ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಮಾತೆ ಶಾರದಾದೇವಿ

ಶಾರದಾದೇವಿ ಜಯಂತಿ ಡಿಸೆಂಬರ್ 18
Last Updated 13 ಡಿಸೆಂಬರ್ 2019, 19:46 IST
ಅಕ್ಷರ ಗಾತ್ರ

ಶ್ರೀಮಾತೆಶಾರದಾದೇವಿಯವರ ಜೀವನ ಮೂರು ಮುಖ್ಯ ಘಟ್ಟಗಳಲ್ಲಿ ಬೆಳೆಯುತ್ತದೆ. ಬಾಲ್ಯದಿಂದ ವಿವಾಹದವರೆಗೆ ಮೊದಲನೆಯ ಘಟ್ಟ; ಶ್ರೀರಾಮಕೃಷ್ಣರ ಕೈಹಿಡಿದು ಆಧ್ಯಾತ್ಮಿಕ ಶಿಕ್ಷಣ ಪಡೆದು ಮಾತೃಪೀಠಾರೋಹಣ ಮಾಡುವವರೆಗಿನದು ಎರಡನೆಯ ಘಟ್ಟ; ಶ್ರೀರಾಮಕೃಷ್ಣರ ಮಹಾಸಮಾಧಿಯ ಬಳಿಕ ತಮ್ಮ ಪರಿಸಮಾಪ್ತಿಯವರೆಗಿನದು ಮೂರನೆಯ ಘಟ್ಟ. ಮೊದಲೆರಡರಲ್ಲಿ ಗುಪ್ತವಾಗಿ, ಸುಪ್ತವಾಗಿ ಇದ್ದ ಶ್ರೀಶಕ್ತಿ ಕೊನೆಯ ಘಟ್ಟದಲ್ಲಿ ಪರಮಾದ್ಭುತವಾಗಿ ವಿಜೃಂಭಿಸುವುದನ್ನು ನಾವು ಕಾಣುತ್ತೇವೆ. ಶ್ರೀರಾಮಕೃಷ್ಣರ ಸೂಕ್ಷ್ಮ ದೇಹಪ್ರಕೃತಿಗೆ ತಕ್ಕಂತಹ ಊಟೋಪಚಾರಗಳನ್ನು, ಅವರ ಶಿಷ್ಯವೃಂದಕ್ಕೆ ಬೇಕಾದ ಪೌಷ್ಟಿಕ ಆಹಾರವನ್ನು ನೀಡಿದ ಅನ್ನಪೂರ್ಣೆಶ್ರೀಮಾತೆ. ದಕ್ಷಿಣೇಶ್ವರದ ನಹಬತ್ ಖಾನೆಯ ಪುಟ್ಟ ಕೋಣೆಯಲ್ಲಿ ’ರಾಮಕೃಷ್ಣ ತಪೋವನದ ಪರ್ಣಕುಟಿಯ ದೀಪವಾಗಿ’ ಶಾರದಾದೇವಿಯವರು ತಮ್ಮ ಬಳಿಗೆ ಬಂದ ಜೀವಗಳನ್ನು ಬೆಳಗಿದರು. ನಿತ್ಯದ ಕಾರ್ಯಗಳ ಜೊತೆಯಲ್ಲಿಯೇ ತೀವ್ರ ತಪಸ್ಸನ್ನೂ ನಡೆಸಿದರು. ಮುಂಜಾನೆ ಮೂರರಿಂದ ಪ್ರಾರಂಭಿಸಿ ರಾತ್ರಿ ಎಲ್ಲರ ಊಟವಾದ ಬಳಿಕ ತಮ್ಮ ಊಟ ಮುಗಿಸಿ ಮಲಗುವ ವೇಳೆಗೆ ಗಂಟೆ ಹತ್ತು ದಾಟಿರುತ್ತಿತ್ತು. ಅವರಲ್ಲಿದ್ದ ಮಾತೃಭಾವ ಮೆಲ್ಲಗೆ ಪಸರಿಸಲು ಆರಂಭವಾದದ್ದು ಈ ಕಾಲಘಟ್ಟದ್ದಲ್ಲೇ. ಶ್ರೀರಾಮಕೃಷ್ಣ ಭಕ್ತಕೋಟಿ ತಂದಿತ್ತ ಸಿಹಿ, ಹಣ್ಣುಗಳನ್ನು ಧಾರಾಳವಾಗಿ ತಮ್ಮ ’ಮಕ್ಕಳಿಗೆ’ ಹಂಚಿಬಿಡುತ್ತಿದ್ದರು ಶ್ರೀಮಾತೆಯವರು. "ನನ್ನನ್ನು ’ಅಮ್ಮ’ ಎಂದು ಕರೆದವರನ್ನು ಮಾತ್ರ ಬರಿಗೈಯಲ್ಲಿ ಕಳಿಸುವುದಕ್ಕೆ ನನ್ನಿಂದ ಸಾಧ್ಯವೇ ಇಲ್ಲ’’ ಎನ್ನುತ್ತಿದ್ದರು ಅವರು.

ಶ್ರೀರಾಮಕೃಷ್ಣರು ಮಹಾಸಮಾಧಿ ಹೊಂದಿದ ಬಳಿಕ ಶ್ರೀಮಾತೆಯವರ ಜವಾಬ್ದಾರಿ ಮತ್ತಷ್ಟು ಹೆಚ್ಚಿತು. ತೀರ್ಥಯಾತ್ರೆಗಳಲ್ಲಿ ತೊಡಗಿ ತಮ್ಮ, ಭಕ್ತವೃಂದದ ಮನಸ್ಸನ್ನು ಉನ್ನತ ಭಾವದಲ್ಲಿ ಇರಿಸಿದ್ದಷ್ಟೇ ಅಲ್ಲದೆ ಶಿಷ್ಯರ ವಿಕಾಸದತ್ತಲೂ ಗಮನಹರಿಸಿ ಅವರ ಬೆಳವಣಿಗೆಯತ್ತಲೂ ಶಕ್ತಿ ವ್ಯಯಿಸಬೇಕಾಯಿತು. ಶ್ರೀರಾಮಕೃಷ್ಣ ಮಹಾಸಂಘದ ಕನಸು ಹೊತ್ತಿದ್ದರೂ ತಾತ್ಕಾಲಿಕವಾಗಿ ಚದರಿಹೋಗಿದ್ದ ಹದಿನಾರು ಮಂದಿ ಯುವಶಿಷ್ಯರಿಗೆ ಆಶೀರ್ವಾದ ಬೆಂಬಲಗಳನ್ನಿತ್ತು ಪ್ರೋತ್ಸಾಹಿಸಿದರು. ಇಂದಲ್ಲ ನಾಳೆ ತಮ್ಮ ಮಕ್ಕಳು ನೆಲೆ ಕಾಣುವರು ಎಂಬ ಸತ್ಯ ಅವರಿಗೆ ಗೊತ್ತಿತ್ತು. ಅದಕ್ಕಾಗಿ ಅವರು ಶ್ರೀರಾಮಕೃಷ್ಣರಲ್ಲಿ ಅನವರತ ಪ್ರಾರ್ಥಿಸುತ್ತಿದ್ದರು. ಸ್ವಾಮಿ ವಿವೇಕಾನಂದರನ್ನು ಆಶೀರ್ವದಿಸಿ, ಪರಿವಾಜ್ರಕ ಜೀವನದ ಯಶಸ್ಸಿಗಾಗಿ ಹರಸಿ ಕಳಿಸಿದರು. ಸ್ವಂತ ತಾಯಿಯನ್ನೂ, ಕುಟುಂಬದವರನ್ನೂ ಬಿಟ್ಟು ಪರಿವ್ರಾಜಕನಾಗಿ ಹೋಗಿದ್ದಾಗಲೂ ನರೇಂದ್ರನಿಗೆ ಈ ’ತಾಯಿ’ಯ ಚಿಂತೆ. ಇತ್ತ ಶ್ರೀಮಾತೆಗೆ ತನ್ನ ’ಮಗ’ ನರೇಂದ್ರ ಕ್ಷೇಮವಾಗಿ ಬರಲೆಂಬ ತವಕ. ವಿವೇಕಾನಂದರು ವಿದೇಶದಿಂದ ಮಠ ಸ್ಥಾಪನೆಗೆ ಹಣ ಕಳಿಸುವಾಗಲೂ ಮೊದಲುಶ್ರೀಮಾತೆಮತ್ತು ಅವರ ಸಂತಾನಕ್ಕೆ ನೆಲೆ ಒದಗಿಸಬೇಕೆಂಬ ಆಗ್ರಹ. ’ಯಾರನ್ನೂ ಅವತಾರವೆಂದು ಒಪ್ಪದಿದ್ದರೂ ಪರವಾಗಿಲ್ಲ. ಆದರೆ ಶ್ರೀಮಾತೆಯಲ್ಲಿ ಜಗನ್ಮಾತೆಯನ್ನು ಕಾಣದಿದ್ದವರಿಗೆ ತನ್ನ ಧಿಕ್ಕಾರ’ ಎನ್ನುತ್ತಾರೆ ಅವರು.

ಮಾತೆ ನಮಗರ್ಥವಾಗುವುದಿಲ್ಲ. ಅರ್ಥವಾಗಬೇಕಾಗಿಯೂ ಇಲ್ಲ. ಸಂಸ್ಕಾರವಂತನಾದ ವಿದ್ಯಾವಂತ ಮಗನೊಬ್ಬ ಅನಕ್ಷರಸ್ಥ ತಾಯಿಯನ್ನು ಆಕೆ ತಾಯಿಯೆಂಬ ಭಾವದಿಂದ ಗೌರವಿಸುವಂತೆ ಇದು. ಆದರೆ ಇದಕ್ಕೆ ತದ್ವಿರುದ್ಧವಾಗಿ ಭಾವಿಸಬೇಕು. ಸಾಕ್ಷಾತ್ ಜಗನ್ಮಾತೆ ಸಾಮಾನ್ಯ ಸ್ತ್ರೀವೇಷದಲ್ಲಿ ಬಂದು ತನ್ನ ಅಮಾಯಕ ಸಂತಾನವನ್ನು ಸಲಹುವುದನ್ನು ಭಾವಿಸಿಕೊಳ್ಳಬೇಕು. ತಾಯಿಯ ಬಗೆಗೆ ನಾವು ಭಾವಿಸುತ್ತ ಹೋದರೆ - ಅದರಲ್ಲಿ ವಿಶೇಷಣಗಳನ್ನು ತೆಗೆದುಹಾಕುತ್ತ ಹೋದರೆ ಅಲ್ಲಿ ’ತಾಯಿ’, ’ಮಾ’, ’ಶ್ರೀಮಾ’, ’ಮಾತೆ’ ಬಿಟ್ಟು ಬೇರೇನೂ ಉಳಿಯದು! ಮತೀಯ ಸಂಕುಚಿತತೆ ಮತ್ತು ಲಿಂಗಭೇದ – ಎರಡನ್ನೂ ತಮ್ಮದೇ ರೀತಿಯಲ್ಲಿ ಎದುರಿಸಿದರು ಶ್ರೀಮಾತೆಯವರು. ಜಯರಾಂಬಾಟಿಯ ತಮ್ಮ ಮನೆಯ ಕಟ್ಟಡಕಾರ್ಯಕ್ಕೆ ಮುಸಲ್ಮಾನ ಕೆಲಸಗಾರರನ್ನು ಬಳಸಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಸ್ಥಳೀಯರು, ಮೇಲ್ವರ್ಗದ ಜನರು ಶಾರದಾದೇವಿಯವರನ್ನು ನಿಂದಿಸಿದ್ದಷ್ಟೇ ಅಲ್ಲದೆ ಅವರಿಗೆ ಬಹಿಷ್ಕಾರ ಹಾಕುವ ಬೆದರಿಕೆಯನ್ನೂ ಒಡ್ಡಿದ್ದರು. ಆದರೆ ಶಾರದಾದೇವಿಯವರು ಇದಕ್ಕೆ ಸೊಪ್ಪು ಹಾಕಲಿಲ್ಲ. ಕೆಲದಿನ ಕಟ್ಟಡದ ಕಾರ್ಯ ನಿಂತರೂ ಅದೇ ಕೆಲಸಗಾರರಿಂದಲೇ ಕಟ್ಟಡಕಾರ್ಯ ಯಶಸ್ವಿಯಾಗಿ ಮುಗಿಯಿತು. ಮುಂದೊಂದು ಸಂದರ್ಭದಲ್ಲಿ ’ನನಗೆ ಅಮ್ಜದನೂ ಶರತ್‌ನೂ ಒಂದೇ!’ ಎನ್ನುತ್ತಾರೆಶಾರದಾದೇವಿ. ಅಮ್ಜದ್ ಮುಸಲ್ಮಾನ - ಜೊತೆಗೆ ಡಕಾಯಿತಿ, ಕಳ್ಳತನಗಳ ಆರೋಪ ಹೊತ್ತಿದ್ದವನು, ಜೈಲಿಗೂ ಹೋಗಿದ್ದವನು. ಶರತ್ (ಸ್ವಾಮಿ ಶಾರದಾನಂದ) ಧಾರ್ಮಿಕ ಆಧ್ಯಾತ್ಮಿಕ ಪ್ರತಿನಿಧಿ, ರಾಮಕೃಷ್ಣರ ನೇರ ಶಿಷ್ಯ.

ಶ್ರೀಮಾತೆಯವರು ನಿವೇದಿತೆಯೊಂದಿಗೆ ಕುಳಿತ ಒಂದು ಚಿತ್ರವಿದೆ. ಅದು ಭಾರತದ ಭೂತ-ವರ್ತಮಾನ-ಭವಿಷ್ಯತ್ ಚಿತ್ರಣವನ್ನು ತನ್ನೊಳಗೆ ಹುದುಗಿಸಿಕೊಂಡಿದೆ. ಇಬ್ಬರ ಮುಖಭಾವಗಳನ್ನು ಗಮನಿಸಿದಾಗ - ಅಲ್ಲೊಂದು ಅದ್ಭುತ ಲೋಕವನ್ನೇ ನಿರ್ಮಾಣ ಮಾಡಿಕೊಂಡಂತಿದೆ. ಚಿತ್ರ ನೋಡಿದಾಗ ಸಂತೋಷವಾಗುತ್ತದೆ, ಭರವಸೆ, ಉತ್ಸಾಹ ಮೂಡುತ್ತದೆ. ಅಭೂತಪೂರ್ವ ಅನುಭವ ನೀಡುವ ಇದು ಸದಾ ನಮ್ಮ ಮನಃಪಟಲದ ಮುಂದಿರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT