಡ ಹೆಚ್ಚಾಗಬಹುದು. ಕೆಲಸದ ನಡುವೆ ಹೊಸ ಆದಾಯದ ಮೂಲವೊಂದು ಗೋಚರಿಸುವ ಸಾಧ್ಯತೆಯಿದೆ. ಕೆಲವು ಸಂದರ್ಭಗಳಲ್ಲಿ ಸಂಗಾತಿಯ ಕೋಪವನ್ನು ಎದುರಿಸಬೇಕಾದೀತು. ಕೃಷಿಕರಿಗೆ ಆದಾಯ ಬರುವ ಸಾಧ್ಯತೆಯಿದೆ. ಯಂತ್ರಾಗಾರಗಳಲ್ಲಿ ಅವಘಡಗಳು ಸಂಭವಿಸುವ ಸಾಧ್ಯತೆಗಳಿವೆ. ಕಾರ್ಮಿಕರು ಎಚ್ಚರ ವಹಿಸುವುದು ಒಳ್ಳೆಯದು.

ಸಿಂಹ ರಾಶಿ ( ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)

ವಿದ್ಯಾರ್ಥಿಗಳಿಗೆ ಓದಿನಲ್ಲಿ ವಿಶೇಷ ಪ್ರಗತಿ ಇರುತ್ತದೆ. ಸರ್ಕಾರಿ ಮಟ್ಟದ ಕೆಲಸ ಕಾರ್ಯಗಳು ಸುಗಮವಾಗಿ ನೆರವೇರುತ್ತವೆ. ನಿಮ್ಮ ಮಾತು ಮತ್ತು ನಡವಳಿಕೆಯಿಂದ ಗೌರವ ಪ್ರಾಪ್ತಿಯಾಗುತ್ತದೆ. ಉದ್ಯೋಗದ ನಿಮಿತ್ತ ದೂರದೂರಿಗೆ ಪ್ರಯಾಣ ಮಾಡಬೇಕಾಗಬಹುದು. ನ್ಯಾಯಾಲಯದಲ್ಲಿರುವ ಹಳೆಯ ಕೇಸುಗಳಲ್ಲಿ ನಿಮಗೆ ಪ್ರಗತಿ ಇರುತ್ತದೆ. ಸಾಂಸಾರಿಕ ಸೌಖ್ಯಕ್ಕಾಗಿ ಹೊಸ ವಸ್ತುಗಳನ್ನು ಖರೀದಿ ಮಾಡುವಿರಿ. ಆರ್ಥಿಕತೆಯನ್ನು ಚೇತರಿಕೆಯತ್ತ ಕೊಂಡೊಯ್ಯಲು ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳುವಿರಿ. ಹಿರಿಯರ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆಯನ್ನು ಕಾಣಬಹುದು. ಮಹಿಳೆಯರು ನಡೆಸುವ ಹಣದ ವ್ಯವಹಾರಗಳಲ್ಲಿ ಪ್ರಗತಿಯನ್ನು ಕಾಣಬಹುದು.

ಕನ್ಯಾ ರಾಶಿ (ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)

ಪರಸ್ಪರ ಭಿನ್ನಾಭಿಪ್ರಾಯಗಳು ಈಗ ದೂರವಾಗಿ ಸುಖ ದಾಂಪತ್ಯಕ್ಕೆ ನಾಂದಿಯಾಗುತ್ತದೆ. ಕೆಲಸಕಾರ್ಯಗಳಲ್ಲಿ ಅತಿಯಾದ ಆತುರತೆ ಬೇಡ. ಇದರಿಂದ ಕೆಲಸಗಳಲ್ಲಿ ತೊಂದರೆಯಾಗಬಹುದು. ವಿಶ್ವಾಸದಿಂದ ಪಾಲುದಾರರ ಮನಮೆಚ್ಚಿಸಿ ಅವರ ವ್ಯವಹಾರದಲ್ಲಿ ಭಾಗವಹಿಸುವ ಅವಕಾಶಗಳನ್ನು ಪಡೆಯುವಿರಿ. ಬೇರೆಯವರ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡಿದಲ್ಲಿ ನೀವೇ ಸಿಕ್ಕಿಬೀಳುವ ಸಾಧ್ಯತೆಗಳಿವೆ. ಸಾಲಗಾರರ ಕಾಟ ಸ್ವಲ್ಪ ಹೆಚ್ಚಾಗುವ ಸಂದರ್ಭವಿದೆ. ಕರಕುಶಲ ವಸ್ತುಗಳನ್ನು ತಯಾರಿಸುವವರಿಗೆ ಉತ್ತಮ ಸೌಲಭ್ಯದ ಜೊತೆಗೆ ಸರ್ಕಾರದ ಧನಸಹಾಯ ಸಹ ಸಿಗುತ್ತದೆ. ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನ ಕೊಡಿರಿ. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ.

ತುಲಾ ರಾಶಿ (ಚಿತ್ತಾ 3 4 ಸ್ವಾತಿ ವಿಶಾಖ 1 2 3)

ಸಂಗಾತಿಯ ಆಕಸ್ಮಿಕ ನಡವಳಿಕೆಯಿಂದ ನಿಮಗೆ ಮುಜುಗರವಾಗಬಹುದು. ಕುಳಿತು ತಿಳಿಹೇಳುವುದರಿಂದ ಇಂತಹ ಸಂದರ್ಭಗಳನ್ನು ತಪ್ಪಿಸಬಹುದು. ಬಾಯಿ ಚಪಲವನ್ನು ಹೊಂದಿರುವ ಹಿರಿಯರಿಗೆ ಆಹಾರದಿಂದ ಅನಾರೋಗ್ಯ ಬರಬಹುದು. ನಿಮ್ಮ ಅತಿಯಾದ ಆತ್ಮಗೌರವ ಆಗಬಹುದಾದ ಕೆಲಸಗಳಲ್ಲಿ ವಿಘ್ನ ತರಬಹುದು. ಸರ್ಕಾರದಿಂದ ಬರಬೇಕಾಗಿದ್ದ ಸಹಾಯಧನಗಳು ಸರಾಗವಾಗಿ ಬಂದು ಸೇರುತ್ತವೆ. ಆಸ್ತಿಗೆ ಸಂಬಂಧಿಸಿದ ವ್ಯಾಜ್ಯಗಳು ಹೆಚ್ಚಾಗಬಹುದು. ಕರಿದ ತಿಂಡಿಗಳನ್ನು ತಯಾರಿಸಿ ಮಾರುವವರಿಗೆ ಹೆಚ್ಚು ವ್ಯಾಪಾರವಾಗಿ ಆದಾಯ ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಸಾಕಷ್ಟು ಯಶಸ್ಸು ಇರುತ್ತದೆ. ಹಣದ ಒಳಹರಿವು ನಿಮ್ಮ ನಿರೀಕ್ಷೆಯಷ್ಟು ಇರುತ್ತದೆ. ಹಲ್ಲಿನ ತೊಂದರೆ ಹೆಚ್ಚಾಗಬಹುದು.

ವೃಶ್ಚಿಕ ರಾಶಿ (ವಿಶಾಖಾ 4 ಅನುರಾಧ ಜೇಷ್ಠ)

ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಅಭಿವೃದ್ಧಿಯನ್ನು ಕಾಣಬಹುದು. ಸಾಮಾಜಿಕ ಚಿಂತನೆಗಳಿಂದ ಸಮಾಜದಲ್ಲಿ ಗೌರವಾದರಗಳನ್ನು ಹೊಂದುವಿರಿ. ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿಯನ್ನು ಕಾಣಬಹುದು. ಸಂಗಾತಿಯ ಕೆಲವು ಸಲಹೆಗಳು ನಿಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಕೊಡುತ್ತವೆ. ಅವಶ್ಯಕತೆಗಿಂತ ಹೆಚ್ಚಿನ ಧನಸಹಾಯಗಳು ದೊರೆತು ಸಂತಸವಾಗುತ್ತದೆ. ಆದರೆ ಮಿತಿಮೀರಿ ಸಾಲ ಮಾಡುವುದು ಬೇಡ. ನಿಮ್ಮ ಒಳ್ಳೆಯತನ ಬೇರೆಯವರಿಂದ ದುರುಪಯೋಗ ಆಗದಂತೆ ಎಚ್ಚರ ವಹಿಸಿರಿ. ರಾಜಕೀಯ ಮುಖಂಡರು ಮುಜುಗರಕ್ಕೆ ಒಳಗಾಗುವ ಸಂದರ್ಭಗಳಿವೆ. ಹಣ ಒಳಹರಿವು ನಿರೀಕ್ಷೆಗಿಂತ ಹೆಚ್ಚಾಗಿ ಇರುತ್ತದೆ. ವೈಯಕ್ತಿಕ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಇರಲಿ.

ಧನಸ್ಸು ರಾಶಿ (ಮೂಲ ಪೂರ್ವಾಷಾಢ ಉತ್ತರಾಷಾಢ 1)

ವಯೋವೃದ್ಧರಿಗೆ ಅವರ ಮಾತೇ ಮುಳುವಾಗಬಹುದು. ಆದ್ದರಿಂದ ಮಾತನಾಡುವಾಗ ಎಚ್ಚರ ಇರಲಿ. ಇವರಿಗೆ ಶತ್ರುಗಳು ಹೆಚ್ಚಾಗುವ ಸಂದರ್ಭಗಳಿವೆ. ಆರ್ಥಿಕ ಅಡಚಣೆಗಳು ಹಂತಹಂತವಾಗಿ ನಿವಾರಣೆಯಾಗುತ್ತವೆ. ಶಾರೀರಿಕ ಆಯಾಸ ಆದರೂ ಕೆಲಸದಲ್ಲಿ ಪ್ರಗತಿ ಇರುತ್ತದೆ. ಮಿತ್ರರ ಸಹಕಾರದಿಂದ ರಾಜಕೀಯ ವ್ಯವಹಾರಗಳಲ್ಲಿ ಪ್ರಗತಿ ಇರುತ್ತದೆ. ಹಿರಿಯರ ಸಲಹೆ ಸಹಕಾರಗಳು ಒದಗಿ ಕೆಲಸಕಾರ್ಯಗಳಲ್ಲಿ ಸಾಕಾರವಾಗುತ್ತದೆ. ಮೂಳೆ ತೊಂದರೆ ಇರುವವರು ಎಚ್ಚರ ವಹಿಸುವುದು ಅಗತ್ಯ. ಕೃಷಿಕರಿಗೆ ಹೆಚ್ಚಿನ ಲಾಭ ಬರುತ್ತದೆ ಹಾಗೂ ಸಂಸ್ಥೆಗಳಿಂದ ಬರಬೇಕಾಗಿದ್ದ ಬಾಕಿ ಹಣಗಳು ಹರಿದು ಬರುತ್ತವೆ. ಸರ್ಕಾರದ ಕೆಲಸಗಳಲ್ಲಿ ಸ್ವಲ್ಪ ಹಿನ್ನಡೆಯನ್ನು ಕಾಣಬಹುದು.

ಮಕರ ರಾಶಿ (ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)

ಹೊಸ ಸ್ನೇಹಿತರಿಂದ ಹೊಸ ಹೊಸ ಯೋಜನೆಗಳಿಗೆ ಪ್ರೋತ್ಸಾಹ ದೊರೆಯುತ್ತದೆ. ಉನ್ನತ ಅಧಿಕಾರಿಗಳ ಅನುಗ್ರಹದಿಂದಾಗಿ ವೃತ್ತಿಯಲ್ಲಿ ಸಾಕಷ್ಟು ಅನುಕೂಲತೆ ಮೂಡುತ್ತದೆ. ಮಕ್ಕಳಿಂದ ಹಿರಿಯರಿಗೆ ಆರ್ಥಿಕ ಸಹಕಾರಗಳು ದೊರೆಯುವ ಸಾಧ್ಯತೆಗಳಿವೆ. ವೈದ್ಯಕೀಯ ವೃತ್ತಿಯಲ್ಲಿರುವವರಿಗೆ ಆದಾಯ ಹೆಚ್ಚುತ್ತದೆ. ನ್ಯಾಯವಾದಿಗಳಿಗೆ ನೆಚ್ಚಿನ ದಾವೆಗಳು ದೊರೆತು ಆದಾಯ ಹೆಚ್ಚುತ್ತದೆ. ಬೆಂಕಿ ಯೊಡನೆ ಮತ್ತು ವಿದ್ಯುಚ್ಛಕ್ತಿ ಯೊಡನೆ ಕೆಲಸ ಮಾಡುವವರು ಎಚ್ಚರದಿಂದಿರುವುದು ಅಗತ್ಯ. ಸರ್ಕಾರಿ ಕೆಲಸಗಳಲ್ಲಿ ಮುನ್ನಡೆ ಇರುತ್ತದೆ. ನಿಮ್ಮದೇ ಸ್ಥಿರಾಸ್ತಿಯನ್ನು ಹೊಂದುವ ಸಂದರ್ಭವಿದೆ. ಪಾಲುದಾರಿಕೆಯ ವ್ಯವಹಾರಗಳಲ್ಲಿ ಹೆಚ್ಚಿನ ಲಾಭವನ್ನು ನಿರೀಕ್ಷಿಸಬಹುದು. ಹಣದ ಒಳಹರಿವು ತೃಪ್ತಿಕರವಾಗಿರುತ್ತದೆ. ಆರೋಗ್ಯದಲ್ಲಿ ಚೇತರಿಕೆಯನ್ನು ಕಾಣಬಹುದು.

ಕುಂಭ ರಾಶಿ (ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)

ಸರ್ಕಾರಿ ನೌಕರಿಯಲ್ಲಿ ಬಡ್ತಿ ಹಾಗೂ ಹೊಸ ಯೋಜನೆಗಳನ್ನು ರೂಪಿಸುವವರಿಗೆ ಬಹಳಷ್ಟು ಅಭಿವೃದ್ಧಿ ಇರುತ್ತದೆ. ಗೃಹನಿರ್ಮಾಣ ಕಾರ್ಯಗಳನ್ನು ಈಗ ಕೈಗೆತ್ತಿಕೊಳ್ಳಬಹುದು. ಮನಸ್ಸು ಇಟ್ಟು ಕೆಲಸ ಮಾಡಿದಲ್ಲಿ ವಿದೇಶಿ ವ್ಯವಹಾರಗಳಲ್ಲಿ ಅಭಿವೃದ್ಧಿಯನ್ನು ಕಾಣಬಹುದು. ಭೂಮಿಯನ್ನು ಖರೀದಿಸಬೇಕೆಂದವರಿಗೆ ಈಗ ಅವಕಾಶಗಳು ಒದಗಿ ಬರುತ್ತವೆ. ಪ್ರಗತಿಪರ ಚಿಂತಕರಿಗೆ ಉತ್ತಮ ಗೌರವ ದೊರೆಯುತ್ತದೆ. ಧರ್ಮಕಾರ್ಯಗಳನ್ನು ನಡೆಸುತ್ತಿರುವವರಿಗೆ ಸಮಾಜದಿಂದ ಗೌರವ ಮತ್ತು ಸಹಾಯಗಳು ದೊರೆಯುತ್ತವೆ. ಪ್ರೀತಿ-ಪ್ರೇಮದಲ್ಲಿ ಮುಳುಗಿರುವ ಯುವಕರಿಗೆ ನಿರಾಸೆ ಆಗಬಹುದು. ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವವರಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತದೆ. ಹಣದ ಒಳಹರಿವು ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ.

ಮೀನ ರಾಶಿ (ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)

ಆರ್ಥಿಕ ವಿಷಯಗಳಲ್ಲಿ ಸ್ವಲ್ಪ ಎಚ್ಚರಿಕೆ ಅಗತ್ಯ. ಸರ್ಕಾರಿ ನೌಕರರಿಗೆ ಉದ್ಯೋಗದಲ್ಲಿ ಪ್ರಗತಿ ಇರುತ್ತದೆ. ಸೋದರರಿಂದ ಅಗತ್ಯ ಸಹಕಾರಗಳು ದೊರೆಯುತ್ತವೆ. ಆರ್ಥಿಕ ಪ್ರಗತಿಗಾಗಿ ನೀವು ಅಂದುಕೊಂಡಿರುವ ಯೋಜನೆಗಳಲ್ಲಿ ಕೆಲವು ಯೋಜನೆಗಳು ಉತ್ತಮ ಫಲ ಕೊಡುತ್ತವೆ. ಕೃಷಿ ಸಂಬಂಧಿತ ಕೈಗಾರಿಕೆಗಳನ್ನು ನಡೆಸುತ್ತಿರುವವರಿಗೆ ಉತ್ತಮ ಲಾಭ ಇರುತ್ತದೆ. ಕೈಗಾರಿಕೆಗಳಿಗೆ ಮಾನವ ಸಂಪನ್ಮೂಲವನ್ನು ಪೂರೈಕೆ ಮಾಡುವ ಸಂಸ್ಥೆಗಳಿಗೆ ಬೇಡಿಕೆ ಹೆಚ್ಚಾಗುತ್ತದೆ. ಅನಗತ್ಯ ಕೋಪಗಳಿಂದ ಪಾಲುದಾರರ ನಡುವೆ ವಿರಸ ಮೂಡಬಹುದು. ದೈಹಿಕವಾಗಿ ಸಣ್ಣಪುಟ್ಟ ನೋವುಗಳು ನಿಮ್ಮನ್ನು ಕಾಡಬಹುದು. ಒಡಹುಟ್ಟಿದವರು ನಿಮ್ಮ ವಿರುದ್ಧ ಮಾತನಾಡಬಹುದು. ಮಕ್ಕಳಿಂದ ಗೌರವ ಕಡಿಮೆ ಇರುತ್ತದೆ. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT